Home / ಕವನ / ಕವಿತೆ / ನಾವಾಡಿಗ!

ನಾವಾಡಿಗ!

ಮಳೆಗಾಲದ ನೀರಹೊಳೆಯನ್ನು ದಾಟಿಸಲು ಅಂಬಿಗರಣ್ಣ ಅರಿತವನಾದರೆ, ಅಳಿಗಾಲದ ಬಾಳಹೊಳೆಯನ್ನು ದಾಂಟಿಸಲು ಬಲ್ಲಿದರಾರು?

ನಡುಹೊಳೆಯ ನಡುವಿನೊಳು ತೊಡಕಿ ಮಿಡುಕುತಲಿಹೆನು,
ತಡೆಯದಲೆ ತೋರು ನೀ ತಡಿಯ ತಲುಪುವ ಹದನು !


‘ನನ್ನ ನುಡಿ ಮನ್ನಿಸದೆ ಬೀಳದಿರು ! ಈ ಹೊಳೆ-
ಮುನ್ನ ಬಲ್ಲಿದರ ಹಲವರ ಬಳಲಿಸಿಹುದೋ!’
ಎನ್ನುತೆಳ್ಚರಿಸಿರುವ ನಿನ್ನ ನುಡಿ ಹೀಗಳೆದು
ನನ್ನ ಬಲುಹಿನ ಗರುವದಲಿ ಹೊಳೆಗೆ ಹಾರಿಹೆನು!


‘ನಸುವೇಳೆ ತಾಳು, ನಾ ಹೇಳುವುದ ನೀ ಕೇಳು!
ಗಸಣೆಗೊಳಿಸದೆ ಹೊಳೆಯ ದಾಂಟಿಸುವೆ’ ಎಂದೆಯೈ!
ಕಸಕೆ ಸರಿಯೆಣಸಿದೆನು ನಿನ್ನ ನಲ್‌ನುಡಿಗಳನು,
ಮಸಣದೀ ದಾರಿಯೊಳು ಅಡಿಗಳನು ಚೆಲ್ಲಿಹೆನು.


‘ಬೀಳದಿರು, ಬೀಳದಿರು! ಹಿಂದಿರುಗು, ಸರಿ, ಮರಳು!
ಕೇಳೆನ್ನ ವಚನ ಬಾಳುವೆ ಬಹಳ ದಿವಸಗಳು!’
ಹೇಳಿದೆಯೊ ಇಂತು ನಡುಹೊಳೆಯ ಸೇರುವ ವರೆಗು-
ಮೂಳ ನಿಜ ನಾನು ಗಣಿಸದೆ ಹೊಳೆಯ ಹೊಕ್ಕಿಹೆನು!


ನನ್ನ ತೋಳುಗಳ ತಿರುಳನ್ನು ತೊರೆಯನ್ನೀಸಿ
ನಿನ್ನೆದುರು ತೋರಿಸುತ ಮೂದಲಿವೆನೆಂದಿದ್ದೆ;
ಮುನ್‌ನೋಡಿ ತಿಳಿಯದೇ ಬನ್ನದಲಿ ಬಿದ್ದಿಹೆನು,
ಮನ್ನಿಸೆನ್ನಯ ಮೊರೆಯ ಅಣ್ಣ ನಾವಿಕ, ಪೊರೆಯೊ!


ಬಡಿದಾಡಿ ನೀರಿನೊಳು ಬಳಲಿಹವು ಕೈ ಕಾಲು;
ಅಡಿಗಡಿಗೆ ಮೂಗು-ಕಣ್-ಕಿವಿಗಳಿಗೆ ನೀರೇರಿ,
ಕುಡಿಯುತಲಿಹೆ ಒಡಲು ಒಡೆಯುವೊಲು ಕದಡನ್ನು
ನಡುಹೊಳೆಗೆ ಬರಲೀಗ, ದಡದಡಿಸುತಿಹೆನು!


ಕ್ರೂರಜಲಜಂತುಗಳು ನೀರಸುಳಿ ತೆರೆತೆರೆಯು
ತೋರೆ ಭೀತಿಯೊಳು ಗುಡುಗಾಡುತಿದೆ ನನ್ನೆದೆಯು!
ಧೀರ, ನಿನ್ನಯ ನುಡಿಯ ಮಾರಿ ನಾ ನಡೆದುದನು
ತಾರದೆಯೆ ಮನದಲ್ಲಿ ತಾರಿಸುವುದೆನ್ನನು!


ಮೂಢನೊಬ್ಬನು ಹಿರಿಯರಾಡಿದುದನೆಣಿಸದೇ
ಖೋಡಿನಂದದಿ ನಡೆದು ಕೇಡಿಗೊಳಗಾಗಿರಲು,
ಖೋಡಿಗಳೆದವ ನಮ್ಮ ನುಡಿಯನೆಂದಾತನನು
ನೋಡಿಯೂ ನೋಡದಾ ತೆರ ಸುಮ್ಮಗಿರುವರೆ ?


ಹಲವು ಸಲ ದಾಂಟಿಹೆಯೊ, ಹೊಳೆಯಾಳ ತಿಳಿದಿಹೆಯೊ,
ಸುಲಭದಲಿ ಹಲವು ಜನರನು ಪಾರು ಮಾಡಿಹೆಯೊ!
ತಲುಪಿಸೈ ತಡಿಗೆನ್ನ ಚೆಲುವ ಅಂಬಿಗರಣ್ಣ,
ಬಲುಮೆಯಿಂದಲಿ ನನ್ನ ಬಳಗದೊಳು ಕೂಡಿಸೈ!
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್