Home / ಕವನ / ಕವಿತೆ / ನನ್ನ ನಾಯಿ

ನನ್ನ ನಾಯಿ

ಹೆರರ ನೋವಿಗೆ ಅಯ್ಯೊ ಎಂದು
ಮರುಗಿ ಸುಯ್ಯಲನಿಡಲು ಒಲವೆ?
ಹಿರಿಯ ಸುಖದಿರವೆನ್ನ ದೆನ್ನುವ
ಅರಿವು ಒಲಿದವಗಿರುವುದೆ?

ಜನುಮದೊಂದಿಗೆ ಜೊತೆಯ ಕೂಡಿ
ಕೊನೆಯವರೆಗೂ ಬೆನ್ನ ಬಿಡದ
ಜನುಮದುನ್ನತಿ ಕುಲದ ಹೆಮ್ಮೆಯ.
ಕಟ್ಟ ಕಳೆವುದೆ ಕರುಣೆಯು?

ಕೊಳದ ಕರೆ ಬಳಿ ಅಂದು ಮರುಗಿದೆ
ಸುಳಿದ ನೋವಿನ ಅಳುವ ಕೇಳಿ,
ಬೆಳೆದ ಇರುಳೊಳು ದನಿಯನರಸಿ
ಮನದೊಳಳುಕುತ ನಡೆದೆನು.

ಮುಗಿಲ ಬೆಳ್ಳಿಯ ಪೊರೆಯ ಹೊದೆದು
ಸೊಗಸುಕನಸನು ಕಾಣುವಂದದಿ
ನಗುವ ಚಂದ್ರನ ಬೆಳಕಿನೊಳಗೆ
ಕಂಡೆ ತಬ್ಬಲಿ ಮರಿಯನು.

ತಾಯಿ ಸತ್ತರು ಮೊಲೆಯ ಬಿಡದಾ
ನಾಯ ಮರಿಯ ಗೋಳ ಕಂಡೂ
ಮೈಯ ಮುಟ್ಟಲು ತಡೆದುದಂದು
ಜಾತಿ ಹೆಚ್ಚಿನ ಹೆಮ್ಮೆಯು.

ಕೊರೆವ ಚಳಿಯೊಳು ದಿಕ್ಕುಗಾಣದ
ಮರಿಯ ತೊರೆಯಲು ಮನವು ಬಹುದೇ?
ಕೊರಲೊಳಿಟ್ಟೆನು ಬಳ್ಳಿಕುಣಿಕೆಯ
ಮನೆಗೆ ನಡೆಸಿದೆ ಮೆಲ್ಲನೆ.

ಅಂದು ಮಕ್ಕಳ ಹರುಷ ಮೀರಿತು
ಮುಂದೆ ಕುಣಿದರು ಕೈಯ ತಟ್ಟಿ
ಕಂದನಂದದಿ ಅಂದು ಮೊದಲು
ಮರಿಯ ಸಾಕಿದೆವೆಲ್ಲರು.

ಹಾಲು ಅನ್ನವನುಣಿಸಿ ನಲಿದೆವು
ಮೇಲುತಿಂಡಿಗಳೆಲ್ಲವಿತ್ತೆವು
ಮೈಲಿಗೆಯ ಭಯದಿಂದ ಮೈಯನು
ಮುಟ್ಟಗೊಡಿಸೆವು ಆದರೂ.

ಮರಿಯು ನಮ್ಮ ಬಿಂಕವರಿತು
ಹೊರಗೆ ನಿಲುವುದು ಹೊಸಿಲ ದಾಟದು!
ಹಿರಿಯತನದ ಹೆಮ್ಮೆಗಡಲು
ಹರಿಯತೆಮ್ಮಯ ಮಧ್ಯದಿ.

ಆರು ತಿಂಗಳ ಕಳೆದೆವಿಂತು,
ಊರೆ ಮೆಚ್ಚಿದ ಮರಿಯನೊಂದು
ಇರುಳೊಳೊಯ್ದನು ಕಳ್ಳನದನು
ಮನೆಯ ಮಕ್ಕಳ ಮುದ್ದನು.

ಎದ್ದು ಹುಡುಗರು ನಾಯ ಕಾಣದೆ
ಬಿದ್ದು ಬೀಳುತಲೋಡಿಬಂದು
‘ಕದ್ದರೇನೋ? ಮರಿಯ ಕಾಣೆವು’
ಎಂದು ಕಂಬನಿಗರೆದರು.

ಕೇರಿ ಕೇರಿಗೆ ಜನರನಟ್ಟಿದೆ
ಊರ ಊರನು ತಿರುಗಿ ಕೇಳಿದೆ
ಆರ ಕಂಡರು ‘ಮರಿಯ ಕಾಣಿರ’
ಎಂದು ಹುಚ್ಚನ ತೆರದೊಳು.

ಮೂರುದಿನಗಳು ಹುಡುಕಿ ಕೊನೆಗೆ
ಊರ ಮುಂದಿನ ಮನೆಯ ಹೊರಗೆ
ಏರುಬಿಸಿಲೊಳು ಕುರುಬನೆಡೆಯೊಳು
ಕಂಡೆ ಮಲಗಿದ ಕುನ್ನಿಯ.

ಹರುಷ ಮೀರಿತು ಬಾಲವಾಡಿಸಿ
ಗುರುತ ಹಿಡಿಯುತ ನೆಗೆಯೆ ನಾಯಿ
ಕುರುಬಗೌಡನ ಗದರಿ ಕೇಳಿದೆ
‘ಕದ್ದೆ ಯೇತಕೊ ಮರಿಯನು?’

ನಡುಗಿ ಕೈಗಳ ಮುಗಿದು ನಿಂತು
ನುಡಿದನೀ ಪರಿ ಕುರುಬಗೌಡನು
‘ಒಡೆಯ, ಮರಿಯನು ಕದಿಯಲಿಲ್ಲವು
ಹಿಂದೆ ಬಂದಿತು ಕರೆಯದೆ.

‘ಅಂದು ಊರೊಳಗಿರುಳು ತಂಗಿ
ಮುಂದೆ ಪಯಣವ ಬೆಳೆಸಲೆಂದು
ಮಂದಿ ಮಲಗಿದ ಹೊತ್ತಿನಲ್ಲಿ
ನಿಮ್ಮ ಜಗಲಿಗೆ ಬಂದೆನು.

‘ಮರಿಯು ಬಗುಳುತ ಅಡ್ಡಗಟ್ಟಲು
ತೆರೆದು ಬುತ್ತಿಯ ರೊಟ್ಟಿಯಿಟ್ಟೆನು
ಹರುಷದಿಂದಲಿ ತಲೆಯ ತಟ್ಟಿ
ಮೈಯ ತಡಹಿದೆ ನಾಯಿಯ.

‘ಚಳಿಗೆ ನಡುಗಲು ಮರುಕದಿಂದ
ಕೆಳಗೆ ಕಂಬಳಿಹಾಸಿ ಜೊತೆಯೊಳು
ಚೆಲುವು ಮರಿಗೂ ತಾಣವಿತ್ತೆನು
ಒಲುಮೆ ಬೆಸೆಯಿತು ಇಬ್ಬರ.

‘ಮೂಡ ಬೆಳಗಲು ಹೊರಟೆನಂದು
ಓಡಿ ಹಿಂದೆಯೆ ಬರಲು ಮರಿಯು
ಕೂಡಲಪ್ಪುತ ಮುತ್ತನಿಟ್ಟು
ಕರೆದು ತಂದೆನು ಊರಿಗೆ.

‘ಬಂಧುಬಳಗಗಳಿಲ್ಲವೆನಗೆ
ಕಂದನೀ ಮರಿ-ಕಳೆಯಲಾರೆ’
ಎಂದ. ಗೌಡನ ಕಣ್ಣು ಹನಿತುದು
ಮರಿಯ ಹಗ್ಗವ ಹಿಡಿಯಲು.

ಹಗ್ಗವೆಳೆದೆನು; ಕುನ್ನಿ ಬಾರದು
ಸಗ್ಗದೆನ್ನಯ ಸವಿಯ ನುಡಿಗೆ.
ಹಗ್ಗ ಸಡಿಲಿಸಿ ಬಿಟ್ಟೆನದನು
ಕುರುಬ ತಬ್ಬಿದ ಸೊಣಗನ!

ವರುಷ ನೂರರ ಕರುಣೆ ಬಿಗಿವುದೆ
ಕುರುಬನಿರುಳೊಳು ಬಿಗಿದ ಕಟ್ಟ!
ಮರಿಯ ನಡತೆಗೆ ಕೋಪಗೊಳ್ವುದೆ?
ಕರುಣೆ ಒಲುಮೆಗೆ ಸಾಟಿಯೆ?

ಒಲಿದರಿರವಿನ ಬಗೆಗಳೆರಡೆ?
ಒಲುಮೆಗಡ್ಡಲೆ ಕುಲದ ಹೆಮ್ಮೆ?
ಒಲುಮೆಬೆಸುಗೆಯ ಸುಖದ ಸವಿಯನು
ತಿಳಿಯದೇ ಬಡಜಂತುವು!

ಕಣ್ಣ ನೀರೊಳು ತೊಳೆದೆನಂದು
ಜನ್ಮ ದುನ್ನತಿ ಹೆಮ್ಮೆ ಕೊಳೆಯ-
ನನ್ನ ಒಲುಮೆಗೆ ಅಡ್ಡ ಬಂದ
ಕರುಣೆ ಹಾಯದ ಬಿಂಕವ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...