Home / ಕವನ / ಕವಿತೆ / ಮೇಘಮಯೂರ

ಮೇಘಮಯೂರ

ಕುಣಿಯ ತೊಡಗಿತು ಮೇಘಮಯೂರ
ಭವ್ಯಭೀಕರಾ ಬೃಹದಾಕಾರ
ರುದ್ರವಾದರೂ ಶುಭಶ್ರೀಕಾರ
ಕುಣಿಯ ತೊಡಗಿತು ಮೇಘಮಯೂರ |

ಗಗನರಂಗವನು ತುಂಬಿ ಬೆಳೆಯಿತು
ಚಿಕ್ಕೆಗಣ್ಣಿನಾ ಪಿಚ್ಛ ಹರಡಿತು
ಸಿಡಿಲು ಮಾಲೆಯಲಿ ಮುಡಿಯ ಕಟ್ಟಿತು
ಥಕಥೋಂ ಥಕಥೈ ಕಾಲು ಹಾಕಿತು |

ಹೆಜ್ಜೆ ಹೆಜ್ಜೆಯಲಿ ಗೆಜ್ಜೆ ನುಡಿಯಿತು
ಮೃದಂಗ ಬಾನೊಳು ಗುಡುಗು ಮೊಳಗಿತು
ಪದ ಘಟ್ಟನೆಯಲಿ ಭುವನ ನಡುಗಿತು
ಕುಣಿದ ಭಾವದಲಿ ಮಿಂಚು ಮೆರೆಯಿತು |

ಬುವಿಯ ದೇಗುಲದ ಬಾಗಿಲೆದುರಿನಲಿ
ಚಿಕ್ಕೆ ಚಿಗಿತ ಅಂಗಳದ ರಂಗದಲಿ
ದೇವದಾಸಿ ಕುಣಿದಂತೆ ಕುಣಿಯಿತು
ದೇವಲೋಕವೇ ನಿಂತು ನೋಡಿತು |

ಹಾಲು ಜೇನು ಜಲಕುಂಭವೆತ್ತಿತು
ನೀಲಕಂಠನಭಿಷೇಕ ನಡೆಯಿತು
ಜಗ ಮೂಕವಾಗಿ ತಲೆವಾಗಿ ನಿಂತಿತು
ಇಂದ್ರಲೋಕವತಿ ಚಿಕಿತವಾಯಿತು |

ಮುರಿಯ ಬಂದಿತೆನುವಂತೆ ಕುಣಿಯಿತು
ಪ್ರಮತ್ತ ಪ್ರಳಯಾವೇಶ ಬೆಳೆಯಿತು
ಸುಪ್ತ ಸಮೀರಣ ರೊಚ್ಚಿಗೆದ್ದಿತು
ಸಪ್ತ ಸಮುದ್ರದಿ ಹುಚ್ಚು ಕುಣಿಯಿತು |

ಬೆಂದ ನೆಲವು ಎದೆ ತೆರೆದು ಬೇಡಿತು
ಕಮರಿ ಹೋದ ಕಾಡೆಲ್ಲ ಕೆದರಿತು
ಕಣ್ಣು ಹಿಗ್ಗಿಸುತ ಗುಡ್ಡ ನೋಡಿತು
ವಿಶ್ವವೆಲ್ಲ ಹಾತೊರೆದು ನಿಂತಿತು |

ಮರಣ ಬಂದರೂ ಹರಣ ಸೊಕ್ಕಿತು
ಚರಣ ಚರಣದಲಿ ಜೀವ ಚಿಗುರಿತು
ಹಚ್ಚ ಹಸಿರು ಹುಚ್ಚೆದ್ದು ಚಿಮ್ಮಿತು
ಬಣ್ಣ ಬಣ್ಣಗಳ ಬಾಳು ಬೆಳೆಯಿತು |

ಮಣ್ಣನೆತ್ತಿ ಅರಮನೆಯ ಕಟ್ಟಿತು
ಇಂದ್ರ ಚಾಪಗಳ ಚೆಲುವ ತೋರಿತು
ಬೆಂದ ಬಾಳಿನಲಿ ತಂಪನೆರೆಯಿತು
ಬಂದುದೆಲ್ಲ ಬಹು ಚಂದವಾಯಿತು |

ತೊಳೆದು ಹೋಯಿತೆಲೆ ಜಗದ ಮೈಲಿಗೆ
ಇಟ್ಟಿತೆಲ್ಲೆಡೆಗೆ ಧೂಪ ದೀವಿಗೆ
ಮನದಿ ಅರಳಿಸಿತು ಜಾಜಿ ಮಲ್ಲಿಗೆ
ಭಾವ ಭಕುತಿಯಲಿ ದೇವ ಪೂಜೆಗೆ |

ಕುಣಿಯ ತೊಡಗಿತು ಮೇಘಮಯೂರ
ಭವ್ಯ ಭೀಕರ ಬೃಹದಾಕಾರ
ರುದ್ರವಾದರೂ ಶುಭ ಶ್ರೀಕಾರ
ಕುಣಿಯತೊಡಗಿತು ಮೇಘಮಯೂರ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...