ಬೇಡವೆನಗಿನ್ನೇನು!

ಮಾಲಕಂಸ

ಒಡೆಯ ನಿನ್ನಾಶೆಯೊಳೆ ತೊಡಕಿ ನಾ ಮಿಡುಕುತಿರೆ
ಹಡೆದಮ್ಮ ಕೂಗಿದಳು: “ಹುಡುಗಿ ಇಲ್ಲಿಗೆ ಬಾರೆ!”
ಜಡಭಾವದಿಂದ ಎಳೆದಿಡುತಲಡಿಗಳನು
ನಡೆದು ಅವಳೆಡೆಗೆ ಕೇಳಿದೆ: “ಕರೆದುದೇನು?”
ಕಿರುನಗೆಯ ನಗುತಮ್ಮ ಹೊರಮನೆಗೆ ಕರೆತಂದು
“ನಿರುಕಿಸೆಲ್ಲವ ನಿನ್ನದಿರುವುದಿದು” ಎಂದೊರೆದು
ಹರಡಿರುವ ಒಡವೆಗಳನೆಲ್ಲ ತೋರಿದಳು,
ಬೆರತು ನಾ ನಿಂತೆ ಬೆರಳಿರಿಸಿ ಬಾಯಿಯೊಳು.
ಬಣ್ಣ ಬಣ್ಣದ ಸೀರೆ ಹೊನ್ನ ಹೂ-ರವಿಕೆಗಳು!
ರನ್ನದೋಲೆಯು ಮುತ್ತು ಚಿನ್ನ ದಾಭರಣಗಳು!
ಕುಸುರು ಕುಸುರಿನ ಹವಳ ಬೆಸೆದ ಕಂಕಣವು!
ಹಸನು ಹೊಗರುಗುವ ಕಾಲ್‌ಕಡಗ ಪೈಜಣವು!
ಬಗೆಬಗೆಯ ಕೆಮ್ಮೆಣ್ಣೆ ಸೊಗಸೆನಿಪ ಪನ್ನೀರು!
ಮೃಗಸಾರ ಕರ್ಪೂರ ಅಗುರು-ಗಂಧದ ತಿಗುರು!
ಹಣ್ಣು ಹಂಪಲವು ಸವಿಯನ್ನ ದಿನಿಸುಗಳು!
ಕಣ್ಣ ಸೆಳೆಯುವ ಹಲವು ಬಣ್ಣದರಳುಗಳು!
ನೋಡಿದೆನದೆಲ್ಲವನು, ನೋಡಿಯೇ ನೋಡಿದೆನು,
ಕೂಡಿಸಿದೆನದರಲಿಯೆ ನೀಡಿರುವ ನೋಟವನು.
‘ಎಲ್ಲವೂ ನನ್ನದಿದು’ ಎಂಬುದನ್ನು ನೆನೆದು
ಉಲ್ಲಸವು ಆಟವಾಡಿತು ಮನದಿ ಕುಣಿದು.
ಹಿಂಡುಹಿಂಡಾಗಿ ಹೆಣ್ಣುಗಳಲ್ಲಿಗೈತಂದು
ಕೊಂಡಾಡತೊಡಗಿದರು ನನ್ನ ದೈವವನಂದು.
ಕೊರೆಯುವೆದೆನೋವೆಲ್ಲ ಹೇಗೋ ಮರೆಯಾಯ್ತು
ಗರುವಿಕೆಗೆ ಮೈ-ಮನವದಾಗ ಸೆರೆಯಾಯ್ತು.
ಉಡುಗೆಯುಡಬಯಸಿದೆನು, ತೊಡಿಗೆಯಿಡಬಯಸಿದೆನು,
ಮುಡಿಬಿಗಿದು ಬೆಡಗಿನೊಳು ಮುಡಿವೆನೆಂದೆನು ಅರಳು,
ತಂಪು ಬಾವನ್ನದಣ್ಪನು ಮೈಗೆ ತೀಡಿ
ಸೊಂಪಾಗಿರುವೆನೆಂದೆ ಸವಿಯುಣಿಸನೂಡಿ.
‘ಮುಂದೇನು? ಮುಂದೇನು?’ ಎಂದು ಯಾರೋ ಕೇಳಿ-
ದಂದ ಕಿವಿದೆರೆಗೈದಲೆದೆಯು ಜುಽಮ್ಮನು ತಾಳಿ
ತನುವೊಮ್ಮಿದೊಮ್ಮೆಯೇ ನವಿರಿಗೊಳಗಾಯ್ತು,
ಇನಿಯ ನಿನ್ನಯ ನೆನಹೆ ಮನತುಂಬಿ ಹೋಯ್ತು.
ಬಿಡುಬಿಡರಿತೆನು ನಿನ್ನ ಹುಡುಗಾಟವೆಲ್ಲವನು
ಹಡೆದಮ್ಮ ಹೇಳಿದಳು: ಒಡವೆಯಿವನೆಲ್ಲವನು
ನೀನೆ ನನಗಾಗಿಯೇ ಕಳುಹಿರುವೆಯಂತೆ!
ಏನು ಈ ಮೊಡಿಯಾಟವನೆಲ್ಲಿ ಕಲಿತೆ?
ತೊಡೆಯಲಿಕೆ ನೆನಹನೀನೊಡವೆಗಳ ಕಳುಹಿಸಿದೆ,
ಜಡಮತಿಯು ನಾನರಿವುಗೆಡುತನಕೆ ಬೆರಗಾದೆ.
ನಿನ್ನ ಮರಸುವ ಚಿನ್ನ ರನ್ನದೊಡಿಗೆಗಳು
ಮಣ್ಣುಗೂಡಲಿ ಹಾಳು ಬಣ್ಣದುಡುಗೆಗಳು!
ಬೇಡವೆನಗಿನ್ನೇನು! ಬೇಡವೆನಗಿನ್ನೇನು!
ಓಡಿ ಬಾ ದೊರೆಯೆ, ನೀನೇ ಬೇಕು ನೀನು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ನಿನಗೆ ಋಣಿಯಾಗಿ
Next post ಅದು ಅದುವೆ ಯುಗಾದಿ

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…