Home / ಕವನ / ಕವಿತೆ / ನಿತ್ಯ ಪೂಜೆ

ನಿತ್ಯ ಪೂಜೆ

ಗುಡಿಯಲ್ಲಿ ನಡೆದಿರ್ದ್ದ ಪೂಜೆಯೇ ಸಿರಿಯಿಂದು
ಮರೆಯಾಗಿದೆ-ಎಲ್ಲ-ಮರೆಯಾಗಿದೆ!


ಅಳತೆಯಿರದನಿತು ದೀವಿಗೆಯೋಳಿ ತೊಳತೊಳಗಿ,
ಬೆಳಗಿಸಿದುವಂದು ದೇವಿಯ ವರದ ಮೂರುತಿಯ ;
ಕಳೆದುಕೊಂಡಿಂದು ತಿಳಿನೇಯವನು ದೀವಿಗೆಗ-
ಳಿಳಿದು ಕರ್ಗತ್ತಲೆಯು ಕವಿದು ಮುಸುಕಿದೆ ಗುಡಿಯ.
ದೇವಿಯಾ ವರದಮೂರುತಿ ಕಾಣದಿಹುದು;
ಭಾವುಕರ ಬಳಗವದು ಬೆದರಿ ಚೆದರಿಹುದು!


ಅರಳುಗಳ ಕರ್ಪುರಾರತಿಯ ಧೂಪದ ಕಂಪು
ಬೆರೆತು ಸುಳಿಗಾಳಿಯೋಳು ಹರಿದು, ದೂರದ ಜನರ
ಕರೆದೊಯ್ಯುತ್ತಿರಲಿಲ್ಲವೇ ಬಳಿಗೆ ? ಇಂದೇನು ?
ಸರಿದಿರುವ ಸೊಡರುಗಳ ಸೊವಡುಗಂಪದು ಹರಡಿ,
ಹೊರ- ಹೊರಟು ಮೂಗುಸೆಲೆ ಕೊರೆಯುತಿಹುದು,
ನೆರೆಯವರನೂ ದೂರ ಸರಿಸುತಿಹುದು !


ಅಂದಿನಾ ಪೂಜೆಯವಸರದ ಮಂತ್ರಗಳೇನು !
ಒಂದೆ ದನಿಯೊಳೆ ಮೊರೆವ ಭಾವಗೀತಗಳೇನು !
ದುಂದುಭಿಯ ಡೋಳು-ಜಾಗಟೆಗಳಬ್ಬರವೇನು !
ಇಂದದೊಂದೂ ಇಲ್ಲ, ಎಲ್ಲೆಲ್ಲಿಯೂ ಮೌನ !
ನುಡಿಯುತಿಹ ಹಲ್ಲಿಗಳ ಲೊಟಲೊಟೆಂಬುಲುಹು,
ಅಡಿಗಡಿಗೆ ಮೌನತೆಯ ಸೀಳಿ ಹೊರಡುವುವು!


ಹಾಲಕ್ಕಿಯೊಂದು ಹುಮ್ಮಸದಿ ಕಿಲಬಿಲಿಸುತಿದೆ ;
ಮೂಳನಾಯೊಂದು ಮನಬಂದಂತೆ ಬೊಗಳುತಿದೆ ;
ಕೇಳುತಿದೆ ಅತ್ತಿತ್ತ ನರಿಗಳೂಳಾಟ; ಬಿರುಗಾಳಿ ಬಿರು-
ಗಾಳಿ ಬಿರು-ಬಿರ್ರೆಂದು ಮೊರೆಮೊರೆದು ಬೀಸುತಿದೆ !
ಪೂಜೆಯವಸರದ ಮಂತ್ರ ಸ್ವನಗಳಿಲ್ಲ….
ಓಜೆಯಲಿ ಮೆರೆವ ವಾದ್ಯಧ್ವನಿಗಳಿಲ್ಲ!


ಓ! ಅರಿದಿದೇನಿದು?… ದೇವಿಯಿರುವ ದೆಸೆಯಿಂದಿತ್ತ,
ಬರುವ ಗಾಳಿಯೊಳು ಬೆರೆತಿರುವ ಬಿಸಿಯುಸಿರೇನು ?
ಬಿಸಿಯುಸಿರ ಬೆಂಬಳಿಸಿ ಬರುವ ದನಿ ಯಾರದಿದು ?
ಬರಿಯೆ ದನಿಯಲ್ಲ; ಹುರುಳಿನ ನುಡಿಯ ಕೂಡಿಹುದು!
ಗಾಳಿ ತರುತಿಹ ನುಡಿಯಿದೇನೆಂಬಿರೇನು?
ಕೇಳಿ-ಕೇಳಿರಿ, ನಸುವೆ ಕೊಟ್ಟು ಕಿವಿಗಳನು !


“ನಿತ್ಯ ಪೂಜೆಯು ಬೇಕು ! ನಿತ್ಯ ಪೂಜೆಯು ನನಗೆ !
ಕುತ್ತಗಳ ಕಳೆದುಕೊಳುವಾಶೆಯಲ್ಲವೆ ನಿಮಗೆ?
ನಿತ್ಯ ಪೂಜಿಸಲು ಬೇಸತ್ತರಾಗುವುದೇನು?
ನಿತ್ಯ ಪೂಜೆಯು ಬೇಕು; ನಿತ್ಯ ಪೂಜ್ಯಳು ನಾನು!
ಕತ್ತಲೆಗೆ ಹೆದರದಿರಿ ಕಾಲಿಡಿ ಮುಂದೆ,
ಒತ್ತರದಿ ಬನ್ನಿರೆಲ್ಲರು ಇಲ್ಲಿಗಿಂದೆ!
ಮರ-ಮರಳಿ ಸಲ್ಲಿಸಿರಿ ವೀರಪೂಜೆಯನೆನಗೆ,
ವರವಾವುದನು ಕೇಳಿ ಕೊಡುವೆ ನಾ ನಿಮಗೆ!”
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...