Home / ಕವನ / ಕವಿತೆ / ಎಲ್ಲಿದ್ದಾನೋ ಹಾಳಾದವನು

ಎಲ್ಲಿದ್ದಾನೋ ಹಾಳಾದವನು

ಆ ವಿಳಾಸವಿಲ್ಲದ ಅಲೆಮಾರಿ
ಎಂದಿನಂತೆ ಜನಜಂಗುಳಿಯ
ಮಧ್ಯೆ ಸಿಕ್ಕ.
ಅವನು ಸಿಗುವುದು ಅಲ್ಲೇ
ಆ ಏಕಾಂತದಲ್ಲೇ.

ಅದೇಕೋ ಇಂದು
ನನ್ನ ಕಂಡವನೇ
ತನ್ನ ಜೋಳಿಗೆಗೆ
ಕೈ ಹಾಕಿ ತಡಕಿ
ಲಾಲಿಪಪ್ಪಿನ ಕಡ್ಡಿಯೊಂದನ್ನು
ತೆಗೆದು ಕೈಯಲ್ಲಿ ಹಿಡಿದು
ಮುಂಚಾಚಿ, ನಕ್ಕ.

ಎಂದೂ ಭಿಕ್ಷಕ್ಕೆ ಕೈಯೊಡ್ಡದವಳು
ಮೋಡಿಗೊಳಗಾದವಳಂತೆ ಕಸಿದು
ಬಗಲ ಚೀಲಕ್ಕೆ ಎಸೆದು
ಬಿರಬಿರನೆ ನಡೆದೆ.
ಇನ್ನೂ ಕೊಳ್ಳುವುದಕ್ಕಿತ್ತು
ತೆಂಗು, ತರಕಾರಿ, ಸಂಬಾರ……

ಕೆಲಸ ಬೆಟ್ಟದಷ್ಟಿತ್ತು.
ಆಗಲೇ ತಡವಾಗಿತ್ತು
ಗಂಡ ಮಕ್ಕಳೂ
ಮನೆಯಲ್ಲಿ ಕಾಯುತ್ತಿರಬಹುದು…..

ಮನೆಗೆ ಬಂದು
ಚೀಲ ಸುರುವಿ
ಎಲ್ಲ ವಿಂಗಡಿಸಿಡುವಾಗ
ಹಸಿಮೆಣಸಿನ ಮರೆಯಲ್ಲಿ
ಮೆಲ್ಲನಿಣುಕುತ್ತಿತ್ತು ಲಾಲಿಪಪ್ಪಿನ ಕಡ್ಡಿ!

ಮೇಲಿನದೆಲ್ಲಾ ಹೇರಿಕೆ
ಸರಸರನೆ ಸರಿಸಿ
ಕಡ್ಡಿಯೆಡೆಗೇ ಕೈ ಹೋಗುವುದೇ?

ತಿರುಗಿಸಿ ಮುರುಗಿಸಿ ನೋಡುತ್ತಾ
ಮುಟ್ಟುತ್ತಾ ಮೂಸುತ್ತಾ
ಒಳಗಿನ ಮಗುವೆದ್ದು
ಬೆರಗಿನಲಿ ಆಟವಾಡುತ್ತಿರಲು
ನವಿಲು ಬಣ್ಣದ ಸಿಪ್ಪೆ ಬಿಡಿಸಿದೆ

ಗಾಢ ಗುಲಾಬಿ ಬಣ್ಣದ ಗೋಲಿಗೆ
ಕಡ್ಡಿಸಿಕ್ಕಿಸಿದ್ದಾರೆ ಯಾರೋ
ನೋಡಿದೊಡನೆ ಚಪ್ಪರಿಸಬೇಕೆನಿಸುವ
ಉಮೇದು ಹುಟ್ಟಿಸುವ
ಸುವಾಸನೆ ಮೆತ್ತಿದ್ದಾರೆ ಯಾರೋ
ತಡೆಯಲಾಗದೇ ಬಾಯಿಗಿಟ್ಟುಕೊಂಡೆ
ಲಾಲಿಪಪ್ಪಿನೊಂದಿಗೇ
ಕರಗುತ್ತಾ ಹೋದೆ.

ಆಗಲೇ ಅವನಿಗೊಂದು
ವಂದನೆ ಹೇಳಲೂ ಮರೆತೆನಲ್ಲಾ!

ಛೇ! ಎಲ್ಲಿದ್ದಾನೋ ಹಾಳಾದವನು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...