Home / ಕವನ / ಕವಿತೆ / ಮುಚ್ಚು ಮುಚ್ಚು ಬಾಗಿಲ

ಮುಚ್ಚು ಮುಚ್ಚು ಬಾಗಿಲ

ಮುಚ್ಚು ಮುಚ್ಚು ಬಾಗಿಲ
ಜೀವವಾಯ್ತು ವ್ಯಾಕುಲ.

ಹೊರಗೆ ಬರಿಯ ಬಿಸಿಲು ಧೂಳಿ
ದೇಹ ಮನವನೆಲ್ಲ ಹೂಳಿ
ಮೇಲೆ ಕುಣಿವಳವಳು ಕಾಳಿ
ನೋವು ನರನ ಕೊರಳ ತಾಳಿ!
ಮುಚ್ಚು ಮುಚ್ಚು ಬಾಗಿಲ
ಜೀವವಾಯ್ತು ವ್ಯಾಕುಲ.

ಎಲ್ಲ ಕಡೆಗೆ ವಿಷದ ಗಾಳಿ
ತಡೆಯಲಾರೆ ಅದರ ದಾಳಿ
ನನ್ನ ಬಾಳು ಬಿಳಿಯ ಹಾಳಿ
ಗೀಚುತಿಹರು ದುಃಖ ಬಳ್ಳಿ
ಎಂಥ ಕೀಳು ಜನವಲ
ಮುಚ್ಚು ಮುಚ್ಚು ಬಾಗಿಲ.

ನನ್ನದು ಇದು ಸಖಿ ದೇಗುಲ
ನೀ ಕಟ್ಟಿದ ಮನೆ ಮಂಗಲ
ನಿನ್ನೊಲುಮೆಯ ಸಿರಿ ಸೋಜ್ವಲ
ಚಂದ್ರಚಾರು ಮನ ಬಾಂದಳ
ನನ್ನಾಸೆಯ ತವರಲ
ಮುಚು ಮುಚ್ಚು ಬಾಗಿಲ.

ದೈವೋದ್ಧತ ಪ್ರಹರಿತ ಧರೆ
ಜನಮನವನು ಕಚ್ಚಿತು ಜರೆ
ಸ್ನೇಹಮೂರ್ತಿ ನೀ ನಿರ್ಜರೆ
ನಿನ್ನೆಡೆಯಲಿ ಇಲ್ಲ ಅರೆ
ಮುಚ್ಚು ಮುಚ್ಚು ಬಾಗಿಲ
ಜೀವ ವಾಯ್ತು ವ್ಯಾಕುಲ.

ಕುಣಿಯುತಿರಲಿ ಕೆಡುಕು ಪಡೆ
ಈ ಹೊಸತಿಲದಾ ಹೊರಗಡೆ
ನೀನಿರುತಿರೆ ನನ್ನಕಡೆ
ಬೇರೆ ಬೇರೆ ಅಡ್ಡಿ ತಡೆ
ಸಖಿಯೆ ನೀನು ಸ್ನೇಹಲ
ಮುಚ್ಚು ಮುಚ್ಚು ಬಾಗಿಲ.

ಕಮಲೋದರದತಿ ಕೋಮಲ
ಬೆಳುದಿಂಗಳ ಸುಖ ಶೀತಲ
ಆಲಿಂಗನಕೆದೆ ವ್ಯಾಕುಲ
ವಿಸ್ಮೃತಿಗಿದು ಮಧು ಫೇನಿಲ
ನಿನ್ನ ಪ್ರೀತಿ ನಿಶ್ಚಲ
ಮುಚ್ಚು ಮುಚ್ಚು ಬಾಗಿಲ.

ಮುರಿದೆದೆಯಲಿ ನಾ ಬಂದರೆ
ಇದೆ ತೋಳ್ಗಳ ಈ ಸವಿಸೆರೆ
ದಣಿದವನಿಗೆ ನಿನ್ನಾಸರೆ
ನಗೆ ನಯಗಳು, ಮಧುರಾಧರೆ!
ಮುಚ್ಚು ಮುಚ್ಚು ಬಾಗಿಲ
ಜೀವವಾಯ್ತು ವ್ಯಾಕುಲ.

ಯಾನ ದೈವ ಜೋಡಿಸಿಹುದು
ನಮ್ಮೆದೆಗಳ ಕೂಡಿಸಿಹುದು
ಮಂಗಲವನು ಮೂಡಿಸಿಹದು.
ಕೆಡುಕೆಲ್ಲವನೋಡಿಸಿಹುದು
ಮುಚ್ಚು ಸಖಿಯೆ ಬಾಗಿಲ
ತೆರೆದು ಹೃದಯ ಸ್ನೇಹಲ
ಹೊಮ್ಮಿಸುತ್ತ ಪರಿಮಳ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...