Home / ಕವನ / ಕವಿತೆ / ಅರುಣ

ಅರುಣ


ನಸುಗೆಂಪಿನ
ತುಸು ಹಳದಿಯ
ಸಮ್ಮಿಶ್ರಣದೆಸಕ
ಚೆಲುವಾಗಿರೆ,
ಹೊಳೆಯುತಲಿಕ್ಕೆ
ಅದೆಯರುಣನ ಗಮಕ

ಕೆಂಬರಲನು
ಅಂಬರದಲಿ
ತುಂಬಿದ ತೆರ ನೋಟ;
ಕುಂಕುಮ ರಸ-
ವಂಕಿತವಹ
ವರ ಪಾಟಲ ಮಕುಟ


ಚೆಂದಳಿರನು
ನೆಯ್ದದರನು
ತೊಟ್ಟಿಹ ಸುವಿಲಾಸ;
ಕೆಮ್ಮೀಸೆಯ
ಹುಮ್ಮಸವನು
ಇಮ್ಮಡಿಸುವ ಹಾಸ


ರಕ್ತಾಂಬರ
ಸಕ್ತೋದರ
ಕಿರಣದ ಪರಿಪಾಟ;
ಕೆಂದಳದಲಿ
ಬಿಗಿವಿಡಿದಿಹ
ಹವಳದ ಚೆಲು ‘ಚಾಟಿ’


ಇಂತೊಪ್ಪಿರೆ
ಸಂತಸದಲಿ
ಮೂಡಣದಲಿ ಅರುಣ
ಮೂಡುತ, ದಿಸೆ-
ಗೀಡಾಡಿದ
ನವ ಕುಂಕುಮ ಕಿರಣ


ಹಕ್ಕಿಯ ಕೊರ-
ಲಿಂಚರ ಹೊರ
ಹೊರಡಿಸಿ ಹಾಡುವನು
ಮಕ್ಕಳ ಮಾ-
ತಾಡಿಸಿ, ತಾ-
ನುರೆ ತೊದಲಾಡುವನು


ಸಿ೦ಗಾರದ
ತಂಗಾಳಿಯ
ತೀಡಿಸಿ, ಸುಯ್ಯುವನು
ಅರಳಾಗಿಸಿ,
ನಗಿಸುತ ನಗುತಿಹನು


ನಿದ್ದೆಯ ಪರೆ
ಕೀಳುತಲರೆ-
ದೆರಿದಿಹ ಕಣ್ಣುಗಳ
ಬಿರಿದರಳಿಸಿ,
ಎಬ್ಬಿಸುವನು
ನಾಡಿನ ಜನರುಗಳ


ಹೊಸ ಹುರುಪನು
ಹೊಸೆಯಿಸುವನು
ಬೀರುತ ಚೈತನ್ಯ;
ಉಪಹಾಸದಿ
ಅಪಹರಿಸುವ
ಜಡತೆಯ ಮಾಲಿನ್ಯ

೧೦
‘ಅಜ್ಞಾನದ
ಅಂಧತೆಯನು
ಬೇದಿಸಿ ನೇಸರಿದೋ-
ಬೆಳಕಿನ ಬೆಳೆ
ತಿಳಿವಿನ ಹೊಳೆ
ಹೊಮ್ಮಿಸಿ ಬರುವನಿದೊ!’

೧೧
ಎಂಬಾ ನುಡಿ
ನಂಬಿಸಿಯಡಿ-
ಯಿಡುವನು ಮುಂದರುಣ;
ಆ ನಿಮಿಷದಿ
ರವಿಯುದಿಸುತ
ಸುರಿವನು ಸುಜ್ಞಾನ!
*****
೧೯೩೫

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...