Home / ಕವನ / ಕವಿತೆ / ಚಿಂತೆಗೆ ಕಣ್ಣತೆತ್ತವಳೆ!!

ಚಿಂತೆಗೆ ಕಣ್ಣತೆತ್ತವಳೆ!!

ಚಿಂತೆಗೆ ಕಣ್ಣ ತೆತ್ತವಳೆ,  ಚಿಲುಕದಮೇಲೆ
ಮುಂಗೈಯನೂರಿ ನಿಂತವಳೆ,
ಬಿಂದಿಗೆ ಹೊರದೆ ಸೋತವಳೆ, ಸಣ್ಣಗೆ ಒಳಗೆ
ಚಿಂತೆ, ಏತರ ಚಿಂತೆ, ನಿನಗೆ?

ಚಿಂತೆಗೆ ಕಣ್ಣ ತೆತ್ತವಳೆ, ತುರುಬಿನ ತುದಿಗೆ
ಒಂದೆ ಹೂವನು ಮುಡಿದವಳೆ,
ಒಂದೊಂದೆ ಬಳೆಯ ತೊಟ್ಟವಳೆ, ಈ ಮನೆಯೊಳಗೆ
ಚಿಂತೆ, ಏತರ ಚಿಂತೆ, ನಿನಗೆ?

ಚಿಂತೆಗೆ ಕಣ್ಣ ತೆತ್ತವಳೆ, ಹತ್ತಿದ ದೀಪ
ಮಂಕಾಗಿ ತೋರಿ ನಿಂತವಳೆ,
ಸಂತೆಗೆ ಹೋಗಿ ಬರಿಗೈಲೆ ಬಂದೆಯ, ಪಾಪ !-
ಚಿಂತೆ, ಏತರ ಚಿಂತೆ, ನಿನಗೆ?

ನಿನಗಾವ ಚಿಂತೆ ಚಿಕ್ಕವಳೆ, ಚಿನ್ನದ ಬಳೆಗೆ
ಒಪ್ಪುವ ತುಂಬುಗೈಯವಳೆ !
ಗಾಳಿಯ ಸುಳಿಗೆ ಹೂವಾದ ಮಲ್ಲಿಗೆಯರಳೆ,
ಬಂಡಿಯ ದನಿಗೆ ಬೆಚ್ಚುವಳೆ !-

ನಿನಗಾವ ಚಿಂತೆ, ಚಿಕ್ಕವಳೆ, ತುಂಬಿದ ಮನೆಗೆ
ಘನವಾಗಿ ಬಂದ ಗುಣದವಳೆ,
ನುಡಿದೊಂದು ಮಾತು ಸಾಕೆನುವ ಇನಿದನಿಯವಳೆ,
ತಲೆತಗ್ಗಿ ನಾಚಿ ನಡೆಯುವಳೆ?

ಮಳೆ ಬಿದ್ದು, ಕೆರೆ ತುಂಬಿ ನೀರು! ಮಿಂಚುವ ನೀರು,
ಬರಿ ನೀರೆ? ಥೇಟು ಪನ್ನೀರು !
ಅತ್ತಿತ್ತ ನೆಲ ಹೂವ ತೇರು; ಅಲ್ಲಿಗೆ ಬಾನು
ಇದ್ದೀತು ಒಂದೆರಡು ಮಾರು !

ಮನೆಗಿಂತ ಬಾನು ಎತ್ತರವೆ? ಆದರೆ ಏನು?
ಬಾನಿಗೆ ತಾರೆ ಹತ್ತಿರವೆ?
ಏನಂಥ ಬೆಟ್ಟ ಹೊತ್ತಿರುವೆ? ಸುಮ್ಮನೆ ನೀನು
ಸೊಂಪಾಗಿ ನಿಲುವುದುತ್ತರವೆ ?

ತೋಟದ ಮೇಲೆಲ್ಲ ತೆಂಗು; ತೆಂಗಿನ ಮೇಲೆ
ತೆರೆದ ಹೊಂಬಾಳೆಯ ರಂಗು!
ಗೊನೆ ಬಿಟ್ಟ ರಸಬಾಳೆ ಕಂದು; ಹಣ್ಣಿನ ಮೇಲೆ
ಹುದುಗಿತ್ತು ಗಿಣಿಯೊಂದು ಬಂದು.

ವೀಣೆಗೆ ತಂತಿಯ ಚೆಂತೆ; ತಂತಿಗೆ ತನ್ನ
ಹುಡುಕುವ ಬೆರಳಿನ ಚಿಂತೆ ;
ಬೆರಳಿಗೆ ಉಂಗುರದ ಚಿಂತೆ ; ಚಿಂತೆಗೆ ತನ್ನ
ಮಡಿಲ ತುಂಬುವುದೊಂದೆ ಚಿಂತೆ.

ಇಲ್ಲದ ಸಲ್ಲದ ಚಿಂತೆ ; ಅದು ಬಂದಂತೆ
ಹೋದೀತು ಇರಲೊಂದು ಗಳಿಗೆ !
ಸಂಶಯ ನನಗಿಲ್ಲ, ಚೆಲುವೆ; ಚೆಲುವಿಗೆ ಚಿಂತೆ;
ಚಿಂತೆಯಿಲ್ಲದ ಚೆಲುವು ಚೆಲುವೆ ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...