Home / ಕವನ / ಕವಿತೆ / ಶ್ರೀ ಕೃಷ್ಣನ ಕಾಣಿಕೆ

ಶ್ರೀ ಕೃಷ್ಣನ ಕಾಣಿಕೆ

[ಒಂದಾನೊಂದು ದಿನ ಸುಧಾಮನ ಸಹಧರ್ಮಿಣಿ ತನ್ನ ಪತಿರಾಯನನ್ನು ಕುರಿತು ಹೀಗೆ ನುಡಿದಳು]
ಭಾಗ್ಯವನು ಬಳೆದುಕೊಂಡಿಹರು ಕೆಲ ಜನರು ಸೌ-
ಭಾಗ್ಯವನು ಸುರಿದುಕೊಂಡಿಹರು ಹಲ ಜನರು ಸೌ-
ಭಾಗೃತಿಲಕನೆ ಕೇಳು ಭಾಗ್ಯಲಕ್ಷ್ಮಿಯು ನಮ್ಮ
ಗುಡಿಸಲವ ತೊಲಗಿ ತಾನು!
ಈಗ್ಗೆ ಹೋದಳು- ನೆಲೆಯು ಹತ್ತದೀ ಬಡತನದ
ತಗ್ಗಿನೊಳಗಿಂದ ಹೊರಬರುವ ಹಾದಿಯ ಕಾಣೆ
ಮುಗ್ಗಿ ಹೋಗಿದೆ ಮನವು ತಗ್ಗಿ ಹೋಗಿದೆ ತನುವು
ನಮಗೆ ಯಾರಿಲ್ಲವೇನು?
[ಆಗ ಅಂತಃಕರಣಕ್ಕೆ ಒಳಒಳಗಿಂದೇ ಅಳುವು ಬಂದು ಸುದಾಮನು ತನ್ನ ಪತ್ನಿಗೆ ಈ ಪ್ರಕಾರ ಹೇಳಿದನು:-]
ಬಂಧುಬಳಗದ ಜನರು ಯಾರಿಲ್ಲ, ಅಣ್ಣ ತ-
ಮ್ಮಂದಿರನು ನಾನು ಹುಟ್ಟಾ ಕಾಣೆ ಮಡದಿಯೇ
ಮುಂದೆ ಕರೆವವರಿಲ್ಲ ಹಿಂದುಮುಂದಿಲ್ಲ ಹಾಯ್
ನಮಗೀಗ ಯಾವನಿಲ್ಲ!
ಇಂದು ನೆರವಿನ ನರನು ನಮಗಿಲ್ಲ ಜಗದಲ್ಲಿ
ಹಿಂದೆ ಗುರ್ವಾಶ್ರಮದೊಳಿದ್ದನೊಬ್ಬನು ಕೃಷ್ಣ
ಚೆಂದ ಚೆನ್ನಿಗ ಚೆಲುವ- ದ್ವಾರಕೆಯೊಳಿರುವಾತ-
“ಎಳೆಮನದ ಗೆಳೆಯ” ನೊಬ್ಬ!
[ಕೃಷ್ಣನಿಂದಾದರೂ ತನ್ನ ಬಡತನ ಬತ್ತಿತೆಂದು ಬಗೆದು ಸಹಧರ್ಮಿಣಿಯು “ಕೃಷ್ಣನ ಕಡೆಗೆ ಹೋಗಿ ಬರ್ರಿ” ಎಂದು ಹೇಳಿದ್ದಕ್ಕೆ ಸುದಾಮನು ಒಪ್ಪಿ ಎಲ್ಲಿಂದಲೋ ಒಪ್ಪಿಡಿ ಅವಲಕ್ಕಿಯನ್ನು ಪತ್ನಿ ತಂದು ಕೊಟ್ಟಿದ್ದನ್ನು ತೆಗೆದುಕೊಂಡು ಹೊರಟು ದ್ವಾರಕೆಗೆ ಬಂದು ತನ್ನ ಗೆಳೆಯನಿಗೆ ಹೀಗೆ ಹೇಳಿದನು:-]
ಒಪ್ಪಿಡಿಯ ತುಂಬಿರುವ ಅವಲಕ್ಕಿಯನು ತಗೋ
ಒಪ್ಪಾಗಿ ಒಪ್ಪುತಿಹ ಭಾಗ್ಯಲಕ್ಷ್ಮಿಯ ನಲ್ಲ
ಅಪ್ಪಯ್ಯ ನಿನಗೆಂದು ತಂದಿರುವೆನೀ ಒಂದೆ
ಹಿಡಿಯ ಅವಲಕ್ಕಿಯನ್ನು!
ಉಪ್ಪಿಲ್ಲ ಊಟಕ್ಕೆ ತುಪ್ಪವಿಲ್ಲವು ತುಟಿಗೆ
ಕಪ್ಪಿಟ್ಟು ಹೋಗಿರುವೆ ಮತ್ತೆ ಮೇಲಿಂದ ಮೇಲ್
ಬಪ್ಪ ಬಡತನವನ್ನು ಭಂಗಿಸೋ ಹಿಂಗಿಸೋ-
ಭಾಗ್ಯವನು ಸೂರೆಗೊಳಿಸೋ!
ಕೃಷ್ಣ ಕೊಳಲಿನ ಕೃಷ್ಣ! ಕೆನೆವಾಲ ಕೃಷ್ಣನೇ!
ಕೃಷ್ಣೆಯಾ ದೇವಕಿಯ ಸವಿಮಾವೆ-ಗಿಳಿಮಾವೆ!
ವಿಷ್ಣು ವರ್ಣಗಳುಳ್ಳ ವಿಶ್ವವನು ವ್ಯಾಪಿಸಿದ
ಭಾಗ್ಯಸ್ವರೂಪ ರೂಪ!
ನಿಷ್ಣಾತ ಯೋಗೀಂದ್ರ ಬವರದಲ್ಲಿಯ ಬಂಟ!
ಉಷ್ಣತೆಯು ಹೃದಯವನು ತುಂಬಿಹುದು ಹೃದಯದೀ
ಕೃಷ್ಣೆಯನು ಕಡೆಗೋಲ ಬೆಣ್ಣೆಯಲಿ ಸಂತೈಸಿ
ಸೊಗಸುಗೊಳಿಸೀಗ ಬೇಗ!
ನೋಯುತ್ತ ನೆರಳುವೆನು ಬೇಯುತ್ತ ಬಳಲುವೆನು
ಕಾಯವೀ ತೋಯದೊಳು ತೋಯುತ್ತ ತೊಳಲುವದು
ಕಾಯಬೇಕೆನ್ನ ಮಿತ್ರನೆ ಮೀಯಿಸೀಗ ನಿನ್ನಯ
ನನ್ನಿ-ನನ್ನಿ ಯಲ್ಲಿ!
ನೋಯುತ್ತ ಬಸಿಯುತಿಹ ಗಾಯವನ್ನಾರೈಸಿ
ಮಾಯಿಸೈ, ಸೀಯಾದ ತೋಯವನು-ಪೀಯೂಷ-
ಪ್ರಾಯವಹ ತೋಯವನು ತಾಯೀಗ ಸಾಯುವೆನು
ನೀರಡಿಕೆಸಾವಿನಿಂದ!
[ಆಗ ಶ್ರೀಕೃಷ್ಣನು ಪ್ರೇಮಾಂತಃಕರಣದಿಂದ ಗೆಳೆಯನನ್ನು ಬಿಗಿತಾಗಿ ಅಪ್ಪಿಕೊಂಡು ಇಂತೆಂದನು:-]
ಅಣ್ಣಯ್ಯ ಅಲ್ಲಯ್ಯ ಈ ಸೊಲ್ಲು ಸಲ್ಲದೈ
ಕಣ್ಣೀರುಗಳು ತುಂಬಿ ಕೋಡಿಯೊಡೆಯುವದೀಗ
ತಣ್ಣನ್ನ ಶಿಲೆಯಂತೆ ನಾನೇನು ಕೂತಿರುವದಿಲ್ಲವೋ
ಇಲ್ಲ ಇಲ್ಲ!
ನಿನ್ನನ್ನು ನಿನ್ನ ಮೊಗವನು ನೋಡಿ ಜೀವದ-
ಲ್ಲಿನ್ನು ಕಳೆ ಬಂದಿತೈ, ಮೊಗದಲ್ಲಿ ನಗೆ ಬಂತು
ಅಣ್ಣಯ್ಯ ನನ್ನದೀ ಭಾಗ್ಯವೆಲ್ಲವು ನಿನ್ನದೇ,
ನನ್ನದಿರುವದಿಲ್ಲ!
ಮೇಲೆ:-
ಕೃಷ್ಣ ನೂರೊಳಗೆ ಗೆಳೆಯನು ಇರುವ ಕಾಲದಲಿ
ಕೃಷ್ಣನೇ ಉಪಚರಿಸಿ ಕಳಿಸಿದನು ಕೊಡದೆ ಗಡ,
ಕೃಷ್ಣ ಕೊಡದದ್ದೆ ತನ್ನೂರಿಗೈತಂದ ಬಳಿಕಾಯಿತೈ
ಭಾಗ್ಯ ಸಾಕ್ಷಾತ್!
ಕೃಷ್ಣನೀಯುವ ಬೇವೆ ಮಾವಾಗಿ ಫಲಿಸುವದು!
ಕೃಷ್ಣನೀಯುವ ಕನಸೆ ನನಸಾಗಿ ಜನಿಸುವದು!
ಕೃಷ್ಣ ಕೊಡುವಂಥ ವಿಷ ಪೀಯೂಷವಾಗಿ ರುಚಿಸುವದೀಗ
ಪೃಥ್ವಿಯಲ್ಲಿ!
*****
Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...