Home / ಕವನ / ಕವಿತೆ / ಇತಿಹಾಸದ ದಾರಿ

ಇತಿಹಾಸದ ದಾರಿ

ಇತಿಹಾಸದ ದಾರಿ ನೇರವಾಗಿತ್ತೆ ಎಂದಾದರೂ
ಎಡವಿಕೊಂಡೇ ಬಂದಿತೆ ಅದು ಇಲ್ಲೀವರೆಗೆ
ಇಲ್ಲಿಂದ ಇನ್ನೆಲ್ಲಿಗೆ ಕೋ ವಾಡಿಸ್ ಎನ್ನುತ್ತ ಪ್ರತಿಯೊಂದು ಬಾರಿ?
ದಾರಿ ಇದ್ದಿದ್ದರೆ ತಾನೆ ಅದಕ್ಕೆ ದಾರಿ ಕೇಳುವುದಕ್ಕು? ದಾರಿಯಿಲ್ಲದಲ್ಲಿ
ಸಾಗುವುದು ಇತಿಹಾಸ
ನನಗಿಷ್ಟೆ ಗೊತ್ತು

ಸಹಸ್ರಾರು ಗಾಯಗಳು ಗಾಯದ ಮೇಲೆ ಬರೆಗಳು
ಕೆಲವು ಮಾಯ್ದಿವೆ ಕಾಲಾಂತರದಲ್ಲಿ ಕಾಣಿಸದಾಗಿವೆ
ಕೆಲವು ವ್ರಣಗಳಿನ್ನೂ ಸೋರುತ್ತಿವೆ

ಇತಿಹಾಸದ ಬೃಹತ್ತು ತಾಳುವಂಥದು ನಮಗೆ
ಗೊತ್ತಾಗುವುದಿಲ್ಲ
ಇತಿಹಾಸದ ಸುಸ್ತೆನ್ನುವುದಿದೆ ಹೆಬ್ಬಂಡೆಗಳ ಮೇಲೆ ಕುಳಿತು
ದಣಿವಾರಿಸಿಕೊಳ್ಳುವುದು ದೈತ್ಯ ಇಗುವಾನ ಕುಳಿತ ಹಾಗೆ
ಸತ್ತಂತೆ ಸತ್ತಿತೆಂದರೆ ತಲೆಯಾಡಿಸುವುದು
ಅದರ ಹಿನ್ನೋಟ ಅಂಥ ಕಾಲದಲಿ

ಭೀಕರ ಚಂಡಮಾರುತಕ್ಕೆ ಅಪ್ಪಳಿಸುವ ಮರ
ಅಲ್ಲಲ್ಲಿ ಗೂಡುಕಟ್ಟಿರುವ ಇರುವೆಗಳು
ಕೆಲವು ಬಿದ್ದು ಸಾಯುತ್ತವೆ ನೆಲದಲ್ಲಿ
ಇನ್ನುಳಿದವು ಹಾಗೇ ನೋಡುತ್ತವೆ ಬೆಪ್ಪಾಗಿ

ಎಲ್ಲಿ ಅಡಗಿರುತ್ತದೆ ಇತಿಹಾಸದ ಕ್ರತುಶಕ್ತಿ
ಎಂದು ಕೇಳುತ್ತೇನೆ
ರಾಜನಲ್ಲಿ ಅಥವ ವಿದೂಷಕನಲ್ಲಿ?

ಆಟದ ಗೆಲುವು ಎಲ್ಲಿರುತ್ತದೆ ಇದೊಂದು
ಆಟವೆ ಆಗಿದ್ದಲ್ಲಿ
ಆಡಿದವನ ಕೈಯಲ್ಲಿ ಅಥವ ಕಾಯಿಯ ವಕ್ರತೆಯಲ್ಲಿ?

ನದಿ ಮತ್ತು ಸೇತು ಗಿರಿ ಮತ್ತು ಸುರಂಗ
ಹಡಗವೂ ತುಫಾನವೂ ಯಾವುದು
ಯಾವುದು?

ಇಷ್ಟು ದೂರಕ್ಕೆ ವಕ್ರತೆಯೆನ್ನುವುದೇ ಇಲ್ಲ
ಎಲ್ಲ ವಕ್ರತೆಗಳೂ ಸರಳ ರೇಖೆಗಳೆ ಯಾಕೆಂದರೆ ನಾವು ಅನಂತತೆಯ
ಅಂಚಿನಲ್ಲಿದ್ದೇವೆ ಇಣುಕುತ್ತ
ಚಂದ್ರನ ಆಳಗಳೂ ದೃಷ್ಟಿ ಬೊಟ್ಟುಗಳೆ

ಸರಿ ತಪ್ಪು ನ್ಯಾಯಾನ್ಯಾಯಗಳು ಮೆನೆಖಿಯನ್ ವಿಂಗಡನೆ
ಇಂದು ಕಾರಣ ನೀಡಿದಷ್ಟೂ ದ್ವಂದ್ವಗಳು ನಾಶ
ಇತಿಹಾಸವೊಂದು ಕಂಟಿನ್ಯೂವಂ
ಅಥವ ತರಂಗಾಂತರಂಗ?

ಕತ್ತಲಿಲ್ಲದ ಬೆಳಕಿಲ್ಲದ ಮಬ್ಬಿನ ಪ್ರದೇಶ
ಯಾರು ಸಂಜ್ಞಾದೇವಿ ಯಾರು ಛಾಯಾದೇವಿ
ಪುರಾಣಗಳ ನಾಶಪಡಿಸಿದ ಇತಿಹಾಸ ಬೇರ್ಪಡಿಸುವಂತಿಲ್ಲ
ಕಾಯದಿಂದ ಛಾಯೆಯ

ಅದು ಹಿಂದೆ ನೋಡಿದಾಗ ತನ್ನ ಕಣ್ಣನ್ನೆ ಕಂಡ ಹಾಗೆ
ಮುಂದೆ ನೋಡಿದಾಗ ಅದಕ್ಕೆ ಕಣ್ಣುಗಳೆ ಇಲ್ಲ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...