Home / ಕವನ / ಕವಿತೆ / ತೊಡಕು

ತೊಡಕು

ತೋಡಿ

ಚೆಲುವು ಹಿರಿಯದೊ !-ಹೃದಯ-
ದೋಲವು ಹಿರಿಯದೊ….!
ಚೆಲುವಿನಲಿಯೆ ಒಲವು ಇಹುದೊ!
ಒಲವಿನಲಿಯೆ ಚೆಲುವು ಇಹುದೊ!
ಚೆಲುವು ಹಿರಿಯದೋ!-ಹೃದಯ-
ದೊಲವು ಹಿರಿಯ….!


ಇನಿಯನಗಲ ನೆನಸಿ ನೆನಸಿ
ಮನೆಯಲಿರಲು ಬೇಸರೆನಿಸಿ
ದಣಿದ ಮನವ ತಣಿಸಲೆಣಸಿ
ಬನಕೆ ಹೋಗಲೆನುತ ನಡೆದೆ.

ತಳಿರಿನೊಳುಪ ಕಂಡು ಕುಣಿದೆ,
ಅಲರ ನಗೆಯ ನೋಡಿ ನಲಿದೆ,
ಚೆಲುವ ಬನದೊಳಾಲೆದೆ-ಉಲಿದೆ,
ಅಳಲ ಕೆಲವು ಗಳಿಗೆಯುಳಿದೆ.

ಇರಲು ಇಂತು ಏತಕೇನೊ….!
ಬರತು ಹೋಯ್ತು ಬಗೆಯ ನಲಿವು;
ಕೊರತೆಯೇನೊ ಬೆರೆತ ತೆರದಿ
ತೋರಿತಾಗ ಬನದ ಚೆಲುವು.

ತಳಿರು ಕಣ್ಣ ಕುಣಿಸದಾಯ್ತು,
ಅಲರ ನಗೆಯು ತಣಿಸದಾಯ್ತು,
ಬನದ ಬೆಡಗದೆಲ್ಲಿ ಹೋಯ್ತೊ..!
ಮನೆಗೆ ಬಂದ ಹಾಗೆ ಮರಳಿ.

ಚೆಲುವು ಹಿರಿಯದೋ!-ಹೃದಯ-
ದೊಲವು ಹಿರಿಯದೋ…!


ಬಗೆದು ಬಗೆದು ನಲ್ಲನಗಲ
ದುಗುಡ ಮಿಗಲು-ಕಂಬನಿಗಳು
ಒಗೆಯುತಿರಲು-ಗಾನದಿಂದ
ಬಗೆಯು ಸೊಗಸಬಹುದೆ..? ಎಂದೆ.

ಕೊಳಲನೂದಿ ಅಳಲ ಮರೆತೆ,
ಉಲಿಯೆ ವೀಣೆಯದಕೆ ಬೆರತೆ,
ಮೆಲುಪು ಬಲಿದ ರಾಗದೋರಿ
ಕಳೆದೆ ಕಾಲ ಸೊಗವ ಸಾರಿ;

ಇದ್ದುದಿದ್ದ ಹಾಗೆ ಹೃದಯ
ಎದ್ದು ನಡೆಯಿತೆಲ್ಲಿಗೇನೊ!
ಬಿದ್ದು ಹೋಯ್ತು ಗಾನದಲ್ಲಿ
ಇದ್ದ ಸೊಬಗದೇತಕೇನೊ!

ಕೊಳಲ ಸವಿಯೆ ತಿಳಿಯದಾಯ್ತು,
ವೀಣೆಯುಲುಹು ಕಾಣದಾಯ್ತು,
ಚೆಲುವ ರಾಗದೆಳೆಯೆ ಹೋಯ್ತು,
ಮಲಗಿಬಿಟ್ಟೆ ಹಾಗೆ ಮರಳಿ.

ಚೆಲುವು ಹಿರಿಯದೋ!-ಹೃದಯ-
ದೊಲವು ಹಿರಿಯದೋ….
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...