Home / ಕವನ / ಕವಿತೆ / ನನ್ನ ನಾಯಿ

ನನ್ನ ನಾಯಿ

ಹೆರರ ನೋವಿಗೆ ಅಯ್ಯೊ ಎಂದು
ಮರುಗಿ ಸುಯ್ಯಲನಿಡಲು ಒಲವೆ?
ಹಿರಿಯ ಸುಖದಿರವೆನ್ನ ದೆನ್ನುವ
ಅರಿವು ಒಲಿದವಗಿರುವುದೆ?

ಜನುಮದೊಂದಿಗೆ ಜೊತೆಯ ಕೂಡಿ
ಕೊನೆಯವರೆಗೂ ಬೆನ್ನ ಬಿಡದ
ಜನುಮದುನ್ನತಿ ಕುಲದ ಹೆಮ್ಮೆಯ.
ಕಟ್ಟ ಕಳೆವುದೆ ಕರುಣೆಯು?

ಕೊಳದ ಕರೆ ಬಳಿ ಅಂದು ಮರುಗಿದೆ
ಸುಳಿದ ನೋವಿನ ಅಳುವ ಕೇಳಿ,
ಬೆಳೆದ ಇರುಳೊಳು ದನಿಯನರಸಿ
ಮನದೊಳಳುಕುತ ನಡೆದೆನು.

ಮುಗಿಲ ಬೆಳ್ಳಿಯ ಪೊರೆಯ ಹೊದೆದು
ಸೊಗಸುಕನಸನು ಕಾಣುವಂದದಿ
ನಗುವ ಚಂದ್ರನ ಬೆಳಕಿನೊಳಗೆ
ಕಂಡೆ ತಬ್ಬಲಿ ಮರಿಯನು.

ತಾಯಿ ಸತ್ತರು ಮೊಲೆಯ ಬಿಡದಾ
ನಾಯ ಮರಿಯ ಗೋಳ ಕಂಡೂ
ಮೈಯ ಮುಟ್ಟಲು ತಡೆದುದಂದು
ಜಾತಿ ಹೆಚ್ಚಿನ ಹೆಮ್ಮೆಯು.

ಕೊರೆವ ಚಳಿಯೊಳು ದಿಕ್ಕುಗಾಣದ
ಮರಿಯ ತೊರೆಯಲು ಮನವು ಬಹುದೇ?
ಕೊರಲೊಳಿಟ್ಟೆನು ಬಳ್ಳಿಕುಣಿಕೆಯ
ಮನೆಗೆ ನಡೆಸಿದೆ ಮೆಲ್ಲನೆ.

ಅಂದು ಮಕ್ಕಳ ಹರುಷ ಮೀರಿತು
ಮುಂದೆ ಕುಣಿದರು ಕೈಯ ತಟ್ಟಿ
ಕಂದನಂದದಿ ಅಂದು ಮೊದಲು
ಮರಿಯ ಸಾಕಿದೆವೆಲ್ಲರು.

ಹಾಲು ಅನ್ನವನುಣಿಸಿ ನಲಿದೆವು
ಮೇಲುತಿಂಡಿಗಳೆಲ್ಲವಿತ್ತೆವು
ಮೈಲಿಗೆಯ ಭಯದಿಂದ ಮೈಯನು
ಮುಟ್ಟಗೊಡಿಸೆವು ಆದರೂ.

ಮರಿಯು ನಮ್ಮ ಬಿಂಕವರಿತು
ಹೊರಗೆ ನಿಲುವುದು ಹೊಸಿಲ ದಾಟದು!
ಹಿರಿಯತನದ ಹೆಮ್ಮೆಗಡಲು
ಹರಿಯತೆಮ್ಮಯ ಮಧ್ಯದಿ.

ಆರು ತಿಂಗಳ ಕಳೆದೆವಿಂತು,
ಊರೆ ಮೆಚ್ಚಿದ ಮರಿಯನೊಂದು
ಇರುಳೊಳೊಯ್ದನು ಕಳ್ಳನದನು
ಮನೆಯ ಮಕ್ಕಳ ಮುದ್ದನು.

ಎದ್ದು ಹುಡುಗರು ನಾಯ ಕಾಣದೆ
ಬಿದ್ದು ಬೀಳುತಲೋಡಿಬಂದು
‘ಕದ್ದರೇನೋ? ಮರಿಯ ಕಾಣೆವು’
ಎಂದು ಕಂಬನಿಗರೆದರು.

ಕೇರಿ ಕೇರಿಗೆ ಜನರನಟ್ಟಿದೆ
ಊರ ಊರನು ತಿರುಗಿ ಕೇಳಿದೆ
ಆರ ಕಂಡರು ‘ಮರಿಯ ಕಾಣಿರ’
ಎಂದು ಹುಚ್ಚನ ತೆರದೊಳು.

ಮೂರುದಿನಗಳು ಹುಡುಕಿ ಕೊನೆಗೆ
ಊರ ಮುಂದಿನ ಮನೆಯ ಹೊರಗೆ
ಏರುಬಿಸಿಲೊಳು ಕುರುಬನೆಡೆಯೊಳು
ಕಂಡೆ ಮಲಗಿದ ಕುನ್ನಿಯ.

ಹರುಷ ಮೀರಿತು ಬಾಲವಾಡಿಸಿ
ಗುರುತ ಹಿಡಿಯುತ ನೆಗೆಯೆ ನಾಯಿ
ಕುರುಬಗೌಡನ ಗದರಿ ಕೇಳಿದೆ
‘ಕದ್ದೆ ಯೇತಕೊ ಮರಿಯನು?’

ನಡುಗಿ ಕೈಗಳ ಮುಗಿದು ನಿಂತು
ನುಡಿದನೀ ಪರಿ ಕುರುಬಗೌಡನು
‘ಒಡೆಯ, ಮರಿಯನು ಕದಿಯಲಿಲ್ಲವು
ಹಿಂದೆ ಬಂದಿತು ಕರೆಯದೆ.

‘ಅಂದು ಊರೊಳಗಿರುಳು ತಂಗಿ
ಮುಂದೆ ಪಯಣವ ಬೆಳೆಸಲೆಂದು
ಮಂದಿ ಮಲಗಿದ ಹೊತ್ತಿನಲ್ಲಿ
ನಿಮ್ಮ ಜಗಲಿಗೆ ಬಂದೆನು.

‘ಮರಿಯು ಬಗುಳುತ ಅಡ್ಡಗಟ್ಟಲು
ತೆರೆದು ಬುತ್ತಿಯ ರೊಟ್ಟಿಯಿಟ್ಟೆನು
ಹರುಷದಿಂದಲಿ ತಲೆಯ ತಟ್ಟಿ
ಮೈಯ ತಡಹಿದೆ ನಾಯಿಯ.

‘ಚಳಿಗೆ ನಡುಗಲು ಮರುಕದಿಂದ
ಕೆಳಗೆ ಕಂಬಳಿಹಾಸಿ ಜೊತೆಯೊಳು
ಚೆಲುವು ಮರಿಗೂ ತಾಣವಿತ್ತೆನು
ಒಲುಮೆ ಬೆಸೆಯಿತು ಇಬ್ಬರ.

‘ಮೂಡ ಬೆಳಗಲು ಹೊರಟೆನಂದು
ಓಡಿ ಹಿಂದೆಯೆ ಬರಲು ಮರಿಯು
ಕೂಡಲಪ್ಪುತ ಮುತ್ತನಿಟ್ಟು
ಕರೆದು ತಂದೆನು ಊರಿಗೆ.

‘ಬಂಧುಬಳಗಗಳಿಲ್ಲವೆನಗೆ
ಕಂದನೀ ಮರಿ-ಕಳೆಯಲಾರೆ’
ಎಂದ. ಗೌಡನ ಕಣ್ಣು ಹನಿತುದು
ಮರಿಯ ಹಗ್ಗವ ಹಿಡಿಯಲು.

ಹಗ್ಗವೆಳೆದೆನು; ಕುನ್ನಿ ಬಾರದು
ಸಗ್ಗದೆನ್ನಯ ಸವಿಯ ನುಡಿಗೆ.
ಹಗ್ಗ ಸಡಿಲಿಸಿ ಬಿಟ್ಟೆನದನು
ಕುರುಬ ತಬ್ಬಿದ ಸೊಣಗನ!

ವರುಷ ನೂರರ ಕರುಣೆ ಬಿಗಿವುದೆ
ಕುರುಬನಿರುಳೊಳು ಬಿಗಿದ ಕಟ್ಟ!
ಮರಿಯ ನಡತೆಗೆ ಕೋಪಗೊಳ್ವುದೆ?
ಕರುಣೆ ಒಲುಮೆಗೆ ಸಾಟಿಯೆ?

ಒಲಿದರಿರವಿನ ಬಗೆಗಳೆರಡೆ?
ಒಲುಮೆಗಡ್ಡಲೆ ಕುಲದ ಹೆಮ್ಮೆ?
ಒಲುಮೆಬೆಸುಗೆಯ ಸುಖದ ಸವಿಯನು
ತಿಳಿಯದೇ ಬಡಜಂತುವು!

ಕಣ್ಣ ನೀರೊಳು ತೊಳೆದೆನಂದು
ಜನ್ಮ ದುನ್ನತಿ ಹೆಮ್ಮೆ ಕೊಳೆಯ-
ನನ್ನ ಒಲುಮೆಗೆ ಅಡ್ಡ ಬಂದ
ಕರುಣೆ ಹಾಯದ ಬಿಂಕವ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...