ಒಲವಿನಾಟ

ಎಂತಿರಲು ಬಹುದು? ನನ್ನಾತನೆಂತಿರಬಹುದು….?

ಇಂದಿರಮ್ಮನ ಇನಿಯನಂತೆ ತಿಳಿಗಪ್ಪ-ಮೈ-
ಯಂದದರಳಿದ ಕಣ್ಣ, ತುಂಬುದಿಂಗಳ ಮೊಗದ
ತರುಣನಿರಬಹುದೊ….? ಇಲ್ಲದಿರೆ ಗೌರಮ್ಮನಾ
ಎರೆಯನಿಹನಲ್ಲವೇ? ಆತನೊಲು ಕೆಂಗಣ್ಣಿ-
ನುರಿಮೊಗದ, ಬೆರಗಾಗಿಸುವ ವೇಷ-ಭೂಷಣದ
ಮರುಳನಿರಬಹುದೋ-?

ರಾಧಾಂಬೆಯವನಂತೆ
ಎಳಸಾದ ಕಳೆಯುಳ್ಳ ಮೆಲುನಗೆಗೆ ಮನೆಯಾದ
ಚೆದುರನಿರಬಹುದೊ…., ಅಲ್ಲದೆ ಶಾರದೆಯ ಮನೆಯ
ಮನ್ನೆಯನ ತೆರದಿ ಮುದುಡಿದ ಮೆಯ್ಯ ನರೆದಲೆಯ
ಮುದಿಯನಾಗಿರ ಬಹುದೊ…?

ಕಮಲಮ್ಮನವರ ಮಗ-
ನಂತೆ ಸೌಂದರ್ಯಸಾಗರನಿರಲು ಬಹುದೊ…., ಕಾ-
ಳಬ್ಬೆಯಣುಗನ ತೆರದಿ ಡೊಂಕು ಮೋರೆಯ ಡೊಳ್ಳು-
ಹೊಟ್ಟೆಯವನಿರಬಹುದೊ…..?

ಸಿರಿವಂತರಂತೆ ಸಡ-
ಗರದುಡುಗೆ ತೊಡಿಗೆಗಳ ಧರಿಸಿರಲು ಬಹುದೊ…., ಇರ-
ದಿರೆ ಬಡವರಂದದಲಿ ಬರಿಮೆಯ್ಯ ಅರೆಬತ್ತ-
ಲೆಯನಿರಲು ಬಹುದೊ.. ?

ಎಂತಿದ್ದರೇನೆನಗೆ ?
ಎಂತಾದರೂ ಇರಲಿ, ಅವನೆನ್ನ ನನ್ನಿಯಾ
ನಲ್ಲನಲ್ಲವೆ? ನಲ್ಮೆಯೊಡೆಯನಲ್ಲವೆ? ಜಗದಿ
ಬೇಕಾದರಾ ಬೇವೆ ಮಾವಹುದು, ಬೇಡವಿರೆ
ಮಾವು ಬೇವೆನಿಸುವುದು; ಹೃದಯದೊಲವಿನದೊಂದು
ಅದುಭುತದ ಆಟವಿದು! ಆರಾರಿಗೂ ಅರಿದು!

“ಹೃದಯದೊಲವದು ಹೊರಗಣಾವಕಾರಣಗಳನು
ಹೊದ್ದಿ ಆಸರಿಸಿರದು, ಒಳಗಿರುವುದಾವುದೋ
ತಿಳಿಯದಂತಿರುವೆಳೆತ ಸೆಳೆದು ಬಿಗಿವುದು ಒಲವಿ-
ನೆದೆಗಳನು” ಎಂದು ಕವಿಭವಭೂತಿ ಹೇಳಿರನೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮಯ ಸಂದರ್ಭ
Next post ಸುವರ್‍ಣದೀಪ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…