Home / ಕವನ / ಕವಿತೆ / ಬೇಡವೆನಗಿನ್ನೇನು!

ಬೇಡವೆನಗಿನ್ನೇನು!

ಮಾಲಕಂಸ

ಒಡೆಯ ನಿನ್ನಾಶೆಯೊಳೆ ತೊಡಕಿ ನಾ ಮಿಡುಕುತಿರೆ
ಹಡೆದಮ್ಮ ಕೂಗಿದಳು: “ಹುಡುಗಿ ಇಲ್ಲಿಗೆ ಬಾರೆ!”
ಜಡಭಾವದಿಂದ ಎಳೆದಿಡುತಲಡಿಗಳನು
ನಡೆದು ಅವಳೆಡೆಗೆ ಕೇಳಿದೆ: “ಕರೆದುದೇನು?”
ಕಿರುನಗೆಯ ನಗುತಮ್ಮ ಹೊರಮನೆಗೆ ಕರೆತಂದು
“ನಿರುಕಿಸೆಲ್ಲವ ನಿನ್ನದಿರುವುದಿದು” ಎಂದೊರೆದು
ಹರಡಿರುವ ಒಡವೆಗಳನೆಲ್ಲ ತೋರಿದಳು,
ಬೆರತು ನಾ ನಿಂತೆ ಬೆರಳಿರಿಸಿ ಬಾಯಿಯೊಳು.
ಬಣ್ಣ ಬಣ್ಣದ ಸೀರೆ ಹೊನ್ನ ಹೂ-ರವಿಕೆಗಳು!
ರನ್ನದೋಲೆಯು ಮುತ್ತು ಚಿನ್ನ ದಾಭರಣಗಳು!
ಕುಸುರು ಕುಸುರಿನ ಹವಳ ಬೆಸೆದ ಕಂಕಣವು!
ಹಸನು ಹೊಗರುಗುವ ಕಾಲ್‌ಕಡಗ ಪೈಜಣವು!
ಬಗೆಬಗೆಯ ಕೆಮ್ಮೆಣ್ಣೆ ಸೊಗಸೆನಿಪ ಪನ್ನೀರು!
ಮೃಗಸಾರ ಕರ್ಪೂರ ಅಗುರು-ಗಂಧದ ತಿಗುರು!
ಹಣ್ಣು ಹಂಪಲವು ಸವಿಯನ್ನ ದಿನಿಸುಗಳು!
ಕಣ್ಣ ಸೆಳೆಯುವ ಹಲವು ಬಣ್ಣದರಳುಗಳು!
ನೋಡಿದೆನದೆಲ್ಲವನು, ನೋಡಿಯೇ ನೋಡಿದೆನು,
ಕೂಡಿಸಿದೆನದರಲಿಯೆ ನೀಡಿರುವ ನೋಟವನು.
‘ಎಲ್ಲವೂ ನನ್ನದಿದು’ ಎಂಬುದನ್ನು ನೆನೆದು
ಉಲ್ಲಸವು ಆಟವಾಡಿತು ಮನದಿ ಕುಣಿದು.
ಹಿಂಡುಹಿಂಡಾಗಿ ಹೆಣ್ಣುಗಳಲ್ಲಿಗೈತಂದು
ಕೊಂಡಾಡತೊಡಗಿದರು ನನ್ನ ದೈವವನಂದು.
ಕೊರೆಯುವೆದೆನೋವೆಲ್ಲ ಹೇಗೋ ಮರೆಯಾಯ್ತು
ಗರುವಿಕೆಗೆ ಮೈ-ಮನವದಾಗ ಸೆರೆಯಾಯ್ತು.
ಉಡುಗೆಯುಡಬಯಸಿದೆನು, ತೊಡಿಗೆಯಿಡಬಯಸಿದೆನು,
ಮುಡಿಬಿಗಿದು ಬೆಡಗಿನೊಳು ಮುಡಿವೆನೆಂದೆನು ಅರಳು,
ತಂಪು ಬಾವನ್ನದಣ್ಪನು ಮೈಗೆ ತೀಡಿ
ಸೊಂಪಾಗಿರುವೆನೆಂದೆ ಸವಿಯುಣಿಸನೂಡಿ.
‘ಮುಂದೇನು? ಮುಂದೇನು?’ ಎಂದು ಯಾರೋ ಕೇಳಿ-
ದಂದ ಕಿವಿದೆರೆಗೈದಲೆದೆಯು ಜುಽಮ್ಮನು ತಾಳಿ
ತನುವೊಮ್ಮಿದೊಮ್ಮೆಯೇ ನವಿರಿಗೊಳಗಾಯ್ತು,
ಇನಿಯ ನಿನ್ನಯ ನೆನಹೆ ಮನತುಂಬಿ ಹೋಯ್ತು.
ಬಿಡುಬಿಡರಿತೆನು ನಿನ್ನ ಹುಡುಗಾಟವೆಲ್ಲವನು
ಹಡೆದಮ್ಮ ಹೇಳಿದಳು: ಒಡವೆಯಿವನೆಲ್ಲವನು
ನೀನೆ ನನಗಾಗಿಯೇ ಕಳುಹಿರುವೆಯಂತೆ!
ಏನು ಈ ಮೊಡಿಯಾಟವನೆಲ್ಲಿ ಕಲಿತೆ?
ತೊಡೆಯಲಿಕೆ ನೆನಹನೀನೊಡವೆಗಳ ಕಳುಹಿಸಿದೆ,
ಜಡಮತಿಯು ನಾನರಿವುಗೆಡುತನಕೆ ಬೆರಗಾದೆ.
ನಿನ್ನ ಮರಸುವ ಚಿನ್ನ ರನ್ನದೊಡಿಗೆಗಳು
ಮಣ್ಣುಗೂಡಲಿ ಹಾಳು ಬಣ್ಣದುಡುಗೆಗಳು!
ಬೇಡವೆನಗಿನ್ನೇನು! ಬೇಡವೆನಗಿನ್ನೇನು!
ಓಡಿ ಬಾ ದೊರೆಯೆ, ನೀನೇ ಬೇಕು ನೀನು!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...