Home / ಕವನ / ಕವಿತೆ / ದರ್‍ಶನ

ದರ್‍ಶನ

ಶ್ರೀರಾಮ ಪಟ್ಟಾಭಿಷೇಕದಲಿ ಒಲಿಯುತ್ತ
ಜಾನಕಿಯು ರಘುವರನ ಸಂಜ್ಞೆಯರಿತು.
ಹನುಮಂತನಿಂದಾಯ್ತು ರಾಮದರ್ಶನಮೆಂದು
ನವರತ್ನಹಾರಮಂ ಕೊರಳಿಗಿತ್ತು
ಸಿಂಗರಿಸೆ ಹೊಳೆ ಹೊಳೆದ ದೇದೀಪ್ಯಮಾನದಲಿ
ರಾಮರತ್ನವ ಧರಿಸಿ ನುಡಿಯ ಮರೆತು.
ಒಂದೊಂದೆ ರತ್ನಮಂ ಪರಿಕಿಸುತ ಕಡಿಯುತ್ತ
ಪುಡಿಗೈಯುತುಗುಳಿದಂ ರುಚಿಯನರಿತು.
ಆ ಸರದ ರತ್ನಗಳ ಹಾಳುಮಾಡಿ
ಶ್ರೀರಾಮರಡಿಗಳಲಿ ಹಾಕಿ ಹಾಡಿ
ತಾಯಿಯಾ ಕೂಪಮಂ ನೊಂದ ನೋಡಿ
ಕೋಡಗಕೆ ಮಣಿಯೇಕೆಯೆಂದ ಬೇಡಿ.

ಕಪಿಗೆ ಸಿಂಗರಮೇಕೆ ಗೌರವಂ ಸಲ್ಲುವುದೆ
ಕುಲಬುದ್ಧಿಯಂ ತೋರ್‍ದೆ ಪುಡಿಯ ಗೈದು
ಸಾಲದಾದುದೆ ನಿನಗೆ ನವರತ್ನಹಾರಮಿದು
ಹಣ್ಣೆಂದು ಬಗದೆಯಾ ಹಸಿವ ನೆನೆದು.
ಇದೊ ಶಾಪ ನಿನಗೆಂದು ಕುಪಿತಳಾದಳು ತಾಯಿ
ಹಣ ಚಾಚಿದನು ಪದದಿ ದೇಹಕೆಡೆದು.
ಈ ಮಹಾ ಹಾರದೊಳು ರಾಮನಾಮದ ಸವಿಯ
ಕಾಣದಾಂ ಬಿಸುಡಿದೆನು ಹುರುಳನರಿದು
ನಿಸ್ಸಾರವೀ ಹಾರ ಕ್ಷಮಿಸು ತಾಯಿ
ರಾಮನಾಮದ ರತ್ನ ಸೌಖ್ಯದಾಯಿ
ರಾಮಸನ್ನಿಧಿಯಿರಲು ಬೇರೆ ಬೇಕೆ
ನಿಮ್ಮ ಮಗುವಾಗಿರಲು ಹಾರಮೇಕೆ?
ನಸುನಕ್ಕನಾ ರಾಮ ಸಂತವಿಸಿ ಸೀತೆಯನು
ಅವನ ಕೊಂಡಾಡಿದಳು ನಿಜವನರಿತು.
ರಾಮನಾಮದ ಮಹಿಮೆಯರಿತವನು ಹನುಮಂತ
ರಾಮನೊಲಿದಿಹನವಗೆ ತನ್ನನಿತ್ತು
ಭಕ್ತಿಮರುಳಿಂ ಕುಣಿವ ಹನುಮಂತನೊಡನಿರುವ
ತೊಡಕಾಯ್ತು ರಾಜ್ಯಮಂ ನಡೆಸಲೆನಿತು.
ಅವನು ನೆನೆದಲ್ಲಿರುವ ಅವನ ಪ್ರೇಮಕ ಮಣಿವ
ಅಡವಿಯೇ ಮನೆಯಾಯ್ತು ಕಪಿಯ ಬೆರೆತು.
ರಾಮನಾಮವ ಹಾಡಿ ಕುಣಿಯುತಿಹನು
ಮೈಮರೆತು ದಾಶರಥಿ ನಗುತಲಿಹನು
ರಾಮ ಬಂದುದ ಕಾಣ ಅಳುತಲಿಹನು
ಮಾರುತಿಯ ನುಡಿಸಿದನು ಭರದಿ ತಾನು.

ಹಾಡುತಿರೆ ನೀನಿಲ್ಲಿ ರಾಜಕಾರ್ಯದ ನಾವೆ
ಎಂತು ನಡೆವುದು ಹೇಳು ರಾಜನಿರದೆ.
ಹಾಡು ಹಾಕುತ ಚಿಟಿಕಿ ಶಯನ ಕಾಲದಿ ಬಂದು
ಆಕಳಿಪ ಸಮಯದೊಳು ಎನಲು ನಿಜದೆ.
ತಾಯಿಯೊಡನಿರುವಾಗ ಸೆಜ್ಜೆಯೊಳು ಬಹೆನೆಂತು
ಅಲ್ಲೇಕೆ ಇಲ್ಲಿರುವೆ ಚಿಂತೆಯಿರದೆ.
ಆಗದಾಗದು ಹನುಮ ಅರಮನೆಯ ಬಾಗಿಲೊಳ್
ಇರ್‍ದು ನೀ ಇರುಳಿನೊಳು ನೆನೆದು ಬಿಡದೆ.
ಚಿಟಿಕಿಯಂ ಹಾಕಿದೊಡೆ ಆಕಳಿಸುವೆ
ಎನಲಯೋಧ್ಯಯನೈದಿ ರಾಮ ಸೇವೆ
ಯಲಿ ನಿಂದ ಭಕ್ತಿಯಲಿ ಆಯ್ತು ಮರವೆ
ಚಿಟಿಕಿ ಹಾಕುತ ಕುಣಿದ ಹೇಳಲಳವೆ!
ಬಿಟ್ಟ ಬಾಯ್ ಮುಚ್ಚದಿಹ ಮಲಗಿರುವ ರಘುರಾಮ
ಸೀತೆಗಚ್ಚರಿಯಾಯ್ತು ಭಯದಿ ಬಂದು
ಗುರು ವಸಿಷ್ಠಂಗರುಹೆ ಓಡಿಬಂದರು ಹನುಮ
ನಿರವರಿತು ಅಪ್ಪಿದರು ಕೈಯ ತಂದು.
ರಾಮನಿರವನ್ನೊರೆಯೆ ತಪ್ಪನೊಪ್ಪುತ ಬಂದು
ಅಜನ ಪಟ್ಟವ ಪಡೆದ ಪದದಿ ನಿಂದು.
ಎಲೆ ರಾಮ ನೀ ಸುಲಭ ಮೋಡಿಗಳ ಮಾಡುವೆಯ
ಎನುತ ನಮಿಸಿದ ಕಣ್ಣನೀರ ತಂದು
ಅಚ್ಚರಿಯ ತಾಳಿದಳು ಸೀತೆ ಮನದಿ
ಮಚಿದಳು ಮಾರುತಿಯ ಹಿಗ್ಗಿ ಭರದಿ
ಚಿರಜೀವಿಯಾಗೆಂದು ಹರಸಿ ಹೊಗಳಿ
ಅರೆನಗೆಯ ನಕ್ಕಳಾ ದೇವಿ ಮಗುಳಿ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...