Home / ಕವನ / ಕವಿತೆ / ನಿತ್ಯ ಪೂಜೆ

ನಿತ್ಯ ಪೂಜೆ

ಗುಡಿಯಲ್ಲಿ ನಡೆದಿರ್ದ್ದ ಪೂಜೆಯೇ ಸಿರಿಯಿಂದು
ಮರೆಯಾಗಿದೆ-ಎಲ್ಲ-ಮರೆಯಾಗಿದೆ!


ಅಳತೆಯಿರದನಿತು ದೀವಿಗೆಯೋಳಿ ತೊಳತೊಳಗಿ,
ಬೆಳಗಿಸಿದುವಂದು ದೇವಿಯ ವರದ ಮೂರುತಿಯ ;
ಕಳೆದುಕೊಂಡಿಂದು ತಿಳಿನೇಯವನು ದೀವಿಗೆಗ-
ಳಿಳಿದು ಕರ್ಗತ್ತಲೆಯು ಕವಿದು ಮುಸುಕಿದೆ ಗುಡಿಯ.
ದೇವಿಯಾ ವರದಮೂರುತಿ ಕಾಣದಿಹುದು;
ಭಾವುಕರ ಬಳಗವದು ಬೆದರಿ ಚೆದರಿಹುದು!


ಅರಳುಗಳ ಕರ್ಪುರಾರತಿಯ ಧೂಪದ ಕಂಪು
ಬೆರೆತು ಸುಳಿಗಾಳಿಯೋಳು ಹರಿದು, ದೂರದ ಜನರ
ಕರೆದೊಯ್ಯುತ್ತಿರಲಿಲ್ಲವೇ ಬಳಿಗೆ ? ಇಂದೇನು ?
ಸರಿದಿರುವ ಸೊಡರುಗಳ ಸೊವಡುಗಂಪದು ಹರಡಿ,
ಹೊರ- ಹೊರಟು ಮೂಗುಸೆಲೆ ಕೊರೆಯುತಿಹುದು,
ನೆರೆಯವರನೂ ದೂರ ಸರಿಸುತಿಹುದು !


ಅಂದಿನಾ ಪೂಜೆಯವಸರದ ಮಂತ್ರಗಳೇನು !
ಒಂದೆ ದನಿಯೊಳೆ ಮೊರೆವ ಭಾವಗೀತಗಳೇನು !
ದುಂದುಭಿಯ ಡೋಳು-ಜಾಗಟೆಗಳಬ್ಬರವೇನು !
ಇಂದದೊಂದೂ ಇಲ್ಲ, ಎಲ್ಲೆಲ್ಲಿಯೂ ಮೌನ !
ನುಡಿಯುತಿಹ ಹಲ್ಲಿಗಳ ಲೊಟಲೊಟೆಂಬುಲುಹು,
ಅಡಿಗಡಿಗೆ ಮೌನತೆಯ ಸೀಳಿ ಹೊರಡುವುವು!


ಹಾಲಕ್ಕಿಯೊಂದು ಹುಮ್ಮಸದಿ ಕಿಲಬಿಲಿಸುತಿದೆ ;
ಮೂಳನಾಯೊಂದು ಮನಬಂದಂತೆ ಬೊಗಳುತಿದೆ ;
ಕೇಳುತಿದೆ ಅತ್ತಿತ್ತ ನರಿಗಳೂಳಾಟ; ಬಿರುಗಾಳಿ ಬಿರು-
ಗಾಳಿ ಬಿರು-ಬಿರ್ರೆಂದು ಮೊರೆಮೊರೆದು ಬೀಸುತಿದೆ !
ಪೂಜೆಯವಸರದ ಮಂತ್ರ ಸ್ವನಗಳಿಲ್ಲ….
ಓಜೆಯಲಿ ಮೆರೆವ ವಾದ್ಯಧ್ವನಿಗಳಿಲ್ಲ!


ಓ! ಅರಿದಿದೇನಿದು?… ದೇವಿಯಿರುವ ದೆಸೆಯಿಂದಿತ್ತ,
ಬರುವ ಗಾಳಿಯೊಳು ಬೆರೆತಿರುವ ಬಿಸಿಯುಸಿರೇನು ?
ಬಿಸಿಯುಸಿರ ಬೆಂಬಳಿಸಿ ಬರುವ ದನಿ ಯಾರದಿದು ?
ಬರಿಯೆ ದನಿಯಲ್ಲ; ಹುರುಳಿನ ನುಡಿಯ ಕೂಡಿಹುದು!
ಗಾಳಿ ತರುತಿಹ ನುಡಿಯಿದೇನೆಂಬಿರೇನು?
ಕೇಳಿ-ಕೇಳಿರಿ, ನಸುವೆ ಕೊಟ್ಟು ಕಿವಿಗಳನು !


“ನಿತ್ಯ ಪೂಜೆಯು ಬೇಕು ! ನಿತ್ಯ ಪೂಜೆಯು ನನಗೆ !
ಕುತ್ತಗಳ ಕಳೆದುಕೊಳುವಾಶೆಯಲ್ಲವೆ ನಿಮಗೆ?
ನಿತ್ಯ ಪೂಜಿಸಲು ಬೇಸತ್ತರಾಗುವುದೇನು?
ನಿತ್ಯ ಪೂಜೆಯು ಬೇಕು; ನಿತ್ಯ ಪೂಜ್ಯಳು ನಾನು!
ಕತ್ತಲೆಗೆ ಹೆದರದಿರಿ ಕಾಲಿಡಿ ಮುಂದೆ,
ಒತ್ತರದಿ ಬನ್ನಿರೆಲ್ಲರು ಇಲ್ಲಿಗಿಂದೆ!
ಮರ-ಮರಳಿ ಸಲ್ಲಿಸಿರಿ ವೀರಪೂಜೆಯನೆನಗೆ,
ವರವಾವುದನು ಕೇಳಿ ಕೊಡುವೆ ನಾ ನಿಮಗೆ!”
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...