Home / ಕವನ / ಕವಿತೆ / ದರ್‍ಶನ

ದರ್‍ಶನ

ಶ್ರೀರಾಮ ಪಟ್ಟಾಭಿಷೇಕದಲಿ ಒಲಿಯುತ್ತ
ಜಾನಕಿಯು ರಘುವರನ ಸಂಜ್ಞೆಯರಿತು.
ಹನುಮಂತನಿಂದಾಯ್ತು ರಾಮದರ್ಶನಮೆಂದು
ನವರತ್ನಹಾರಮಂ ಕೊರಳಿಗಿತ್ತು
ಸಿಂಗರಿಸೆ ಹೊಳೆ ಹೊಳೆದ ದೇದೀಪ್ಯಮಾನದಲಿ
ರಾಮರತ್ನವ ಧರಿಸಿ ನುಡಿಯ ಮರೆತು.
ಒಂದೊಂದೆ ರತ್ನಮಂ ಪರಿಕಿಸುತ ಕಡಿಯುತ್ತ
ಪುಡಿಗೈಯುತುಗುಳಿದಂ ರುಚಿಯನರಿತು.
ಆ ಸರದ ರತ್ನಗಳ ಹಾಳುಮಾಡಿ
ಶ್ರೀರಾಮರಡಿಗಳಲಿ ಹಾಕಿ ಹಾಡಿ
ತಾಯಿಯಾ ಕೂಪಮಂ ನೊಂದ ನೋಡಿ
ಕೋಡಗಕೆ ಮಣಿಯೇಕೆಯೆಂದ ಬೇಡಿ.

ಕಪಿಗೆ ಸಿಂಗರಮೇಕೆ ಗೌರವಂ ಸಲ್ಲುವುದೆ
ಕುಲಬುದ್ಧಿಯಂ ತೋರ್‍ದೆ ಪುಡಿಯ ಗೈದು
ಸಾಲದಾದುದೆ ನಿನಗೆ ನವರತ್ನಹಾರಮಿದು
ಹಣ್ಣೆಂದು ಬಗದೆಯಾ ಹಸಿವ ನೆನೆದು.
ಇದೊ ಶಾಪ ನಿನಗೆಂದು ಕುಪಿತಳಾದಳು ತಾಯಿ
ಹಣ ಚಾಚಿದನು ಪದದಿ ದೇಹಕೆಡೆದು.
ಈ ಮಹಾ ಹಾರದೊಳು ರಾಮನಾಮದ ಸವಿಯ
ಕಾಣದಾಂ ಬಿಸುಡಿದೆನು ಹುರುಳನರಿದು
ನಿಸ್ಸಾರವೀ ಹಾರ ಕ್ಷಮಿಸು ತಾಯಿ
ರಾಮನಾಮದ ರತ್ನ ಸೌಖ್ಯದಾಯಿ
ರಾಮಸನ್ನಿಧಿಯಿರಲು ಬೇರೆ ಬೇಕೆ
ನಿಮ್ಮ ಮಗುವಾಗಿರಲು ಹಾರಮೇಕೆ?
ನಸುನಕ್ಕನಾ ರಾಮ ಸಂತವಿಸಿ ಸೀತೆಯನು
ಅವನ ಕೊಂಡಾಡಿದಳು ನಿಜವನರಿತು.
ರಾಮನಾಮದ ಮಹಿಮೆಯರಿತವನು ಹನುಮಂತ
ರಾಮನೊಲಿದಿಹನವಗೆ ತನ್ನನಿತ್ತು
ಭಕ್ತಿಮರುಳಿಂ ಕುಣಿವ ಹನುಮಂತನೊಡನಿರುವ
ತೊಡಕಾಯ್ತು ರಾಜ್ಯಮಂ ನಡೆಸಲೆನಿತು.
ಅವನು ನೆನೆದಲ್ಲಿರುವ ಅವನ ಪ್ರೇಮಕ ಮಣಿವ
ಅಡವಿಯೇ ಮನೆಯಾಯ್ತು ಕಪಿಯ ಬೆರೆತು.
ರಾಮನಾಮವ ಹಾಡಿ ಕುಣಿಯುತಿಹನು
ಮೈಮರೆತು ದಾಶರಥಿ ನಗುತಲಿಹನು
ರಾಮ ಬಂದುದ ಕಾಣ ಅಳುತಲಿಹನು
ಮಾರುತಿಯ ನುಡಿಸಿದನು ಭರದಿ ತಾನು.

ಹಾಡುತಿರೆ ನೀನಿಲ್ಲಿ ರಾಜಕಾರ್ಯದ ನಾವೆ
ಎಂತು ನಡೆವುದು ಹೇಳು ರಾಜನಿರದೆ.
ಹಾಡು ಹಾಕುತ ಚಿಟಿಕಿ ಶಯನ ಕಾಲದಿ ಬಂದು
ಆಕಳಿಪ ಸಮಯದೊಳು ಎನಲು ನಿಜದೆ.
ತಾಯಿಯೊಡನಿರುವಾಗ ಸೆಜ್ಜೆಯೊಳು ಬಹೆನೆಂತು
ಅಲ್ಲೇಕೆ ಇಲ್ಲಿರುವೆ ಚಿಂತೆಯಿರದೆ.
ಆಗದಾಗದು ಹನುಮ ಅರಮನೆಯ ಬಾಗಿಲೊಳ್
ಇರ್‍ದು ನೀ ಇರುಳಿನೊಳು ನೆನೆದು ಬಿಡದೆ.
ಚಿಟಿಕಿಯಂ ಹಾಕಿದೊಡೆ ಆಕಳಿಸುವೆ
ಎನಲಯೋಧ್ಯಯನೈದಿ ರಾಮ ಸೇವೆ
ಯಲಿ ನಿಂದ ಭಕ್ತಿಯಲಿ ಆಯ್ತು ಮರವೆ
ಚಿಟಿಕಿ ಹಾಕುತ ಕುಣಿದ ಹೇಳಲಳವೆ!
ಬಿಟ್ಟ ಬಾಯ್ ಮುಚ್ಚದಿಹ ಮಲಗಿರುವ ರಘುರಾಮ
ಸೀತೆಗಚ್ಚರಿಯಾಯ್ತು ಭಯದಿ ಬಂದು
ಗುರು ವಸಿಷ್ಠಂಗರುಹೆ ಓಡಿಬಂದರು ಹನುಮ
ನಿರವರಿತು ಅಪ್ಪಿದರು ಕೈಯ ತಂದು.
ರಾಮನಿರವನ್ನೊರೆಯೆ ತಪ್ಪನೊಪ್ಪುತ ಬಂದು
ಅಜನ ಪಟ್ಟವ ಪಡೆದ ಪದದಿ ನಿಂದು.
ಎಲೆ ರಾಮ ನೀ ಸುಲಭ ಮೋಡಿಗಳ ಮಾಡುವೆಯ
ಎನುತ ನಮಿಸಿದ ಕಣ್ಣನೀರ ತಂದು
ಅಚ್ಚರಿಯ ತಾಳಿದಳು ಸೀತೆ ಮನದಿ
ಮಚಿದಳು ಮಾರುತಿಯ ಹಿಗ್ಗಿ ಭರದಿ
ಚಿರಜೀವಿಯಾಗೆಂದು ಹರಸಿ ಹೊಗಳಿ
ಅರೆನಗೆಯ ನಕ್ಕಳಾ ದೇವಿ ಮಗುಳಿ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...