Home / ಕವನ / ಕವಿತೆ / ಎಲ್ಲಿದ್ದಾನೋ ಹಾಳಾದವನು

ಎಲ್ಲಿದ್ದಾನೋ ಹಾಳಾದವನು

ಆ ವಿಳಾಸವಿಲ್ಲದ ಅಲೆಮಾರಿ
ಎಂದಿನಂತೆ ಜನಜಂಗುಳಿಯ
ಮಧ್ಯೆ ಸಿಕ್ಕ.
ಅವನು ಸಿಗುವುದು ಅಲ್ಲೇ
ಆ ಏಕಾಂತದಲ್ಲೇ.

ಅದೇಕೋ ಇಂದು
ನನ್ನ ಕಂಡವನೇ
ತನ್ನ ಜೋಳಿಗೆಗೆ
ಕೈ ಹಾಕಿ ತಡಕಿ
ಲಾಲಿಪಪ್ಪಿನ ಕಡ್ಡಿಯೊಂದನ್ನು
ತೆಗೆದು ಕೈಯಲ್ಲಿ ಹಿಡಿದು
ಮುಂಚಾಚಿ, ನಕ್ಕ.

ಎಂದೂ ಭಿಕ್ಷಕ್ಕೆ ಕೈಯೊಡ್ಡದವಳು
ಮೋಡಿಗೊಳಗಾದವಳಂತೆ ಕಸಿದು
ಬಗಲ ಚೀಲಕ್ಕೆ ಎಸೆದು
ಬಿರಬಿರನೆ ನಡೆದೆ.
ಇನ್ನೂ ಕೊಳ್ಳುವುದಕ್ಕಿತ್ತು
ತೆಂಗು, ತರಕಾರಿ, ಸಂಬಾರ……

ಕೆಲಸ ಬೆಟ್ಟದಷ್ಟಿತ್ತು.
ಆಗಲೇ ತಡವಾಗಿತ್ತು
ಗಂಡ ಮಕ್ಕಳೂ
ಮನೆಯಲ್ಲಿ ಕಾಯುತ್ತಿರಬಹುದು…..

ಮನೆಗೆ ಬಂದು
ಚೀಲ ಸುರುವಿ
ಎಲ್ಲ ವಿಂಗಡಿಸಿಡುವಾಗ
ಹಸಿಮೆಣಸಿನ ಮರೆಯಲ್ಲಿ
ಮೆಲ್ಲನಿಣುಕುತ್ತಿತ್ತು ಲಾಲಿಪಪ್ಪಿನ ಕಡ್ಡಿ!

ಮೇಲಿನದೆಲ್ಲಾ ಹೇರಿಕೆ
ಸರಸರನೆ ಸರಿಸಿ
ಕಡ್ಡಿಯೆಡೆಗೇ ಕೈ ಹೋಗುವುದೇ?

ತಿರುಗಿಸಿ ಮುರುಗಿಸಿ ನೋಡುತ್ತಾ
ಮುಟ್ಟುತ್ತಾ ಮೂಸುತ್ತಾ
ಒಳಗಿನ ಮಗುವೆದ್ದು
ಬೆರಗಿನಲಿ ಆಟವಾಡುತ್ತಿರಲು
ನವಿಲು ಬಣ್ಣದ ಸಿಪ್ಪೆ ಬಿಡಿಸಿದೆ

ಗಾಢ ಗುಲಾಬಿ ಬಣ್ಣದ ಗೋಲಿಗೆ
ಕಡ್ಡಿಸಿಕ್ಕಿಸಿದ್ದಾರೆ ಯಾರೋ
ನೋಡಿದೊಡನೆ ಚಪ್ಪರಿಸಬೇಕೆನಿಸುವ
ಉಮೇದು ಹುಟ್ಟಿಸುವ
ಸುವಾಸನೆ ಮೆತ್ತಿದ್ದಾರೆ ಯಾರೋ
ತಡೆಯಲಾಗದೇ ಬಾಯಿಗಿಟ್ಟುಕೊಂಡೆ
ಲಾಲಿಪಪ್ಪಿನೊಂದಿಗೇ
ಕರಗುತ್ತಾ ಹೋದೆ.

ಆಗಲೇ ಅವನಿಗೊಂದು
ವಂದನೆ ಹೇಳಲೂ ಮರೆತೆನಲ್ಲಾ!

ಛೇ! ಎಲ್ಲಿದ್ದಾನೋ ಹಾಳಾದವನು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...