Home / ಕಥೆ / ಜನಪದ / ಅತ್ತೆಯ ಗೊಂಬೆ

ಅತ್ತೆಯ ಗೊಂಬೆ

ಒಂದೂರಲ್ಲಿ ತಾಯಿಮಗ ಇದ್ದರು. ಮಗನು ದೊಡ್ಡವನಾದ ಬಳಿಕ ಹತ್ತಗಡೆಯವರಲ್ಲಿಯ ಹೆಣ್ಣು ತಂದು ಆತನ ಮದುವೆಮಾಡಿದಳು.

ಗಂಡನ ಮನೆಗೆ ಬಂದ ಬಳಿಕ ಸೊಸೆಯು, ಅತ್ತೆಯ ಸಲಹೆ ಕೇಳದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಅಡಿಗೆಮಾಡುವಾಗ ಎಷ್ಟು, ಹೇಗೆ ಎಂದು ಕೇಳುವಳು, ಹಾಗೆ ಕೇಳದಿದ್ದರೆ ಆಕೆಗೆ ಯಾವ ಕೆಲಸವೂ ಬಗೆಹರಿಯುತ್ತಿರಲಿಲ್ಲ. ಹೀಗೆ ಕೆಲವು ವರ್ಷ ಸಾಗುವಷ್ಟರಲ್ಲಿ ಅಕಸ್ಮಾತ್ತಾಗಿ ಅತ್ತೆ ಯಾವುದೋ ಜಡ್ಡಿನಿಂದ ತೀರಿಕೊಂಡಳು.

ಅತ್ತೆಯ ಅಗಲಿಕೆಯಿಂದ ಸೊಸೆಗೆ ತೀರ ಎಡಚಾಯಿತು. ಯಾರನ್ನು ಕೇಳಬೇಕು, ಏನೆಂದು ಕೇಳಬೇಕು?  ಯಾವ ಕೆಲಸವೂ ಸುಗಮವಾಗಿ ಸಾಗದಂತಾಗಲು ಆಕೆ ಗಂಡನಿಗೆ ಹೇಳಿದಳು ತನ್ನ ತೊಂದರೆಯನ್ನು.  ಗಂಡನು ಬಡಿಗನಿಂದ ಕಟ್ಟಿಗೆಯದೊಂದು ದೊಡ್ಡ ಗೊಂಬೆ ಮಾಡಿಸಿ ತಂದು ಹೆಂಡತಿಯ ಮುಂದೆ ಇಳುಹಿಸಿದನು.

ಆ ಗೊಂಬೆಯನ್ನೇ ಅತ್ತೆಯೆಂದು ಬಗೆದು ಪ್ರತಿಯೊಂದು ಕೆಲಸದಲ್ಲಿ ಆಕೆಯ ಸಲಹೆ ಕೇಳತೊಡಗಿದಳು. ಅನ್ನ ಮಾಡಲೋ ರೊಟ್ಟಿ ಮಾಡಲೋ?  ರೊಟ್ಟಿ ಮಾಡುವುದಾದರೆ ಏಸು ಮಾಡಲಿ? ಅದಕ್ಕೆ ಒಣಗಿಮಾಡಲೋ ಹಸಿಗೆ ಮಾಡಲೋ ಹೀಗೆ ಕೇಳುವಳು.

ಸೊಸೆ ಒಮ್ಮೆ ನೆರೆಹಳ್ಳಿಯ ಸಂತೆಗೆ ಹೊರಟು ನಿಂತು . “ಸಂತೆಗೆ ಬರುವಿಯೇನು ಅತ್ತೇ?” ಎಂದು ಕೇಳಿದಳು. ಅದಕ್ಕೆ ಉತ್ತರ ಬರದಿರಲು.  “ನಡೆಯಲಿಕ್ಕಾಗುವುದಿಲ್ಲ. ಏನು ಬರಲಿ ಅನ್ನುವಿಯಾ?  ನಾನು ನಿನ್ನನ್ನು ಬುಟ್ಟಿಯಲ್ಲಿ ಕುಳ್ಳರಿಸಿಕೊಂಡು ಹೋಗುವೆನು ಬರುವೆಯಾ? ಹಾಗಾದರೆ ನಡೆ” ಎಂದು ಬುಟ್ಟಿಯನ್ನು ಹೊತ್ತುಕೊಂಡು ಸಂತೆಯೂರಿಗೆ ಹೋದಳು. ಗೊಂಬೆಯ ಬುಟ್ಟಿಯನ್ನು ಹೊತ್ತುಕೊಂಡು ಸಂತೆಮಾಡಲಿಕ್ಕಾಗದು ಎಂದು ಅದನ್ನು ಹನುಮಂತ ದೇವರ ಗುಡಿಯಲ್ಲಿಳುಹಿ ತಾನು ಸಂತೆಯೊಳಗೆ ಹೋದಳು.  ಹನುಮಂತ ದೇವರ ಗುಡಿಗೆ ಬಂದ ಭಕ್ತರು ಬುಟ್ಟಿಯೊಳಗಿನ ಗೊಂಬೆಯನ್ನು ಕಂಡು, ಇದೂ ಒಂದು ದೇವರೆಂದು ತಾವು ತಂದ ಅಕ್ಕಿ, ಬೇಳೆ ಮುಂತಾದವುಗಳನ್ನು ಅದರ ಮುಂದೆಯೂ ಹಾಕಿ ಹಾಕಿ ಹೋದರು. ಸಂಜೆ ಇಳಿಹೊತ್ತಿಗೆ ಸೊಸೆ ಸಂತೆಮಾಡಿಕೊಂಡು ಗುಡಿಗೆ ಬಂದು ನೋಡುತ್ತಾಳೆ.  ಅಕ್ಕಿ ಬೇಳೆಗಳು ಎರಡೆರಡು ಸೇರಿನಷ್ಟು ಸುರಿದಿವೆ. “ಅಕ್ಕಿ ಬೇಳೆಯ ಸಂತೆ ಮಾಡಿದೆಯಾ ಅತ್ತೇ?” ಎನ್ನುತ್ತ ಅವನ್ನೆಲ್ಲ ಒಂದು ಅರಿವೆಯಲ್ಲಿ ಕಟ್ಟಿಕೊಂಡು, ಅತ್ತೆಗೊಂಬೆಯ ಬುಟ್ಟಿ ಹೊತ್ತು ಊರಹಾದಿ ಹಿಡಿದಳು.

ಮರುದಿನ ಊರಲ್ಲೆಲ್ಲ ಸುದ್ದಿ. ಸತ್ತ ಅತ್ತೆಯಗೊಂಬೆ ಸೊಸೆಗೆ ಅಕ್ಕಿಬೇಳೆಯ ಸಂತೆಮಾಡಿಕೊಟ್ಟಿತಂತೆ. ಆಶ್ಚರ್ಯವಲ್ಲವೇ ?

ಮುಂದಿನ ಸಂತೆಗೂ ಅತ್ತೆಯನ್ನು ಕರೆದೊಯ್ದಳು ಸೊಸೆ. ಸಂತೆಯೊಳಗಿನ ಕೆಲಸ ತೀರಿಸಿಕೊಂಡು ಊರಿಗೆ ಹೊರಡಬೇಕೆನ್ನುವಷ್ಟರಲ್ಲಿ ಹೊತ್ತು ಮುಳುಗಿತು. ಆದ್ದರಿಂದ ಸೊಸೆ ಅಂದಿನ ರಾತ್ರಿಯನ್ನು ಹನುಮಂತದೇವರ ಗುಡಿಯಲ್ಲಿಯೇ ಕಳೆದು, ಬೆಳಗಿಗೆ ತನ್ನೂರಿಗೆ ಹೊರಡಬೇಕೆಂದು ಯೋಚಿಸಿದಳು.

ಸರಿರಾತ್ರಿಯ ಹೊತ್ತಿಗೆ ಊರೊಳಗೆ ಯಾರ ಮನೆಯಲ್ಲಿಯೋ ಕಳವು ಮಾಡಿಕೊಂಡು ನಾಲ್ವರು ಕಳ್ಳರು ದ್ರವ್ಯವನ್ನು ಹಂಚುಪಾಲು ಮಾಡಿಕೊಳ್ಳಬೇಕೆಂದು ಹನುಮಂತದೇವರ ಗುಡಿಯನ್ನು ಹೊಕ್ಕರು. ಆ ಸುಳುಹಿಗೆ ಸೊಸೆ ಎಚ್ಚೆತ್ತು.  “ಅಯ್ಯೋ ಅತ್ತೇ” ಎನ್ನುತ್ತ  ಓಡಿಹೋದಳು. ಕಳ್ಳರು ಮುಂದೆ ಹೋಗಿ ನೋಡುವಷ್ಟರಲ್ಲಿ ಕಟ್ಟಿಗೆಯ ಗೊಂಬೆ. ಇದು ಚೇಡಿಯ ಗೊಂಬೆಯಾದ್ದರಿಂದ ನಮ್ಮ ಕಳ್ಳತನ ಹೊರಗೆಡವುತ್ತದೆ. ಆದ್ದರಿಂದ ಸಮಾಧಾನಪಡಿಸಬೇಕು   ಮೊದಲು ಎಂದು ಅದರ ಮುಂದೆ, ಪ್ರತಿಯೊಬ್ಬರು ಬೊಗಸೆಬೊಗಸೆ ರೂಪಾಯಿ ಸುರಿದು ಓಡಿಹೋದರು.

ತನ್ನತ್ತೆಯನ್ನು ಮರೆತುಹೋದೆನೆಂದು ಅರಿವಾಗಿ ಸೊಸೆ ಹೊರಳಿ ಗುಡಿಗೆ ಬಂದು ನೋಡುತ್ತಾಳೆ. ಅತ್ತೆಯ ಗೊಂಬೆಯ ಮುಂದೆ ರೂಪಾಯಿಗಳ ಡಿಗ್ಗೆ.  ಅವನ್ನೆಲ್ಲ ಜೋಕೆಯಿಂದ ಕಟ್ಟಿಕೊಂಡು ಬೆಳಗು ಮುಂಜಾನೆ ತನ್ನೂರಿಗೆ ಹೊರಟು ಹೋದಳು.

ನಾಲ್ಕಾರು ದಿನ ಕಳೆಯುವಷ್ಟರಲ್ಲಿ ಅತ್ತೆಯ ಗೊಂಬೆಯ ಪುಣ್ಯದಿಂದ ಅವರು ಸ್ಥಿತಿವಂತರಾದರೆಂದು ಕೇರಿಯವರಿಗೆಲ್ಲ ಗೊತ್ತಾಯಿತು. ಬಂದುಬಂದು ಕೇಳತೊಡಗಿದರು – ಸತ್ಯಸಂಗತಿ ಏನೆಂದು. ಸೊಸೆಯು ಹೇಳಿಬಿಟ್ಟಳು ಘಟಿಸಿದ ಸಂಗತಿಯನ್ನೆಲ್ಲ.

ಅದನ್ನೆಲ್ಲ ಕೇಳಿಕೊಂಡು ಇನ್ನೊಂದು ಮನೆಯ ಸೊಸೆಯು ತನ್ನ ಗಂಡನಿಗೆ ದುಂಬಾಲಬಿದ್ದು, ಅತ್ತೆಯ ಗೊಂಬೆಯನ್ನು ಮಾಡಿಸಿ ತರಿಸಿದಳು.  ಅಡಿಗೆಮನೆಯಲ್ಲಿರಿಸಿದಳು. ಕ್ಷಣಕ್ಷಣಕ್ಕೂ ಸಲಹೆ ಕೇಳುವಳು. ಕೊನೆಗೆ ಗೊಂಬೆಯನ್ನೆತ್ತಿಕೊಂಡು ನೆರೆಹಳ್ಳಿಯ ಸಂತೆಗೂ. ಹೊರಟಳು. ಸಂತೆಯಲ್ಲಿ ಅಷ್ಟೊಂದು ಕೆಲಸವಿಲ್ಲದಿದ್ದರೂ ಹೊತ್ತು ಮುಳುಗಿಸಿದಳು. ಅಂದಿನ ರಾತ್ರಿ ಅದೇ ಊರಲ್ಲಿ ಕಳೆಯಬೇಕಲ್ಲವೆ?

ಹಾದಿಬಿಟ್ಟು ತುಸು ಒಳಗಿರುವ ಗಿಡವನ್ನೇರಿ ಕುಳಿತು ರಾತ್ರಿ ಕಳೆಯುವದಕ್ಕೆ ನಿಶ್ಚಯಿಸಿದಳು. ಸರಿರಾತ್ರಿಯ ಹೊತ್ತಿಗೆ ಆ ಗಿಡದ ಕೆಳಗೆ ಅದೇ ಕಳ್ಳರು ಬಂದು ತಮ್ಮ ಹಂಚುಪಾಲಿನ ಕೆಲಸದಲ್ಲಿ ತೊಡಗಿದರು. ಅದನ್ನು ಕಂಡು ಗಿಡವೇರಿ ಕುಳಿತವಳ ಕೈಕಾಲು ಥರಥರಿಸತೊಡಗಿದವು. ಕೈಯೊಳಗಿನ ಗೊಂಬೆಯನ್ನು ಬಿಟ್ಟು ಬಿಟ್ಟಳು. ಅದು ಕೆಳಗೆ ಆ ಕಳ್ಳರ ಮುಂದೆಯೇ ಬಿತ್ತು. ಏನೆಂದು ನೋಡುವಷ್ಟರಲ್ಲಿ ಗೊಂಬೆ. ಕಳೆದವಾರವೂ ಇಂಥದೇ ಗೊಂಬೆ ತಮ್ಮನ್ನು ಹೆದರಿಸಿತೆಂದು ನೆನೆಸಿದರು. ಈ ಸಾರೆಯೂ ಗೊಂಬೆ ಬೆನ್ನಹತ್ತಬೇಕೇ ಕೈ ತೊಳಕೊಂಡು ಎನ್ನುತ್ತ, ಅದು ಎಲ್ಲಿಂದ ಬಿತ್ತೆಂದು ಶೋಧಮಾಡಲು ಗಿಡದ ಮೇಲೆ ದೃಷ್ಟಿಹಾಯಿಸುವಷ್ಟರಲ್ಲಿ ಅವರ ಕಣ್ಣಿಗೆ ಒಬ್ಬ ಹೆಂಗಸು ಕಾಣಿಸಿದಳು. “ಮರ್ಯದೆಯಿಂದ ಕೆಳಗಿಳಿದು ಬಾ” ಎಂದು ಹೇಳಲು ಆಕೆ ನಡುಗುತ್ತ ಗಿಡದಿಂದ ಕೆಳಗಿಳಿದು ಬಂದಳು. ಕಳ್ಳರು ಆಕೆಯ ಬಳಿಯಲ್ಲಿರುವ ಸಂತೆಯ ಗಂಟುಗಳನ್ನೆಲ್ಲ ಕಸುಗೊಂಡು, ಗೆಬ್ಬೆಗೆರಡು ಏಟುಕೊಟ್ಟು “ಹೋಗಿನ್ನು” ಎಂದರು.

ಆಕೆ ತಾನು ಆಶೆಪಟ್ಟು ಮಾಡಿದ ತಗಲು ಪರಾಮರಿಕೆಗಾಗಿ ಪಶ್ಚಾತ್ತಾಪಪಟ್ಟು ಗಲ್ಲಗಲ್ಲ ಬಡಿದುಕೊಳ್ಳುತ್ತ ತನ್ನೂರಿಗೆ ಹೋಗಿ ಯಾವ ಸುದ್ದಿಯನ್ನೂ ಹೊರಹಾಕದೆ ಮಿಡುಕುತ್ತ ಕುಳಿತಳು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...