ತಾಯಿಯ ಒಲವು

ಜಗದ ತೇಜಮಿದೆಂದು ಇದ ಸಲಹಬೇಕೆಂದು
ಜನನಿಯಾದಳು ತಾಯಿ ನೋವು ಹಲವನು ತಿಂದು
ಹೊಸ ಜೀವವವಳಿಂದ ಕಳೆಗೂಡಿ ಮೈದುಂಬಿ
ಧರೆಗಿಳಿದು ಬಂದಿಹುದು ಅವಳ ಕರುಣೆಯ ನಂಬಿ.

ಗೇಣುದ್ದ ದೇಹದಿಂ ಬಂದ ಶಿಶುವಂ ಹಾಡಿ
ಬೇನೆಗಳ ಲೆಕ್ಕಿಸದೆ ಬೆಳೆಸಿದಳು ಮೊಲೆಯೂಡಿ
ಕುಲಕೋಟಿಯನು ಕಾಯ್ವ ದಿನಮಣಿಯು ನೀನೆಂದು
ತಾಯಾಗಿ ನೋಡಿದಳು ತನಗೆ ಮಗು ಬೇಕೆಂದು.

ಶಿಶುವಿರುವ ತಾಯಿಯೇ ಧನ್ಯೆ ಲೋಕದೊಳೆಂದು
ಹಲವು ಜನ್ಮಾಂತರದ ಸುಕೃತಫಲ ಮಗುವೆಂದು
ಹೊಳೆ ಹೊಳೆವ ಬೆಳ್ಜಸದ ಕೊಡೆಯೊಳಗೆ ಬಾಳೆಂದು
ನಲವಿಂದ ಹರಸುವಳು ಇರದಿರದೆ ತಾ ಬಂದು.

ತಾಯ ಕಣ್ಣಿನ ಮುತ್ತು-ಹೃದಯ ಕಮಲದ ಮುತ್ತು
ಅವಳ ನಲ್ಮೆಯ ಸ್ವತ್ತು-ಸುಖದ ಸೊಬಗಿನ ಸ್ವತ್ತು
ಅಳುವ ಬಾಯಿಯ ಬಿತ್ತು-ಹವಳ ತುಟಿಗಳ ಮುತ್ತು
ತನ್ನೆದೆಯ ಸವಿಯಿತ್ತು-ನೋಡುವಳು ಮನಮಿತ್ತು.

ಈ ಶಕ್ತಿ ಈ ಬುದ್ದಿ ಈ ತನುವು ಈ ಮನವು
ಅವಳ ಹರಕೆಯ ಹಾಲು ಈ ಕೀರ್ತಿ ಸದ್ಗುಣವು
ಅವಳ ರಕ್ತದ ಪಾಲು, ತಾಯ್ನಿಂದ ನೆಲದೊಲವು
ಭಾರತ ತಪಸ್ವಿನಿಯ ಕಣ್ಣಂಗಳದ ನಲವು.

ನುಂಗುವಳು ತಪ್ಪುಗಳ – ತಿದ್ದುವಳು ತೋರುವಳು
ತೊದಲು ಮಾತುಗಳಿಂದ ಹಿಗ್ಗಿ ಹಿರಿದಾಗುವಳು
ಪೂಗಾಯಿ ಹಣ್ಣಾಗಿ ಸವಿಗೂಡಿತೆನ್ನುವಳು
ಸಿಂಗರಿಸಿ ಮನದಣಿಯೆ ಹಾಡುವಳು ನೋಡುವಳು.

ಈ ಹೂವು ನಿನದೆಂದು ದೇವರಡಿಯೊಳು ನಿಂದು
ಬೆಳಕಿತ್ತು ಬಾಳಿತ್ತು ಇದ ನಿತ್ಯ ನೋಡೆಂದು
ಈ ಜೀವ ಹಸನೆನಿಸಿ ಆತ್ಮದೊಳು ಮೂಡೆಂದು
ಒಂದು ಮನದಲಿ ಬೇಡಿ ಕಾಪಿಡುವಳೆಂದೆಂದು.

ಆರರಿವರೀ ಪ್ರೇಮ ನೇಮ ಧರ್ಮದ ಗುಟ್ಟು
ನಾರಿಯರ ಹೃದಯವೇ ತಾಯಿಯೊಲವಿನ ಮಟ್ಟು
ಒಂದು ಬೀಜವನಿಟ್ಟು ಬೆಳಸುವಳು ಉಸಿರಿಟ್ಟು
ಹಸುರನೆರಚುವಳೆಲ್ಲ ಲೋಕದೊಳು ಕೈಬಿಟ್ಟು.

ಹಲವು ದೇವರನೇಕೆ ಪೂಜಿಸುತ ಅಳಬೇಕು
ನಲಿವ ಮಾತೆಯ ನೋಡಿ ಅವಳ ಪೂಜಿಸಬೇಕು
ಸತ್ಯ ಭೂಮಿಯ ಪುತ್ರಿ ನಮ್ಮ ಬದುಕಿನ ಬೆಳಕು
ಪದಸರೋಜದೊಳೊಂದು ಹೂವನಿರಿಸಲಿಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಶಾಕಿರಣ
Next post ರಂಗನ ನಾಯಿ ಮರಿ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys