Home / ಕವನ / ಕವಿತೆ / ರಾಷ್ಟ್ರೀಯ ಶಿಕ್ಷಣದ ಸಪ್ತಾಹದ ಕರೆ

ರಾಷ್ಟ್ರೀಯ ಶಿಕ್ಷಣದ ಸಪ್ತಾಹದ ಕರೆ

ದಾಯಿ ಹಾಲನೆ ನಂಬಿ ಬಾಯಾರಿ ಬಸವಳಿದು
ತಾಯೆ ಎಂದರಚಲುಂ ಮಿಸುಕದಿರೆ ರಸನೆ,
ನೀನೆಮ್ಮನರಸುತಯ್ತಂದು ತೊಡೆಯಲಿ ತಳೆದು
ಮೊಲೆಯಿನಿಂತೆಮ್ಮ ಬಾಯ್ದುಂಬಿಸಲು ಸಸಿನೆ, ೪

ಧನ್ಯರಾವೆಮ! ದಾಯಿಯೂಡಿಸಿದ ಮಗು ಮುಂದು
ತನ್ನ ತಾನರಿತೆದ್ದು ನಿಡುನಿಲ್ಲಲಹುದೇ?
ರವಿ ಚಿತ್ರಿಪಂತೆ ಚಿತ್ರಿಪನೆ ಪುಷ್ಪಮನಿಂದು?
ನೀನೀನ ಜೀವ ದಾಯಿಯಿನೆಮಗೆ ಬಹುದೇ? ೮

ತಾಯೆ ನಿನ್ನಯ ಪುಣ್ಯಪೀಯೂಷಸ್ತನ್ಯಂ
ಸೂಸುತಿದೆ, ರಾಷ್ಟ್ರೀಯ ಶಿಕ್ಷಣಮನನ್ಯಂ ?
ನವಜೀವನದ ಬುಗ್ಗೆಯಿದನೊಂದನೆಮ್ಮ
ಹೃದಯದ ನಿದಾಘದಿಂ ಬತ್ತಿಸದಿರಮ್ಮ! ೧೨

ಕತ್ತಲೆ ಕವಿದ ನಮ್ಮ ಕಂಗಳಿಗೆ ಪರೆ ನೆರೆಯೆ,
ನಮ್ಮ ನಾವ್ಮರೆತು ನಮ್ಮವರ ಮರೆವನ್ನಂ,
ಚೆದರಿ ನಮ್ಮೊಳಗೆ ಜಗಳಾಡಲೇನಚ್ಚರಿಯೆ?
ಸಾಕಿನಿತು! ರಾಷ್ಟ್ರೀಯ ಶಿಕ್ಷಣಮೆ ನಿನ್ನ ೧೬

ದೀಧಿತಿಯಿನೆಮ್ಮಯ ಮನೋನಯನಮಂ ತೆರೆದು,
ಭೇದಗಳ ಬಿರುವರೆಯ ಹೆರೆಯಿಸುವುದಲ್ಲಿ!
ನಾನೆ ನಾ ನೀನೆ ನೀನಿದನೆಮ್ಮೆದೆಯಿನರೆದು
ನಾವು ನಾವೆಂಬ ಭಾಷೆಯ ಕೆತ್ತಿಸಲ್ಲಿ! ೨೦

ಕ್ರೈಸ್ತ ಪಾರಸಿ ಜೈನ ಮುಸಲಮಾನ್‌ ಹಿಂದು
ವೆಮಗೆಲ್ಲರಿಗೆ ನಮ್ಮ ಭಾರತಮಿದೊಂದು
ತವರು ಗಡ! ರಾಷ್ಟ್ರೀಯ ಶಿಕ್ಷಣಮೆ ಬಂದು
ಒಟ್ಟಿನ ತವರ್‍ತನವನೆಸಗಿನ್ನು ಮುಂದು! ೨೪

ಎದ್ದೇಳಿರೈ ಬಂಧುಗಳಿರ! ಕೆಲವರಿಯುತಿದೆ
ರಾಷ್ಟ್ರೀಯ ಶಿಕ್ಷಣದ ಸಪ್ತಾಹಮಿಂದು!
ತಂತನೂಳಿಗವ ಗೆಯ್ಯಿರಿಮೆಂದು ಕರೆಯುತಿದೆ,
ಬಂಗಾರಮಪ್ಪುದು ಭವಿಷ್ಯ ವಲಮೆಂದು! ೨೮

ತನ್ನ ತಾಯ್ನುಡಿಯಿಂದ ದುಡಿದ ಬಿಜ್ಜೆಯೆ ಬಿಜ್ಜೆ!
ಹೆರರ ನಾಲಗೆಯೆಂಜಲೆನ್ನೆಗಂ ಸವಿಯೊ?
ತನ್ನ ಮುಂಗತಿ ತೋರೆ ತನ್ನ ಹಿರಿಯರ ಹೆಜ್ಜೆ!
ಹೆರರ ಬೆಳಕೊಳೆ ಕಾಂಬ ತನ್ನವರ ೧ ಕವಿಯೊ? ೩೨

ಅವರವರ ನುಡಿಗಳಿಂದವರವರ ಜಾಣಿ
ಕೆಯನೆಚ್ಚರಿಸುವ ನುಡಿಗಳ ತಾಯೆ ವಾಣಿ!
ನಿರವಶೇಷ ಜ್ಞಾನದರ್‍ಜನವನೆಮ್ಮ
ನುಡಿಯಿನೆಮಗಿತ್ತು ಭಾರತವ ಸಲಹಮ್ಮ! ೩೬
*****
ದ್ರುಷ್ಟಾರ (seer)

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...