ಒಮ್ಮೆ ಕಾಡು ಹೂವು, ತೋಟದ ಹೂವಿನ ನಡುವೆ ಮಾತುಕತೆ ಆಯಿತು. ತೋಟದ ಹೂವು ತನ್ನ ನವಿರಾದ ಚೆಲುವಿನ ಬಗ್ಗೆ ಹೆಮ್ಮೆಯಿಂದ ಕಾಡು ಹೂವನ್ನು ಕಡೆಗಣಿಸಿ ಮಾತನಾಡಿತು.

ಕಾಡುಹೂವಿಗೆ ಹೃದಯ ಬಾಯಿಗೆ ಬಂದಂತಾಗಿ ಹೇಳಿತು. “ನಿನ್ನದು ಗೊಬ್ಬರದಲ್ಲಿ ಅರಳಿದ ಮುಖ. ನನ್ನದು ನಿಜಮುಖ” ಎಂದಿತು.

ಪೇಟೆಯ ಹೂವು ಜಂಭದಿಂದ ಹೇಳಿತು- “ಪೇಟೆಯಲ್ಲಿ ಜನರು ನನ್ನನ್ನು ಕೊಂಡು ಮುಡಿಯುತ್ತಾರೆ.” ಕಾಡು ಹೂವು ಹೇಳಿತು “ನಾನು ಗಿಡದಿಂದ ಭೂಮಿಗೆ ಉದರಿ ತಾಯಿ ಪೂಜೆ ಮಾಡುತ್ತೇನೆ. ಹಾಗೂ ನಾನು ಆಗಸದ ಉಪಾಸನೆ ಮಾಡುತ್ತೇನೆ. ನಾನು ಎಂದೂ ನನ್ನ ತಾಯಿ ಭೂಮಿ, ನನ್ನ ತಂದೆ ಆಗಸವನ್ನು ಮರೆತಿಲ್ಲ. ತೋಟದ ಹೂವಾದ ನೀನು ಹಾದರಗಿತ್ತಿ ತರಹ ಪೇಟೆಗೆ ಹೋಗಿ ಬೀದಿಯಲ್ಲಿ ಕುಳಿತು ಮೊಳಹಾಕಿಕೊಂಡು ಕೊಳ್ಳುವವರ ಕೈಯಿಂದ ಮದುವೆ, ಮಸಣ, ಎಲ್ಲದಕ್ಕೂ ಹೋಗುತ್ತೀಯ. ನಿನ್ನ ನಿಜ ಮುಖವನ್ನು ನೀನು ಮರೆತಿದ್ದಿ.” “ನಮ್ಮ ಅರಿವು ನಮಗಾಗದಾಗ ಆಗುವುದೆ ಹೀಗೆ” ಎಂದ ಕಾಡು ಹೂವಿನ ಮಾತು ಬಹಳವಾಗಿ ತೋಟದ ಹೂವಿನ ಹೃದಯ ಕಲಿಕಿತು.

ಕಣ್ಣು ತೆರೆಯಿತು. ತೋಟದ ಹೂವಿನ ಗಿಡದ ಬೀಜ ಕಾಡಿಗೆ ಓಡಿಹೋಯಿತು.
*****