
ಬೇಲೂರ ಗುಡಿಯಲ್ಲಿ ಕಲೆಯಾದ ಶಿಲೆಯಲ್ಲಿ
ದೀನ ದುರ್ಬಲರೊಡಲ ಬಿಸಿಯುಸಿರಿದೆ
ಆ ಬಿಸಿಯು ಮೈ ಸೋಕಿ ತೆರೆದ ಈ ಕಣ್ಮುಂದೆ
ಕಪ್ಪು-ಇತಿಹಾಸ ಸಂಪುಟ ತೆರೆದಿದೆ
ಭವ್ಯತೆಯ ಹಂಪೆಯಲಿ ಬೆವರು-ಕಂಬನಿ-ರಕ್ತ
ಹೊಳೆ ತುಂಬೆ ಭದ್ರೆಯಾಗಿ ಹರಿದಾಡಿದೆ
ಇದರಲ್ಲಿ ಮಿಂದೆದ್ದ ಪ್ರಜ್ಞಾಂತರಂಗದಲಿ
ಜಿಗಣೆಗಳ ನೂರು ನಿಜ ಕಥೆ ಜರುಗಿದೆ
ಜಂಬೂ ಸವಾರಿಯಲ್ಲಿ ಮೈಸೂರ ಬೀದಿಗಳಲಿ
ಹೊಟ್ಟೆ-ಬಟ್ಟೆ ಕಟ್ಟಿದ ಹಣ ಚೆಲ್ಲಿದೆ
ಬಡತನ-ಬಿಸಿಗಾಳಿಯಲು ಆನೆ-ಅಂಬಾರಿಗಳು
ಜೀವಂತ ಶವಗಳ ಜೊತೆ ಸಾಗಿದೆ
ಸುವರ್ಣಾಕ್ಷರದಲಿ ಮೂಡಿದ ಕರ್ಣಾಟ ಕತೆ
ಕತ್ತಲಲಿ ಕರಗಿದವರ ಮರೆಮಾಡಿದೆ
ಇದನರಿತು ತೆರೆದ ಒಳ-ಕಂಗಳಿಗೆ ನಿಜವುಣಿಸೆ
ಕಪ್ಪು-ಇತಿಹಾಸ ಸಂಪುಟ ತೆರೆದಿದೆ
*****


















