Home / ಕವನ / ಕವಿತೆ / ಉಸಾಬರಿ

ಉಸಾಬರಿ

ಬರೆಯಬೇಕು ನಾ ಏನನ್ನಾದರೂ
ವರ್ಷಗಳಿಂದಲೂ ಮನ ತುಡಿಯುತ್ತಿದ್ದರೂ
ಬರೆಯಬಲ್ಲೆನಾದರೂ ನಾನು
ಉಳಿದಿರುವುದಾದರೂ ಏನು?
ಶತಶತಮಾನಗಳಿಂದ ಬರೆದು ಬರೆದು
ನವರಸಗಳೆಲ್ಲವ ಅರೆದು ಕುಡಿದು
ಮಾಡಿ ಸರಸತಿಯ ಭಂಡಾರ ಲೂಟಿ
ನನಗೇನು ಸಿಕ್ಕದು ಬರೀ ಪಾಟಿ.
ಪಂಪ ರನ್ನ ಪೊನ್ನ ಜನ್ನರ ಕಾವ್ಯದ ಗಂಟು
ನನಗಂತೂ ಅರ್‍ಥೈಸಿಕೊಳ್ಳಲಾಗದ ಕಗ್ಗಂಟು
ಕನ್ನಡದ ಕಂಪರಿಯದ ಮೂಗಿಗೆ
ದೇವಭಾಷೆಯ ಗಂಧ ಪಸರಿಸುವುದೇ
“ನೀರಿಳಿಯದ ಗಂಟಲಲಿ ಕಡುಬು”
ಮುದ್ದಣ್ಣನ ಉಕ್ತಿ
ನನ್ನ ಪಾಲಿಗಲ್ಲ ಅತಿಶಯೋಕ್ತಿ.
ಕುವೆಂಪು, ಬೇಂದ್ರೆ ಪುತಿನಾರ ಗತ್ತು
ಬ್ರಹ್ಮ ನೀಡಲಿಲ್ಲ ಬುದ್ಧಿಗೆ ಕಸರತ್ತು
ಇನ್ನು ಕಥೆ ಬರೆಯೋಣವೆನಿಸಿತು
ನನ್ನದೇ ಆಸ್ತಿ ಎಂದರು ಮಾಸ್ತಿ
ಕವನ ಗೀಚಿದರೆ ಬಲು ಸುಲಭವೆಂದುಕೊಂಡೆ
ಒಬ್ಬೊಬ್ಬ ಕವಿಗಳು ಎದುರು ಬಂದು
ನನ್ನದೇ ಪದ, ನನ್ನದೇ ಶೈಲಿ
ಅರಚಾಡಿದರು ಕಿವಿ ಮುಚ್ಚಿಕೊಂಡೆ.
ನಾಟಕವಾದರೆ ಹೇಗೆ? ಕಾಳಿದಾಸನ ಹಾಗೆ
ಈ ನಾಟಕ ಪಾಠಕ ಎಲ್ಲಾ ತಲೆಬಿಸಿ
ಹರಿಹರನ ರಗಳೆಯೇ ವಾಸಿ.
ಕಾದಂಬರಿಯೇ ಸರಿ, ಎಲ್ಲರಿಗೂ ಮೋಡಿ
ಆದರೆ ಬರೆಯುವ ಮೂಡಿಲ್ಲ ಬಿಡಿ
ಕುಣಿಯಲಾರದವಳಂದಳಂತೆ ನೆಲಡೊಂಕು
ಇಲ್ಲ ನನ್ನ ಲೇಖನಿಯ ತುದಿಯೇ ಕೊಂಕು.
ನವ್ಯಕಾವ್ಯ ಬರೆದರಾಯ್ತು ಅರ್ಥವಾಗದ ಪರಿ
ಬಲವಾಗಿ ನಿರ್ಧರಿಸಿದೆ ಮನೆಯೇ ಸರಿ
ಹೋದರಾಯ್ತು ಸಂಸಾರದಲ್ಲಿ ತರಾ ‘ವರಿ’
ದುರಾದೃಷ್ಟಕ್ಕೆ ಅಂದೇ ಮುಗಿಯಬೇಕೆ ತರಕಾರಿ
ಪಲ್ಯ ಮಾಡಲಿಲ್ಲವೆಂದು ಗಂಡನ ಮಾರ ಮಾರಿ
‘ಚೂಡಿ’ ತರಲಿಲ್ಲವೆಂದು ಮಗಳ ಕಿರಿಕಿರಿ
ಆಯಿತಲ್ಲ ಬರೆವುದಕ್ಕೆ ಕತ್ತರಿ
ಬರೆಯುವವರು ಬರೆಯಲಿ ಬಿಡಿ
ನನಗೇಕೆ ಈ ಉಸಾಬರಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...