Home / ಕವನ / ಕವಿತೆ / ಮಣ್ಣು

ಮಣ್ಣು

ನಾನು ಭಾವ ನೀನು ಗೀತ
ನಾನು ರಾಮ ನೀನು ಸೀತ
ಹೀಗೆಲ್ಲ ಹಾಡಿದ ಕವಿಗಳು ಒಂದು ದಿನ
ನಾನು ಶವ ನೀನು ಪ್ರೇತ
ಎಂದು ಸಾಯುತ್ತಾರೆ

ನಾನು ದೇವರ ಪುತ್ರ ಬನ್ನಿ ನನ್ನಡಿಯಲ್ಲಿ
ಮೋಕ್ಷದ ಹಾದಿ ಸುರಳೀತ
ಎಂದು ಸಾರಿದ ಸಾಧಕರೆಲ್ಲ
ಗೊತ್ತಿದ್ದೋ ಗೊತ್ತಿಲ್ಲದೆಯೋ
ಇನ್ನೂ ಏಳದ ಹಾಗೆ ಮಲಗಿದ್ದಾರೆ

ಅಣು ಅರಸಿದವನು, ಕೃತಕ
ಮಳೆ ಸುರಿಸಿದವನು, ವಿದ್ಯುತ್
ಒಲೆ ಉರಿಸಿದವನು
ಒಂದು ಸಲ ಅರಸಿ ಹೋಗಿದ್ದಾರೆ ಏನನ್ನೋ
ತಿರುಗಿ ಬಂದಿಲ್ಲ

ಎಲ್ಲರೂ ಕಂಡದ್ದು ಒಂದೇ ಕೊನೆ
ಹೊಡೆದವನದೊಂದೇ ಬೆಣೆ

ನಾನಿಂತ ಮಣ್ಣಲ್ಲೆಲ್ಲ ಕರಗಿದವರ ಕತೆ
ಒಂದು ನರಿಯಂತೆ ಮತ್ತೊಂದು ಹುಲಿಯಂತೆ
ಇನ್ನೊಂದು ಬೀದಿ ನಾಯಿಯಂತೆ
ಎಲ್ಲಾ ಕೂಡಿ
ನಮ್ಮ ಮನೆಯಂಗಳಕ್ಕೆ ಮಣ್ಣಾದವಂತೆ

ಒಬ್ಬ ಮಾಸ್ತರನಂತೆ
ಉಣ್ಣದೇ ಸತ್ತವನು
ಒಬ್ಬ ಕಾರಕೂನನಂತೆ
ಹೊಟ್ಟೆ ತುಂಬಿಯೇ ಸತ್ತವನು

ಇದ್ದಾಗ ಒಬ್ಬರ ಮುಖ
ಇನ್ನೊಬ್ಬರಿಗಾಗದು
ಅವನ ಬಯ್ಯದೇ ಇವಗೆ
ಹೊತ್ತೇ ಹೋಗದು

ಇಬ್ಬರೂ ಸೇರಿ
ಚೌತಿಯ ಗಣಪತಿಗೆ
ಆಕಾರವಾದರು

ಮಣ್ಣ ಹಣತೆಯದೊಂದು ಕತೆ
ಮಡಕೆಯದೊಂದು ನೀಳ್ಗತೆ
ಹೊಸ ಮನೆಯ ಗೋಡೆಯದೊಂದು
ಕಾದಂಬರಿಯೇ ಇದೆ

ಕೇಳುತ್ತ ದಂಗಾದೆ
ಬೆರಳು ಕಚ್ಚಿದೆ ಆಶ್ಚರ್ಯಕ್ಕೆ
ಥೂ ! ಥೂ !
ಉಗಿದೆನು ಬರೀ ಮಣ್ಣು !
ಇಡೀ ಮೈ ನಕ್ಕಿತು ಒಳಗಿನವನನ್ನು ನೋಡಿ
“ನಾನು ನಿನಗಿಂತ ಹಿಂದೆ
ಸತ್ತವರ ಬೂದಿ”

ತಾಳಲಾರದೇ ಮನಸ್ಸಿನ
ಸ್ವಾಸ್ಥ್ಯಕ್ಕೆಂದು
ಮೆಲ್ಲಗೆ ಪಕ್ಕದ ಮನೆಯ
ಹುಡುಗಿಯನ್ನೆತ್ತಿಕೊಂಡೆ
ಎತ್ತಿಕೊಂಡರೆ ಪೂರಾ ಮಣ್ಣಿನದೆ ವಾಸನೆ
ಮೂಗೊತ್ತಿಕೊಂಡೆ

ಪೇಟೆಯಲ್ಲೆಲ್ಲ ಮಣ್ಣಿನದೆ ಮೆರವಣಿಗೆ
ಕ್ಲಾಸಿನಲ್ಲೆಲ್ಲ ಮಣ್ಣಿನದೆ ಬರವಣಿಗೆ
ಮಣ್ಣಿಗೆ ಮಣ್ಣು ಗೋಪುರ ಕಟ್ಟುತ್ತ

ಚೌತಿಯ ಗಣಪತಿ
ಈಶ್ವರ ಕೆರೆಯ ನೀರಲ್ಲಿ
ಹಗು-ಹಗೂರ
ಕರಗುವ ಹಾಗೆ

ನನ್ನೊಳಗೆ ಕರಗುತ್ತಿದ್ದೆ
ಮಣ್ಣಿನ ಮುದ್ದೆ

ಸತ್ತವರ ನೆರಳುಗಳಲ್ಲಿ
ಇದ್ದವರ ಕೊರಳು
ಕೊರೆಯುವ ಗೆದ್ದಲಗಳಲ್ಲಿ
ಬೀಳುತ್ತೆ ಉರುಳು

ಬಜಾರಿನ ತರಕಾರಿ, ಬಜಾರಿಯ ಚಿನ್ನಾಭರಣ
ಈ ಪ್ರಯೋಗಾಲಯದ ಗಾಜಿನುಪಕರಣ
ಜೊತೆಯಲ್ಲಿ ನಾನೂ, ನೀವೂ
ಮಾನವ ಕುಲದ
ಇತಿಹಾಸದಶ್ವತ್ಥ ಮರದಡಿಗೆ
ಮಣ್ಣಲ್ಲಿ ಮಣ್ಣಾಗಿ ಕರಗುವ ಕತೆಯೇ
ಇಂದಿನೀ ಉಸಿರು
*****

 

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...