Home / ಕವನ / ಕವಿತೆ / ತಪ್ಪು – ಸರಿಗಳ ಮಧ್ಯೆ

ತಪ್ಪು – ಸರಿಗಳ ಮಧ್ಯೆ

ಬಿಳಿರಂಗೇ
ನಿನ್ನ ಸುಮ್ಮನೆ ಕಾಡುವ
ಕಪ್ಪು, ಕೆಂಪು, ಹಸಿರು, ಹಳದಿ, ನೀಲಿ
ಹುಚ್ಚುಚ್ಚು ಗಾಢ
ಬಣ್ಣಗಳದೇನು ತಪ್ಪು?
ಕನಸುಗಳೂ ಇರಲಿ
ವಾಸ್ತವವ ಒಪ್ಪು!

ತಪ್ಪಿರುವುದೆಲ್ಲಿ?
ಬಣ್ಣಗಳ ಅರ್ಥೈಸಲಾಗದ
ನಿನ್ನ ಹುಂಬತನದಲ್ಲೇ?
ತುಂಟ ಬಣ್ಣಗಳೇ
ಬೇಡೆನುವ ನಿರ್ಲಿಪ್ತತೆಯಲ್ಲೇ?
ಬಣ್ಣಗಳೊಳಗು ಅರ್ಥವಾದರೂ
ಅರ್ಥವಾಗದಂತೆ
ನಟಿಸುವ ನಿನ್ನ ಜಾಣತನದಲ್ಲೇ?

ಬಿಳಿರಂಗೇ
ಮಾತು – ನೋಟ
ಸ್ಪರ್ಶದೊತ್ತಡಗಳ ಗಾಢಬಣ್ಣಗಳ
ಕಾಟಕ್ಕೆ ಸೋತು
ಒಡ್ಡುಗಳನೊದ್ದು ಹರಿದುಬಿಡದೇ
ಒಳಗೇ ಬತ್ತುವ
ನಿನ್ನೆದೆಯ ಜೀವನದಿ

ದನಿ ಎತ್ತಿ ಕರೆಯೆದೆಯೂ
ಮೋಡಿಗೊಳಿಸುವ
ಆಪ್ತಗಾನಕ್ಕೆ ಸೋತು
ಗುಪ್ತಗಾಮಿನಿಯಾಗಿ
ನಿಂತಲ್ಲೇ ಏಕೆ ಧುಮ್ಮಿಕ್ಕುತ್ತದೆ?

ಬಿಳಿರಂಗೇ
ಗಾಢಬಣ್ಣಗಳ ಮೇಲೆ
ಸುಮ್ಮನೇತಕೆ ಮುನಿಸು?
ಏಕೆ ಬಣ್ಣಗಳಿಗೆ
ಬುದ್ಧಿ ಕಲಿಸುವ
ಹುಚ್ಚು ಮನಸು?
ಗೆದ್ದರೂ ಸರಿ ಸೋತರೂ ಸರಿ
ಬಣ್ಣಗಳ ಸುಮ್ಮನೆ ಕ್ಷಮಿಸು
ತಪ್ಪು ನಿನ್ನದೂ ಅಲ್ಲ
ಗಾಢ ಬಣ್ಣಗಳದೂ ಅಲ್ಲ
ತಪ್ಪು – ಸರಿಗಳ ಲೆಕ್ಕ ಇಲ್ಲಾರಿಗೂ ಸಿಕ್ಕಿಲ್ಲ
ತಕ್ಕಡಿ ತೂಗಿಯೇ ಇಲ್ಲ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...