Home / ಕವನ / ಕವಿತೆ / ಉಸಾಬರಿ

ಉಸಾಬರಿ

ಬರೆಯಬೇಕು ನಾ ಏನನ್ನಾದರೂ
ವರ್ಷಗಳಿಂದಲೂ ಮನ ತುಡಿಯುತ್ತಿದ್ದರೂ
ಬರೆಯಬಲ್ಲೆನಾದರೂ ನಾನು
ಉಳಿದಿರುವುದಾದರೂ ಏನು?
ಶತಶತಮಾನಗಳಿಂದ ಬರೆದು ಬರೆದು
ನವರಸಗಳೆಲ್ಲವ ಅರೆದು ಕುಡಿದು
ಮಾಡಿ ಸರಸತಿಯ ಭಂಡಾರ ಲೂಟಿ
ನನಗೇನು ಸಿಕ್ಕದು ಬರೀ ಪಾಟಿ.
ಪಂಪ ರನ್ನ ಪೊನ್ನ ಜನ್ನರ ಕಾವ್ಯದ ಗಂಟು
ನನಗಂತೂ ಅರ್‍ಥೈಸಿಕೊಳ್ಳಲಾಗದ ಕಗ್ಗಂಟು
ಕನ್ನಡದ ಕಂಪರಿಯದ ಮೂಗಿಗೆ
ದೇವಭಾಷೆಯ ಗಂಧ ಪಸರಿಸುವುದೇ
“ನೀರಿಳಿಯದ ಗಂಟಲಲಿ ಕಡುಬು”
ಮುದ್ದಣ್ಣನ ಉಕ್ತಿ
ನನ್ನ ಪಾಲಿಗಲ್ಲ ಅತಿಶಯೋಕ್ತಿ.
ಕುವೆಂಪು, ಬೇಂದ್ರೆ ಪುತಿನಾರ ಗತ್ತು
ಬ್ರಹ್ಮ ನೀಡಲಿಲ್ಲ ಬುದ್ಧಿಗೆ ಕಸರತ್ತು
ಇನ್ನು ಕಥೆ ಬರೆಯೋಣವೆನಿಸಿತು
ನನ್ನದೇ ಆಸ್ತಿ ಎಂದರು ಮಾಸ್ತಿ
ಕವನ ಗೀಚಿದರೆ ಬಲು ಸುಲಭವೆಂದುಕೊಂಡೆ
ಒಬ್ಬೊಬ್ಬ ಕವಿಗಳು ಎದುರು ಬಂದು
ನನ್ನದೇ ಪದ, ನನ್ನದೇ ಶೈಲಿ
ಅರಚಾಡಿದರು ಕಿವಿ ಮುಚ್ಚಿಕೊಂಡೆ.
ನಾಟಕವಾದರೆ ಹೇಗೆ? ಕಾಳಿದಾಸನ ಹಾಗೆ
ಈ ನಾಟಕ ಪಾಠಕ ಎಲ್ಲಾ ತಲೆಬಿಸಿ
ಹರಿಹರನ ರಗಳೆಯೇ ವಾಸಿ.
ಕಾದಂಬರಿಯೇ ಸರಿ, ಎಲ್ಲರಿಗೂ ಮೋಡಿ
ಆದರೆ ಬರೆಯುವ ಮೂಡಿಲ್ಲ ಬಿಡಿ
ಕುಣಿಯಲಾರದವಳಂದಳಂತೆ ನೆಲಡೊಂಕು
ಇಲ್ಲ ನನ್ನ ಲೇಖನಿಯ ತುದಿಯೇ ಕೊಂಕು.
ನವ್ಯಕಾವ್ಯ ಬರೆದರಾಯ್ತು ಅರ್ಥವಾಗದ ಪರಿ
ಬಲವಾಗಿ ನಿರ್ಧರಿಸಿದೆ ಮನೆಯೇ ಸರಿ
ಹೋದರಾಯ್ತು ಸಂಸಾರದಲ್ಲಿ ತರಾ ‘ವರಿ’
ದುರಾದೃಷ್ಟಕ್ಕೆ ಅಂದೇ ಮುಗಿಯಬೇಕೆ ತರಕಾರಿ
ಪಲ್ಯ ಮಾಡಲಿಲ್ಲವೆಂದು ಗಂಡನ ಮಾರ ಮಾರಿ
‘ಚೂಡಿ’ ತರಲಿಲ್ಲವೆಂದು ಮಗಳ ಕಿರಿಕಿರಿ
ಆಯಿತಲ್ಲ ಬರೆವುದಕ್ಕೆ ಕತ್ತರಿ
ಬರೆಯುವವರು ಬರೆಯಲಿ ಬಿಡಿ
ನನಗೇಕೆ ಈ ಉಸಾಬರಿ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...