Home / ಕವನ / ಕವಿತೆ / ಮೇಘಮಯೂರ

ಮೇಘಮಯೂರ

ಕುಣಿಯ ತೊಡಗಿತು ಮೇಘಮಯೂರ
ಭವ್ಯಭೀಕರಾ ಬೃಹದಾಕಾರ
ರುದ್ರವಾದರೂ ಶುಭಶ್ರೀಕಾರ
ಕುಣಿಯ ತೊಡಗಿತು ಮೇಘಮಯೂರ |

ಗಗನರಂಗವನು ತುಂಬಿ ಬೆಳೆಯಿತು
ಚಿಕ್ಕೆಗಣ್ಣಿನಾ ಪಿಚ್ಛ ಹರಡಿತು
ಸಿಡಿಲು ಮಾಲೆಯಲಿ ಮುಡಿಯ ಕಟ್ಟಿತು
ಥಕಥೋಂ ಥಕಥೈ ಕಾಲು ಹಾಕಿತು |

ಹೆಜ್ಜೆ ಹೆಜ್ಜೆಯಲಿ ಗೆಜ್ಜೆ ನುಡಿಯಿತು
ಮೃದಂಗ ಬಾನೊಳು ಗುಡುಗು ಮೊಳಗಿತು
ಪದ ಘಟ್ಟನೆಯಲಿ ಭುವನ ನಡುಗಿತು
ಕುಣಿದ ಭಾವದಲಿ ಮಿಂಚು ಮೆರೆಯಿತು |

ಬುವಿಯ ದೇಗುಲದ ಬಾಗಿಲೆದುರಿನಲಿ
ಚಿಕ್ಕೆ ಚಿಗಿತ ಅಂಗಳದ ರಂಗದಲಿ
ದೇವದಾಸಿ ಕುಣಿದಂತೆ ಕುಣಿಯಿತು
ದೇವಲೋಕವೇ ನಿಂತು ನೋಡಿತು |

ಹಾಲು ಜೇನು ಜಲಕುಂಭವೆತ್ತಿತು
ನೀಲಕಂಠನಭಿಷೇಕ ನಡೆಯಿತು
ಜಗ ಮೂಕವಾಗಿ ತಲೆವಾಗಿ ನಿಂತಿತು
ಇಂದ್ರಲೋಕವತಿ ಚಿಕಿತವಾಯಿತು |

ಮುರಿಯ ಬಂದಿತೆನುವಂತೆ ಕುಣಿಯಿತು
ಪ್ರಮತ್ತ ಪ್ರಳಯಾವೇಶ ಬೆಳೆಯಿತು
ಸುಪ್ತ ಸಮೀರಣ ರೊಚ್ಚಿಗೆದ್ದಿತು
ಸಪ್ತ ಸಮುದ್ರದಿ ಹುಚ್ಚು ಕುಣಿಯಿತು |

ಬೆಂದ ನೆಲವು ಎದೆ ತೆರೆದು ಬೇಡಿತು
ಕಮರಿ ಹೋದ ಕಾಡೆಲ್ಲ ಕೆದರಿತು
ಕಣ್ಣು ಹಿಗ್ಗಿಸುತ ಗುಡ್ಡ ನೋಡಿತು
ವಿಶ್ವವೆಲ್ಲ ಹಾತೊರೆದು ನಿಂತಿತು |

ಮರಣ ಬಂದರೂ ಹರಣ ಸೊಕ್ಕಿತು
ಚರಣ ಚರಣದಲಿ ಜೀವ ಚಿಗುರಿತು
ಹಚ್ಚ ಹಸಿರು ಹುಚ್ಚೆದ್ದು ಚಿಮ್ಮಿತು
ಬಣ್ಣ ಬಣ್ಣಗಳ ಬಾಳು ಬೆಳೆಯಿತು |

ಮಣ್ಣನೆತ್ತಿ ಅರಮನೆಯ ಕಟ್ಟಿತು
ಇಂದ್ರ ಚಾಪಗಳ ಚೆಲುವ ತೋರಿತು
ಬೆಂದ ಬಾಳಿನಲಿ ತಂಪನೆರೆಯಿತು
ಬಂದುದೆಲ್ಲ ಬಹು ಚಂದವಾಯಿತು |

ತೊಳೆದು ಹೋಯಿತೆಲೆ ಜಗದ ಮೈಲಿಗೆ
ಇಟ್ಟಿತೆಲ್ಲೆಡೆಗೆ ಧೂಪ ದೀವಿಗೆ
ಮನದಿ ಅರಳಿಸಿತು ಜಾಜಿ ಮಲ್ಲಿಗೆ
ಭಾವ ಭಕುತಿಯಲಿ ದೇವ ಪೂಜೆಗೆ |

ಕುಣಿಯ ತೊಡಗಿತು ಮೇಘಮಯೂರ
ಭವ್ಯ ಭೀಕರ ಬೃಹದಾಕಾರ
ರುದ್ರವಾದರೂ ಶುಭ ಶ್ರೀಕಾರ
ಕುಣಿಯತೊಡಗಿತು ಮೇಘಮಯೂರ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...