Home / ಕವನ / ಕವಿತೆ / ಹೆಣ್ಣು ಜೀವ

ಹೆಣ್ಣು ಜೀವ

ಸೋನೆ ಮಳೆಯ ಸಂಜೆ…
ಒಲೆಯ ಮೇಲೆ ಚಹಾ ಕುದಿಯುತ್ತಾ ಇತ್ತು
ದೀಪ ಹಚ್ಚಿ, ಧೂಪ ಹಾಕಿ, ದೇವರನ್ನು ಬೆಚ್ಚಗಾಗಿಸಿ
ಸ್ವೆಟರ್ ಏರಿಸಿ ಹಾಳೂರು..
ಎಂದು ಇಲ್ಲದ ಕರೆಂಟಿಗೆ ಬಾಯ್ತುಂಬ ಬಯ್ದು
ದೀಪ ಧಾರಿಣಿಯಾದೆ,
ಗಾಳಿ ಬಾಗಿಲ ತಳ್ಳಿತು

ಎದುರಲ್ಲಿ ತೊಯ್ದು ತೊಪ್ಪೆಯಾಗಿ ನಿಂತಿತ್ತು ಹೆಣ್ಣು ಜೀವ
ಆತುಕೊಂಡಿದ್ದ ಎಳೆಯ ಕಂದಮ್ಮಗಳ ಜೋಡಿ
ಹಾಕಿದವು ಮೋಡಿ, ತುಸುವೆ ಮೆದುವಾಯಿತು ಭಾವ
ಕೇಳದೆಯೇ ಹೇಳದೆಯೇ
ಎಲ್ಲವೂ ಅರ್ಥವಾದಂತೆ, ಭಾಷೆಯ ಹಂಗಿಲ್ಲದೆ
ನೇರ ಹೃದಯವನೆ ಮುಟ್ಟಿದಂತೆ.

ಏನೂ ಮಾಡಲು ತೋಚದೆ…
ಆರಿ ಹೋಗಲಿದ್ದ ದೀಪಕ್ಕೆ ಅಡ್ಡ ಕೈ ಹಿಡಿದು
ಒಳಗೆ ಬಂದೆ, ಹೊರಗೆ ಹೋದೆ…
ದೀಪ ಹೊಯ್ದಾಡುತ್ತಾ ಇತ್ತು
ತೀರಿಕೊಂಡ ಅಜ್ಜಿ, ದೊಡ್ಡವ್ವ, ಶಕ್ಕು….
ಯಾರೆಲ್ಲ ನಿಂತಂತಾಗಿ ಕಣ್ಣೆದುರು –
ಜಗುಲಿಯ ಮೂಲೆಗೆ ಗೋಣಿ ಹಾಸಿ
ಬಟ್ಟಲಿಗೆ ಬಿಸಿ ಹಾಲು ಅನ್ನ ಸುರಿದು
ಬಾಗಿಲು ಮುಚ್ಚಿ ಕಿಟಕಿ ತರೆದೆ
ಇದೀಗ-
ಕಂದಮ್ಮಗಳು ಸಮರೋಪಾದಿಯಲ್ಲಿ
ಅಮ್ಮನ ಮೊಲೆಗೆ ಬಾಯಿಟ್ಟು
ಹಾಲು ಹೀರುತ್ತಿದ್ದವು
ತಾಯಿ ಬೆಚ್ಚಗೆ ಕಣ್ಮುಚ್ಚಿ ಮಲಗಿತ್ತು
ವಾಸನೆ ಹಿಡಿದು ತುಸುವೆ ಬಾಲ ಅಲ್ಲಾಡಿಸಿ

ನನ್ನ ಗುರುತಿಸಿತು!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...