ಶಾಲೆಗಿಂದು ರಜೆಯೋ ಏನೋ
ಎಳೆಯರೆದೆಯ ಹರುಷವೇನು
ಹನುಮನಂತೆ ಹಾರುವನೊಬ್ಬ
ಹುಟ್ಟುಡುಗೆಯ ಬಾಲನೊಬ್ಬ

ಬಾಲ್ಯದಲ್ಲಿ ಇಲ್ಲ ಭಯ ಎಲ್ಲ ಜಯ
ಅವನು ಇವನು ಎಲ್ಲ ಸೇರಿ
ಒಂದೆ ಜಲ, ಒಂದೆ ಗಾಳಿ
ಒಂದೇ ನೆಲದ ಅಂಗಳದಿ ಆಡಿ

ತಿಳಿನೀರಲಿ ಹಾರಿ ಜಿಗಿದು
ಕಣ್ಣ ಕೆಂಪಗಾಗಿಸಿ, ಮುಳುಗಿ ಈಜಿ
ಮತ್ಸ್ಯನಾ ಮನೆಯಲ್ಲಿ
ಒಂದು ಗಳಿಗೆ ಕಳೆಯೆ ಅಲ್ಲಿ

ಉತ್ಸಾಹದ ಉತ್ತೇಜನ
ಪಡೆವರೆಲ್ಲ ಮಕ್ಕಳು
ಚೈತನ್ಯದ ಕುಡಿಗಳು
ಅರಳುತಿರುವ ಹೂಗಳು

ಮೈಯ ಕೊಳೆಯ ತೊಳೆದ ಜಲವು
ಮನದ ಕೊಳೆಯ ತೊಳೆಯದಿರದು
ಉಕ್ಕಿ ಉಕ್ಕಿ ಹರಿವ ಜಲದಿ
ಉತ್ಸಾಹವ ಹೆಕ್ಕಿ ತೆಗೆವ ಬುಗ್ಗೆಗಳು

ಮುಂದೆ ಎಂದಾದರೂ ಇವೇ
ಈಜು ಮರಿಗಳು
ಚಿನ್ನವನ್ನೇ ಗೆಲ್ಲುವರು
ದೇಶಕೆ ಕೀರ್ತಿ ತರುವರು.
*****