ಮುಂಬಯಿ ಬದುಕು

ಹಾಳು ಬೀದಿ ಬಸದಿಯಲಿ
ಗೋಳು ಕ್ಷಯ ಹಿಡಿದ
ಬಾಳಿಗೆ ದೊಂಗಾಲು ಬಿದ್ದು
ಕ್ರಿಮಿಗಳೋಪಾದಿ ಕೊಳೆವ
ನರ ನಾರಾಯಣರ ಬಾಳು
ಬಾಳೆ? ನೋಡಿರೈ ಅವರ

ಜೀವಂತ ಮರಣ
ಗುರಿರಹಿತ ಪಯಣ
ಉದಾಸೀನ ನಯನ, ನಿಶ್ಯಕ್ತ ಹರಣ
ಜೀವನದ ಅಲೆದಾಟ
ರೇಗಾಟ, ಕೂಗಾಟ, ನಿಜವನ್ನೆ ಸುಳಿವಾಟ

ಹರಕಲು ಗೇಹ
ಬಡಕಲು ದೇಹ
ನರಕ ಅದು, ಅಲ್ಲಿಲ್ಲ ನೇಹ!

ಹದಿಬದೆಯ ವ್ಯಾಪಾರ
ಅದರೊಳಗು ತಕರಾರ
ಕುಲ ಲಜ್ಜೆಗಳ ಮಾರಿ ತಾಯ್ತನದ ವ್ಯಭಿಚಾರ –
ಒಣದಾದ ತುಟಿಯಲ್ಲಿ
ಹಿರಿದಾದ ಮೇಲುನಗೆ
ತೆಳ್ಳನೆಯ ಉಸಿರು
ಬಡತನದ ಹೊಗೆ-ಧಗೆ
ಕಣ್ಣು ಕಾಂತಿ ಹೀನ
ಬಯಕೆಗಳ ಬಹುಬಗೆ –
ಗಿರಿಣಿಗಳ ಎಡೆಯಲ್ಲಿ
ಜಜ್ಜಿರುವ ನರರು
ಮೈರುಧಿರ ಬೆವರೆಂದು
ಸುರಿಸುವರು ಅವರು
ಅವರ ಸುಖ-ಅಳು
ಅದಕ್ಕೆಲ್ಲ ಹೆರರು –

ದಣಿದ ದೇಹಕೆ ಸುಖದ ಮೋಹ
ಉಸ್ಸೆನಲು ಓಡುವುದು ಗುಡಿಯೆಡೆಗೆ
ಬಹುದೂರ ಮನೆ
ಉದ್ದ ದಾರಿ ಅದಕಿಲ್ಲ ಕೊನೆ
ಮನದ ಕಿರುಕುಳ-ತಾಪ
ಮನೆಯಲ್ಲ ಅದು ಒಂದು ಕೂಪ

ಬರಿಹೊಟ್ಟೆ ಅರೆನಗ್ನ
ಅರೆಜೀವ ಕೂಸು
ನೂರು ಬಣ್ಣವ ಬಳಿಯೆ
ಕೈಲಿಲ್ಲ ಕಾಸು

ಕಂದಿ ಕಮರಿದ ಎಳೆ ಜೀವಗಳ
ಮೇಲೆ ನಾಡು ಕಟ್ಟಿಹದು ಕನಸು!
ವಯೋವೃದ್ದ ಹೆಗಲಲ್ಲಿ
ಬಡತನದ ಭಾರ
ನೆರೆಬಿದ್ದ ಹಣೆಯಲ್ಲಿ
ವಿವಶತೆಯ ಸಾರ
ನಿಡಿದುಸಿರ ಎಡೆಯಲ್ಲಿ
ಸಾವೆಷ್ಟು ದೂರ!
ಬರೆ ಎಳೆದ ಕಾಯ
ನರ-ನಾಡಿ ಗಾಯ
ತಿಕ್ಕಾಟ ಮನದಲ್ಲಿ
ಕದಡಿರುವ ಧ್ಯೇಯ
ಜಗವಲ್ಲ, ಇದು ಒಂದು
ವಿಧಿ ಬಗೆದ ಹೇಯ!

ಯೌವನಕೆ ಬೆಲೆಯಿಲ್ಲ
ಬರಿದೆ ಹೋಹುದು ತಡವರಿಸಿ
ಬವಣೆಯಲಿ ಬದುಕೆಲ್ಲ
ಬೆಳಕು-ಇದೆ ಸತ್ಯ-ಇದೆ
ಪುಲಿಯ ಬಳಿಯಲಿ ಹಸುವಂತೆ
ಶೌರ್‍ಯ ಸಹನೆಯ ಬಲವಿಲ್ಲ

ಬಲಹೀನ ಕೈಯಿಂದ
ಕಾತರದ ಕಣ್ಣಿಂದ
ಛಲಹೀನ ಒಲವನ್ನು
ಆತುರದ ಸೆಳವಿಂದ
ಬಯಸುತಿದೆ ಹಸುಗೂಸು
ದಯಾದಾನಿವರರಿಂದ…..

ಅರೆ! ದೂರಿದ್ದವರೆ,
ಬಳಿ ಬಂದು ನೋಡಿ
ನಿರ್ಜಿವ ನರರಿಂಗೆ
ಜೀವದಾನವ ಮಾಡಿ
ಉಳಿಸೋಣ ನಾಡನ್ನು
ನಾವೆಲ್ಲ ಕೂಡಿ…..!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಗಿಸು ಬಾ ಶುಭ ಆರತಿ
Next post ಮೌನ ತಪವದಾರದೋ? ಸಿದ್ದಿ ಯಾರಿಗೋ?

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…