ಜೀವಗಾಳಿ


ಭೂಮಿ ಬಿರುಕು ಬಿಟ್ಟಿತು
ನಾಡಿನ ನರಗುಂದದಲ್ಲಿ ನಾಡಿ ಮಿಡಿತ ಕೇಳಿ
ಹೂತು ಹೋದ ಹೆಣಗಳೆಲ್ಲ
ಬರಡು ನೆಲದ ಕಣಗಳೆಲ್ಲ
ಪುಟಪುಟಿದು ಸೆಟೆದವು, ಬೀಸಿ ಜೀವಗಾಳಿ.

ನೆಲದೊಳಗೆ ಭೋರ್ಗರೆತ, ಸುಳಿಸುತ್ತುವ ಸೆಳೆತ
ಸಿಟ್ಟಿನ ಸುಳಿ ಸಿಂಬೆ ಸುತ್ತಿ
ಕುದಿ ಕುದಿಯುವ ರಕ್ತವೆಲ್ಲ
ಕೈಯಾಗಿ ಕಿಡಿಯಿತು ಬಿಗಿದ ಮುಷ್ಟಿ ಎದ್ದಿತು
ನೋವೆ ನೆರೆದು ನಿಂತಂತೆ
ನೆಲದ ಒಡಲು ಗುಡುಗು ಸಿಡಿಲು
ಸೀಳಿ ಸೃಷ್ಟಿಯಾಗುತ್ತಿರುವ ಸಾಲು ಸಾಲು ಕೈಗಳು
ಬುಸುಗುಟ್ಟುವ ಹೆಡೆಗಳು
ಜೊತೆ ಜೊತೆಯಲ್ಲಿ ಸೆಟೆದು ನಿಂತ
ಅರೆಬೆತ್ತಲ ನಡುಗತ್ತಲ
ಭಯ ಬದುಕಿನ ಮೈಗಳು
ಹುಟ್ಟಿಕೊಂಡವೆಲ್ಲೆಲ್ಲೂ ಕಾದ ಕೆಂಡ ಕಿಡಿಗಳು
ಮೂಳೆಯೊಳಗೆ ಮನಸ ಹರಿಸಿ
ಕಾಲಿನಲ್ಲಿ ಕನಸು ನೆಲೆಸಿ
ಶೋಷಣೆಯ ಸಜ್ಜೆ ಮೇಲೆ ಹೆಜ್ಜೆಯಿಟ್ಟು ರೈತರು


ಕೆದರಿದ ಕಿಡಿ ಕೂದಲು, ಉಬ್ಬಿ ಹೋದ ಕಾಲು
ಗರಬಡಿದ ಬಾಗಿಲಿಗೆ ಝಾಡಿಸಿ ಒದ್ದು
ನಗರವೆಲ್ಲ ಮೈ ಕೊಡವಿ ನಿಟ್ಟು ಬಿದ್ದು ಎದ್ದು
ಹೃದಯವಾಗಿ ನಿಂತಿತು, ಹಾರವಾಗಿ ಹರಿಯಿತು
ತೇಗುತ್ತಿದ್ದ ಟಾರು ರಸ್ತೆ ತೆಪ್ಪಗಾಯಿತು
“ಸೌಧ”ದತ್ತ ಸಾಗಲು ತೆಪ್ಪವಾಯಿತು.


“ನಿಧಿ” ನೆಲೆಯೂರಿದ ವಿಧಾನ ಸೌಧ
ಸರ್ಪಕಾವಲಿನ ಶ್ರೀ ಕುರುಡ
ನೆಲದ ಒಡೆಯರು ನಮ್ಮ ರೈತರು
ಕೊಚ್ಚಿ ಬಂದರು ರೊಚ್ಚೆದ್ದವರು

ವಿಧಾನ ಸೌಧದ ಹೊಟ್ಟೆಯ ಒದ್ದು
ಕಲ್ಲು ಕಲ್ಲಿಗೂ ಕ್ರಾಂತಿಯ ಸದ್ದು
ಎದೆಯುಬ್ಬಿಸಿ ಒಳ ನುಗ್ಗಿದರು

ಅತ್ತಿಂದಿತ್ತ ಹಾರುವ ಬಾವಲಿ
ಕಣ್ಣಿಗೆ ಬಡಿಯುವ ಕಳ್ಳಾಟ
ದಿಗಿಲು ಹುಟ್ಟಿಸುವ ದುರ್ನಾತ

ಕಿಡಿಕಾರುವ ಕಣ್ ಬೆಳಕನು ಬಿಟ್ಟು
ಎದೆ ಮನೆ ಬಾಗಿಲು ಭೇದಿಸಿ ಹೊಕ್ಕು
ಒಳಗೆಲ್ಲಾ ಹುಡುಕಾಡಿದರು
ಹೃದಯವ ಕಾಣಲು ಹುಡುಕಿದರು
ಮೂಲೆ ಮೂಲೆಯ ತಡಕಿದರು

ಕತ್ತಲು ಕವಿದರು ಸಿಗಲಿಲ್ಲ.
ಹೃದಯವೆ ಅಲ್ಲಿ ಇರಲಿಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭವಿಷ್ಯದ ಚಿಂತೆ
Next post ಸಾಯಿ ರಾಮ್

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…