ಪೂರ್ವಸಾಗರವನ್ನು ಮುಕ್ಕುಳಿಸಿ ಮೇಲ್ಮೆಯಲಿ
ಮೂಡಣದ ಬೆಟ್ಟಗಳ ಮೆಟ್ಟಿ ಎದ್ದೆ.
ಕೈಗೆ ಕೈ ಚಿಗುರಿ, ನೂರ್ನೂರು ಸಾಸಿರವಾಗಿ
ದಿಗ್ದೇಶಗಳನು ಸೆರೆಗೊಳುತಲಿದ್ದೆ,
ಮಧ್ಯಾನ್ಹ ಬಿಸಿಲಿನೊಲು ಭಾಗ್ಯವಿಳಿಯುತಲಿರಲು
ಪಡುವಲದ ಘಟ್ಟಗಳನೇರಿ ಬರುವೆ.
ಕಡಿದುಡಿದು ಬಸಿವ ಕೈಕೆನ್ನೀರ ಕಲೆ ತೊಳೆಯೆ
ಕೊಂಕಣದ ಕಡಲಿನಲಿ ದುಮುಕಲಿರುವೆ.
ಕಾಲನಿಗು ಕಾಲುಂಟು. ನಿಂತಲ್ಲೆ ನಿಲ್ಲನವ;
ಅವನ ತೇರಿನ ಗಾಲಿ ತಿರುಗಲಹುದು.
ಸುಖವುಂಟು, ದುಃಖವಿದೆ, ಅದನ್ನು ತೂಗುತ್ತಿರಲು
ತಕ್ಕಡಿಯ ತೊಲೆಯು ತಲೆದೂಗಬಹುದು !
ಮೂಡು ಮುಳುಗಿನ ಮುಸುಕಿನಲ್ಲಿಯಂತೆ
ನಟಿಸುತಿಹೆ ನಾಟಕವ ಅಮರರಂತೆ –
*****