Home / ಕವನ / ಅನುವಾದ / ಇಂಗ್ಲೆಂಡ ನಾವಿಕರು

ಇಂಗ್ಲೆಂಡ ನಾವಿಕರು

ಇಂಗ್ಲೆಂಡ ನಾವಿಕರಿರಾ – ಕಾಯುವಿರಿ
ನೀವೆಮ್ಮ ಕಡಲುಗಳನು;
ನಿಮ್ಮ ಬಾವುಟ ತಡೆಯಿತೊಂದು ಸಾವಿರ ವರುಷ
ಗಾಳಿಯನು ಕಾಳಗವನು.
ನಿನ್ನೊಮ್ಮೆ ನಿಮ್ಮ ವಿಜಯಧ್ವಜವ ತೂಗಿಬಿಡಿ
ಇನ್ನೊಬ್ಬ ಹಗೆಯ ತಾಗಿ
ಕಡಲಲ್ಲಿ ನಡೆಗೊಳ್ಳಿ-
ಬಿರುಗಾಳಿ ತೀಡುತಿರಲು
ಹಿರಿದಾಗಿ ಕಾಳಗವು ಬೊಬ್ಬಿರಿದು ಹಬ್ಬಿರಲು
ಬಿರುಗಾಳಿ ತೀಡುತಿರಲು.
ನಿಮ್ಮ ಪಿತೃಗಳು ಧೀರರು – ತೆರೆತೆರೆಗೆ
ಹೊಮ್ಮುವರು ಹುರಿಗೊಳಿಸಲು;
ಹಡಗಿನೆಟ್ಟವೆ ಅವರು ಕಾದಿ ಹೆಸರಾದ ಕಣ,
ಕಡಲ ಸುಳಿ ಹೂಳಿದ ಕುಳಿ.
ಎಲ್ಲಿ ಬ್ಲೇಕ್ ನೆಲ್ಸನರು ಚೆಲ್ಲಿ ನೆತ್ತರ ಕೆಡೆದ
ರಲ್ಲಿ ನಿಮಗೆದೆ ಕನಲದೆ,
ಕಡಲಲ್ಲಿ ನಡೆವಲ್ಲಿ?-
ಬಿರುಗಾಳಿ ತೀಡುತಿರಲು,
ಹಿರಿದಾಗಿ ಕಾಳಗವು ಬೊಬ್ಬಿರಿದು ಹಬ್ಬಿರಲು,
ಬಿರುಗಾಳಿ ತೀಡುತಿರಲು.
ಕೋಟೆಗಳು ಕೊತ್ತಳಗಳು-ಬೇಡದೆ ಬ್ರಿ
ಟಾನಿಯಳು ಹದುಳವಿಹಳು;
ಬೆಟ್ಟದೆರೆಗಳ ತಲೆಯ ಮೆಟ್ಟುವಳು ದಾಳಿಯಲಿ.
ಕಡಲು ಮನೆಯಾಗಿರುವಳು
ಗುಡುಗಿ ತನ್ನಡವಿಗಳ ತೇಗುಮರದೊಡಲಿಂದ,
ಅಡಗಿಸುವಳಡಿಯ ಹೊನಲ
ಕರೆಯಲ್ಲಿ ಮೊರೆವಲ್ಲಿ-
ಬಿರುಗಾಳಿ ತೀಡುತಿರಲು,
ಹಿರಿದಾಗಿ ಕಾಳಗವು ಬೊಬ್ಬಿರಿದು ಹಬ್ಬಿರಲು,
ಬಿರುಗಾಳಿ ತೀಡುತಿರಲು.
ಇಂಗ್ಲೆಂಡ ಧ್ವಜಪಟವದು – ರೌದ್ರದಲಿ
ಧೂಮಕೇತುವೊಲುರಿವುದು;
ಬಿಗಿದ ಭೀತಿಯ ನಿಶಿಯ ಕಾರೊಡ್ಡು ಕರಗುತ್ತ
ನಗುವನಕ ಶಾಂತಿಯರಿಲು.
ಆಗ ಆಗುತ್ಸವದಿ, ಸಾಗರದ ವೀರರಿರ,
ಬೀಗುವೆವು, ಕೀರ್ತಿಸುವೆವು
ನಿಮ್ಮಗಳ ಹಮ್ಮುಗಳ-
ಬಿರುಗಾಳಿ ತೀಡಿ ನಿಲಲು,
ಘೋರಕದನದ ಬೊಬ್ಬೆ ತೂರಿ ಮೊರೆವುದು ನಿಲಲು,
ಬಿರುಗಾಳಿ ತೀಡಿ ನಿಲಲು.
*****
CAMPBELL (1777 – 1844) : Ye Mariners of England
Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...