Home / ಕವನ / ಕವಿತೆ / ಎಲ್ಲಿದ್ದಾನೋ ಹಾಳಾದವನು

ಎಲ್ಲಿದ್ದಾನೋ ಹಾಳಾದವನು

ಆ ವಿಳಾಸವಿಲ್ಲದ ಅಲೆಮಾರಿ
ಎಂದಿನಂತೆ ಜನಜಂಗುಳಿಯ
ಮಧ್ಯೆ ಸಿಕ್ಕ.
ಅವನು ಸಿಗುವುದು ಅಲ್ಲೇ
ಆ ಏಕಾಂತದಲ್ಲೇ.

ಅದೇಕೋ ಇಂದು
ನನ್ನ ಕಂಡವನೇ
ತನ್ನ ಜೋಳಿಗೆಗೆ
ಕೈ ಹಾಕಿ ತಡಕಿ
ಲಾಲಿಪಪ್ಪಿನ ಕಡ್ಡಿಯೊಂದನ್ನು
ತೆಗೆದು ಕೈಯಲ್ಲಿ ಹಿಡಿದು
ಮುಂಚಾಚಿ, ನಕ್ಕ.

ಎಂದೂ ಭಿಕ್ಷಕ್ಕೆ ಕೈಯೊಡ್ಡದವಳು
ಮೋಡಿಗೊಳಗಾದವಳಂತೆ ಕಸಿದು
ಬಗಲ ಚೀಲಕ್ಕೆ ಎಸೆದು
ಬಿರಬಿರನೆ ನಡೆದೆ.
ಇನ್ನೂ ಕೊಳ್ಳುವುದಕ್ಕಿತ್ತು
ತೆಂಗು, ತರಕಾರಿ, ಸಂಬಾರ……

ಕೆಲಸ ಬೆಟ್ಟದಷ್ಟಿತ್ತು.
ಆಗಲೇ ತಡವಾಗಿತ್ತು
ಗಂಡ ಮಕ್ಕಳೂ
ಮನೆಯಲ್ಲಿ ಕಾಯುತ್ತಿರಬಹುದು…..

ಮನೆಗೆ ಬಂದು
ಚೀಲ ಸುರುವಿ
ಎಲ್ಲ ವಿಂಗಡಿಸಿಡುವಾಗ
ಹಸಿಮೆಣಸಿನ ಮರೆಯಲ್ಲಿ
ಮೆಲ್ಲನಿಣುಕುತ್ತಿತ್ತು ಲಾಲಿಪಪ್ಪಿನ ಕಡ್ಡಿ!

ಮೇಲಿನದೆಲ್ಲಾ ಹೇರಿಕೆ
ಸರಸರನೆ ಸರಿಸಿ
ಕಡ್ಡಿಯೆಡೆಗೇ ಕೈ ಹೋಗುವುದೇ?

ತಿರುಗಿಸಿ ಮುರುಗಿಸಿ ನೋಡುತ್ತಾ
ಮುಟ್ಟುತ್ತಾ ಮೂಸುತ್ತಾ
ಒಳಗಿನ ಮಗುವೆದ್ದು
ಬೆರಗಿನಲಿ ಆಟವಾಡುತ್ತಿರಲು
ನವಿಲು ಬಣ್ಣದ ಸಿಪ್ಪೆ ಬಿಡಿಸಿದೆ

ಗಾಢ ಗುಲಾಬಿ ಬಣ್ಣದ ಗೋಲಿಗೆ
ಕಡ್ಡಿಸಿಕ್ಕಿಸಿದ್ದಾರೆ ಯಾರೋ
ನೋಡಿದೊಡನೆ ಚಪ್ಪರಿಸಬೇಕೆನಿಸುವ
ಉಮೇದು ಹುಟ್ಟಿಸುವ
ಸುವಾಸನೆ ಮೆತ್ತಿದ್ದಾರೆ ಯಾರೋ
ತಡೆಯಲಾಗದೇ ಬಾಯಿಗಿಟ್ಟುಕೊಂಡೆ
ಲಾಲಿಪಪ್ಪಿನೊಂದಿಗೇ
ಕರಗುತ್ತಾ ಹೋದೆ.

ಆಗಲೇ ಅವನಿಗೊಂದು
ವಂದನೆ ಹೇಳಲೂ ಮರೆತೆನಲ್ಲಾ!

ಛೇ! ಎಲ್ಲಿದ್ದಾನೋ ಹಾಳಾದವನು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...