Home / ಕವನ / ಕವಿತೆ / ಸಾರಥಿಗೆ

ಸಾರಥಿಗೆ

ಏನು ಇದು ಸಾರಥಿಯೆ, ನೀನಿಂತು ಮಾಡಿದರೆ
ನಾನು ಹಗೆಯರಸರನು ಕೂನಿಸುವನೆಂತು ?


ದಾರಿ ಯಾವುದು ಈಗ ತೇರ ನಡೆಯಿಸುತಿಹುದು ?
ವೈರಿಗಳು ಪಾಳೆಯವ ಊರಿರುವುದೆಲ್ಲಿಯೊ !
ದಾರಿಯನು ಅರಿತವರು ಸಾರಿರುವ ಕುರುಹುಗಳು
ತೋರಲೊಲ್ಲವು ಕಣ್ಗೆ, ಗಾರಗೊಂಡಿದೆ ಮನವು-
ಏನು ಇದು ಸಾರಥಿಯೆ ?


ಕಾಲಾಳುಗಳು ಹೋದ ಕಾಲುಗಳ ಹೊಳಹಿಲ್ಲ;
ಮೇಲಾಳುಗಳ ತೇರ ಗಾಲಿಗಳ ಗುರುತಿಲ್ಲ.
ಕೀಲಿಸಿರುವುದು ದಾರಿ ಮುಳ್ಳು-ಕಲ್ಲುಗಳಿಂದೆ
ಕಾಲಿಡಲು ಬಾರದಿದೆ ಹಳ್ಳ-ಹಿಗ್ಗುಗಳಿಂದೆ.
ಏನು ಇದು ಸಾರಥಿಯೆ ?


ಕೊಳುಗುಳದ ದಾರಿಯನು ತಿಳಿದಿರುವನಿವನೊಡನೆ
ತಳರೆಂದು ತಿಳಿದವರು ತಿಳುಹಿದರೆ ನಾ ಬಂದೆ;
ತೊಳಲಿಸುತಲಿಹೆ ನೀನು, ಉಳಿದು ಸರಿದಾರಿಯನು !
ಗಳಿಲನೇ ರಣಕೆ ನಡೆ, ನಗೆಯೀಗ ಒಳಿತೇನು ?
ಏನು ಇದು ಸಾರಥಿಯೆ ?


ಹಲವು ಬಂಟರ ತೇರುಗಳ ನಡೆಸಿ ಮುನ್ನ ನೀ
ಗೆಲವುಗಳನೆನಿತೆನಿತೊ ಗಳಿಸಿಕೊಟ್ಟಿಹೆಯೆಂತೆ-
ಚೆಲುವ ನೀನಿಂದೇತಕೊಲಿಯದಿಹೆಯೈ ನನಗೆ ?
ಗೆಲವನಾ ಗಳಿಸುವುದು ಮನಕೆ ಬಾರದೆ ನಿನಗೆ ?
ಏನು ಇದು ಸಾರಥಿಯೆ ?


ಸಾರಥಿಯು ಸಮನಿರಲು ಆರಾತಿಗಳನರಿದು
ವೀರನವ ಗೆಲವನ್ನು ಸಾರುವುದು ಸಹಜವೈ !
ಹಾರಿ ಬೇಲಿಯ ಹೊಲದ ಸೇರಿ ಮೇಯುವ ತೆರದಿ
ಸಾರಥಿಯೆ ಕೈ ಮೀರೆ ಹೋರಿ ಗೆಲ್ಲಲು ದಾರಿ ?
ಏನು ಇದು ಸಾರಥಿಯೆ ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...