ವಾಸ್ತು ಗಿಡ


ಅವರ ಬಂಗಲೆಯ ಹಜಾರದ
ನೀರ ಬೋಗುಣಿಯಲಿ ನೆಟ್ಟ
ಅಲ್ಲಲ್ಲ… ಇಟ್ಟ
ಅದು ವಾಸ್ತು ಗಿಡವಂತೆ.
ನಿಂತಿದೆ ತಾನೇ,
ದಯನೀಯವಾಗಿ.
ಅದರ ಮೊಗದ ತುಂಬಾ ದುಗುಡ
ಈಗಲೋ ಆಗಲೋ
ಕಟ್ಟೆ ಒಡೆವಂತೆ.

ದಿಕ್ಕೆಟ್ಟು ನಿಂತ
ಜೀವಂತ ಗಿಡವೂ
ಒಂದು ಬೆದರುಬೊಂಬೆ!
ಅವರ ಷೋಕೇಸಿನ
ನಿರ್ಗಂಧ ಪ್ಲಾಸ್ಟಿಕ್‌ ಹೂವು
ನಿಸ್ತೇಜ ಫಲಕಗಳ ಜೊತೆಗೆ.

‘ಈ ಗಿಡಕ್ಕೆ
ಮಣ್ಣು ಬೇಡ
ಬಿಸಿಲೂ ಬೇಡ
ಗೊಬ್ಬರವೂ ಹಾಕಬೇಕಿಲ್ಲ
ಕಳೆಯೂ ಬೆಳೆಯುವುದಿಲ್ಲ
ಕೊಳೆಯುವುದೂ ಇಲ್ಲ.
ಪಾತಿ ಮಾಡಬೇಕಿಲ್ಲ.
ಮಣ್ಣು ಹದ ಮಾಡುವಂತಿಲ್ಲ
ಕ್ರಿಮಿ ಕೀಟದ ಸೊಂಕಿಲ್ಲ
ಇರುತ್ತದೆ ಇದ್ದಂತೆ ಹೀಗೇ……
ಅಂಟಿಯೂ ಅಂಟದಂತೆ
ಆದರೂ ಮನೆಗೇ ಅದೃಷ್ಟ’

ಅವರ ಹೆಮ್ಮೆಯ ವ್ಯಾಖ್ಯಾನ.

ಅಲ್ಲಿ ಇದ್ದಷ್ಟೂ ಹೊತ್ತು
ವಾಸ್ತುಗಿಡದ ನಿಟ್ಟುಸಿರು
ಬಿಗಿದು ಕಟ್ಟಿತ್ತು ನನ್ನುಸಿರು.

ವಾಪಸ್ಸು ಹೊರಟವಳಿಗೆ
ಅವರಿಂದ ಅದೇ ಗಿಡದ
ಒಂದು ಟಿಸಿಲು ಉಡುಗೊರೆ

‘ನೀರಲ್ಲಿ ಬಿಸಾಕಿದರೂ ಸಾಕು
ಬೇರೇನೂ ಬೇಕಿಲ್ಲ
ಅನಾಯಾಸ ಅದೃಷ್ಟ’

‘ಇದ್ದಂತೆಯೇ ಇರಲು!’

ನನ್ನ ಪಿಸುಗು
ಅವರ ತಲುಪಲೇಯಿಲ್ಲ.

ಹೊರಗೆ ಬಂದದ್ದೇ
ಬಟ್ಟಂಬಯಲಿನಲಿ
ಮಣ್ಣು ಕೆತ್ತಿ ಪಾತಿ ಮಾಡಿ
ಬೇರನೂರಿ ಗಿಡನೆಟ್ಟೆ
ನಾನೇ ಮಣ್ಣಿನಲಿ
ಊರಿಕೊಂಡಂತೆ.

ಕ್ಷಣಾರ್ಧದಲ್ಲಿ
ಜಡ ಗಿಡಕ್ಕೆ ಜೀವ ಮೂಡಿ
ನೂರಾರು ಕೊಂಬೆ
ಸಾವಿರಾರು ಎಲೆ ಚಿಗುರೊಡೆದು…

ನಗು
ಈಗಷ್ಟೇ…
ವಾಸ್ತು ಅಳೆಯಲು ಹೊರಟಿದೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಳಿಗಿರಿಯವರ ವರಸೆಗಳು
Next post ಮನ ಮಂಥನ ಸಿರಿ – ೧೨

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಅನಾವರಣ

    "ಹಲೋ-ಸ್ವೀಟಿ-ಗುಡ್ ಮಾರ್‍ನಿಂಗ್-" ಡಾಕ್ಟರ್ ವಿಜಯಾ ಪ್ರೊಫೆಸರ್‍ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್‍ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…