Home / ಕವನ / ಕವಿತೆ / ಉಸಾಬರಿ

ಉಸಾಬರಿ

ಬರೆಯಬೇಕು ನಾ ಏನನ್ನಾದರೂ
ವರ್ಷಗಳಿಂದಲೂ ಮನ ತುಡಿಯುತ್ತಿದ್ದರೂ
ಬರೆಯಬಲ್ಲೆನಾದರೂ ನಾನು
ಉಳಿದಿರುವುದಾದರೂ ಏನು?
ಶತಶತಮಾನಗಳಿಂದ ಬರೆದು ಬರೆದು
ನವರಸಗಳೆಲ್ಲವ ಅರೆದು ಕುಡಿದು
ಮಾಡಿ ಸರಸತಿಯ ಭಂಡಾರ ಲೂಟಿ
ನನಗೇನು ಸಿಕ್ಕದು ಬರೀ ಪಾಟಿ.
ಪಂಪ ರನ್ನ ಪೊನ್ನ ಜನ್ನರ ಕಾವ್ಯದ ಗಂಟು
ನನಗಂತೂ ಅರ್‍ಥೈಸಿಕೊಳ್ಳಲಾಗದ ಕಗ್ಗಂಟು
ಕನ್ನಡದ ಕಂಪರಿಯದ ಮೂಗಿಗೆ
ದೇವಭಾಷೆಯ ಗಂಧ ಪಸರಿಸುವುದೇ
“ನೀರಿಳಿಯದ ಗಂಟಲಲಿ ಕಡುಬು”
ಮುದ್ದಣ್ಣನ ಉಕ್ತಿ
ನನ್ನ ಪಾಲಿಗಲ್ಲ ಅತಿಶಯೋಕ್ತಿ.
ಕುವೆಂಪು, ಬೇಂದ್ರೆ ಪುತಿನಾರ ಗತ್ತು
ಬ್ರಹ್ಮ ನೀಡಲಿಲ್ಲ ಬುದ್ಧಿಗೆ ಕಸರತ್ತು
ಇನ್ನು ಕಥೆ ಬರೆಯೋಣವೆನಿಸಿತು
ನನ್ನದೇ ಆಸ್ತಿ ಎಂದರು ಮಾಸ್ತಿ
ಕವನ ಗೀಚಿದರೆ ಬಲು ಸುಲಭವೆಂದುಕೊಂಡೆ
ಒಬ್ಬೊಬ್ಬ ಕವಿಗಳು ಎದುರು ಬಂದು
ನನ್ನದೇ ಪದ, ನನ್ನದೇ ಶೈಲಿ
ಅರಚಾಡಿದರು ಕಿವಿ ಮುಚ್ಚಿಕೊಂಡೆ.
ನಾಟಕವಾದರೆ ಹೇಗೆ? ಕಾಳಿದಾಸನ ಹಾಗೆ
ಈ ನಾಟಕ ಪಾಠಕ ಎಲ್ಲಾ ತಲೆಬಿಸಿ
ಹರಿಹರನ ರಗಳೆಯೇ ವಾಸಿ.
ಕಾದಂಬರಿಯೇ ಸರಿ, ಎಲ್ಲರಿಗೂ ಮೋಡಿ
ಆದರೆ ಬರೆಯುವ ಮೂಡಿಲ್ಲ ಬಿಡಿ
ಕುಣಿಯಲಾರದವಳಂದಳಂತೆ ನೆಲಡೊಂಕು
ಇಲ್ಲ ನನ್ನ ಲೇಖನಿಯ ತುದಿಯೇ ಕೊಂಕು.
ನವ್ಯಕಾವ್ಯ ಬರೆದರಾಯ್ತು ಅರ್ಥವಾಗದ ಪರಿ
ಬಲವಾಗಿ ನಿರ್ಧರಿಸಿದೆ ಮನೆಯೇ ಸರಿ
ಹೋದರಾಯ್ತು ಸಂಸಾರದಲ್ಲಿ ತರಾ ‘ವರಿ’
ದುರಾದೃಷ್ಟಕ್ಕೆ ಅಂದೇ ಮುಗಿಯಬೇಕೆ ತರಕಾರಿ
ಪಲ್ಯ ಮಾಡಲಿಲ್ಲವೆಂದು ಗಂಡನ ಮಾರ ಮಾರಿ
‘ಚೂಡಿ’ ತರಲಿಲ್ಲವೆಂದು ಮಗಳ ಕಿರಿಕಿರಿ
ಆಯಿತಲ್ಲ ಬರೆವುದಕ್ಕೆ ಕತ್ತರಿ
ಬರೆಯುವವರು ಬರೆಯಲಿ ಬಿಡಿ
ನನಗೇಕೆ ಈ ಉಸಾಬರಿ.
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...