Home / ಕವನ / ಕವಿತೆ / ಕೊನೆ ಕೊನೆಯ ಕವಿತೆಗಳು

ಕೊನೆ ಕೊನೆಯ ಕವಿತೆಗಳು

ಕೊನೆ ಕೊನೆಯ ಕವಿತೆಗಳು ಕೊನೆ ಕೊನೆಯ ಕನಸುಗಳು
ಬೆಳಕು ಕಾಯುವುದೆ ಕತ್ತಲು
ಅಟ್ಟದ ಮೇಲೆ ಅಥವಾ ಕೆಳಗೆ

ಇದೀಗ ಇದ್ದವು ಈಗೆಲ್ಲಿ ಹೋದವು ಕಿಟಿಕಿ ಮೂಲಕ
ಅಥವ ಯಾರು ತೆರೆದರು ಬಾಗಿಲ ಚಿಲಕ ಇಷ್ಟು ಬೇಗ

ಮೈಕೈಗೆ ಮಸಿ ಹಿಡಿದವರ ಕೈಗೂ
ವಸಿ ಹಿಡಿದವರ ಮನಸಿಗೂ
ಸಿಗುತವೆ ಈ ಇಂಥ ಭಾವ

ಕೊನೆಯೂ ಇಷ್ಟೊಂದು ಲಘುವಾಗಿರುತ್ತದೆಯೆ
ಆರಂಭ ಕೊನೆತನಕ ಬರುತ್ತದೆಯೆ
ಹಿಡಿದು ಬಿಟ್ಟರೆ ಎಲ್ಲಿ ಹಾರಿಹೋಗುತ್ತವೋ

ನಮಗೂ ಆತಂಕ
ಅಂತೂ ಉಳಿದವು ಬಹಳೊಂದು ಕವಿತೆಗಳು ಬರೆಯದೇ
ಗುಹಾವಾಸಿಗಳ ಗುಹೆಯಲ್ಲಿ

ನೋಡಿದಿರ ಅಜ್ಜನ ಗಡ್ಡ ಎಂಬವುಗಳು ಅರ್ಥಾತ್
ರೇಶಿಮೆ ಹತ್ತಿ ಬೀಜಗಳು
ಗುರುತ್ವಾಕರ್ಷ ವಿನಾ ಅಕ್ಷರ ರೂಪಿಗಳು ಹಾರಿಹೋಗುವುದ

ಗಾಳಿ ಬೀಸಿದ ಕಡೆ ಫೂ ಎಂದರೂ ಸಾಕು
ಹೋಗಿ ಕೂತುಕೊಳ್ಳುತ್ತವೆ ಹೂವಿನ ಮೇಲೆ ಎಂದೇನಿಲ್ಲ
ಮುಳ್ಳಿನ ಮೇಲೆ ಕೂಡ ಬೇಲಿಯಲ್ಲಿ ಅಥವ ಕಲ್ಲಿನಲ್ಲಿ

ಯಾಕೆ ಹೂ ಯಾಕೆ ಮುಳ್ಳು ಯಾಕೆ ಕಲ್ಲು ವಿಧಾತನಿಗೆ ಗೊತ್ತು
ಅವೂ ಯೋಚಿಸುತ್ತವೆ ಕೂತು ಬಹಳ ಹೊತ್ತು

ವಿಷಯ ಅಸ್ಪಷ್ಟ
ಪೆನ್ನು ಹರಿದಲ್ಲಿ ಗೆರೆಗಳು
ಮಸಿ ಮುಗಿದಲ್ಲಿ ಮೇರೆಗಳು
ಅಂತಿಮವಾಗಿ ಏನು

ಘನ ಕಾವ್ಯಗಳೆದುರು ಹೀಗೆ ಸುಳಿಯುವುದಕ್ಕೆ
ಅದೆಂಥ ಧೈರ್ಯ ಅಥವಾ ಮುಗ್ಧತೆ
ಜನ ಕಂಡಿದ್ದಾರೆ ಚಂಡಮಾರುತಗಳಂಥ ಯುದ್ದಗಳ
ಗುಡಿ ಗುಡಾರಗಳನ್ನೆ ಎತ್ತಿಹಾಕಿವೆ ದುರ್ಗ ಅರಮನೆಗಳ
ನೆಲಸಮ ಮಾಡಿವೆ ಇನ್ನು ವಾಡೆಗಳ ಬೀದಿಗಳ ಹಾದಿಗಳ
ಮಾತೇನು
ಆರಂಭಿಸಿದವರಿದ್ದಾರೆ ಎಲ್ಲವನ್ನೂ ಮೊದಲಿಂದ
ಯಾವುದೂ ಮೊದಲಿಂದ ಅಲ್ಲಿ ಖರೆ
ಮೌಲ್ಯ ಕಳಕೊಂಡ ಮೈಲಿಗಲ್ಲುಗಳು ಸ್ವರೂಪವಿಲ್ಲದ ಸೈಜುಗಲ್ಲುಗಳು
ಇತಿಹಾಸ ಪಡೆಯದೆ
ಇತಿ

ಲೆಕ್ಕವಿಲ್ಲದ ಆತ್ಮಗಳ ಕಂಡೆ
ವಿದ್ಯುತ್ ತಂತಿಗಳ ಮೇಲೆ
ಆತ್ಮಗಳೊ ಮಳೆನೀರ ಬಿಂದುಗಳೊ
ಹೊಳೆಯುತ್ತವೆ ಕರಗುತ್ತವೆ ನಿರ್ಭಾವ ನಿರ್ಮಮ
ಮಾತಿಲ್ಲದ ಕವಿತೆಯೇ ನಿನಗಷ್ಟೆ ಗೊತ್ತು
ಅವು ಮಾತಾಡುವುದು ಯಾರ ಜೊತೆ
ನಿರಪೇಕ್ಷ ಜಗತ್ತಿನಲ್ಲಿ ಇರುವೆಗಳಂತೆ ಇವೆ
ತಮಗಿಂತ ಹತ್ತುಪಟ್ಟು ಭಾರವ ಹೊತ್ತು

ಸಾಲುಗಳೆ ಇಲ್ಲ
*****

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...