Home / ಕವನ / ಕವಿತೆ / ವಾಸ್ತು ಗಿಡ

ವಾಸ್ತು ಗಿಡ


ಅವರ ಬಂಗಲೆಯ ಹಜಾರದ
ನೀರ ಬೋಗುಣಿಯಲಿ ನೆಟ್ಟ
ಅಲ್ಲಲ್ಲ… ಇಟ್ಟ
ಅದು ವಾಸ್ತು ಗಿಡವಂತೆ.
ನಿಂತಿದೆ ತಾನೇ,
ದಯನೀಯವಾಗಿ.
ಅದರ ಮೊಗದ ತುಂಬಾ ದುಗುಡ
ಈಗಲೋ ಆಗಲೋ
ಕಟ್ಟೆ ಒಡೆವಂತೆ.

ದಿಕ್ಕೆಟ್ಟು ನಿಂತ
ಜೀವಂತ ಗಿಡವೂ
ಒಂದು ಬೆದರುಬೊಂಬೆ!
ಅವರ ಷೋಕೇಸಿನ
ನಿರ್ಗಂಧ ಪ್ಲಾಸ್ಟಿಕ್‌ ಹೂವು
ನಿಸ್ತೇಜ ಫಲಕಗಳ ಜೊತೆಗೆ.

‘ಈ ಗಿಡಕ್ಕೆ
ಮಣ್ಣು ಬೇಡ
ಬಿಸಿಲೂ ಬೇಡ
ಗೊಬ್ಬರವೂ ಹಾಕಬೇಕಿಲ್ಲ
ಕಳೆಯೂ ಬೆಳೆಯುವುದಿಲ್ಲ
ಕೊಳೆಯುವುದೂ ಇಲ್ಲ.
ಪಾತಿ ಮಾಡಬೇಕಿಲ್ಲ.
ಮಣ್ಣು ಹದ ಮಾಡುವಂತಿಲ್ಲ
ಕ್ರಿಮಿ ಕೀಟದ ಸೊಂಕಿಲ್ಲ
ಇರುತ್ತದೆ ಇದ್ದಂತೆ ಹೀಗೇ……
ಅಂಟಿಯೂ ಅಂಟದಂತೆ
ಆದರೂ ಮನೆಗೇ ಅದೃಷ್ಟ’

ಅವರ ಹೆಮ್ಮೆಯ ವ್ಯಾಖ್ಯಾನ.

ಅಲ್ಲಿ ಇದ್ದಷ್ಟೂ ಹೊತ್ತು
ವಾಸ್ತುಗಿಡದ ನಿಟ್ಟುಸಿರು
ಬಿಗಿದು ಕಟ್ಟಿತ್ತು ನನ್ನುಸಿರು.

ವಾಪಸ್ಸು ಹೊರಟವಳಿಗೆ
ಅವರಿಂದ ಅದೇ ಗಿಡದ
ಒಂದು ಟಿಸಿಲು ಉಡುಗೊರೆ

‘ನೀರಲ್ಲಿ ಬಿಸಾಕಿದರೂ ಸಾಕು
ಬೇರೇನೂ ಬೇಕಿಲ್ಲ
ಅನಾಯಾಸ ಅದೃಷ್ಟ’

‘ಇದ್ದಂತೆಯೇ ಇರಲು!’

ನನ್ನ ಪಿಸುಗು
ಅವರ ತಲುಪಲೇಯಿಲ್ಲ.

ಹೊರಗೆ ಬಂದದ್ದೇ
ಬಟ್ಟಂಬಯಲಿನಲಿ
ಮಣ್ಣು ಕೆತ್ತಿ ಪಾತಿ ಮಾಡಿ
ಬೇರನೂರಿ ಗಿಡನೆಟ್ಟೆ
ನಾನೇ ಮಣ್ಣಿನಲಿ
ಊರಿಕೊಂಡಂತೆ.

ಕ್ಷಣಾರ್ಧದಲ್ಲಿ
ಜಡ ಗಿಡಕ್ಕೆ ಜೀವ ಮೂಡಿ
ನೂರಾರು ಕೊಂಬೆ
ಸಾವಿರಾರು ಎಲೆ ಚಿಗುರೊಡೆದು…

ನಗು
ಈಗಷ್ಟೇ…
ವಾಸ್ತು ಅಳೆಯಲು ಹೊರಟಿದೆ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...