Home / ಕವನ / ಕವಿತೆ / ನಿತ್ಯ ಪೂಜೆ

ನಿತ್ಯ ಪೂಜೆ

ಗುಡಿಯಲ್ಲಿ ನಡೆದಿರ್ದ್ದ ಪೂಜೆಯೇ ಸಿರಿಯಿಂದು
ಮರೆಯಾಗಿದೆ-ಎಲ್ಲ-ಮರೆಯಾಗಿದೆ!


ಅಳತೆಯಿರದನಿತು ದೀವಿಗೆಯೋಳಿ ತೊಳತೊಳಗಿ,
ಬೆಳಗಿಸಿದುವಂದು ದೇವಿಯ ವರದ ಮೂರುತಿಯ ;
ಕಳೆದುಕೊಂಡಿಂದು ತಿಳಿನೇಯವನು ದೀವಿಗೆಗ-
ಳಿಳಿದು ಕರ್ಗತ್ತಲೆಯು ಕವಿದು ಮುಸುಕಿದೆ ಗುಡಿಯ.
ದೇವಿಯಾ ವರದಮೂರುತಿ ಕಾಣದಿಹುದು;
ಭಾವುಕರ ಬಳಗವದು ಬೆದರಿ ಚೆದರಿಹುದು!


ಅರಳುಗಳ ಕರ್ಪುರಾರತಿಯ ಧೂಪದ ಕಂಪು
ಬೆರೆತು ಸುಳಿಗಾಳಿಯೋಳು ಹರಿದು, ದೂರದ ಜನರ
ಕರೆದೊಯ್ಯುತ್ತಿರಲಿಲ್ಲವೇ ಬಳಿಗೆ ? ಇಂದೇನು ?
ಸರಿದಿರುವ ಸೊಡರುಗಳ ಸೊವಡುಗಂಪದು ಹರಡಿ,
ಹೊರ- ಹೊರಟು ಮೂಗುಸೆಲೆ ಕೊರೆಯುತಿಹುದು,
ನೆರೆಯವರನೂ ದೂರ ಸರಿಸುತಿಹುದು !


ಅಂದಿನಾ ಪೂಜೆಯವಸರದ ಮಂತ್ರಗಳೇನು !
ಒಂದೆ ದನಿಯೊಳೆ ಮೊರೆವ ಭಾವಗೀತಗಳೇನು !
ದುಂದುಭಿಯ ಡೋಳು-ಜಾಗಟೆಗಳಬ್ಬರವೇನು !
ಇಂದದೊಂದೂ ಇಲ್ಲ, ಎಲ್ಲೆಲ್ಲಿಯೂ ಮೌನ !
ನುಡಿಯುತಿಹ ಹಲ್ಲಿಗಳ ಲೊಟಲೊಟೆಂಬುಲುಹು,
ಅಡಿಗಡಿಗೆ ಮೌನತೆಯ ಸೀಳಿ ಹೊರಡುವುವು!


ಹಾಲಕ್ಕಿಯೊಂದು ಹುಮ್ಮಸದಿ ಕಿಲಬಿಲಿಸುತಿದೆ ;
ಮೂಳನಾಯೊಂದು ಮನಬಂದಂತೆ ಬೊಗಳುತಿದೆ ;
ಕೇಳುತಿದೆ ಅತ್ತಿತ್ತ ನರಿಗಳೂಳಾಟ; ಬಿರುಗಾಳಿ ಬಿರು-
ಗಾಳಿ ಬಿರು-ಬಿರ್ರೆಂದು ಮೊರೆಮೊರೆದು ಬೀಸುತಿದೆ !
ಪೂಜೆಯವಸರದ ಮಂತ್ರ ಸ್ವನಗಳಿಲ್ಲ….
ಓಜೆಯಲಿ ಮೆರೆವ ವಾದ್ಯಧ್ವನಿಗಳಿಲ್ಲ!


ಓ! ಅರಿದಿದೇನಿದು?… ದೇವಿಯಿರುವ ದೆಸೆಯಿಂದಿತ್ತ,
ಬರುವ ಗಾಳಿಯೊಳು ಬೆರೆತಿರುವ ಬಿಸಿಯುಸಿರೇನು ?
ಬಿಸಿಯುಸಿರ ಬೆಂಬಳಿಸಿ ಬರುವ ದನಿ ಯಾರದಿದು ?
ಬರಿಯೆ ದನಿಯಲ್ಲ; ಹುರುಳಿನ ನುಡಿಯ ಕೂಡಿಹುದು!
ಗಾಳಿ ತರುತಿಹ ನುಡಿಯಿದೇನೆಂಬಿರೇನು?
ಕೇಳಿ-ಕೇಳಿರಿ, ನಸುವೆ ಕೊಟ್ಟು ಕಿವಿಗಳನು !


“ನಿತ್ಯ ಪೂಜೆಯು ಬೇಕು ! ನಿತ್ಯ ಪೂಜೆಯು ನನಗೆ !
ಕುತ್ತಗಳ ಕಳೆದುಕೊಳುವಾಶೆಯಲ್ಲವೆ ನಿಮಗೆ?
ನಿತ್ಯ ಪೂಜಿಸಲು ಬೇಸತ್ತರಾಗುವುದೇನು?
ನಿತ್ಯ ಪೂಜೆಯು ಬೇಕು; ನಿತ್ಯ ಪೂಜ್ಯಳು ನಾನು!
ಕತ್ತಲೆಗೆ ಹೆದರದಿರಿ ಕಾಲಿಡಿ ಮುಂದೆ,
ಒತ್ತರದಿ ಬನ್ನಿರೆಲ್ಲರು ಇಲ್ಲಿಗಿಂದೆ!
ಮರ-ಮರಳಿ ಸಲ್ಲಿಸಿರಿ ವೀರಪೂಜೆಯನೆನಗೆ,
ವರವಾವುದನು ಕೇಳಿ ಕೊಡುವೆ ನಾ ನಿಮಗೆ!”
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...