Home / ಕವನ / ಕವಿತೆ / ನಾವಾಡಿಗ!

ನಾವಾಡಿಗ!

ಮಳೆಗಾಲದ ನೀರಹೊಳೆಯನ್ನು ದಾಟಿಸಲು ಅಂಬಿಗರಣ್ಣ ಅರಿತವನಾದರೆ, ಅಳಿಗಾಲದ ಬಾಳಹೊಳೆಯನ್ನು ದಾಂಟಿಸಲು ಬಲ್ಲಿದರಾರು?

ನಡುಹೊಳೆಯ ನಡುವಿನೊಳು ತೊಡಕಿ ಮಿಡುಕುತಲಿಹೆನು,
ತಡೆಯದಲೆ ತೋರು ನೀ ತಡಿಯ ತಲುಪುವ ಹದನು !


‘ನನ್ನ ನುಡಿ ಮನ್ನಿಸದೆ ಬೀಳದಿರು ! ಈ ಹೊಳೆ-
ಮುನ್ನ ಬಲ್ಲಿದರ ಹಲವರ ಬಳಲಿಸಿಹುದೋ!’
ಎನ್ನುತೆಳ್ಚರಿಸಿರುವ ನಿನ್ನ ನುಡಿ ಹೀಗಳೆದು
ನನ್ನ ಬಲುಹಿನ ಗರುವದಲಿ ಹೊಳೆಗೆ ಹಾರಿಹೆನು!


‘ನಸುವೇಳೆ ತಾಳು, ನಾ ಹೇಳುವುದ ನೀ ಕೇಳು!
ಗಸಣೆಗೊಳಿಸದೆ ಹೊಳೆಯ ದಾಂಟಿಸುವೆ’ ಎಂದೆಯೈ!
ಕಸಕೆ ಸರಿಯೆಣಸಿದೆನು ನಿನ್ನ ನಲ್‌ನುಡಿಗಳನು,
ಮಸಣದೀ ದಾರಿಯೊಳು ಅಡಿಗಳನು ಚೆಲ್ಲಿಹೆನು.


‘ಬೀಳದಿರು, ಬೀಳದಿರು! ಹಿಂದಿರುಗು, ಸರಿ, ಮರಳು!
ಕೇಳೆನ್ನ ವಚನ ಬಾಳುವೆ ಬಹಳ ದಿವಸಗಳು!’
ಹೇಳಿದೆಯೊ ಇಂತು ನಡುಹೊಳೆಯ ಸೇರುವ ವರೆಗು-
ಮೂಳ ನಿಜ ನಾನು ಗಣಿಸದೆ ಹೊಳೆಯ ಹೊಕ್ಕಿಹೆನು!


ನನ್ನ ತೋಳುಗಳ ತಿರುಳನ್ನು ತೊರೆಯನ್ನೀಸಿ
ನಿನ್ನೆದುರು ತೋರಿಸುತ ಮೂದಲಿವೆನೆಂದಿದ್ದೆ;
ಮುನ್‌ನೋಡಿ ತಿಳಿಯದೇ ಬನ್ನದಲಿ ಬಿದ್ದಿಹೆನು,
ಮನ್ನಿಸೆನ್ನಯ ಮೊರೆಯ ಅಣ್ಣ ನಾವಿಕ, ಪೊರೆಯೊ!


ಬಡಿದಾಡಿ ನೀರಿನೊಳು ಬಳಲಿಹವು ಕೈ ಕಾಲು;
ಅಡಿಗಡಿಗೆ ಮೂಗು-ಕಣ್-ಕಿವಿಗಳಿಗೆ ನೀರೇರಿ,
ಕುಡಿಯುತಲಿಹೆ ಒಡಲು ಒಡೆಯುವೊಲು ಕದಡನ್ನು
ನಡುಹೊಳೆಗೆ ಬರಲೀಗ, ದಡದಡಿಸುತಿಹೆನು!


ಕ್ರೂರಜಲಜಂತುಗಳು ನೀರಸುಳಿ ತೆರೆತೆರೆಯು
ತೋರೆ ಭೀತಿಯೊಳು ಗುಡುಗಾಡುತಿದೆ ನನ್ನೆದೆಯು!
ಧೀರ, ನಿನ್ನಯ ನುಡಿಯ ಮಾರಿ ನಾ ನಡೆದುದನು
ತಾರದೆಯೆ ಮನದಲ್ಲಿ ತಾರಿಸುವುದೆನ್ನನು!


ಮೂಢನೊಬ್ಬನು ಹಿರಿಯರಾಡಿದುದನೆಣಿಸದೇ
ಖೋಡಿನಂದದಿ ನಡೆದು ಕೇಡಿಗೊಳಗಾಗಿರಲು,
ಖೋಡಿಗಳೆದವ ನಮ್ಮ ನುಡಿಯನೆಂದಾತನನು
ನೋಡಿಯೂ ನೋಡದಾ ತೆರ ಸುಮ್ಮಗಿರುವರೆ ?


ಹಲವು ಸಲ ದಾಂಟಿಹೆಯೊ, ಹೊಳೆಯಾಳ ತಿಳಿದಿಹೆಯೊ,
ಸುಲಭದಲಿ ಹಲವು ಜನರನು ಪಾರು ಮಾಡಿಹೆಯೊ!
ತಲುಪಿಸೈ ತಡಿಗೆನ್ನ ಚೆಲುವ ಅಂಬಿಗರಣ್ಣ,
ಬಲುಮೆಯಿಂದಲಿ ನನ್ನ ಬಳಗದೊಳು ಕೂಡಿಸೈ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...