Home / ಕವನ / ಕವಿತೆ / ದರ್‍ಶನ

ದರ್‍ಶನ

ಶ್ರೀರಾಮ ಪಟ್ಟಾಭಿಷೇಕದಲಿ ಒಲಿಯುತ್ತ
ಜಾನಕಿಯು ರಘುವರನ ಸಂಜ್ಞೆಯರಿತು.
ಹನುಮಂತನಿಂದಾಯ್ತು ರಾಮದರ್ಶನಮೆಂದು
ನವರತ್ನಹಾರಮಂ ಕೊರಳಿಗಿತ್ತು
ಸಿಂಗರಿಸೆ ಹೊಳೆ ಹೊಳೆದ ದೇದೀಪ್ಯಮಾನದಲಿ
ರಾಮರತ್ನವ ಧರಿಸಿ ನುಡಿಯ ಮರೆತು.
ಒಂದೊಂದೆ ರತ್ನಮಂ ಪರಿಕಿಸುತ ಕಡಿಯುತ್ತ
ಪುಡಿಗೈಯುತುಗುಳಿದಂ ರುಚಿಯನರಿತು.
ಆ ಸರದ ರತ್ನಗಳ ಹಾಳುಮಾಡಿ
ಶ್ರೀರಾಮರಡಿಗಳಲಿ ಹಾಕಿ ಹಾಡಿ
ತಾಯಿಯಾ ಕೂಪಮಂ ನೊಂದ ನೋಡಿ
ಕೋಡಗಕೆ ಮಣಿಯೇಕೆಯೆಂದ ಬೇಡಿ.

ಕಪಿಗೆ ಸಿಂಗರಮೇಕೆ ಗೌರವಂ ಸಲ್ಲುವುದೆ
ಕುಲಬುದ್ಧಿಯಂ ತೋರ್‍ದೆ ಪುಡಿಯ ಗೈದು
ಸಾಲದಾದುದೆ ನಿನಗೆ ನವರತ್ನಹಾರಮಿದು
ಹಣ್ಣೆಂದು ಬಗದೆಯಾ ಹಸಿವ ನೆನೆದು.
ಇದೊ ಶಾಪ ನಿನಗೆಂದು ಕುಪಿತಳಾದಳು ತಾಯಿ
ಹಣ ಚಾಚಿದನು ಪದದಿ ದೇಹಕೆಡೆದು.
ಈ ಮಹಾ ಹಾರದೊಳು ರಾಮನಾಮದ ಸವಿಯ
ಕಾಣದಾಂ ಬಿಸುಡಿದೆನು ಹುರುಳನರಿದು
ನಿಸ್ಸಾರವೀ ಹಾರ ಕ್ಷಮಿಸು ತಾಯಿ
ರಾಮನಾಮದ ರತ್ನ ಸೌಖ್ಯದಾಯಿ
ರಾಮಸನ್ನಿಧಿಯಿರಲು ಬೇರೆ ಬೇಕೆ
ನಿಮ್ಮ ಮಗುವಾಗಿರಲು ಹಾರಮೇಕೆ?
ನಸುನಕ್ಕನಾ ರಾಮ ಸಂತವಿಸಿ ಸೀತೆಯನು
ಅವನ ಕೊಂಡಾಡಿದಳು ನಿಜವನರಿತು.
ರಾಮನಾಮದ ಮಹಿಮೆಯರಿತವನು ಹನುಮಂತ
ರಾಮನೊಲಿದಿಹನವಗೆ ತನ್ನನಿತ್ತು
ಭಕ್ತಿಮರುಳಿಂ ಕುಣಿವ ಹನುಮಂತನೊಡನಿರುವ
ತೊಡಕಾಯ್ತು ರಾಜ್ಯಮಂ ನಡೆಸಲೆನಿತು.
ಅವನು ನೆನೆದಲ್ಲಿರುವ ಅವನ ಪ್ರೇಮಕ ಮಣಿವ
ಅಡವಿಯೇ ಮನೆಯಾಯ್ತು ಕಪಿಯ ಬೆರೆತು.
ರಾಮನಾಮವ ಹಾಡಿ ಕುಣಿಯುತಿಹನು
ಮೈಮರೆತು ದಾಶರಥಿ ನಗುತಲಿಹನು
ರಾಮ ಬಂದುದ ಕಾಣ ಅಳುತಲಿಹನು
ಮಾರುತಿಯ ನುಡಿಸಿದನು ಭರದಿ ತಾನು.

ಹಾಡುತಿರೆ ನೀನಿಲ್ಲಿ ರಾಜಕಾರ್ಯದ ನಾವೆ
ಎಂತು ನಡೆವುದು ಹೇಳು ರಾಜನಿರದೆ.
ಹಾಡು ಹಾಕುತ ಚಿಟಿಕಿ ಶಯನ ಕಾಲದಿ ಬಂದು
ಆಕಳಿಪ ಸಮಯದೊಳು ಎನಲು ನಿಜದೆ.
ತಾಯಿಯೊಡನಿರುವಾಗ ಸೆಜ್ಜೆಯೊಳು ಬಹೆನೆಂತು
ಅಲ್ಲೇಕೆ ಇಲ್ಲಿರುವೆ ಚಿಂತೆಯಿರದೆ.
ಆಗದಾಗದು ಹನುಮ ಅರಮನೆಯ ಬಾಗಿಲೊಳ್
ಇರ್‍ದು ನೀ ಇರುಳಿನೊಳು ನೆನೆದು ಬಿಡದೆ.
ಚಿಟಿಕಿಯಂ ಹಾಕಿದೊಡೆ ಆಕಳಿಸುವೆ
ಎನಲಯೋಧ್ಯಯನೈದಿ ರಾಮ ಸೇವೆ
ಯಲಿ ನಿಂದ ಭಕ್ತಿಯಲಿ ಆಯ್ತು ಮರವೆ
ಚಿಟಿಕಿ ಹಾಕುತ ಕುಣಿದ ಹೇಳಲಳವೆ!
ಬಿಟ್ಟ ಬಾಯ್ ಮುಚ್ಚದಿಹ ಮಲಗಿರುವ ರಘುರಾಮ
ಸೀತೆಗಚ್ಚರಿಯಾಯ್ತು ಭಯದಿ ಬಂದು
ಗುರು ವಸಿಷ್ಠಂಗರುಹೆ ಓಡಿಬಂದರು ಹನುಮ
ನಿರವರಿತು ಅಪ್ಪಿದರು ಕೈಯ ತಂದು.
ರಾಮನಿರವನ್ನೊರೆಯೆ ತಪ್ಪನೊಪ್ಪುತ ಬಂದು
ಅಜನ ಪಟ್ಟವ ಪಡೆದ ಪದದಿ ನಿಂದು.
ಎಲೆ ರಾಮ ನೀ ಸುಲಭ ಮೋಡಿಗಳ ಮಾಡುವೆಯ
ಎನುತ ನಮಿಸಿದ ಕಣ್ಣನೀರ ತಂದು
ಅಚ್ಚರಿಯ ತಾಳಿದಳು ಸೀತೆ ಮನದಿ
ಮಚಿದಳು ಮಾರುತಿಯ ಹಿಗ್ಗಿ ಭರದಿ
ಚಿರಜೀವಿಯಾಗೆಂದು ಹರಸಿ ಹೊಗಳಿ
ಅರೆನಗೆಯ ನಕ್ಕಳಾ ದೇವಿ ಮಗುಳಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...