Home / ಕವನ / ಕವಿತೆ / ಮುಂಬಯಿ ಬದುಕು

ಮುಂಬಯಿ ಬದುಕು

ಹಾಳು ಬೀದಿ ಬಸದಿಯಲಿ
ಗೋಳು ಕ್ಷಯ ಹಿಡಿದ
ಬಾಳಿಗೆ ದೊಂಗಾಲು ಬಿದ್ದು
ಕ್ರಿಮಿಗಳೋಪಾದಿ ಕೊಳೆವ
ನರ ನಾರಾಯಣರ ಬಾಳು
ಬಾಳೆ? ನೋಡಿರೈ ಅವರ

ಜೀವಂತ ಮರಣ
ಗುರಿರಹಿತ ಪಯಣ
ಉದಾಸೀನ ನಯನ, ನಿಶ್ಯಕ್ತ ಹರಣ
ಜೀವನದ ಅಲೆದಾಟ
ರೇಗಾಟ, ಕೂಗಾಟ, ನಿಜವನ್ನೆ ಸುಳಿವಾಟ

ಹರಕಲು ಗೇಹ
ಬಡಕಲು ದೇಹ
ನರಕ ಅದು, ಅಲ್ಲಿಲ್ಲ ನೇಹ!

ಹದಿಬದೆಯ ವ್ಯಾಪಾರ
ಅದರೊಳಗು ತಕರಾರ
ಕುಲ ಲಜ್ಜೆಗಳ ಮಾರಿ ತಾಯ್ತನದ ವ್ಯಭಿಚಾರ –
ಒಣದಾದ ತುಟಿಯಲ್ಲಿ
ಹಿರಿದಾದ ಮೇಲುನಗೆ
ತೆಳ್ಳನೆಯ ಉಸಿರು
ಬಡತನದ ಹೊಗೆ-ಧಗೆ
ಕಣ್ಣು ಕಾಂತಿ ಹೀನ
ಬಯಕೆಗಳ ಬಹುಬಗೆ –
ಗಿರಿಣಿಗಳ ಎಡೆಯಲ್ಲಿ
ಜಜ್ಜಿರುವ ನರರು
ಮೈರುಧಿರ ಬೆವರೆಂದು
ಸುರಿಸುವರು ಅವರು
ಅವರ ಸುಖ-ಅಳು
ಅದಕ್ಕೆಲ್ಲ ಹೆರರು –

ದಣಿದ ದೇಹಕೆ ಸುಖದ ಮೋಹ
ಉಸ್ಸೆನಲು ಓಡುವುದು ಗುಡಿಯೆಡೆಗೆ
ಬಹುದೂರ ಮನೆ
ಉದ್ದ ದಾರಿ ಅದಕಿಲ್ಲ ಕೊನೆ
ಮನದ ಕಿರುಕುಳ-ತಾಪ
ಮನೆಯಲ್ಲ ಅದು ಒಂದು ಕೂಪ

ಬರಿಹೊಟ್ಟೆ ಅರೆನಗ್ನ
ಅರೆಜೀವ ಕೂಸು
ನೂರು ಬಣ್ಣವ ಬಳಿಯೆ
ಕೈಲಿಲ್ಲ ಕಾಸು

ಕಂದಿ ಕಮರಿದ ಎಳೆ ಜೀವಗಳ
ಮೇಲೆ ನಾಡು ಕಟ್ಟಿಹದು ಕನಸು!
ವಯೋವೃದ್ದ ಹೆಗಲಲ್ಲಿ
ಬಡತನದ ಭಾರ
ನೆರೆಬಿದ್ದ ಹಣೆಯಲ್ಲಿ
ವಿವಶತೆಯ ಸಾರ
ನಿಡಿದುಸಿರ ಎಡೆಯಲ್ಲಿ
ಸಾವೆಷ್ಟು ದೂರ!
ಬರೆ ಎಳೆದ ಕಾಯ
ನರ-ನಾಡಿ ಗಾಯ
ತಿಕ್ಕಾಟ ಮನದಲ್ಲಿ
ಕದಡಿರುವ ಧ್ಯೇಯ
ಜಗವಲ್ಲ, ಇದು ಒಂದು
ವಿಧಿ ಬಗೆದ ಹೇಯ!

ಯೌವನಕೆ ಬೆಲೆಯಿಲ್ಲ
ಬರಿದೆ ಹೋಹುದು ತಡವರಿಸಿ
ಬವಣೆಯಲಿ ಬದುಕೆಲ್ಲ
ಬೆಳಕು-ಇದೆ ಸತ್ಯ-ಇದೆ
ಪುಲಿಯ ಬಳಿಯಲಿ ಹಸುವಂತೆ
ಶೌರ್‍ಯ ಸಹನೆಯ ಬಲವಿಲ್ಲ

ಬಲಹೀನ ಕೈಯಿಂದ
ಕಾತರದ ಕಣ್ಣಿಂದ
ಛಲಹೀನ ಒಲವನ್ನು
ಆತುರದ ಸೆಳವಿಂದ
ಬಯಸುತಿದೆ ಹಸುಗೂಸು
ದಯಾದಾನಿವರರಿಂದ…..

ಅರೆ! ದೂರಿದ್ದವರೆ,
ಬಳಿ ಬಂದು ನೋಡಿ
ನಿರ್ಜಿವ ನರರಿಂಗೆ
ಜೀವದಾನವ ಮಾಡಿ
ಉಳಿಸೋಣ ನಾಡನ್ನು
ನಾವೆಲ್ಲ ಕೂಡಿ…..!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...