Home / ಕವನ / ಕವಿತೆ / ನಿರಂತರ

ನಿರಂತರ

ಶತಶತಮಾನಗಳಿಂದ
ಧಗಧಗನೆ ಹೊತ್ತಿ
ಉರಿಯುತ್ತಲೇ ಇದೆ
ಈ ಅಗ್ನಿಕುಂಡ.

ಬೇಯುತ್ತಲೇ ಇದೆ
ತಪ್ಪಲೆಯೊಳಗೆ
ಅನ್ನವಾಗದ ಅಕ್ಕಿ!
ಮತ್ತೆ ಮತ್ತೆ
ಸೌದೆಯೊಟ್ಟಿ
ಉರಿ ಹೆಚ್ಚಿಸುವ ಕಾಯಕ.

ತಪ್ಪಲೆಗೆ ನೀರು ಸುರಿದು
ತಳ ಸೀಯದಂತೆ
ಕಾಯುವ ಕರ್ಮ
ನಡೆದೇ ಇದೆ ನಿರಂತರ.

ಆದರೂ
ಅಕ್ಕಿ ಬೇಯುವುದಿಲ್ಲ
ಅನ್ನವಾಗುವುದಿಲ್ಲ.
ಎದುರಿಗೆ ಕುಳಿತ
ಮಂದಿಗೆ
ಬ್ರಹ್ಮಾಂಡ ಹಸಿವು

ಒಳ – ಹೊರಗೆಲ್ಲಾ
ಚುರುಗುಡುವ ಕಾವು ಅನ್ನವಾಗದ
ಅಕ್ಕಿಯನ್ನೇ ಮುಕ್ಕಿಬಿಡುವ
ಉಮೇದು!

ಅನ್ನವಾಗುವವರೆಗೂ
ತಪ್ಪಲೆ ಮುಟ್ಟಲಾಗದ
ಶಾಪ ಇವರಿಗೆ
ಕಾಯಲಾರೆವೆಂದರೆ ಹೇಗೆ?

ತಪ್ಪಲೆಯ ನೀರು
ಕೊತಕೊತನೆ ಕುದಿವ ರಭಸಕ್ಕೆ
ಹೊರ ಹಾರಿದ
ಒಂದೋ ಎರಡೋ
ಅಕ್ಕಿ ಕಾಳಿಗೇ ಇಲ್ಲಿ

ಹೊಡೆದಾಟ ಬಡಿದಾಟ
ಮೈಕೈ ಮುರಿದಾಟ
ಅಕ್ಕಿಕಾಳು
ಸಿಕ್ಕಿದವರು
ಪಚನವಾಗದಿದ್ದರೂ ಜಗಿದ
ರುಚಿಯ ಕುರಿತು
ದಕ್ಕಿದಂತೆ
ತರ್ಕ – ವಿತರ್ಕ
ವರ್ಣನೆ – ಆರೋಪ

ತಪ್ಪಲೆಯ ಅಕ್ಕಿಯಿಡೀ
ಅನ್ನವಾಗಿಬಿಟ್ಟರೇ?
ಗತಿಯೇನು?

ಅದಕ್ಕೇ
ಅತ್ತ ಅಕ್ಕಿ ಬೇಯುವುದಿಲ್ಲ
ಅನ್ನವಾಗುವುದಿಲ್ಲ
ಇತ್ತ ಹಸಿವೂ ಹಿಂಗುವುದಿಲ್ಲ
ಕುತೂಹಲವೂ ತಣಿಯುವುದಿಲ್ಲ
ಕಾಯುವುದೂ ತೀರುವುದಿಲ್ಲ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...