ಹೊಡಿಮಗ ಹೊಡಿಮಗ ಬಿಡಬೆಡ ಸಿದ್ದರಾಮನ್ನಾ

ಹೊಡಿಮಗ ಹೊಡಿಮಗ ಹೊಡಿಮಗ
ಬಿಡಬೇಡ ಸಿದ್ದರಾಮನ್ನಾ
ಚಾಮುಂಡೇಶ್ವರಿ ಸುತ್ತಮುತ್ತ
ಪ್ರಚಾರಕ್ಕೆ ಕಾಲಿಡ್ದಂಗೆ
ಎತ್ತಲೆ ಮಗ್ನೆ ಕಾಂಗ್ರೆಸ್ನೋನಾ

ಚುನಾವಣೆಗೆ ಬಂದ ಮೇಲೆ
ಗೆಲ್ಲು ಬೇಕು ಕಣೋ
ಸೋತು ಹೋದ್ರೆ ಕೋಜಾ ಸರ್ಕಾರ
ಕ್ಲೋಸೇ ಕಣೋ || ಹೊಡಿಮಗ||

ಮಗ್ನೆ ನಿದ್ದೆ ಹೊಡಿಬ್ಯಾಡ
ಮನೆಯಾಗೆ ಮುದ್ದೆ ಜಡಿಬ್ಯಾಡ
ಹಳ್ಳಿ ಹಳ್ಳ ಸುತ್ತ ಬೇಕ್ ಕಣಲೇ…..
ಶಿವಬಸಪ್ಪನ್ನ ಮುಂದಿಟ್ಕೊಂಡು
ಸ್ಕೆಚ್ ಹಾಕಬೇಕೋ
ಬಿಜೆಪಿಯೋನ ಹಿಂದಿಟ್ಕೊಂಡು
ಮೂರ್ತ ಇಡಬೇಕೋ
ಗೆದ್ದರೆ ಮಂತ್ರಿ ಕಣೋ ಸೋತ್ರೆ ಕಂತ್ರಿ ಕಣೋ
ಇದುವೆ ರಾಜಕೀಯದೋರ ಹಣೆಬರಹಾ
ಹೊಡಿಮಗ ಹೊಡಿಮಗ ಬಿಡಬೇಡ ಸಿದ್ದರಾಮನ್ನ||

ಹಿಂಗಂತ ಚಾಮುಂಡೇಶ್ವರಿ ಕ್ಷೇತ್ರದಾಗೆ ದ್ಯಾವೇಗೋಡ್ರು ಹಾಡು ಹೇಳ್ತಾ ಲಾಂಗ್ ಹಿಡ್ಕೊಂಡು ಪ್ರಚಾರ ಶುರುಹಚ್ಕಂಡವರೆ ಕಣ್ರಿ. ಕಾಂಗ್ರೆಸ್‌ನಾಗೇನು ಕವಿಗಳಿಲ್ವೆ? ಸಿಂಗರ್‌ಸಿಲ್ವೇ?  ಗೋಡ ‘ಜೋಗಿ’ ಫೀಲಂ ಸಾಂಗ್ ಸೆಲಕ್ಟ್ ಮಾಡ್ಕಂಡ್ರೆ ಕಾಂಗ್ರೆಸ್ನೋರು ‘ಈರ ಬಬ್ರುವಾಹನ’ ಫೀಲಂ ಸಾಂಗ್ ಮಾಡ್ಕಂಡವರೆ.

ಯಾರು ತಿಳಿಯರು ಗೋಡ ನಿನ್ನ ಭುಜಬಲದ ಪರಾಕ್ರಮ
ಚುನಾವಣೆಯೊಳ್ ಸಾಧಿಸಿದ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣವು ಕುಟುಂಬ ರಾಜಕೀಯ || ಯಾರು||

ಕನಕಪುರದಲಿ ನಿಂತು ತೇಜಮ್ಮ ವಿರುದ್ದ ಪಲ್ಟಿ
ಹೊಡೆದಾಗ ಎಲ್ಲಿ ಅಡಗಿತ್ತೋ ನಿನ್ನ ಶೌರ್ಯ
ಅಹಿಂದವನ್ನು ಕಟ್ಟಿ ಮೆರೆವ ಸಿದ್ದು ಸೈರಿಸದೆ
ಮಗನನ್ನೇ ಸಿ‌ಎಂ ಮಾಡಿದ ಭ್ರಷ್ಟಾ ನೀನು
ಕಾಂಗ್ರೆಸ್ನೋನ ಗೆಲ್ಲುವ ಗುಂಡಿಗೆಯು ನಿನಗೆಲ್ಲೋ
ಹೋಗು ಹೋಗಲೋ ಶಿಖಂಡಿ||

ಯಾವ ಲಾರಿ ಬಸ್ಸು ಟ್ರಾಕ್ಟರು ಆಟೋ ಎತ್ತಿನ ಬಂಡಿ ಮ್ಯಾಗೆಲ್ಲಾ ಮೈಕ್ ಹಾಕ್ಕಂಡು ಎಲ್ಡು ಪಕ್ಷದೋರೂ ಹೊಯ್ಕಳ್ಳಿಕತ್ತಾರ್ರಿ. ಈ ಮದ್ಯೆ ಜೆಡಿಯು ಗುರುಸಾಮಿ ಯಾವ ಫಿಲಂ ಸಾಂಗ್ ಹಾಡ್ಲಿಕತ್ತಾನೆ ಗೊತ್ತದೇನ್ರಿ? ಕೇಳ್ರಲಾ ……

ಇದೇನು ಸಭ್ಯತೆ ಇದೇನು ಸಂಸ್ಕೃತಿ
ಇದೇನು ಗೋಡ್ರ ದರ್ಬಾರು ಅವನ ಮಗನ
ಕಾರುಬಾರು – ನೋಡಲಾರೆ ಎನ್ನುತಿಹಳು
ನಮ್ಮ ತಾಯಿ ಚಾಮುಂಡಿ ||ಇದೇನು||
ದಾಸನಕೊಪ್ಪ ಬೋಗಾದೀಲಿ ಪ್ರಚಾರ ಮಾಡಿದ್ಹಾಗೆ/ಜೆಡಿ‌ಎಸ್ಸು ಬಿಜೆಪಿನೋರು
ನಡಿಸಿಹರು ಪೈಪೋಟಿ
ಇದರ ನಡುವೆ ಸಿಕ್ಕು ನಾನು ಆಗಿಹೆ ಪಡಪೋಸಿ
ಅಕ್ರಮ ಚುನಾವಣೆಯ ತಡೆಯಲೊಂದೆದಾರಿ
ಚುನಾವಣೆಯ ನಿಲ್ಲಿಸಿಬಿಟ್ರೆ ನಾನು ನಿಮ್ಗಭಾರಿ ||ಇದೇನು||

ಈ ಸಾಂಗ್ಗೆ ಸಿ‌ಎಂ ಕೊಮಾಸಾಮಿ ನೂ ಸಾಂಗ್ನಾಗೆ ಉತ್ತರ ಕೊಡ್ತಾರ್ರಿ. ಮೊದ್ಲೆ ಆವಯ್ಯ ಫೀಲಂ ಮೇಕರ್ರು. ಡೈರಕ್ಟರ್ ಎಸ್. ನಾರಾಯಣನೇ ಇನ್ ಡೈರಕ್ಟಾಗಿ ಸಾಂಗ್ ಬರ್ಕೊಟ್ಟವನಂತೆ ಅದು ಹಿಂಗಂದೇರಿ. ನಂಬಿದ್ರೆ ನಂಬ್ರಿ ಬಿಟ್ಟರೆ ಬಿಡ್ರಲಾ

ಕಲ್ಲಾದರೆ ನಾನು ಬಡವರ ಮನೆ
ತಳಪಾಯದಲಿ ಇರುವೆ
ಮರವಾದರೆ ನಾನು ರೈತರ ಮನೆ
ಒಲೆಯಲಿ ಧಗಧಗ ಉರಿವೆ
ಬೊಂಬಾದರೆ ನಾನು ನಿರ್ಗತಿಕರ
ಚಟ್ಟದಲಿ ಮಲಗಿರುವೆ|
ಗಳವಾದರೆ ನಾನು ದರಿದ್ರರ ಮನೆ
ಜಂತಿಯಲಿರುವೆ
ಏನಾದರೂ ಸೈ
ಶಿವಬಸಪ್ಪನ ಗೆಲುವಿಗೆ
ದುಡಿವೆ||  ಗೋಡ್ರ ಕಂದ| ಮಾತು ತಪ್ಪನೆಂದ|
ಶಿವಬಸಪ್ಪ ಕ್ಯಾಂಡಿಡೇಟ್| ಹೆಸರಿಗಷ್ಟೆ ಅಂದ|
ನಿಜಕ್ಕೂ ನಿಂತೋರು| ಅಪ್ಪ ನಾನೆ ಎಂದ || ಕಲ್ಲಾದರೆ||

ದಾಸನಕೊಪ್ಪಲು ಬೋಗಾದಿನಾಗೆ ಬೇರೋಯನ ಪ್ರಚಾರ ಮಾಡ್ಲಿಕ್ಕೆ ಬಿಡಂಗಿಲ್ಲರಿ ಅಂತ ಕೇಳಿದ್ರೆ. ಅದು ಜನತಾ ಜನಾರ್ಧನನ ನಿರ್ಧಾರ. ನಾನೇನು ಮಾಡ್ಲಿ ಅಂತಾನೆ ಕೊಮಾರ! ಸಂವಿಧಾನ ಏನ್ ಹೇಳ್ತದೆ ಗೊತ್ತದೇನ್ರಿ ಅಂದ್ರೆ. ಅದನ್ನ ಬರೋದನೆ ಕೇಳ್ರಿ, ಅಂತೋನೆ. ಇದರಿಂದ ಬೇಸತ್ತ ಅರ್ಧಸತ್ತೇ ಹೋದ ಸಮಾಜವಾದಿ ಪಕ್ಷದ ಕರುಣಾಕರನದು ಉಡಾಫೆ ಸಾಂಗು

ಯಾರೇ ಕೂಗಾಡಲಿ ಊರೇ ಹೋರಾಡಲಿ
ನನ್ನ ನೆಮದಿಗೆ ಭಂಗವಿಲ್ಲ ನಾನಂತೂ ಗೆಲ್ಲೋದಿಲ್ಲ
ಕಾಂಗ್ರೆಸ್ ಜೆಡಿ‌ಎಸ್ ಜೆಡಿಯು ಇಂಡಿಪೆಂಡೆಂಟು
ಯಾರು ನಿಂತರು ಗೆಲ್ಲೋನು ಒಬ್ಬನೆ ಎಂದರಿತು
ಸಾಗುವೆ ಅರೆ ಹೊಯ್ ಅರೆ ಹೊಯ್ ಟುರ್ರಾಽಽಽ

ನಮ್ಮ ಅಂಬರೀಸು ಇದನ್ನೆಲ್ಲಾ ನೋಡಿ ರಾಂಗ್ ಆಗಿ ಸಿನಿಮಾದಾಗೆ ಪಿಸ್ತೂಲು ತಕ್ಕಂಡು ವಿಲನ್‌ಗುಳ್ಗೆ ‘ಢಂ’ ಅನ್ನಿಸ್ದಂಗೆ ಸಿದ್ರಾಮು ಇರುದ್ದ ನಿಂತಿರೋ ಹೈವಾನನೆಲ್ಲಾ ಎತ್ತು ಬಿಡ್ತೀನ್ನಿ ಅನ್ಲಿಕತ್ತಾನೆ. ಈ ಡೈಲಾಗ್ ಕೇಳಿ ಗಾಣ್ ಗಾಬರಿಯಾದ ದಬರಿಧರ್ಮು ಖರ್ಗೆ, ಸಿದ್ದು, ಹಂಗ್ ಮಾಡ್ಬೇಡಲೆ ತಮಾ. ರೀಲ್ ಲೈಫ್ನಾಗೆ ಸತ್ತೋರು ಬದುಕಿ ಬರ್ತಾರೆ. ಆದ್ರೆ ರಿಯಲ್ ಲೈಫ್ನಾಗೆ ಹಂಗಾಗಕಿಲ್ಲ. ಮೈ ಸೆಂಟ್ರಲ್ ಬಾಯ್ ಅಂತ ಸಮಾಧಾನ ಮಾಡ್ಲಿಕತ್ತಾರಂತ್ರಿ. ನೆವರ್. ನಾನು ಬೋಗಾದಿ ದಾಸನಕೊಪ್ಪಲಿಗೆ ಕ್ಯಾನ್‌ವಾಸ್ಗೆ ಹೋಗೋನೆಯಾ. ಅದ್ಯಾರು ಈ ಮಂಡ್ಯ ಗಂಡನ್ನ ತಡಿತಾರೋ ಒಂದು ಕೈ ನೋಡೇಬಿಟ್ಟೇನು ಅಂತ ಗುರುಗುಟ್ಲಿಕತ್ತಾನೆ. ಸೆಂಟ್ರಲ್ ಲೀಡರ್ಸುಗುಳೆಲ್ಲಾ ಗೋಡನ್ನ ಪಕ್ಷದಿಂದ್ಲೇ ಉಚಾಟಿಸ್ತಿವಿ ಅಂತ ಧಂಕಿ ಕೊಟ್ಟರೂ ಗೋಡಂದು ಭಂಡನಗೆ. ಇದರ ಮಧ್ಯನಾಗೆ ಬಿಜೆಪಿ ವಾನರರು ಶೋಭಾಯಾತ್ರೆ ದತ್ತ ಜಯಂತಿ ಮಾಡಿ ಹೋಮ ಮಾಡೇ ಮಾಡ್ತೀವಿ ಅಂತ ಸರ್ಕಾರಾನಾ ಬ್ಲಾಕ್‌ಮೇಲ್ ಮಾಡ್ಲಿಕತ್ತಾರೆ. ನಾವು ಹೋಮ ಮಾಡಿ ಪೂರ್ಣಾಹುತಿ ಕೊಟ್ಟರೇ ಯಲಕ್ಷನ್ ಗೆಲ್ಲೋದು ಅಂತ ಸಿಟಿ ರವಿ ಅಂಬೋ ಬಚ್ಚೆ ಬೊಂಬ್ಡಿ ಹೊಡಿಲಿಕತ್ತಾನೆ. ಸೆಂಟ್ರಲ್‌ನಿಂದ ಅರೆ ಸೇನೆ ಪಡೆ ಬೇರೆ ಬಂದು ಅಟಕ್ಯಾಯಸಿಕೊಂಡದೆ. ಪೋಲಿಸ್ ಆಪೀಸಗಳ ಟ್ರಾನ್ಸ್‌ಫರ್‌ಗಳು ಬ್ಯಾರೆ ನೆಡಿಲಿಕತ್ತಾವೆ! ಸಿದ್ದು ಗೆದ್ನಪ್ಪಾ ಅಂದ್ರೆ ನೆಕ್ಸ್ಟ್ ಕೋಜಾ ಸರ್ಕಾರದ್ದೆ ಟ್ರಾನ್ಸ್‌ಫರ್. ಮಾಡೋರು ಯಾರು ಅಂತಿರಾ? ಇನ್ನು ಯಾರು ನೀವೇ. ಕರ್ನಾಟಕದ ಮತದಾರ ಪ್ರಭುಗಳು…ಅಲ್ಲವರಾ.
*****

(೧೪-೧೨-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಪ್ಪು – ಸರಿಗಳ ಮಧ್ಯೆ
Next post ಬೆಳ್ಳಿ ಹೊಳೆವ ಮೊದಲೇ…

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…