ಕೈಯಲ್ಲಿ ಕೋವಿ ಹಿಡಿದವರು
ನನ್ನ ಜನಗಳಲ್ಲ ಸ್ವಾಮಿ
ಭತ್ತದ ಗದ್ದೆಯಲಿ ನಡು ಬಗ್ಗಿಸಿ
ಕುಡುಗೋಲು ಹಿಡಿದವರು ಅವರು.
ನನ್ನವರ ಎದೆಯಲ್ಲಿ ಕಾವ್ಯವಿದೆ
ಎತ್ತಿನ ಗೆಜ್ಜೆನಾದ, ಹಂತಿ ಹಾಡುಗಳಿವೆ
ನೋವು ಮರೆತು ಹಾಡುತ್ತಾರೆ.
ಸಂಘರ್ಷದ ಬದುಕು ಬದುಕುತ್ತಾರೆ.
ಮನದಲ್ಲಿ ಛಲ ಹೊತ್ತ ನನ್ನವರ
ಎದೆ ತುಂಬ ಗಾಯಗಳು.
ಹರಿದು ಸೋರಿದ ಕೀವು ರಕ್ತ
ಹಾಡಿನ ಹೊನಲಾಗಿ ಹರಿಯುವವು.
ದೀಪವಿಲ್ಲದ ಕತ್ತಲ-ಹಳ್ಳಿಗಳಲ್ಲಿ
ಅಜ್ಞಾತ ಬದುಕು ಬದುಕುತ್ತಿರುವವರು
ಕೊಡ ನೀರಿಗಾಗಿ ಮೈಲು ನಡೆದವರು.
ಅವರು ಆತ್ಮವಿಶ್ವಾಸದ ಪರ್ವತಗಳು ಸ್ವಾಮಿ
ನನ್ನ ಜನಗಳು ಕನಸುಗಾರರು
ಪ್ರಾಮಾಣಿಕ ಬದುಕು ಬದುಕುತ್ತಿರುವವರು
ಸರಳತೆಯ ಜೀವನ ಸಾಗಿಸುತ್ತಿರುವವರು.
ನವಿಲ ಗರಿಯಂಥ ಹುಲ್ಲ ಗರಿಕೆಗಳ
ಹೊತ್ತ ಗುಡಿಸಲುಗಳ ಹೊದಿಕೆಗಳ ಕೆಳಗೆ
ಸಂತರ ನಡೆನುಡಿಗಳು ಅವರದು ಸ್ವಾಮಿ,
ಕನಸಿನ ಲೋಕಕ್ಕೆ ಅವರು
ಮೆಟ್ಟಿಲುಗಳ ಕಟ್ಟಿದವರು
ಕನಸು ಕಮರಿದರೂ,
ಸ್ವಾಭಿಮಾನದ ಉನ್ನತ ಬದುಕು
ಪ್ರೀತಿಸಿದವರು.
ನನ್ನವರ ಬೇಡಿಕೆಗಳು ಸೀಮಿತ
ಮಣ್ಣ ಹಣತೆಯ ಆಯುಷ್ಯ ಅವರದು
ಆದರೂ ಬೆಳಕು ಅನಂತಕಾಲ ಸ್ವಾಮಿ.
*****
Related Post
ಸಣ್ಣ ಕತೆ
-
ಆವರ್ತನೆ
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
-
ಅಹಮ್ ಬ್ರಹ್ಮಾಸ್ಮಿ
ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…
-
ಪ್ರೇಮನಗರಿಯಲ್ಲಿ ಮದುವೆ
ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…
-
ತನ್ನೊಳಗಣ ಕಿಚ್ಚು
ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…
-
ಎದಗೆ ಬಿದ್ದ ಕತೆ
೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…