Home / ಕವನ / ಕವಿತೆ / ತಾಯಿಯ ಒಲವು

ತಾಯಿಯ ಒಲವು

ಜಗದ ತೇಜಮಿದೆಂದು ಇದ ಸಲಹಬೇಕೆಂದು
ಜನನಿಯಾದಳು ತಾಯಿ ನೋವು ಹಲವನು ತಿಂದು
ಹೊಸ ಜೀವವವಳಿಂದ ಕಳೆಗೂಡಿ ಮೈದುಂಬಿ
ಧರೆಗಿಳಿದು ಬಂದಿಹುದು ಅವಳ ಕರುಣೆಯ ನಂಬಿ.

ಗೇಣುದ್ದ ದೇಹದಿಂ ಬಂದ ಶಿಶುವಂ ಹಾಡಿ
ಬೇನೆಗಳ ಲೆಕ್ಕಿಸದೆ ಬೆಳೆಸಿದಳು ಮೊಲೆಯೂಡಿ
ಕುಲಕೋಟಿಯನು ಕಾಯ್ವ ದಿನಮಣಿಯು ನೀನೆಂದು
ತಾಯಾಗಿ ನೋಡಿದಳು ತನಗೆ ಮಗು ಬೇಕೆಂದು.

ಶಿಶುವಿರುವ ತಾಯಿಯೇ ಧನ್ಯೆ ಲೋಕದೊಳೆಂದು
ಹಲವು ಜನ್ಮಾಂತರದ ಸುಕೃತಫಲ ಮಗುವೆಂದು
ಹೊಳೆ ಹೊಳೆವ ಬೆಳ್ಜಸದ ಕೊಡೆಯೊಳಗೆ ಬಾಳೆಂದು
ನಲವಿಂದ ಹರಸುವಳು ಇರದಿರದೆ ತಾ ಬಂದು.

ತಾಯ ಕಣ್ಣಿನ ಮುತ್ತು-ಹೃದಯ ಕಮಲದ ಮುತ್ತು
ಅವಳ ನಲ್ಮೆಯ ಸ್ವತ್ತು-ಸುಖದ ಸೊಬಗಿನ ಸ್ವತ್ತು
ಅಳುವ ಬಾಯಿಯ ಬಿತ್ತು-ಹವಳ ತುಟಿಗಳ ಮುತ್ತು
ತನ್ನೆದೆಯ ಸವಿಯಿತ್ತು-ನೋಡುವಳು ಮನಮಿತ್ತು.

ಈ ಶಕ್ತಿ ಈ ಬುದ್ದಿ ಈ ತನುವು ಈ ಮನವು
ಅವಳ ಹರಕೆಯ ಹಾಲು ಈ ಕೀರ್ತಿ ಸದ್ಗುಣವು
ಅವಳ ರಕ್ತದ ಪಾಲು, ತಾಯ್ನಿಂದ ನೆಲದೊಲವು
ಭಾರತ ತಪಸ್ವಿನಿಯ ಕಣ್ಣಂಗಳದ ನಲವು.

ನುಂಗುವಳು ತಪ್ಪುಗಳ – ತಿದ್ದುವಳು ತೋರುವಳು
ತೊದಲು ಮಾತುಗಳಿಂದ ಹಿಗ್ಗಿ ಹಿರಿದಾಗುವಳು
ಪೂಗಾಯಿ ಹಣ್ಣಾಗಿ ಸವಿಗೂಡಿತೆನ್ನುವಳು
ಸಿಂಗರಿಸಿ ಮನದಣಿಯೆ ಹಾಡುವಳು ನೋಡುವಳು.

ಈ ಹೂವು ನಿನದೆಂದು ದೇವರಡಿಯೊಳು ನಿಂದು
ಬೆಳಕಿತ್ತು ಬಾಳಿತ್ತು ಇದ ನಿತ್ಯ ನೋಡೆಂದು
ಈ ಜೀವ ಹಸನೆನಿಸಿ ಆತ್ಮದೊಳು ಮೂಡೆಂದು
ಒಂದು ಮನದಲಿ ಬೇಡಿ ಕಾಪಿಡುವಳೆಂದೆಂದು.

ಆರರಿವರೀ ಪ್ರೇಮ ನೇಮ ಧರ್ಮದ ಗುಟ್ಟು
ನಾರಿಯರ ಹೃದಯವೇ ತಾಯಿಯೊಲವಿನ ಮಟ್ಟು
ಒಂದು ಬೀಜವನಿಟ್ಟು ಬೆಳಸುವಳು ಉಸಿರಿಟ್ಟು
ಹಸುರನೆರಚುವಳೆಲ್ಲ ಲೋಕದೊಳು ಕೈಬಿಟ್ಟು.

ಹಲವು ದೇವರನೇಕೆ ಪೂಜಿಸುತ ಅಳಬೇಕು
ನಲಿವ ಮಾತೆಯ ನೋಡಿ ಅವಳ ಪೂಜಿಸಬೇಕು
ಸತ್ಯ ಭೂಮಿಯ ಪುತ್ರಿ ನಮ್ಮ ಬದುಕಿನ ಬೆಳಕು
ಪದಸರೋಜದೊಳೊಂದು ಹೂವನಿರಿಸಲಿಬೇಕು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...