Home / ಕವನ / ಕವಿತೆ / ಹಬ್ಬ

ಹಬ್ಬ

ಹುಟ್ಟೂರು
ಹೆತ್ತವರು, ಒಡಹುಟ್ಟಿದವರು, ನೆಂಟರಿಷ್ಟರ ಬಗ್ಗೆ ಮಾತಾಡುವಾಗ
ಹೊಟ್ಟೆ ತುಂಬಿದಂತಾಗುತ್ತೆ
ಹಿಟ್ಟು ಕಾರವನ್ನೇ ತಿಂದರೂ
ಒಂದ್ಸಾರಿ ನೋಡಿಕೊಂಡು ಬರಬೇಕೆನಿಸುತ್ತೆ
ಯಾವ ಕಾಲನೂ ಹೇಳಬೇಡ ಮಹಾನವಮಿ ಕಾಲವೊಂದು
ಬಿಟ್ಟ ಮೇಲೆ

ದಿಣ್ಣೆ, ದೀಪಾಂತರ ತುಂಬಾ
ಆಸೆಯೆ ಆಕಾರ ತಳೆದಂತೆ ಬೆಳೆದ
ಹೂಪೀಸು, ವಡೆತಲೆಯ ಫಲ ಪೈರು
ಗಾಳಿಗೆ ತೊನೆದಾಡುತ್ತಿರುವಾಗ
ಬಯಲಾದ ಬಯಲೆಲ್ಲಾ ಸಂಗೀತ ನೃತ್ಯದಲ್ಲಿ ತೇಲುವುದು,

ದೊಡ್ಡವಳು ತಾಯಿ ಗಂಗಮ್ಮ ಕೃಪೆಮಾಡಿ ಬಂದು
ನೆರೆ ತೊರೆ ಹಳ್ಳ ಕೊಳ್ಳಗಳಲ್ಲಿ ಅತ್ತಿತ್ತ ಆಡ್ಡಾಡುವ
ಕೆರೆ ಕಟ್ಟೆಗಳಲ್ಲಿ ವಿಶ್ರಾಂತಿ ಪಡೆಯುವ
ಬೆಟ್ಟ ಗುಡ್ಡಗಳ ನೆತ್ತಿಯನ್ನು ಜಾರುಬಂಡಿ ಮಾಡಿಕೊಂಡು
ಆಟವಾಡುವ ದೃಶ್ಯ
ಕಣ್ಣಿಗೆ ಬೀಳಲು ಪುಣ್ಯ ಮಾಡಿರಬೇಕು.
ಸರ್ತಿ ಸರ್ತಿಗೆ ಬರುವ ಈ ಹಿರಿಯರ ಹಬ್ಬಕ್ಕೆ ಕರೆಯದಿದ್ದರೂ
ನಿಲ್ಲಲಾರೆ

ಗಂಡ ಮಕ್ಕಳ ಕೂಡಿಕೊಂಡು
ಪುಟ್ಟ ಮೆರವಣಿಗೆಯಲ್ಲಿ ಸಾಗಿ ಬರುವೆ
ಜೀವನಾ ದ್ರವ್ಯವನು ಕೂಡಿಸಿ ಕೊಳ್ಳುವೆನು
ದೂರದಲ್ಲಿರುವಾಗಲೇ ಕೂನು ಹಿಡಿದ ಚಿಕ್ಕವರು
ಓಡೋಡಿ ಬಂದು
ಅತ್ತೆ, ಮಾವ ಬಂದರೆಂದು ಡಂಗುರ ಸಾರುವುದು
ಹಿರಿಯರು, ಎಲ್ಲರೂ ಬಾಗಿಲಿಗೆ ಬಂದು
ಉಲ್ಲಾಸದ ನಗೆಯಲ್ಲಿ ಸ್ವಾಗತದ ಸೆಳೇವು ನೀಡುವುದು
ಜೀವನದಿ ಮರೆಯಲಾಗದ ಸುಖಾನುಭವವ ತರುವುದು.

ಊಟ ಉಪಚಾರ ಮುಗಿದು
ಎರಡೂ ಕಡೆಯ ಮಕ್ಕಳ ಪ್ರತಿಭಾ ಪಾಠಗಳ ವರದಿಯ ಜೊತೆಜೊತೆಗೆ
ಪರಸ್ಪರ ಸುಖ ಸಂಕಥಾ, ಆಮೋದ ಪ್ರಮೋದದ ನೆರಿಕೆಯಲ್ಲಿ
ಇಣುಕುವಾಗ

ಮಾತಿಗೆ ನೂರು ಮುಖವಾಗಿ
ಸರಿಹೊತ್ತಾದರೂ ಕೊಡುಹ ಮುಗಿಯುವುದಿಲ್ಲ
ಒಬ್ಬೊಬ್ಬರೆ ನೆಂಟರು ಬಂದು ಸೇರಿದ ಹಾಗೆ ಉದ್ದುದ್ದ ಬೆಳೆವುದು
ಹಬ್ಬವೇ ಮುಗಿದು ಊರಿಗೆ ಹೊರಟು ಅರ್ಧ ದಾರಿಗೆ ಬಂದರೂ
ಮುಗಿಯುವ ಲಕ್ಷಣ ಕಣುವುದಿಲ್ಲ.

ಬಿಡುವಾಗಿ ಊರು, ಹೊಲಗಳ ಸುತ್ತ
ಒಂದು ಸುತ್ತು ಹಾಕಿ ಬರುವಾಗ
ಬಾಲ್ಯವು ಮರುಕಳಿಸುವುದು
ಎಲ್ಲಾ ಮುಗಿದು ಹೊರಟು ನಿಂತಾಗ
ಕ್ಷಣ ಕಾಲ
ಎಂದಿನಂತೆ ಕಣ್ಣು ಮಂಜಾಗುವವು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...