Home / ಕವನ / ಕವಿತೆ / ಅಯ್ಯಯ್ಯ ನನಗಂಡ ಪಡಪೋಸಿ ಬಿಕನೇಸಿ

ಅಯ್ಯಯ್ಯ ನನಗಂಡ ಪಡಪೋಸಿ ಬಿಕನೇಸಿ

ಅಯ್ಯಯ್ಯ ನನಗಂಡ ಪಡಪೋಸಿ ಬಿಕನೇಸಿ
ಹೊಸಗಂಡ ರಸಗಂಡ ಕೈಯತಾರ ||ಪಲ್ಲ||

ಸಪ್ಪಾನ ಸಪ್ಪಾಟಿ ಆ ಗಂಡ ಹಳೆರಗಟಿ
ನನಗೆಣಿಯ ನೀ ಠೀಕು ಠುಮುಠುಮುಕಿ
ತಾತಾರ ಬಾಬಾರ ಸರದಾರ ಸಾವ್ಕಾರ
ನಿನ ಜೀವ ಗೆಳತ್ಯಾನು ಝುಮುಝುಮುಕಿ ||೧||

ಕುಂತುಂಡ್ರ ಪಡಿರೊಟ್ಟಿ ತಿಂತಾನ ಆ ಗಂಡ
ಮನಿತುಂಬ ಮಣಹೂಂಸು ತುಂಬತಾನ
ಬಾ ಅಂದ್ರ ಬ್ಯಾಡಂತ ಗೊರಕೀಯ ಹೊಡಿತಾನ
ಬೆಳಗಾದ್ರ ಊರ್‍ಹೊರಗೆ ಓಡತಾನ ||೨||

ನನಗ್ಯಾಕ ತಿಳಿವಲ್ತು ಯಾಕಂತ ಹೊಳಿವಲ್ತು
ನಿನಕಂಡ್ರ ಎದಿಯಾಗ ಝುಂಗುಟ್ಟಿತ
ತೊಡಿಯಾಗ ಕಟ್ಟಿರಿವಿ ಕಡಿದಾಂಗ ನಡುಕಾತ
ಖುಶಿಯಾಗ ರಾತ್ರ್‍ಯಾಗ ಘುಂಘುಟ್ಟತ ||೩||

ಮಾಡ್ಕೊಂಡ ಮನಗಂಡ ಜಾಲೀಯ ಬೊಡ್ಯಾದ
ನೀನಾದಿ ಕ್ಯಾದೀಗಿ ಗಂಡುಹಕ್ಕಿ
ಸಂಪೀಗಿ ತಂಪಾದಿ ಸೋಬಾನ ದಿಂಪಾದಿ
ತುಟಿಯಾಗ ತುಟಿಯಿಟ್ಟು ಪಿಂಡಮುಕ್ಕಿ ||೪||

ಆ ಗಂಡ ನನ್ಹಿಡಿದು ಮಕಮಾರಿ ಕಚ್ಚಾಗ
ನಿನನೆನಪು ನನಗಾಗಿ ನಾ ಅತ್ತೆನೆ
ದೇಹಕ್ಕ ಆ ಗಂಡ ಯೋಗಕ್ಕ ನೀ ಗಂಡ
ನಿನಮಾರಿ ನೆನಪಾಗಿ ಭೋ ಅತ್ತೆನೆ ||೫||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...