Home / ಕವನ / ಕವಿತೆ / ತಾಯಿಯ ಒಲವು

ತಾಯಿಯ ಒಲವು

ಜಗದ ತೇಜಮಿದೆಂದು ಇದ ಸಲಹಬೇಕೆಂದು
ಜನನಿಯಾದಳು ತಾಯಿ ನೋವು ಹಲವನು ತಿಂದು
ಹೊಸ ಜೀವವವಳಿಂದ ಕಳೆಗೂಡಿ ಮೈದುಂಬಿ
ಧರೆಗಿಳಿದು ಬಂದಿಹುದು ಅವಳ ಕರುಣೆಯ ನಂಬಿ.

ಗೇಣುದ್ದ ದೇಹದಿಂ ಬಂದ ಶಿಶುವಂ ಹಾಡಿ
ಬೇನೆಗಳ ಲೆಕ್ಕಿಸದೆ ಬೆಳೆಸಿದಳು ಮೊಲೆಯೂಡಿ
ಕುಲಕೋಟಿಯನು ಕಾಯ್ವ ದಿನಮಣಿಯು ನೀನೆಂದು
ತಾಯಾಗಿ ನೋಡಿದಳು ತನಗೆ ಮಗು ಬೇಕೆಂದು.

ಶಿಶುವಿರುವ ತಾಯಿಯೇ ಧನ್ಯೆ ಲೋಕದೊಳೆಂದು
ಹಲವು ಜನ್ಮಾಂತರದ ಸುಕೃತಫಲ ಮಗುವೆಂದು
ಹೊಳೆ ಹೊಳೆವ ಬೆಳ್ಜಸದ ಕೊಡೆಯೊಳಗೆ ಬಾಳೆಂದು
ನಲವಿಂದ ಹರಸುವಳು ಇರದಿರದೆ ತಾ ಬಂದು.

ತಾಯ ಕಣ್ಣಿನ ಮುತ್ತು-ಹೃದಯ ಕಮಲದ ಮುತ್ತು
ಅವಳ ನಲ್ಮೆಯ ಸ್ವತ್ತು-ಸುಖದ ಸೊಬಗಿನ ಸ್ವತ್ತು
ಅಳುವ ಬಾಯಿಯ ಬಿತ್ತು-ಹವಳ ತುಟಿಗಳ ಮುತ್ತು
ತನ್ನೆದೆಯ ಸವಿಯಿತ್ತು-ನೋಡುವಳು ಮನಮಿತ್ತು.

ಈ ಶಕ್ತಿ ಈ ಬುದ್ದಿ ಈ ತನುವು ಈ ಮನವು
ಅವಳ ಹರಕೆಯ ಹಾಲು ಈ ಕೀರ್ತಿ ಸದ್ಗುಣವು
ಅವಳ ರಕ್ತದ ಪಾಲು, ತಾಯ್ನಿಂದ ನೆಲದೊಲವು
ಭಾರತ ತಪಸ್ವಿನಿಯ ಕಣ್ಣಂಗಳದ ನಲವು.

ನುಂಗುವಳು ತಪ್ಪುಗಳ – ತಿದ್ದುವಳು ತೋರುವಳು
ತೊದಲು ಮಾತುಗಳಿಂದ ಹಿಗ್ಗಿ ಹಿರಿದಾಗುವಳು
ಪೂಗಾಯಿ ಹಣ್ಣಾಗಿ ಸವಿಗೂಡಿತೆನ್ನುವಳು
ಸಿಂಗರಿಸಿ ಮನದಣಿಯೆ ಹಾಡುವಳು ನೋಡುವಳು.

ಈ ಹೂವು ನಿನದೆಂದು ದೇವರಡಿಯೊಳು ನಿಂದು
ಬೆಳಕಿತ್ತು ಬಾಳಿತ್ತು ಇದ ನಿತ್ಯ ನೋಡೆಂದು
ಈ ಜೀವ ಹಸನೆನಿಸಿ ಆತ್ಮದೊಳು ಮೂಡೆಂದು
ಒಂದು ಮನದಲಿ ಬೇಡಿ ಕಾಪಿಡುವಳೆಂದೆಂದು.

ಆರರಿವರೀ ಪ್ರೇಮ ನೇಮ ಧರ್ಮದ ಗುಟ್ಟು
ನಾರಿಯರ ಹೃದಯವೇ ತಾಯಿಯೊಲವಿನ ಮಟ್ಟು
ಒಂದು ಬೀಜವನಿಟ್ಟು ಬೆಳಸುವಳು ಉಸಿರಿಟ್ಟು
ಹಸುರನೆರಚುವಳೆಲ್ಲ ಲೋಕದೊಳು ಕೈಬಿಟ್ಟು.

ಹಲವು ದೇವರನೇಕೆ ಪೂಜಿಸುತ ಅಳಬೇಕು
ನಲಿವ ಮಾತೆಯ ನೋಡಿ ಅವಳ ಪೂಜಿಸಬೇಕು
ಸತ್ಯ ಭೂಮಿಯ ಪುತ್ರಿ ನಮ್ಮ ಬದುಕಿನ ಬೆಳಕು
ಪದಸರೋಜದೊಳೊಂದು ಹೂವನಿರಿಸಲಿಬೇಕು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...