Home / ಕವನ / ಕವಿತೆ / ಬೇಡವೆನಗಿನ್ನೇನು!

ಬೇಡವೆನಗಿನ್ನೇನು!

ಮಾಲಕಂಸ

ಒಡೆಯ ನಿನ್ನಾಶೆಯೊಳೆ ತೊಡಕಿ ನಾ ಮಿಡುಕುತಿರೆ
ಹಡೆದಮ್ಮ ಕೂಗಿದಳು: “ಹುಡುಗಿ ಇಲ್ಲಿಗೆ ಬಾರೆ!”
ಜಡಭಾವದಿಂದ ಎಳೆದಿಡುತಲಡಿಗಳನು
ನಡೆದು ಅವಳೆಡೆಗೆ ಕೇಳಿದೆ: “ಕರೆದುದೇನು?”
ಕಿರುನಗೆಯ ನಗುತಮ್ಮ ಹೊರಮನೆಗೆ ಕರೆತಂದು
“ನಿರುಕಿಸೆಲ್ಲವ ನಿನ್ನದಿರುವುದಿದು” ಎಂದೊರೆದು
ಹರಡಿರುವ ಒಡವೆಗಳನೆಲ್ಲ ತೋರಿದಳು,
ಬೆರತು ನಾ ನಿಂತೆ ಬೆರಳಿರಿಸಿ ಬಾಯಿಯೊಳು.
ಬಣ್ಣ ಬಣ್ಣದ ಸೀರೆ ಹೊನ್ನ ಹೂ-ರವಿಕೆಗಳು!
ರನ್ನದೋಲೆಯು ಮುತ್ತು ಚಿನ್ನ ದಾಭರಣಗಳು!
ಕುಸುರು ಕುಸುರಿನ ಹವಳ ಬೆಸೆದ ಕಂಕಣವು!
ಹಸನು ಹೊಗರುಗುವ ಕಾಲ್‌ಕಡಗ ಪೈಜಣವು!
ಬಗೆಬಗೆಯ ಕೆಮ್ಮೆಣ್ಣೆ ಸೊಗಸೆನಿಪ ಪನ್ನೀರು!
ಮೃಗಸಾರ ಕರ್ಪೂರ ಅಗುರು-ಗಂಧದ ತಿಗುರು!
ಹಣ್ಣು ಹಂಪಲವು ಸವಿಯನ್ನ ದಿನಿಸುಗಳು!
ಕಣ್ಣ ಸೆಳೆಯುವ ಹಲವು ಬಣ್ಣದರಳುಗಳು!
ನೋಡಿದೆನದೆಲ್ಲವನು, ನೋಡಿಯೇ ನೋಡಿದೆನು,
ಕೂಡಿಸಿದೆನದರಲಿಯೆ ನೀಡಿರುವ ನೋಟವನು.
‘ಎಲ್ಲವೂ ನನ್ನದಿದು’ ಎಂಬುದನ್ನು ನೆನೆದು
ಉಲ್ಲಸವು ಆಟವಾಡಿತು ಮನದಿ ಕುಣಿದು.
ಹಿಂಡುಹಿಂಡಾಗಿ ಹೆಣ್ಣುಗಳಲ್ಲಿಗೈತಂದು
ಕೊಂಡಾಡತೊಡಗಿದರು ನನ್ನ ದೈವವನಂದು.
ಕೊರೆಯುವೆದೆನೋವೆಲ್ಲ ಹೇಗೋ ಮರೆಯಾಯ್ತು
ಗರುವಿಕೆಗೆ ಮೈ-ಮನವದಾಗ ಸೆರೆಯಾಯ್ತು.
ಉಡುಗೆಯುಡಬಯಸಿದೆನು, ತೊಡಿಗೆಯಿಡಬಯಸಿದೆನು,
ಮುಡಿಬಿಗಿದು ಬೆಡಗಿನೊಳು ಮುಡಿವೆನೆಂದೆನು ಅರಳು,
ತಂಪು ಬಾವನ್ನದಣ್ಪನು ಮೈಗೆ ತೀಡಿ
ಸೊಂಪಾಗಿರುವೆನೆಂದೆ ಸವಿಯುಣಿಸನೂಡಿ.
‘ಮುಂದೇನು? ಮುಂದೇನು?’ ಎಂದು ಯಾರೋ ಕೇಳಿ-
ದಂದ ಕಿವಿದೆರೆಗೈದಲೆದೆಯು ಜುಽಮ್ಮನು ತಾಳಿ
ತನುವೊಮ್ಮಿದೊಮ್ಮೆಯೇ ನವಿರಿಗೊಳಗಾಯ್ತು,
ಇನಿಯ ನಿನ್ನಯ ನೆನಹೆ ಮನತುಂಬಿ ಹೋಯ್ತು.
ಬಿಡುಬಿಡರಿತೆನು ನಿನ್ನ ಹುಡುಗಾಟವೆಲ್ಲವನು
ಹಡೆದಮ್ಮ ಹೇಳಿದಳು: ಒಡವೆಯಿವನೆಲ್ಲವನು
ನೀನೆ ನನಗಾಗಿಯೇ ಕಳುಹಿರುವೆಯಂತೆ!
ಏನು ಈ ಮೊಡಿಯಾಟವನೆಲ್ಲಿ ಕಲಿತೆ?
ತೊಡೆಯಲಿಕೆ ನೆನಹನೀನೊಡವೆಗಳ ಕಳುಹಿಸಿದೆ,
ಜಡಮತಿಯು ನಾನರಿವುಗೆಡುತನಕೆ ಬೆರಗಾದೆ.
ನಿನ್ನ ಮರಸುವ ಚಿನ್ನ ರನ್ನದೊಡಿಗೆಗಳು
ಮಣ್ಣುಗೂಡಲಿ ಹಾಳು ಬಣ್ಣದುಡುಗೆಗಳು!
ಬೇಡವೆನಗಿನ್ನೇನು! ಬೇಡವೆನಗಿನ್ನೇನು!
ಓಡಿ ಬಾ ದೊರೆಯೆ, ನೀನೇ ಬೇಕು ನೀನು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...