Home / ಕವನ / ಕವಿತೆ / ಏನೆಂದು ಹೇಳಲಿ ಅಕ್ಕ

ಏನೆಂದು ಹೇಳಲಿ ಅಕ್ಕ

ಏನೆಂದು ಹೇಳಲಿ ಅಕ್ಕ
ಮುತ್ತಿನ ಕತೆಯ
ಏನೆಂದು ಹೇಳಲಿ ಅದ
ಕಿತ್ತವನ ಕತೆಯ

ಬೃಂದಾವನ ತುಂಬ ಸುರಿಯಿತು ಮುತ್ತು
ಅದು ಸುರಿದರು ಇನ್ನೂ ಮುಗಿಯದೆ ಇತ್ತು

ಅತ್ತು ಕೇಳಿದ ಕೃಷ್ಣ
ಮತ್ತೂ ಕೇಳಿದ ಕೃಷ್ಣ
ಒತ್ತಾಯಿಸಿ ಕೇಳಿದ
ಸತ್ತಾಯಿಸಿ ಕೇಳಿದ
ಒಬ್ಬೊಬ್ಬ ಗೋಪಿಕೆಯ
ಹತ್ತು ಸಲ ಕೇಳಿದ
ಏನೆಂದು ಹೇಳಲಿ ಅಕ್ಕ
ಈ ಮುತ್ತಿನ ಕತೆಯ

ಒಬ್ಬೊಬ್ಬಳಿಂದಲು
ಒಂದೊಂದು ಮುತ್ತು
ದಿನವು ಬೇಡಿದನೆ
ಇನ್ನೊಂದು ಮುತ್ತು

ತುಟಿಗೊಂದು ಮುತ್ತು
ಕೆನ್ನೆಗೊಂದ್ಮುತ್ತು
ಹಣೆಗೊಂದು ಮುತ್ತು
ಹುಬ್ಬಿಗೆರಡಿತ್ತು

ನಗುತಿದ್ದರೊಂದು ಮುತ್ತು
ನಾಚುತಿದ್ದರು ಒಂದು ಮುತ್ತು
ಸುಮ್ಮನೆ ಹೋಗುತಿದ್ದರೆ ಮುತ್ತು
ಬಿಮ್ಮನೆ ಇದ್ದರೆ ಮುತ್ತೇ ಮುತ್ತು

ಮರೆಗಿದ್ದರೊಂದು ಮುತ್ತು
ಮಾತಾಡುತಿದ್ದರೆರಡು ಮುತ್ತು
ಹಾಡುತಿದ್ದರೆ ಹತ್ತು ಮುತ್ತು
ಮೌನವಾಗಿದ್ದರೆ ಮುನ್ನೂರು ಮುತ್ತು

ಹಾಲು ಕರೆಯುತ್ತಿದ್ದರೆ
ಕೇಳಿದಷ್ಟು ಮುತ್ತು
ನೀರು ತರುತಿದ್ದರೆ
ನೂರೊಂದು ಮುತ್ತು
ಐನೀರಿಗೈನೂರು ಮುತ್ತು
ರಂಗಿನಾಟಕೆ ಸಾವಿರ ಮುತ್ತು

ನಿನ್ನೆ ಬೇಕೆಂದನೆ
ಈ ದಿನ ಬೇಕೆಂದನೆ
ಈಗ ಬೇಕೆಂದನೆ
ಆಗ ಬೇಕೆಂದನೆ
ಯಾವತ್ತಿಗೂ ಅದು
ಸಾಕಾಗುವುದೆಂದನೆ
ಯಾವತ್ತಿಗೂ ಅದು
ಸಾಕಾಗದೆಂದನೆ

ಮುತ್ತು ಕೊಟ್ಟೇ ದಾರಿ
ಹೋಗಬೇಕೆಂದನೆ
ಶುದ್ಧ ಮುತ್ತೇ
ಆಗಬೇಕೆಂದನೆ
ಇದ್ದಷ್ಟೂ ಅವು
ಸಾಲದೆಂದನೆ
ಉದ್ದ ಮುತ್ತುಗಳೇ
ಒಳ್ಳೆಯದೆಂದನೆ
ಕದ್ದಾದರೂ ಅವ
ಕೊಡಬೇಕೆಂದನೆ

ಕೊಟ್ಟುದನೆಲ್ಲವ
ಚೆಲ್ಲಾಡಿ ಕೇಳಿದನೆ
ಕಳೆದುಹೋದುವು ಎಂದು
ಗೋಳಾಡಿ ಕೇಳಿದನೆ
ಆಡಿ ಕೇಳಿದನೆ ಕುಣಿ-
ದಾಡಿ ಕೇಳಿದನೆ
ಎಲ್ಲೆಂದರಲ್ಲಿ ಕಾಡಿ ಕೇಳಿದನೆ
ನಗಾಡಿ ಕೇಳಿದನೆ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...