Home / ಕವನ / ಕವಿತೆ / ಬೇಡವೆನಗಿನ್ನೇನು!

ಬೇಡವೆನಗಿನ್ನೇನು!

ಮಾಲಕಂಸ

ಒಡೆಯ ನಿನ್ನಾಶೆಯೊಳೆ ತೊಡಕಿ ನಾ ಮಿಡುಕುತಿರೆ
ಹಡೆದಮ್ಮ ಕೂಗಿದಳು: “ಹುಡುಗಿ ಇಲ್ಲಿಗೆ ಬಾರೆ!”
ಜಡಭಾವದಿಂದ ಎಳೆದಿಡುತಲಡಿಗಳನು
ನಡೆದು ಅವಳೆಡೆಗೆ ಕೇಳಿದೆ: “ಕರೆದುದೇನು?”
ಕಿರುನಗೆಯ ನಗುತಮ್ಮ ಹೊರಮನೆಗೆ ಕರೆತಂದು
“ನಿರುಕಿಸೆಲ್ಲವ ನಿನ್ನದಿರುವುದಿದು” ಎಂದೊರೆದು
ಹರಡಿರುವ ಒಡವೆಗಳನೆಲ್ಲ ತೋರಿದಳು,
ಬೆರತು ನಾ ನಿಂತೆ ಬೆರಳಿರಿಸಿ ಬಾಯಿಯೊಳು.
ಬಣ್ಣ ಬಣ್ಣದ ಸೀರೆ ಹೊನ್ನ ಹೂ-ರವಿಕೆಗಳು!
ರನ್ನದೋಲೆಯು ಮುತ್ತು ಚಿನ್ನ ದಾಭರಣಗಳು!
ಕುಸುರು ಕುಸುರಿನ ಹವಳ ಬೆಸೆದ ಕಂಕಣವು!
ಹಸನು ಹೊಗರುಗುವ ಕಾಲ್‌ಕಡಗ ಪೈಜಣವು!
ಬಗೆಬಗೆಯ ಕೆಮ್ಮೆಣ್ಣೆ ಸೊಗಸೆನಿಪ ಪನ್ನೀರು!
ಮೃಗಸಾರ ಕರ್ಪೂರ ಅಗುರು-ಗಂಧದ ತಿಗುರು!
ಹಣ್ಣು ಹಂಪಲವು ಸವಿಯನ್ನ ದಿನಿಸುಗಳು!
ಕಣ್ಣ ಸೆಳೆಯುವ ಹಲವು ಬಣ್ಣದರಳುಗಳು!
ನೋಡಿದೆನದೆಲ್ಲವನು, ನೋಡಿಯೇ ನೋಡಿದೆನು,
ಕೂಡಿಸಿದೆನದರಲಿಯೆ ನೀಡಿರುವ ನೋಟವನು.
‘ಎಲ್ಲವೂ ನನ್ನದಿದು’ ಎಂಬುದನ್ನು ನೆನೆದು
ಉಲ್ಲಸವು ಆಟವಾಡಿತು ಮನದಿ ಕುಣಿದು.
ಹಿಂಡುಹಿಂಡಾಗಿ ಹೆಣ್ಣುಗಳಲ್ಲಿಗೈತಂದು
ಕೊಂಡಾಡತೊಡಗಿದರು ನನ್ನ ದೈವವನಂದು.
ಕೊರೆಯುವೆದೆನೋವೆಲ್ಲ ಹೇಗೋ ಮರೆಯಾಯ್ತು
ಗರುವಿಕೆಗೆ ಮೈ-ಮನವದಾಗ ಸೆರೆಯಾಯ್ತು.
ಉಡುಗೆಯುಡಬಯಸಿದೆನು, ತೊಡಿಗೆಯಿಡಬಯಸಿದೆನು,
ಮುಡಿಬಿಗಿದು ಬೆಡಗಿನೊಳು ಮುಡಿವೆನೆಂದೆನು ಅರಳು,
ತಂಪು ಬಾವನ್ನದಣ್ಪನು ಮೈಗೆ ತೀಡಿ
ಸೊಂಪಾಗಿರುವೆನೆಂದೆ ಸವಿಯುಣಿಸನೂಡಿ.
‘ಮುಂದೇನು? ಮುಂದೇನು?’ ಎಂದು ಯಾರೋ ಕೇಳಿ-
ದಂದ ಕಿವಿದೆರೆಗೈದಲೆದೆಯು ಜುಽಮ್ಮನು ತಾಳಿ
ತನುವೊಮ್ಮಿದೊಮ್ಮೆಯೇ ನವಿರಿಗೊಳಗಾಯ್ತು,
ಇನಿಯ ನಿನ್ನಯ ನೆನಹೆ ಮನತುಂಬಿ ಹೋಯ್ತು.
ಬಿಡುಬಿಡರಿತೆನು ನಿನ್ನ ಹುಡುಗಾಟವೆಲ್ಲವನು
ಹಡೆದಮ್ಮ ಹೇಳಿದಳು: ಒಡವೆಯಿವನೆಲ್ಲವನು
ನೀನೆ ನನಗಾಗಿಯೇ ಕಳುಹಿರುವೆಯಂತೆ!
ಏನು ಈ ಮೊಡಿಯಾಟವನೆಲ್ಲಿ ಕಲಿತೆ?
ತೊಡೆಯಲಿಕೆ ನೆನಹನೀನೊಡವೆಗಳ ಕಳುಹಿಸಿದೆ,
ಜಡಮತಿಯು ನಾನರಿವುಗೆಡುತನಕೆ ಬೆರಗಾದೆ.
ನಿನ್ನ ಮರಸುವ ಚಿನ್ನ ರನ್ನದೊಡಿಗೆಗಳು
ಮಣ್ಣುಗೂಡಲಿ ಹಾಳು ಬಣ್ಣದುಡುಗೆಗಳು!
ಬೇಡವೆನಗಿನ್ನೇನು! ಬೇಡವೆನಗಿನ್ನೇನು!
ಓಡಿ ಬಾ ದೊರೆಯೆ, ನೀನೇ ಬೇಕು ನೀನು!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...