Home / ಕವನ / ಕವಿತೆ / ಜೀವಗಾಳಿ

ಜೀವಗಾಳಿ


ಭೂಮಿ ಬಿರುಕು ಬಿಟ್ಟಿತು
ನಾಡಿನ ನರಗುಂದದಲ್ಲಿ ನಾಡಿ ಮಿಡಿತ ಕೇಳಿ
ಹೂತು ಹೋದ ಹೆಣಗಳೆಲ್ಲ
ಬರಡು ನೆಲದ ಕಣಗಳೆಲ್ಲ
ಪುಟಪುಟಿದು ಸೆಟೆದವು, ಬೀಸಿ ಜೀವಗಾಳಿ.

ನೆಲದೊಳಗೆ ಭೋರ್ಗರೆತ, ಸುಳಿಸುತ್ತುವ ಸೆಳೆತ
ಸಿಟ್ಟಿನ ಸುಳಿ ಸಿಂಬೆ ಸುತ್ತಿ
ಕುದಿ ಕುದಿಯುವ ರಕ್ತವೆಲ್ಲ
ಕೈಯಾಗಿ ಕಿಡಿಯಿತು ಬಿಗಿದ ಮುಷ್ಟಿ ಎದ್ದಿತು
ನೋವೆ ನೆರೆದು ನಿಂತಂತೆ
ನೆಲದ ಒಡಲು ಗುಡುಗು ಸಿಡಿಲು
ಸೀಳಿ ಸೃಷ್ಟಿಯಾಗುತ್ತಿರುವ ಸಾಲು ಸಾಲು ಕೈಗಳು
ಬುಸುಗುಟ್ಟುವ ಹೆಡೆಗಳು
ಜೊತೆ ಜೊತೆಯಲ್ಲಿ ಸೆಟೆದು ನಿಂತ
ಅರೆಬೆತ್ತಲ ನಡುಗತ್ತಲ
ಭಯ ಬದುಕಿನ ಮೈಗಳು
ಹುಟ್ಟಿಕೊಂಡವೆಲ್ಲೆಲ್ಲೂ ಕಾದ ಕೆಂಡ ಕಿಡಿಗಳು
ಮೂಳೆಯೊಳಗೆ ಮನಸ ಹರಿಸಿ
ಕಾಲಿನಲ್ಲಿ ಕನಸು ನೆಲೆಸಿ
ಶೋಷಣೆಯ ಸಜ್ಜೆ ಮೇಲೆ ಹೆಜ್ಜೆಯಿಟ್ಟು ರೈತರು


ಕೆದರಿದ ಕಿಡಿ ಕೂದಲು, ಉಬ್ಬಿ ಹೋದ ಕಾಲು
ಗರಬಡಿದ ಬಾಗಿಲಿಗೆ ಝಾಡಿಸಿ ಒದ್ದು
ನಗರವೆಲ್ಲ ಮೈ ಕೊಡವಿ ನಿಟ್ಟು ಬಿದ್ದು ಎದ್ದು
ಹೃದಯವಾಗಿ ನಿಂತಿತು, ಹಾರವಾಗಿ ಹರಿಯಿತು
ತೇಗುತ್ತಿದ್ದ ಟಾರು ರಸ್ತೆ ತೆಪ್ಪಗಾಯಿತು
“ಸೌಧ”ದತ್ತ ಸಾಗಲು ತೆಪ್ಪವಾಯಿತು.


“ನಿಧಿ” ನೆಲೆಯೂರಿದ ವಿಧಾನ ಸೌಧ
ಸರ್ಪಕಾವಲಿನ ಶ್ರೀ ಕುರುಡ
ನೆಲದ ಒಡೆಯರು ನಮ್ಮ ರೈತರು
ಕೊಚ್ಚಿ ಬಂದರು ರೊಚ್ಚೆದ್ದವರು

ವಿಧಾನ ಸೌಧದ ಹೊಟ್ಟೆಯ ಒದ್ದು
ಕಲ್ಲು ಕಲ್ಲಿಗೂ ಕ್ರಾಂತಿಯ ಸದ್ದು
ಎದೆಯುಬ್ಬಿಸಿ ಒಳ ನುಗ್ಗಿದರು

ಅತ್ತಿಂದಿತ್ತ ಹಾರುವ ಬಾವಲಿ
ಕಣ್ಣಿಗೆ ಬಡಿಯುವ ಕಳ್ಳಾಟ
ದಿಗಿಲು ಹುಟ್ಟಿಸುವ ದುರ್ನಾತ

ಕಿಡಿಕಾರುವ ಕಣ್ ಬೆಳಕನು ಬಿಟ್ಟು
ಎದೆ ಮನೆ ಬಾಗಿಲು ಭೇದಿಸಿ ಹೊಕ್ಕು
ಒಳಗೆಲ್ಲಾ ಹುಡುಕಾಡಿದರು
ಹೃದಯವ ಕಾಣಲು ಹುಡುಕಿದರು
ಮೂಲೆ ಮೂಲೆಯ ತಡಕಿದರು

ಕತ್ತಲು ಕವಿದರು ಸಿಗಲಿಲ್ಲ.
ಹೃದಯವೆ ಅಲ್ಲಿ ಇರಲಿಲ್ಲ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...