Home / ಕವನ / ಕವಿತೆ / ನನ್ನ ಜನಗಳು

ನನ್ನ ಜನಗಳು

ಕೈಯಲ್ಲಿ ಕೋವಿ ಹಿಡಿದವರು
ನನ್ನ ಜನಗಳಲ್ಲ ಸ್ವಾಮಿ
ಭತ್ತದ ಗದ್ದೆಯಲಿ ನಡು ಬಗ್ಗಿಸಿ
ಕುಡುಗೋಲು ಹಿಡಿದವರು ಅವರು.
ನನ್ನವರ ಎದೆಯಲ್ಲಿ ಕಾವ್ಯವಿದೆ
ಎತ್ತಿನ ಗೆಜ್ಜೆನಾದ, ಹಂತಿ ಹಾಡುಗಳಿವೆ
ನೋವು ಮರೆತು ಹಾಡುತ್ತಾರೆ.
ಸಂಘರ್‍ಷದ ಬದುಕು ಬದುಕುತ್ತಾರೆ.
ಮನದಲ್ಲಿ ಛಲ ಹೊತ್ತ ನನ್ನವರ
ಎದೆ ತುಂಬ ಗಾಯಗಳು.
ಹರಿದು ಸೋರಿದ ಕೀವು ರಕ್ತ
ಹಾಡಿನ ಹೊನಲಾಗಿ ಹರಿಯುವವು.
ದೀಪವಿಲ್ಲದ ಕತ್ತಲ-ಹಳ್ಳಿಗಳಲ್ಲಿ
ಅಜ್ಞಾತ ಬದುಕು ಬದುಕುತ್ತಿರುವವರು
ಕೊಡ ನೀರಿಗಾಗಿ ಮೈಲು ನಡೆದವರು.
ಅವರು ಆತ್ಮವಿಶ್ವಾಸದ ಪರ್‍ವತಗಳು ಸ್ವಾಮಿ
ನನ್ನ ಜನಗಳು ಕನಸುಗಾರರು
ಪ್ರಾಮಾಣಿಕ ಬದುಕು ಬದುಕುತ್ತಿರುವವರು
ಸರಳತೆಯ ಜೀವನ ಸಾಗಿಸುತ್ತಿರುವವರು.
ನವಿಲ ಗರಿಯಂಥ ಹುಲ್ಲ ಗರಿಕೆಗಳ
ಹೊತ್ತ ಗುಡಿಸಲುಗಳ ಹೊದಿಕೆಗಳ ಕೆಳಗೆ
ಸಂತರ ನಡೆನುಡಿಗಳು ಅವರದು ಸ್ವಾಮಿ,
ಕನಸಿನ ಲೋಕಕ್ಕೆ ಅವರು
ಮೆಟ್ಟಿಲುಗಳ ಕಟ್ಟಿದವರು
ಕನಸು ಕಮರಿದರೂ,
ಸ್ವಾಭಿಮಾನದ ಉನ್ನತ ಬದುಕು
ಪ್ರೀತಿಸಿದವರು.
ನನ್ನವರ ಬೇಡಿಕೆಗಳು ಸೀಮಿತ
ಮಣ್ಣ ಹಣತೆಯ ಆಯುಷ್ಯ ಅವರದು
ಆದರೂ ಬೆಳಕು ಅನಂತಕಾಲ ಸ್ವಾಮಿ.
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...