Home / ಕಥೆ / ಕಿರು ಕಥೆ / ಗುಡ್ಡಕಾಡಿನ-ರಾಜ್ಯಭಾರ

ಗುಡ್ಡಕಾಡಿನ-ರಾಜ್ಯಭಾರ

ಅದೊಂದು ಬೆಟ್ಟಗುಡ್ಡಕಾಡು, ಅಲ್ಲಿ ಗುಡ್ಡ ಕಲ್ಲುಗಳ ರಾಜ್ಯಭಾರ. ನಡೆದು ಬರುತ್ತಾ ಒಮ್ಮೆ ನಾನೂ ಈ ಬೆಟ್ಟಗುಡ್ಡಗಳ ರಾಜ್ಯದಲ್ಲಿ ಹೆಜ್ಜೆ ಇಟ್ಟೆ. ಮೊದಲಿಗೆ ನನಗೆ ಹೆದರಿಕೆಯಾಯಿತು.

“ಅಬ್ಬಾ! ಇದೆಷ್ಟು ದೊಡ್ಡ ಬೆಟ್ಟ ಗುಡ್ಡಗಳು” ಎನಿಸಿತು. ಇವುಗಳ ಭಾರ, ಘನತೆ, ತೂಕ ಎಲ್ಲಾ ನನ್ನ ಭಾವಗಳನ್ನು ಕೆದಕಿತು. ಈ ಬೆಟ್ಟಗುಡ್ಡಗಳ ಕಾರ್ಯಭಾರ ಬಹಳ ಕಠಿಣವಿರಬೇಕೆಂದೆನಿಸಿತು. ಎಷ್ಟಾದರೂ ಕಲ್ಲುಗಳು ಇವು ಅಲ್ಲವೇ? ಇವುಗಳಿಗೆ ಹೃದಯವೆಲ್ಲಿ? ಇವು ಬರಿ ಬರಡು. ಬಂಡೆ ಮೈಯನ್ನು ಪ್ರಕೃತಿಗೆ ಒಡ್ಡಿ ಜಡವಾಗಿ ಯುಗದ ಉದ್ದಕ್ಕೂ ಬಿದ್ದಿರುವ ಇವುಗಳಿಂದ ಏನು ಪ್ರಯೋಜನ? ಎಂದೆಲ್ಲಾ ಯೋಚಿಸುತ್ತಿರುವಾಗ, ನನ್ನ ಹಿಂಬದಿಯಲ್ಲಿ ಕೂಡಲು ಆಸನದಂತಿದ್ದ ಗುಡ್ಡದಬಂಡೆ ನನ್ನ ಸ್ವಾಗತಿಸಿತು. ಆತ್ಮೀಯತೆ, ಆದರತೆಯಿಂದ ನನ್ನ ಕುಳ್ಳಿರಿಸಿತು. ನಡೆದು, ಸೋತ ನನ್ನ ಕಾಲುಗಳು ಪ್ರೀತಿಯ ಕರೆಯೋಲೆಗೆ ಸ್ಪಂದಿಸಿಯೋ ಎಂಬಂತೆ ಕುಳಿತು ಸುತ್ತ ನೋಡುತ್ತಿದ್ದೆ. ಆ ಬೆಟ್ಟಗುಡ್ಡಗಳ ವೈವಿಧ್ಯತೆ, ರೂಪ, ಸೌಂದರ್ಯ, ನುಣುಪು ಹೊಳಪು, ಆಕಾರ ಎಲ್ಲಾ ನನ್ನ ಮನವನ್ನು ಆಕ್ರಮಿಸಿತು. ಒಂದು ದೊಡ್ಡ ಬಂಡೆ, ಚಿಕ್ಕಬಂಡೆಯನ್ನು ತೊಡೆಯಲ್ಲಿಟ್ಟು ಕೂತಿತ್ತು ತಾಯಿ ಮಗುವಿನಂತೆ, ಪಕ್ಕದಲ್ಲಿ ಎರಡು ಸುಂದರ ನಿಲುವುಳ್ಳ ಗುಡ್ಡಗಳು ಪ್ರೇಮಿಗಳಂತೆ ಅತಿ ಸನಿಹದಲ್ಲಿ ನಿಂದು ಒಂದನ್ನೊಂದು ಮುತ್ತಿಕ್ಕುತ್ತಿದ್ದವು. ಮತ್ತೆ ಕೆಲವು ಒಂದರ ಮೇಲೊಂದು ಏರಿ ಸೃಷ್ಟಿ ಮಿಲನದ ಮಾಧುರ್ಯ ಸವಿಯುತ್ತಿದ್ದವು.

ಕೆಲವು ಗುಡ್ಡ ಬಂಡೆಗಳು ವಿರಕ್ತರಂತೆ ಏಕಾಂಗಿಗಳಾಗಿ ತಪದಲ್ಲಿದ್ದವು. ಮತ್ತೆ ಕೆಲವು ದೈವೀ ರೂಪದಲ್ಲಿ ರಾರಾಜಿಸುತಿತ್ತು. ಮತ್ತೆ ಕೆಲವು ದೊಡ್ಡ ಚಿಕ್ಕ ಬಂಡೆಗಳು ಒಟ್ಟು ಸೇರಿ ಸೃಷ್ಟಿಯ ನಿಗೂಢತೆ ಅರಿಯಲು ಸಮ್ಮೇಲನ ಮಾಡುತ್ತಿದ್ದವು.

ಇನ್ನು ಕೆಲವು ಸಸ್ಯ ಪ್ರೇಮಿಗಳಾಗಿ ಹುಲ್ಲು ಗಿಡಗಳ ಬಗಲಲ್ಲಿ ಕುಳಿತು ಅವುಗಳೊಡನೆ ಸಮರಸದಿಂದ ಬಾಳುತ್ತಿದ್ದವು. ಇನ್ನು ಕೆಲವು ಭೂಮಿ ತಾಯಿಯ ತೊಡೆಯ ಮೇಲೆ ದೀರ್ಘ ನಿದ್ದೆಯಲ್ಲಿದ್ದವು. ಇನ್ನು ಕೆಲವು ದಾರ್ಶನಿಕ ಬಂಡೆಗಳು ಆಗಸದ ಎತ್ತರಕ್ಕೆ ತಲೆಎತ್ತಿ ಸೃಷ್ಟಿಯ ಚಿಂತನೆಯಲ್ಲಿದ್ದವು. ಇಲ್ಲಿ ಎಲ್ಲಾ ಕಾರ್ಯಭಾರಗಳೂ ನಡೆದಿತ್ತು. ಆದರೆ ಇಲ್ಲಿ ಗೊಂದಲವಿಲ್ಲ, ಸದ್ದಿಲ್ಲ. ಎಲ್ಲಾ ಮೌನ ಸಾಮ್ರಾಜ್ಯ. ಮೌನದಲ್ಲಿ ರೂಪ, ಆಕಾರ, ಸಾಕಾರ, ಹೃದಯ ಭಾವ ಎಲ್ಲಾ ಝಂಕರಿಸಿತ್ತು. ಎಲ್ಲವೂ ಮೂಕ ವಿಸ್ಮಯದಿಂದ ಕೂಡಿತ್ತು. ಬಿಸಿಲು ಬಿದ್ದರು, ಬೆಳದಿಂಗಳು ಹರಿದರು, ಮಳೆಗರಿದರು, ಗುಡುಗಿದರು, ಮಿಂಚಿದರು, ಗಾಳಿ ಬೀಸಿದರು, ಮೋಡ ಚುಂಬಿಸಿದರು, ಒಂದೇ ಮೌನದ ಮುದ್ರೆ, ಒಂದೇ ಮೌನ ಸಮ್ಮತ. ಒಂದೇ ಮೌನಶಾಂತಿ, ಒಂದೇ ಮೌನ ನಿಶ್ಚಲತೆ, ಒಂದೇ ಮೌನ ಧೃತಿ. ಒಂದೇ ಮೌನ ಶೃತಿ.

ಇದನ್ನು ನೋಡುತ್ತಾ ನೋಡುತ್ತಾ ನನ್ನ ಹೃದಯ ಶೃತಿಗೆ ಶೃತಿಕೊಟ್ಟಿತು. ಗುಡ್ಡಹಾಡ ಗುನುಗಿತು. ಬೆಟ್ಟ ಭಾವಬೆಳೆಸಿತು, ಕಲ್ಲು ಕರುಣೆ ಹರಿಸಿತು, ಗುಡ್ಡಬಂಡೆಗಳ ಹೃದಯ ವೇದ ನುಡಿಯಿತು. ಸತ್ಯಕ್ಕೆ ಕನ್ನಡಿ ಇಟ್ಟವು. ಸೌಂದರ್ಯಕ್ಕೆ ಸಾಕಾರವಾದವು.

ಮೂಕ ವಿಸ್ಮಯದಲ್ಲಿ ನಾ ಗುಡ್ಡ ಬೆಟ್ಟವಾದೆ. ನನ್ನ ಮುಂದೆ ನಿಂತ ಗುಡ್ಡಬೆಟ್ಟ ಮಾನವತ್ವದಿಂದ ದೈವತ್ವಕ್ಕೆ ಬೆಳೆದುನಿಂತವು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...