Home / ಕವನ / ಕವಿತೆ / ವಸುಂದರಾ ಗೀತ

ವಸುಂದರಾ ಗೀತ

ಪ್ರೀತಿ ಮತ್ತ ಸಾಗರಾ
ಬಾರೊ ಭವ್ಯ ಸುಂದರಾ
ಕರೆವೆ ನಾ ವಸುಂಧರಾ!

ನಿನ್ನಡಿಗಳಲಿಂದು ನಾನು ಹುಡಿಯೆನಿಸುತ ಕೆಡೆದಿಹೆ
ಬಾಳೆಲ್ಲವು ಕಲ್ಲಾಯಿತು, ಉದ್ಧಾರಕೆ ತಪಮಿಹೆ
ಉಕ್ಕಿ ಬಾರೊ ಎಲ್ಲೆಡೆಯಲಿ
ಸೊಕ್ಕಿ ಬಾರೊ ನನ್ನೆಡೆಯಲಿ,
ಉಳಿಯಿತೊಂದೆ ಮನ್ಮಾನಸ ಕುವಲಯದಲಿ ಆಸೆಯು
ನೀನೊರ್ವನೆ ಮನದನ್ನನೆ ಇಂಗಿಸುವ ಪಿಪಾಸೆಯು
ಪ್ರೀತಿ ಮತ್ತ ಸಾಗರಾ,
ಬಾರೊ ಭವ್ಯ ಸುಂದರಾ
ಕರೆವೆನಾ ವಸುಂಧರಾ!

ನನ್ನೆದೆಯಲಿ ಮಾಗಿದಂಥ ಹಾಲೊಲವಿನ ಸೆಲೆಗಳು
ತಾರುಣ್ಯದ ಕಾಮೋದ್ಭವ ಆಮೋದದ ತೊರೆಗಳು
ಕಲ್ಲೊಡೆಯುತ ಸಿಡಿದೆದ್ದವು,
ಗಿರಿಯಿಳಿಯುತ ಆಲೆಯಲೆದವು
ಹಾಡೊರೆಯುತ ತೆರೆತೆರೆಯಲಿ ನಿನ್ನನ್ನೇ ಕರೆದವು
ಎಲ್ಲೆಲ್ಲೊ ಸುತ್ತಿರಿದರು, ನಿನ್ನಲ್ಲೇ ಬೆರೆದವು!

ಪ್ರೀತಿಮತ್ತ ಸಾಗರಾ
ಬಾರೊ ಭವ್ಯ ಸುಂದರಾ
ಕರೆವೆ ನಾವಸುಂಧರಾ!

ಏಕೊ ಏನೊ ಮರೆತಿದ್ದೆನು ನಿನ್ನ ನಾನು ಬಹುದಿನ
ನೀನು ಮಾತ್ರ ಯಾಚಿಸಿರುವೆ ನನ್ನೊಲುಮೆಯನನುದಿನ
ಬೆಳ್ನೊರೆಯಲಿ ಕುಸಮ ವ್ರಾತ
ತೆರೆತೆರೆಯಲಿ ಭೃಂಗ ಗೀತ,
ಮೆರೆಯೆ, ನೀನು ಮೇಘನೀಲ, ಕಾಡಿ ಬೇಡಿ ಹಾಡಿಹೆ
ಮಾರುಲಿಯದ ನನ್ನ ನೋಡಿ ಬೇಗುದಿಯನು- ತಳೆದಿಹೆ!
ಪ್ರೀತಿ ಮತ್ತ ಸಾಗರಾ,
ಬಾರೊ ಭವ್ಯ ಸುಂದರಾ
ಕರೆವೆ ನಾ ವಸುಂಧರಾ!

ಮರ್‍ತ್ಯಲೋಕದಲ್ಲಿ ಜನಿಸಿದವಳು ನಾನು ಮುಗ್ಧಳು
ದಿವ್ಯಲೋಕ ಸ್ವಪ್ನ ಸುಖಕೆ ಸೋತವೆನ್ನ ಕಂಗಳು
ರವಿಯ ತೇಜ ಕಂಡ ಮರುಳು,
ಶಶಿಯ ಶಾಂತಿಯುಂಡ ಕರುಳು
ಹಗಲೆನ್ನದೆ ಇರುಳೆನ್ನದೆ ಮನೆ ಬಯಲುಗಳೆನ್ನದೆ
ಮುಗಿಯದಿರುವ ಮುಗಿಲ ದಾರಿಯಲ್ಲಿ ನಾನು ಸುತ್ತಿದೆ.

ಪ್ರೀತಿ ಮತ್ತ ಸಾಗರಾ
ಬಾರೊ ಭವ್ಯ ಸುಂದರಾ,
ಕರೆವೆ ನಾ ವಸುಂಧರಾ!

ಮುಗಿಲ ಮೊಲ್ಲೆಯಘ್ರಾಣಕೆ ತಲೆಯನ್ನದು ತಿರುಗಿದೆ
ಸ್ವಪ್ನ ಸೇವಿಯಂಧ ಜೀವಿಯಂತೆ ನಾನು ಮರುಗಿದೆ
ಹುಸಿಗನಸಿನ ಆವ್ಹಾನಕೆ,
ಕಲ್ಪನೆಗಳ ಆವಾಸಕೆ,
ಬಿಸಿಲುಗುದುರೆಯೇರಿ ಹೊರಟೆ, ಬಯಕೆಯುರಿಗೆ ಬೆಂದೆನು
ಬಂಜೆ ವಟವ ಸುತ್ತುವಂತೆ ಬಯಲಸುತ್ತಿ ನೊಂದೆನು.
ಪ್ರೀತಿ ಮತ್ತ ಸಾಗರಾ
ಬಾರೊ ಭವ್ಯ ಸುಂದರಾ
ಕರೆವೆ ನಾ ವಸುಂಧರಾ!

ತಪೋ ಭೂಮಿ ಹರನಿಗಾನು ಶ್ಯಾಮನ ವೃಂದಾವನ
ಅಮರಾಂಗನೆಯರಿಗೆ ನಾನು ರತಿ ವಿಲಾಸದುಪವನ
ನನ್ನ ಗಿರಿಯ ಗವ್ಹರದಲಿ,
ಹರಿದ ಹಳ್ಳ ಹೊಳೆಗಳಲ್ಲಿ.
ದೇವತೆಗಳ ಚಿರನಿವಾಸವೆಂದು ನಾನು ಸೊಕ್ಕಿದೆ
ಪ್ರೀತಿಯನ್ನು ಬೇಡಿದವಳು ಕೀರ್ತಿಯನ್ನು ಹೊಂದಿದೆ.
ಪ್ರೀತಿಮತ್ತ ಸಾಗರಾ,
ಬಾರೊ ಭವ್ಯ ಸುಂದರಾ
ಕರೆವೆ ನಾ ವಸುಂಧರಾ.

ದೇವರಿಲ್ಲಿ ಇಳಿದು ಬಂದು ಭೂಪರಾಗಿ ಆಳ್ದರು
ಕೊರಳಿನಲ್ಲಿ ಕೌಸ್ತುಭವೆನೆ ನನ್ನ ತೊಟ್ಟುಮೆರೆದರು
ಆದರಾರು ಪ್ರೀತಿಯನ್ನು,

ಇಲ್ಲ ಬರಿಯ ಕರುಣೆಯನ್ನು,
ತೋರಲಿಲ್ಲ, ಬೆಲೆವೆಣ್ಣಿದು ಬರಿ ಮಣ್ಣಿದು ಎಂದರು
ನನ್ನೆದೆಯಲಿ ಉರಿವ ಆಸೆಯನ್ನು ಕಾಣದಾದರು.
ಪ್ರೀತಿಮತ್ತ ಸಾಗರಾ,
ಬಾರೊ ಭವ್ಯ ಸುಂದರಾ,
ಕರೆವೆ ನಾ ವಸುಂದರಾ

ಬೇಟಕಾಗಿ ದೇವತೆಗಳಿಗೆನಿತುಕಾಲ ಬಾಳಿದೆ
ಬೇಟೆಯಾಗಿ ಮಾನವರಿಗೆ ನೋವ ನಾನು ತಾಳಿದೆ
ಭಾವಪೂರ್ಣ ಹೃದಯಸಿಂಧು,
ಬರಿ ಹುಡಿಯಾಗಿಹುದು ಇಂದು,
ಚಿಕ್ಕೆ ಚಿಗಿತ ನಾಡಿನಲ್ಲಿ ತಿರುಗುತಿಹೆನು ಹುಚ್ಚಿಯು
ಅತ್ತು ಕರೆವೆ ಕಾಡಿನಲ್ಲಿ ದೊರಕಲೆಂದು ಒಲುಮೆಯು
ಪ್ರೀತಿಮತ್ತ ಸಾಗರಾ,
ಬಾರೊ ಭವ್ಯ ಸುಂದರಾ,
ಕರೆವೆ ನಾ ವಸುಂಧರ

ಕೋಟ್ಯಂತರ ದೇವತೆಗಳು ನನ್ನ ಸುತ್ತು ನೆರೆದರು
ಕಾಂತೆಯಂತೆ ಅವರೆ ರಮಿಸೆ ಕಾಂತಾರದಿ ತೊರೆದರು.
ಕತೆಯಾಯಿತು ನನ್ನ ಬಾಳು
ಜೊತೆಯಾರೆನಗಿಹರು ಹೇಳು
ನಾಯಿಯಂತೆ ಹರಿದು ತಿನ್ನುವವರು ನನ್ನ ಕುವರರು
ನನ್ನ ವಿಭವ ಸಂಪನ್ನರು ಸ್ಪೇಹಸೂನ್ಯ ದೃಪ್ತರು.

ಪ್ರೀತಿಮತ್ತ ಸಾಗರಾ,
ಬಾರೊ ಭವ್ಯ ಸುಂದರಾ
ಕರೆವೆ ನಾ ವಸುಂಧರಾ,

ನೀನು ತೋಳ ತೆಕ್ಕೆಯಲ್ಲಿ ನನ್ನ ಹಿಡಿಯಬಯಸಿದೆ
ಮರಳು ದಂಡೆಯಿರಿದು ಕೊರೆದು ಒಳಗೆ ನುಗ್ಗಲೆಳಸಿದೆ
ಸ್ವಚ್ಛಂದ ಛಂದದಲ್ಲಿ,
ಹಾಡಿದಂಥ ಗೀತದಲ್ಲಿ,
ಪ್ರೀತಿರಸವ ಹೊಮ್ಮಿಸುತ್ತ ನನ್ನೆದೆಯನು ಸುತ್ತಿದೆ,
ನನಗರ್ಪಿಸಲೆಂದು ನೊರೆಯ ಹಾರವನ್ನು ಎತ್ತಿದೆ,
ಪ್ರೀತಿಮತ್ತ ಸಾಗರಾ,
ಬಾರೊ ಭವ್ಯ ಸುಂದರಾ
ಕರೆವೆ ನಾ ವಸುಂಧರಾ.

ದೈವ ಹೀನೆ ನಾನು ನಿನ್ನ ಹೀಯಾಳಿಸಿ ಜರೆದೆನು
ಇಂದು ನಿನ್ನ ನೆನಹಿನಿಂದ ಪುಳಕಿತಾಂಗಳಾದೆನು,
ಅಂಗಾಂಗವನೇರಿ ಬಾರೊ,
ಕಣಕಣದಲಿ ಹರಿದು ಬಾರೊ,
ಬೆಂದೊಡಲನು ತಣಿಸಬಾರೊ ನೀಲಸುಭಗ ಸಾಗರಾ,
ಒಲವಿಗಾಗಿ ಬಾಯ್ಬಿಡುತಿಹೆ ಹಣಿಸು ಬಾ ನಿರಂತರಾ,

ಪ್ರೀತಿಮತ್ತ ಸಾಗರಾ,
ಬಾರೊ ಭವ್ಯ ಸುಂದರಾ
ಕರೆವೆ ನಾ ವಸುಂಧರಾ,

ನನ್ನೆದೆಯನು ಸುತ್ತಿದಂಥ ಸ್ವಪ್ನ ಸುಮನ ಬಂಧನ
ಬಗೆಯೆಲ್ಲವ ಮರುಳುಗೊಳಿಪ ಹುಸಿಯಾಸೆಯ ನರ್ತನ
ಜರೆದೇಳುವ ಹಾಗೆ ಬಾರೊ,
ನಿಜವನ್ನೇ ಬಿತ್ತ ಬಾರೊ.
ಹುಡಿಹುಡಿಯಲಿ ಹರಣ ಕಿಡಿಯ ತೂರು ಪ್ರಾಣದಾಯಕ
ನಿನ್ನನ್ನೇ ನಂಬಿರುವೆನು ಎತ್ತು ಜೀವನಾಯಕ!
*****

Tagged:

Leave a Reply

Your email address will not be published. Required fields are marked *

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೀಲಿಕರಣ: ಎಂ ಎನ್ ಎಸ್ ರಾವ್