Home / ಕವನ / ಕವಿತೆ / ತುರ್‍ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ

ತುರ್‍ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ

ಭೂಪಾಳಿ-ಝಂಪೆ

ನೋಡು ನೋಡೆಲೊ ದೇವ!
ಗತಿವಿಹೀನರ ಕಾವ,
ನೋಡು ನಿನ್ನಯ ರಾಜ್ಯದೊಳರಾಜಕತೆಯ!
ನೋಡು ಪಡುವಣ ದಿಕ್ಕ,
ನೋಡು ಇತಲಿಯ ಸೊಕ್ಕ,
ನೋಡು ದೀನ ತುರುಷ್ಕ ತ್ರಿಪಲಿಯರ ಕತೆಯ! ||೧||

ಬಡ ತ್ರಿಪಲಿಯನ್ನಿತಲಿ
ಪಿಡಿದಿರುವುದೆನ್ನುತಲಿ
ಮೊರೆಯಿಡುವ ಕ್ರಂದನಕೆ ಕಿವಿಯ ಮುಚ್ಚಿಹೆಯಾ?
ತೋಳಿನಬ್ಬರವನ್ನು
ಜಗಕೆ ತೋರುವೆನೆನ್ನು
ತಿತಲಿ ಬೊಬ್ಬಿರಿವುದನು ತಾತ ಮೆಚ್ಚುವೆಯಾ? || ೨ ||

ನೆಲವ ನುಂಗುವ ಹಸಿವೆ
ತಡೆಯದರಚುತ ಕಸಿವೆ
ನೆನುತಿತಲಿ ತುಡುಕಿಹುದು ತ್ರಿಪಲಿಯನು ದೊರೆಯೆ!
ಹೆಬ್ಬುಲಿಯ ಕಂಗೆದುರು
ಸಿಕ್ಕಿದೆಳೆವುಲ್ಲೆಗರು
ವಂದದಿಂ ತಲ್ಲಣಿಪ ತ್ರಿಪಲಿಯನು ಪೊರೆಯೈ! || ೩ ||

ಮೊನ್ನೆವರಮೀ ಇತಲಿ
ಪರವಶತೆಯಿಂದಲಿಲಿ
ಯಂತೆ ಕಂಬನಿಯಗುಳ ನೆಕ್ಕಿದುದ ಮರೆಯೆ,
ಇಂದು ಗರ್‍ಜಿಸುತಿಹುದೆ?
ಕಷ್ಟವಿನ್ನೊಂದಿಹುದೆ?
ಮಾನವರೊ? ದಾನವರೊ? ನಾನವರನರಿಯೆ! || ೪ ||

ಯಾವ ಇತಲಿಯ ವೀರ
ಮಾಝೀನಿ (Mazzini) ರಣಧೀರ
ಪರತಂತ್ರದಿಂದಲುದ್ಧರಿಸಿದನಿತಲಿಯಂ,
ಸಕಲರಿಗೆ ಸ್ವಾತಂತ್ರ್ಯ
ವೆಂದವನ ಗುರುಮಂತ್ರ
ವಿದನಿತಲಿ ಮರೆತಿಹುದೆ ಸೊಕ್ಕಡಂ ತಲೆಯಂ! || ೫ ||

ಪೂರ್‍ವದಿ ವಿಲಾಯಿತಿಯ
ಹೃದಯವಾವಳ ಗತಿಯ
ಭಾರದಿಂ ಜಗ್ಗಿದುದೊ ಆ ತುರುಕರವನೀ
ಅಬಲೆಯಾಗಿಹಳೀಗ,
ಇತಲಿಯವಳನು ಬೇಗ
ಸುಲಿಯುತಿದೆ- ಕದಕದಿಸು ತುರುಕರೆದೆ ಧಮನಿ! || ೬ ||

ಆಧುನಿಕ ರಾಜ್ಯಕಲೆ
ಯನ್ನರಿಯದವರ ಸಲೆ
ಬೆಂಬಲಿಸಿ ನೀನಿಂದು ನಡೆಸವರ ಪಡೆಯಾ!
ಅನುಕರಿಸಗತಿಕರನು,
ತೊರೆಯದಿರಪಥಿಕರನು,
ಸುಕ್ಕಿಸದಿರರ್‍ಧ ಚಂದ್ರ ಧ್ವಜವನೊಡೆಯಾ! || ೭ ||

ನವನಾಗರಿಕಳಲ್ಲ
ದೀ ತುರುಕಿಯಿರಸಲ್ಲ
ದೆಂದವಳ ರುಜೆಗೆ ನಾಗರವಿಷಮನೀಯೆ,
ಯಮವೈದ್ಯ ರೂಪಿಂದ
ನಟಸುವಿತಲಿಯ ಚಂದ-
ತ್ರಿಪಲಿಯನ್ನಪಹರಿಸಲಿದುವಲ್ತೆ ಮಾಯೆ? || ೮ ||

ಮುಸಲಮಾನರ ಧರ್‍ಮ
ಪಾಳೆಸಗುವೊಳ ಮರ್‍ಮ
ದಿಂದಿತಲಿ ಬಂದಿಹುದೆ ಕೊಳುಗುಳಕೆ ಮುಂದು?
ಪೈಗಂಬರನು (ಮಹಮ್ಮದ್) ನೀನೆ,
ಮರಿಯಾತ್ಮಜನು (ಯೇಸು) ನೀನೆ
ಎಂಬ ಸತ್ಯವನೀ ಜಗತ್ತರಿವುದೆಂದು? || ೯ ||

ಶತ್ರುವನು ಕೂರೆಂದು
ಯೇಸು ರೂಪದೊಳಂದು
ನೀನೊರೆದುದಕನರ್‍ಥವಾದಪುದೆ ಇಂದು?
ಅನಘರನು ಕಡಿಯೆಂದು,
ಗೆಳೆಯರನು ಬಡಿಯೆಂದು
ನಿನ್ನ ವಾಕ್ಯಕೆ, ಹರಿಯೆ, ತಟ್ಟುವುದೆ ಕುಂದು? || ೧೦ ||

ಧರ್‍ಮಕೆಡೆ ಬರಿದಾಯ್ತೆ?
ನೀತಿ ತೇಲುವುದಾಯ್ತೆ?
ನಿನ್ನ ತಿರೆಯೊಳಧರ್‍ಮಕಾದಪುದೆ ಗೆಲುಹು?
ಧರ್‍ಮವುಳ್ಳೆಡೆ ನೀನು
ಎಂಬರದು ಸಟೆಯೇನು?
ಧರ್‍ಮವನು ಕಾದು ಬಲಹೀನರನು ಸಲಹು! || ೧೧ ||

ಈ ಸಮರವನು ಮುಗಿಸು,
ಸೊಕ್ಕಿದವರನು ತಗಿಸು,
ಸ್ನೇಹಮಳೆಗರೆದು ಶಾಂತಿಯ ಬೆಳೆಯಿಸಿನಿಯಾ!
ನಿರಪರಾಧಿಯ ರಕ್ತ
ದಿಂದ ನೆಲ ಜಲ ಸಿಕ್ತ
ವಾಗದೊಲು ಕಾಪಾಡು ದೇವಕೀತನಯಾ! || ೧೨ ||
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...