Home / ಕವನ / ಕವಿತೆ / ತಾಯಿಯ ಒಲವು

ತಾಯಿಯ ಒಲವು

ಜಗದ ತೇಜಮಿದೆಂದು ಇದ ಸಲಹಬೇಕೆಂದು
ಜನನಿಯಾದಳು ತಾಯಿ ನೋವು ಹಲವನು ತಿಂದು
ಹೊಸ ಜೀವವವಳಿಂದ ಕಳೆಗೂಡಿ ಮೈದುಂಬಿ
ಧರೆಗಿಳಿದು ಬಂದಿಹುದು ಅವಳ ಕರುಣೆಯ ನಂಬಿ.

ಗೇಣುದ್ದ ದೇಹದಿಂ ಬಂದ ಶಿಶುವಂ ಹಾಡಿ
ಬೇನೆಗಳ ಲೆಕ್ಕಿಸದೆ ಬೆಳೆಸಿದಳು ಮೊಲೆಯೂಡಿ
ಕುಲಕೋಟಿಯನು ಕಾಯ್ವ ದಿನಮಣಿಯು ನೀನೆಂದು
ತಾಯಾಗಿ ನೋಡಿದಳು ತನಗೆ ಮಗು ಬೇಕೆಂದು.

ಶಿಶುವಿರುವ ತಾಯಿಯೇ ಧನ್ಯೆ ಲೋಕದೊಳೆಂದು
ಹಲವು ಜನ್ಮಾಂತರದ ಸುಕೃತಫಲ ಮಗುವೆಂದು
ಹೊಳೆ ಹೊಳೆವ ಬೆಳ್ಜಸದ ಕೊಡೆಯೊಳಗೆ ಬಾಳೆಂದು
ನಲವಿಂದ ಹರಸುವಳು ಇರದಿರದೆ ತಾ ಬಂದು.

ತಾಯ ಕಣ್ಣಿನ ಮುತ್ತು-ಹೃದಯ ಕಮಲದ ಮುತ್ತು
ಅವಳ ನಲ್ಮೆಯ ಸ್ವತ್ತು-ಸುಖದ ಸೊಬಗಿನ ಸ್ವತ್ತು
ಅಳುವ ಬಾಯಿಯ ಬಿತ್ತು-ಹವಳ ತುಟಿಗಳ ಮುತ್ತು
ತನ್ನೆದೆಯ ಸವಿಯಿತ್ತು-ನೋಡುವಳು ಮನಮಿತ್ತು.

ಈ ಶಕ್ತಿ ಈ ಬುದ್ದಿ ಈ ತನುವು ಈ ಮನವು
ಅವಳ ಹರಕೆಯ ಹಾಲು ಈ ಕೀರ್ತಿ ಸದ್ಗುಣವು
ಅವಳ ರಕ್ತದ ಪಾಲು, ತಾಯ್ನಿಂದ ನೆಲದೊಲವು
ಭಾರತ ತಪಸ್ವಿನಿಯ ಕಣ್ಣಂಗಳದ ನಲವು.

ನುಂಗುವಳು ತಪ್ಪುಗಳ – ತಿದ್ದುವಳು ತೋರುವಳು
ತೊದಲು ಮಾತುಗಳಿಂದ ಹಿಗ್ಗಿ ಹಿರಿದಾಗುವಳು
ಪೂಗಾಯಿ ಹಣ್ಣಾಗಿ ಸವಿಗೂಡಿತೆನ್ನುವಳು
ಸಿಂಗರಿಸಿ ಮನದಣಿಯೆ ಹಾಡುವಳು ನೋಡುವಳು.

ಈ ಹೂವು ನಿನದೆಂದು ದೇವರಡಿಯೊಳು ನಿಂದು
ಬೆಳಕಿತ್ತು ಬಾಳಿತ್ತು ಇದ ನಿತ್ಯ ನೋಡೆಂದು
ಈ ಜೀವ ಹಸನೆನಿಸಿ ಆತ್ಮದೊಳು ಮೂಡೆಂದು
ಒಂದು ಮನದಲಿ ಬೇಡಿ ಕಾಪಿಡುವಳೆಂದೆಂದು.

ಆರರಿವರೀ ಪ್ರೇಮ ನೇಮ ಧರ್ಮದ ಗುಟ್ಟು
ನಾರಿಯರ ಹೃದಯವೇ ತಾಯಿಯೊಲವಿನ ಮಟ್ಟು
ಒಂದು ಬೀಜವನಿಟ್ಟು ಬೆಳಸುವಳು ಉಸಿರಿಟ್ಟು
ಹಸುರನೆರಚುವಳೆಲ್ಲ ಲೋಕದೊಳು ಕೈಬಿಟ್ಟು.

ಹಲವು ದೇವರನೇಕೆ ಪೂಜಿಸುತ ಅಳಬೇಕು
ನಲಿವ ಮಾತೆಯ ನೋಡಿ ಅವಳ ಪೂಜಿಸಬೇಕು
ಸತ್ಯ ಭೂಮಿಯ ಪುತ್ರಿ ನಮ್ಮ ಬದುಕಿನ ಬೆಳಕು
ಪದಸರೋಜದೊಳೊಂದು ಹೂವನಿರಿಸಲಿಬೇಕು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...