Home / ಕವನ / ಕವಿತೆ / ಮುರಲೀನಾದ

ಮುರಲೀನಾದ

– ಪಲ್ಲವಿ –

ಊದುತಿರುವ ಮುರಲಿ- ಶ್ರೀ
ಯಾದವೇಂದ್ರನಿಂದು !
ಕುಂಜವನದಿ ಬಂದು ನಿಂದು,
ಊದುತಿರುವ ಮುರಲಿ !

ಹಿಮಕಿರಣ ನಭದಿ ಹೊಳೆಯೆ,
ಮಧುಪವನ ವನದಿ ಸುಳಿಯೆ,
ಸುಮಜಾತ ಸುರಭಿ ಸುರಿಯೆ –
ರಮಣೀಯ ಭಾವ ಹರಿಯೆ –
ಊದುತಿರುವ ಮುರಲಿ ! ೧

ಬೆಳುದಿಂಗಳಂದವೇನು !
ಎಳನಗೆಯ ಸವಿಯಜೇನು !
ಕೊಳಗಳಲಿ ಕುಮುದ ಕುಲವು
ಅರಳಿ ಬಾಯ್‌ದೆರೆಯುತಿಹವು-
ಊದುತಿರುವ ಮುರಲಿ! ೨

ಮಾಧವನ ಮುರಲಿನಾದಾ
ಆಲಿಸುತ ನಲಿದು ರಾಧಾ,
ಮನ ನೀಡಿ ನಿಲಲು ಬೇಗ
ಕೇಳಿಸಿತು ಪ್ರಣಯರಾಗ-
ಊದುತಿರುವ ಮುರಲಿ! ೩

ಬಾ ರಾಧೆ, ರಾಧೆ-ಎಂದು
ಆ ರವವು ಕರೆಯುತಿಹುದು :
ಮನೆ-ಮಾರುಗಳನೆ ತೊರೆದು
ನಡೆದಳು ಕೊಳಲುಲಿಯ ಹಿಡಿದು
ಊದುತಿರುವ ಮುರಲಿ! ೪

ನೋಡಿದಳು ರಾಧೆ ಬನವ,
ಕೂಡಿರುವ ಚೆಲುವುಧನವ ;
ಬನದ ತರು-ಲತೆಗಳೆಲ್ಲಾ
ಬಿನದದಲಿವೆ ಕೇಳಿ ಕೊಳಲ !
ಊದುತಿರುವ ಮುರಲಿ ! ೫

ಕೇಳುತಿದೆ ಮುರಲಿಯುಲಿಯು
ಕಾಣದಿದೆ ಪ್ರಿಯನ ನೆಲೆಯು ;
ಕಳವಳದಿ ಹುಡುಕುತಿಹಳು
ಒಳಗೆ ಬಲು ಮಿಡುಕುತಿಹಳು-
ಊದುತಿರುವ ಮುರಲಿ! ೬

‘ಎಲ್ಲಿರುವ ನನ್ನ ಶ್ಯಾಮ ?
ಎಲ್ಲಿಹನೊ ಪ್ರೇಮಧಾಮ ?’
ಬಾಯ್‌ಬಿಡುತಲಿಂತು ಮರುಗಿ
ಸುಯ್ದು ಕುಳಿತಿರಲು ಸೊರಗಿ-
ಊದುತಿರುವ ಮುರಲಿ! ೭

ಶ್ಯಾಮನೆಲ್ಲಿಂದ ಬಂದ ? -ಓ
ರಾಮೆಯೆದುರಿನಲಿ ನಿಂದ !
ಹಮ್ಮಯಿಸಿ ತನ್ನ ಮರೆತು
ಒಂದಾದಳು ಪ್ರಿಯನ ಬೆರೆತು-
ಊದುತಿರುವ ಮುರಲಿ! ೮
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...