ಕನ್ನಡಿಗರ ತಾಯಿ

ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ!
ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ!
ನಮ್ಮ ತಪ್ಪನೆನಿತೊ ತಾಳ್ವೆ,
ಅಕ್ಕರೆಯಿಂದೆಮ್ಮನಾಳ್ವೆ;
ನೀನೆ ಕಣಾ ನಮ್ಮ ಬಾಳ್ವೆ,
ನಿನ್ನ ಮರೆಯಲನೆಮ್ಮೆವು-
ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್ಮವು. ೭

ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೊ,
ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೊ,
ತೆನೆಯ ಕೆನೆಯ ಗಾಳಿಯೊ,
ಖಗಮೃಗೋರಗಾಳಿಯೊ,
ನದಿನಗರನಗಾಳಿಯೊ!
ಇಲ್ಲಿಲ್ಲದುದುಳಿದುದೆ?
ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ? ೧೪

ಬುಗರಿಯೀಯೆ ಶಬರಿ ಕಾಯೆ ರಾಮನಿಲ್ಲಿ ಬಂದನೆ?
ಕನ್ನಡ ದಳ ಕೂಡಿಸಿ ಖಳ ದಶಾಸ್ಯನಂ ಕೊಂದನೆ?
೧ಪಾಂಡವರಜ್ಞಾತಮಿದ್ದ,
ವಲಲಂ ಕೀಚಕನ ಗೆದ್ದ,
೨ಕುರುಕುಲ ಮುಂಗದನಮೆದ್ದ
ನಾಡು ನೋಡಿದಲ್ಲವೇ?
ನಂದನಂದನನಿಲ್ಲಿಂದ ಸಂದಿಗಯ್ದನಲ್ಲವೇ? ೨೧

ಶಕವಿಜೇತನಮರ ೩ಶಾತವಾಹನಾಖ್ಯನೀ ಶಕಂ
ನಿನ್ನೊಳಂದು ತೊಡಗಿ ಸಂದುದರ್ಧ ಭರತದೇಶಕಂ!
ಚಳುಕ್ಯ ರಾಷ್ಟ್ರಕೂಟರೆಲ್ಲಿ,
ಗಂಗರಾ ಕದಂಬರೆಲ್ಲಿ,
ಹೊಯ್ಸಳ ಕಳಚುರ್ಯರೆಲ್ಲಿ,
ವಿಜಯನಗರ ಭೂಪರು
ಆಳ್ದರಿಲ್ಲಿಯಲ್ಲದೆಲ್ಲಿ ತಾಯೆ ಮೇಣಲೂಪರು? ೨೮

ಜೈನರಾದ ಪೂಜ್ಯಪಾದ ಹೊಂಡಕುಂದ ವರ್ಯರ,
ಮದ್ವಯತಿಯೆ ಬಸವಪತಿಯೆ ಮುಖ್ಯ ಮತಾಚಾರ್ಯರ,
೪ಶರ್ವ ಪಂಪ ರನ್ನರ,
ಲಕ್ಷ್ಮೀಪತಿ ಜನ್ನರ,
ಷಡಕರಿ ಮುದಣ್ಣರ,
ಪುರಂದರ ವರೇಣ್ಯರ,
ತಾಯೆ, ನಿನ್ನ ಬಸಿರೆ ಹೊನ್ನ ಗನಿ ವಿದ್ಯಾರಣ್ಯರ! ೩೫

ಹಳೆಯ ಬೀಡ ೫ಬೇಲನಾಡ ಮಾಡಮೆನಿತೊ ಸುಂದರಂ!
೬ಬಿಳಿಯ ಕೊಳದ ಕಾರಕಳದ ೭ನಿಡುಕರೆನಿತೊ ಬಂಧುರಂ!
ಇಲ್ಲಿಲ್ಲದ ಶಿಲ್ಪಮಿಲ್ಲ;
ನಿನ್ನ ಕಲ್ಲೆ ನುಡಿವುದಲ್ಲ!
ಹಿಂಗತೆಯಿನಿವಾಲ ಸೊಲ್ಲ
ನೆಮ್ಮ ತೃಷೆಗೆ ದಕ್ಕಿಸು-
ಹೊಸತು ಕಿನ್ನರಿಯಲಿ ನಿನ್ನ ಹಳೆಯ ಹಾಡನುಕ್ಕಿಸು! ೪೨

ಆರ್ಯರಿಲ್ಲಿ ಬಾರದಲ್ಲಿ ಬಾಸೆ ಎಲ್ಲಿ ಸಕ್ಕದಂ?
ನಿನ್ನ ನುಡಿಯಿನಚ್ಚುಪಡಿಯನಾಂತರೆನಿತೊ ತಕ್ಕುದಂ!
ಎನಿತೊ ಹಳೆಯ ಕಾಲದಿಂದ
ಬರ್ದಿಲಮೀ ಬಾಸೆಯಿಂದ
ಕಾಲನ ಮೂದಲಿಸಿ ನಿಂದ
ನಿನಗೆ ಮರವೆ ಹೊದೆವುದೆ?
ನಿನ್ನ ನುಡಿಗೆ ನಿನ್ನ ನಡೆಗೆ ಮುದುಪುಮೆಂದುಮೊದವುದೆ? ೪೯

ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ!
ಕನ್ನಡ ಕಸ್ತೂರಿಯನ್ನ
ಹೊಸತುಸಿರಿಂ ತೀಡದನ್ನ
ಸುರಭಿ ಎಲ್ಲಿ? ನೀನದನ್ನ
ನವಶಕ್ತಿಯಿನೆಬ್ಬಿಸು-
ಹೊಸ ಸುಗಂದದೊಸಗೆಯಿಂದ ಜಗದಿ ಹೆಸರ ಹಬ್ಬಿಸು! ೫೬

ನಿನ್ನ ಪಡೆಯ ಕತೆಯ ಕಡೆಯ ನುಡಿಯೆ ತಾಳಿಕೋಟೆಯು?
ಕಡಲಿನೊರತೆಗೊಳವೆ ಕೊರತೆ? ಬತ್ತದು ನಿನ್ನೂಟೆಯು!
ಸೋಲ ಗೆಲ್ಲವಾರಿಗಿಲ್ಲ?
ಸೋತು ನೀನೆ ಗೆದ್ದೆಯಲ್ಲ?
ನಿನ್ನನಳಿವು ತಟ್ಟಲೊಲ್ಲ!-
ತಾಳಿಕೋಟೆ ಸಾಸಿರಂ
ಬಾಹುಬಲದಿ ಮುನೋಬಲದಿ ತಾಯೆ ಗೆಲುನೆ ಭಾಸುರಂ! ೬೩

ಕುಗ್ಗದಂತೆ ಹಿಗ್ಗಿಪಂತೆ ನಿನ್ನ ಹೆಸರ ಟೆಕ್ಕೆಯಂ,
ನೀಗದಂತೆ ಸಾಗಿಪಂತೆ ನಿನ್ನ ನುಡಿಯ ಢಕ್ಕೆಯಂ,
ನಮ್ಮೆದೆಯಂ ತಾಯೆ ಬಲಿಸು,
ಎಲ್ಲರ ಬಾಯಲ್ಲಿ ನೆಲಸು,
ನಮ್ಮ ಮನಮನೊಂದೆ ಕಲಸು!
ಇದನೊಂದನೆ ಕೋರುವೆ-
ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ? ೭೦
*****
೧ ಧಾರವಾಡ ಜಿಲ್ಲೆಯ ‘ಹಾನಗಲ್ಲು’ ವಿರಾಟನ ರಾಜಧಾನಿ ಎಂದು ಪ್ರಖ್ಯಾತವಿದೆ.
೨ ಗೋಗ್ರಹಣದ ಯುದ್ಧ
೩ ಶಾಲಿವಾಹನ
೪ ಶರ್ವನೆಂದು ನೃಪತುಂಗನ ಹೆಸರು.
೫ ಬೇಲೂರು
೬ ಶ್ರವಣಬೆಳ್ಗೊಳ
೭ ನಿಡುನಿಂದಿರುವ ಗೊಮ್ಮಟ ಮೂರ್ತಿಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಪ್ಪು-ಇತಿಹಾಸ
Next post ಹೊಟ್ಟೆಯೊಳಗೆ ಹರಿದಾಡಿ ರೋಗ ಪತ್ತೆಹಚ್ಚುವ ಯಂತ್ರ ಹುಳು

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

cheap jordans|wholesale air max|wholesale jordans|wholesale jewelry|wholesale jerseys