ವಚನ ವಿಚಾರ – ಆಸೆ ರೋಷ

ವಚನ ವಿಚಾರ – ಆಸೆ ರೋಷ

ಆಸೆಯೆಂಬ ಕೂಸನೆತ್ತಲು
ರೋಷವೆಂಬ ತಾಯಿ ಮುಂದೆ ಬಂದಿಪ್ಪಳು
ನೋಡಾ
ಇಂತೆರಡಿಲ್ಲದೆ ಕೂಸನೆತ್ತಬಲ್ಲಡೆ
ಆತನೆ ಲಿಂಗೈಕ್ಯನು
ಗೊಹೇಶ್ವರ

ಅಲ್ಲಮನ ವಚನ. ಮನಸ್ಸಿನಲ್ಲಿ ಹುಟ್ಟುವ ಆಸೆ ಮತ್ತು ರೋಷಗಳಿಗೆ ಇರುವುದು ತಾಯಿ ಮಕ್ಕಳ ಸಂಬಂಧ. ಒಂದನ್ನು ಬಿಟ್ಟು ಒಂದಿರಲಾರವು. ಇವೆರಡೂ ಗುಣಗಳು ಇಲ್ಲವಾದಾಗ ಮನುಷ್ಯ ದೇವರಲ್ಲಿ ಒಂದಾಗಿರುತ್ತಾನೆ. ನಮ್ಮ ದಿನ ನಿತ್ಯದ ಬದುಕಿನಲ್ಲಿ ಮನಸ್ಸಿನ ಕಾರ್ಪಣ್ಯಗಳಿಗೆ ಕಾರಣವನ್ನು ಹುಡುಕುತ್ತ ಹೋದರೆ ಅವಕ್ಕೆಲ್ಲ ಮೂಲವಾಗಿ ಆಸೆ ಅಥವ ರೋಷಗಳೆಂಬ ಭಾವ ಇರುವುದು ತಿಳಿಯುತ್ತದೆ. ಆಸೆ ಮತ್ತು ರೋಷಗಳೆರಡೂ ನಮ್ಮ ಅಹಂಕಾರವನ್ನು ಗಟ್ಟಿಗೊಳಿಸುವ ಗುಣಗಳು.

ನಮ್ಮ ಎಲ್ಲ ಕೋಪಕ್ಕೆ ನಮ್ಮೊಳಗಿನ ಆಸೆಯೇ ಕಾರಣವಲ್ಲವೆ? ನಮ್ಮೊಳಗೆ ನಾವು ಬೆಳೆಸಿಕೊಂಡ ಆಸೆಗೆ ಧಕ್ಕೆ ಬಂದಾಗ ಕೋಪ, ರೋಷಗಳು ಮೂಡುತ್ತವೆ. ಹಾಗೆ ಹುಟ್ಟಿದ ರೋಷ ಅತೃಪ್ತವಾದ ಆಸೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಆಸೆಯಿಂದ ಕೋಪ, ಕೋಪದಿಂದ ಆಸೆ ಪರಸ್ಪರ ಬೆಳೆಯುತ್ತ ಹೋಗುತ್ತವೆ.

ದೇವರನ್ನು ನಮ್ಮಿಂದ ಬೇರೆಯಾದ ಒಂದು ಶಕ್ತಿ ಎಂದು ಸಾಮಾನ್ಯವಾಗಿ ತಿಳಿಯುತ್ತೇವೆ. ಹಾಗೆ ನಾವು ಬೇರೆ ಎಂಬ ಪ್ರತ್ಯೇಕತೆಯ ಭಾವ ಇರುವುದರಿಂದಲೇ ನನಗೆ ಅದು “ಬೇಕು” ಎಂಬ ಆಸೆ ಮತ್ತು ಸಿಗಲಿಲ್ಲವೆಂಬ ರೋಷ ಹುಟ್ಟುತ್ತವೆ. ಆಸೆ ರೋಷಗಳಿಂದ ನಾವು ನಮ್ಮ ಸುತ್ತಲವರಿಂದಲೂ ನಮ್ಮ ಕಲ್ಪನೆಯ ದೇವರಿಂದಲೂ ಬೇರೆಯಾಗುತ್ತ ದೂರವಾಗುತ್ತ ಹೋಗುತ್ತೇವೆ.

ಆಸೆಬುರುಕರನ್ನೂ ಕೋಪಿಷ್ಠರನ್ನೂ ನಾವು ದೂರವಿಡಲು ಬಯಸುವುದಿಲ್ಲವೇ? ಹಾಗೆಯೇ ದೇವರು ಕೂಡ ಆಸೆ ರೋಷಗಳು ಇರುವ ವ್ಯಕ್ತಿಗಳನ್ನು ದೂರವಿಡುತ್ತಾನೆ. ಆಸೆ ರೋಷಗಳನ್ನು ನೀಗಿಕೊಂಡಾಗ ವಿಶ್ವದ ಶಕ್ತಿಯೊಡನೆ ಐಕ್ಯ ಸಾಧ್ಯವಾಗುತ್ತದೆ ಎಂಬುದು ಅಲ್ಲಮನ ಮಾತು. ದೇವರನ್ನು ನಿರ್ಗುಣ ಅನ್ನುವುದುಂಟಲ್ಲವೆ? ಯಾಕೆಂದರೆ ದೇವರಿಗೆ ಆಸೆಯೂ ಇರಲಾರದು, ರೋಷವೂ ಇರಲಾರದು. ಇವೆರಡೂ ಗುಣಗಳನ್ನು ಇಲ್ಲವಾಗಿಸಿಕೊಂಡು ನಮ್ಮನ್ನು ನಾವು ಮಗುಗೊಳಿಸಿ ಕೊಂಡರೆ ಅದೇ ದೈವತ್ವ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಿಕ್ಷುಕಿ
Next post ಸಂಕ್ರಮಣ ಕಾಲ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…