Home / ಕವನ / ಕವಿತೆ / ತುರ್‍ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ

ತುರ್‍ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ

ಭೂಪಾಳಿ-ಝಂಪೆ

ನೋಡು ನೋಡೆಲೊ ದೇವ!
ಗತಿವಿಹೀನರ ಕಾವ,
ನೋಡು ನಿನ್ನಯ ರಾಜ್ಯದೊಳರಾಜಕತೆಯ!
ನೋಡು ಪಡುವಣ ದಿಕ್ಕ,
ನೋಡು ಇತಲಿಯ ಸೊಕ್ಕ,
ನೋಡು ದೀನ ತುರುಷ್ಕ ತ್ರಿಪಲಿಯರ ಕತೆಯ! ||೧||

ಬಡ ತ್ರಿಪಲಿಯನ್ನಿತಲಿ
ಪಿಡಿದಿರುವುದೆನ್ನುತಲಿ
ಮೊರೆಯಿಡುವ ಕ್ರಂದನಕೆ ಕಿವಿಯ ಮುಚ್ಚಿಹೆಯಾ?
ತೋಳಿನಬ್ಬರವನ್ನು
ಜಗಕೆ ತೋರುವೆನೆನ್ನು
ತಿತಲಿ ಬೊಬ್ಬಿರಿವುದನು ತಾತ ಮೆಚ್ಚುವೆಯಾ? || ೨ ||

ನೆಲವ ನುಂಗುವ ಹಸಿವೆ
ತಡೆಯದರಚುತ ಕಸಿವೆ
ನೆನುತಿತಲಿ ತುಡುಕಿಹುದು ತ್ರಿಪಲಿಯನು ದೊರೆಯೆ!
ಹೆಬ್ಬುಲಿಯ ಕಂಗೆದುರು
ಸಿಕ್ಕಿದೆಳೆವುಲ್ಲೆಗರು
ವಂದದಿಂ ತಲ್ಲಣಿಪ ತ್ರಿಪಲಿಯನು ಪೊರೆಯೈ! || ೩ ||

ಮೊನ್ನೆವರಮೀ ಇತಲಿ
ಪರವಶತೆಯಿಂದಲಿಲಿ
ಯಂತೆ ಕಂಬನಿಯಗುಳ ನೆಕ್ಕಿದುದ ಮರೆಯೆ,
ಇಂದು ಗರ್‍ಜಿಸುತಿಹುದೆ?
ಕಷ್ಟವಿನ್ನೊಂದಿಹುದೆ?
ಮಾನವರೊ? ದಾನವರೊ? ನಾನವರನರಿಯೆ! || ೪ ||

ಯಾವ ಇತಲಿಯ ವೀರ
ಮಾಝೀನಿ (Mazzini) ರಣಧೀರ
ಪರತಂತ್ರದಿಂದಲುದ್ಧರಿಸಿದನಿತಲಿಯಂ,
ಸಕಲರಿಗೆ ಸ್ವಾತಂತ್ರ್ಯ
ವೆಂದವನ ಗುರುಮಂತ್ರ
ವಿದನಿತಲಿ ಮರೆತಿಹುದೆ ಸೊಕ್ಕಡಂ ತಲೆಯಂ! || ೫ ||

ಪೂರ್‍ವದಿ ವಿಲಾಯಿತಿಯ
ಹೃದಯವಾವಳ ಗತಿಯ
ಭಾರದಿಂ ಜಗ್ಗಿದುದೊ ಆ ತುರುಕರವನೀ
ಅಬಲೆಯಾಗಿಹಳೀಗ,
ಇತಲಿಯವಳನು ಬೇಗ
ಸುಲಿಯುತಿದೆ- ಕದಕದಿಸು ತುರುಕರೆದೆ ಧಮನಿ! || ೬ ||

ಆಧುನಿಕ ರಾಜ್ಯಕಲೆ
ಯನ್ನರಿಯದವರ ಸಲೆ
ಬೆಂಬಲಿಸಿ ನೀನಿಂದು ನಡೆಸವರ ಪಡೆಯಾ!
ಅನುಕರಿಸಗತಿಕರನು,
ತೊರೆಯದಿರಪಥಿಕರನು,
ಸುಕ್ಕಿಸದಿರರ್‍ಧ ಚಂದ್ರ ಧ್ವಜವನೊಡೆಯಾ! || ೭ ||

ನವನಾಗರಿಕಳಲ್ಲ
ದೀ ತುರುಕಿಯಿರಸಲ್ಲ
ದೆಂದವಳ ರುಜೆಗೆ ನಾಗರವಿಷಮನೀಯೆ,
ಯಮವೈದ್ಯ ರೂಪಿಂದ
ನಟಸುವಿತಲಿಯ ಚಂದ-
ತ್ರಿಪಲಿಯನ್ನಪಹರಿಸಲಿದುವಲ್ತೆ ಮಾಯೆ? || ೮ ||

ಮುಸಲಮಾನರ ಧರ್‍ಮ
ಪಾಳೆಸಗುವೊಳ ಮರ್‍ಮ
ದಿಂದಿತಲಿ ಬಂದಿಹುದೆ ಕೊಳುಗುಳಕೆ ಮುಂದು?
ಪೈಗಂಬರನು (ಮಹಮ್ಮದ್) ನೀನೆ,
ಮರಿಯಾತ್ಮಜನು (ಯೇಸು) ನೀನೆ
ಎಂಬ ಸತ್ಯವನೀ ಜಗತ್ತರಿವುದೆಂದು? || ೯ ||

ಶತ್ರುವನು ಕೂರೆಂದು
ಯೇಸು ರೂಪದೊಳಂದು
ನೀನೊರೆದುದಕನರ್‍ಥವಾದಪುದೆ ಇಂದು?
ಅನಘರನು ಕಡಿಯೆಂದು,
ಗೆಳೆಯರನು ಬಡಿಯೆಂದು
ನಿನ್ನ ವಾಕ್ಯಕೆ, ಹರಿಯೆ, ತಟ್ಟುವುದೆ ಕುಂದು? || ೧೦ ||

ಧರ್‍ಮಕೆಡೆ ಬರಿದಾಯ್ತೆ?
ನೀತಿ ತೇಲುವುದಾಯ್ತೆ?
ನಿನ್ನ ತಿರೆಯೊಳಧರ್‍ಮಕಾದಪುದೆ ಗೆಲುಹು?
ಧರ್‍ಮವುಳ್ಳೆಡೆ ನೀನು
ಎಂಬರದು ಸಟೆಯೇನು?
ಧರ್‍ಮವನು ಕಾದು ಬಲಹೀನರನು ಸಲಹು! || ೧೧ ||

ಈ ಸಮರವನು ಮುಗಿಸು,
ಸೊಕ್ಕಿದವರನು ತಗಿಸು,
ಸ್ನೇಹಮಳೆಗರೆದು ಶಾಂತಿಯ ಬೆಳೆಯಿಸಿನಿಯಾ!
ನಿರಪರಾಧಿಯ ರಕ್ತ
ದಿಂದ ನೆಲ ಜಲ ಸಿಕ್ತ
ವಾಗದೊಲು ಕಾಪಾಡು ದೇವಕೀತನಯಾ! || ೧೨ ||
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್