Home / ಕವನ / ಕವಿತೆ / ಉಸಾಬರಿ

ಉಸಾಬರಿ

ಬರೆಯಬೇಕು ನಾ ಏನನ್ನಾದರೂ
ವರ್ಷಗಳಿಂದಲೂ ಮನ ತುಡಿಯುತ್ತಿದ್ದರೂ
ಬರೆಯಬಲ್ಲೆನಾದರೂ ನಾನು
ಉಳಿದಿರುವುದಾದರೂ ಏನು?
ಶತಶತಮಾನಗಳಿಂದ ಬರೆದು ಬರೆದು
ನವರಸಗಳೆಲ್ಲವ ಅರೆದು ಕುಡಿದು
ಮಾಡಿ ಸರಸತಿಯ ಭಂಡಾರ ಲೂಟಿ
ನನಗೇನು ಸಿಕ್ಕದು ಬರೀ ಪಾಟಿ.
ಪಂಪ ರನ್ನ ಪೊನ್ನ ಜನ್ನರ ಕಾವ್ಯದ ಗಂಟು
ನನಗಂತೂ ಅರ್‍ಥೈಸಿಕೊಳ್ಳಲಾಗದ ಕಗ್ಗಂಟು
ಕನ್ನಡದ ಕಂಪರಿಯದ ಮೂಗಿಗೆ
ದೇವಭಾಷೆಯ ಗಂಧ ಪಸರಿಸುವುದೇ
“ನೀರಿಳಿಯದ ಗಂಟಲಲಿ ಕಡುಬು”
ಮುದ್ದಣ್ಣನ ಉಕ್ತಿ
ನನ್ನ ಪಾಲಿಗಲ್ಲ ಅತಿಶಯೋಕ್ತಿ.
ಕುವೆಂಪು, ಬೇಂದ್ರೆ ಪುತಿನಾರ ಗತ್ತು
ಬ್ರಹ್ಮ ನೀಡಲಿಲ್ಲ ಬುದ್ಧಿಗೆ ಕಸರತ್ತು
ಇನ್ನು ಕಥೆ ಬರೆಯೋಣವೆನಿಸಿತು
ನನ್ನದೇ ಆಸ್ತಿ ಎಂದರು ಮಾಸ್ತಿ
ಕವನ ಗೀಚಿದರೆ ಬಲು ಸುಲಭವೆಂದುಕೊಂಡೆ
ಒಬ್ಬೊಬ್ಬ ಕವಿಗಳು ಎದುರು ಬಂದು
ನನ್ನದೇ ಪದ, ನನ್ನದೇ ಶೈಲಿ
ಅರಚಾಡಿದರು ಕಿವಿ ಮುಚ್ಚಿಕೊಂಡೆ.
ನಾಟಕವಾದರೆ ಹೇಗೆ? ಕಾಳಿದಾಸನ ಹಾಗೆ
ಈ ನಾಟಕ ಪಾಠಕ ಎಲ್ಲಾ ತಲೆಬಿಸಿ
ಹರಿಹರನ ರಗಳೆಯೇ ವಾಸಿ.
ಕಾದಂಬರಿಯೇ ಸರಿ, ಎಲ್ಲರಿಗೂ ಮೋಡಿ
ಆದರೆ ಬರೆಯುವ ಮೂಡಿಲ್ಲ ಬಿಡಿ
ಕುಣಿಯಲಾರದವಳಂದಳಂತೆ ನೆಲಡೊಂಕು
ಇಲ್ಲ ನನ್ನ ಲೇಖನಿಯ ತುದಿಯೇ ಕೊಂಕು.
ನವ್ಯಕಾವ್ಯ ಬರೆದರಾಯ್ತು ಅರ್ಥವಾಗದ ಪರಿ
ಬಲವಾಗಿ ನಿರ್ಧರಿಸಿದೆ ಮನೆಯೇ ಸರಿ
ಹೋದರಾಯ್ತು ಸಂಸಾರದಲ್ಲಿ ತರಾ ‘ವರಿ’
ದುರಾದೃಷ್ಟಕ್ಕೆ ಅಂದೇ ಮುಗಿಯಬೇಕೆ ತರಕಾರಿ
ಪಲ್ಯ ಮಾಡಲಿಲ್ಲವೆಂದು ಗಂಡನ ಮಾರ ಮಾರಿ
‘ಚೂಡಿ’ ತರಲಿಲ್ಲವೆಂದು ಮಗಳ ಕಿರಿಕಿರಿ
ಆಯಿತಲ್ಲ ಬರೆವುದಕ್ಕೆ ಕತ್ತರಿ
ಬರೆಯುವವರು ಬರೆಯಲಿ ಬಿಡಿ
ನನಗೇಕೆ ಈ ಉಸಾಬರಿ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...