Home / ಕವನ / ಕವಿತೆ / ಒಲವಿನಾಟ

ಒಲವಿನಾಟ

ಎಂತಿರಲು ಬಹುದು? ನನ್ನಾತನೆಂತಿರಬಹುದು….?

ಇಂದಿರಮ್ಮನ ಇನಿಯನಂತೆ ತಿಳಿಗಪ್ಪ-ಮೈ-
ಯಂದದರಳಿದ ಕಣ್ಣ, ತುಂಬುದಿಂಗಳ ಮೊಗದ
ತರುಣನಿರಬಹುದೊ….? ಇಲ್ಲದಿರೆ ಗೌರಮ್ಮನಾ
ಎರೆಯನಿಹನಲ್ಲವೇ? ಆತನೊಲು ಕೆಂಗಣ್ಣಿ-
ನುರಿಮೊಗದ, ಬೆರಗಾಗಿಸುವ ವೇಷ-ಭೂಷಣದ
ಮರುಳನಿರಬಹುದೋ-?

ರಾಧಾಂಬೆಯವನಂತೆ
ಎಳಸಾದ ಕಳೆಯುಳ್ಳ ಮೆಲುನಗೆಗೆ ಮನೆಯಾದ
ಚೆದುರನಿರಬಹುದೊ…., ಅಲ್ಲದೆ ಶಾರದೆಯ ಮನೆಯ
ಮನ್ನೆಯನ ತೆರದಿ ಮುದುಡಿದ ಮೆಯ್ಯ ನರೆದಲೆಯ
ಮುದಿಯನಾಗಿರ ಬಹುದೊ…?

ಕಮಲಮ್ಮನವರ ಮಗ-
ನಂತೆ ಸೌಂದರ್ಯಸಾಗರನಿರಲು ಬಹುದೊ…., ಕಾ-
ಳಬ್ಬೆಯಣುಗನ ತೆರದಿ ಡೊಂಕು ಮೋರೆಯ ಡೊಳ್ಳು-
ಹೊಟ್ಟೆಯವನಿರಬಹುದೊ…..?

ಸಿರಿವಂತರಂತೆ ಸಡ-
ಗರದುಡುಗೆ ತೊಡಿಗೆಗಳ ಧರಿಸಿರಲು ಬಹುದೊ…., ಇರ-
ದಿರೆ ಬಡವರಂದದಲಿ ಬರಿಮೆಯ್ಯ ಅರೆಬತ್ತ-
ಲೆಯನಿರಲು ಬಹುದೊ.. ?

ಎಂತಿದ್ದರೇನೆನಗೆ ?
ಎಂತಾದರೂ ಇರಲಿ, ಅವನೆನ್ನ ನನ್ನಿಯಾ
ನಲ್ಲನಲ್ಲವೆ? ನಲ್ಮೆಯೊಡೆಯನಲ್ಲವೆ? ಜಗದಿ
ಬೇಕಾದರಾ ಬೇವೆ ಮಾವಹುದು, ಬೇಡವಿರೆ
ಮಾವು ಬೇವೆನಿಸುವುದು; ಹೃದಯದೊಲವಿನದೊಂದು
ಅದುಭುತದ ಆಟವಿದು! ಆರಾರಿಗೂ ಅರಿದು!

“ಹೃದಯದೊಲವದು ಹೊರಗಣಾವಕಾರಣಗಳನು
ಹೊದ್ದಿ ಆಸರಿಸಿರದು, ಒಳಗಿರುವುದಾವುದೋ
ತಿಳಿಯದಂತಿರುವೆಳೆತ ಸೆಳೆದು ಬಿಗಿವುದು ಒಲವಿ-
ನೆದೆಗಳನು” ಎಂದು ಕವಿಭವಭೂತಿ ಹೇಳಿರನೆ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...