ಪಟ್ಟವಾಗುವುದಕ್ಕೆ ಮುಂಚೆ ಕಂಠೀರವ ಒಡೆಯರು ತಮ್ಮ ತಂದೆಗಳಾದ ಚಾಮರಾಜ ಒಡೆಯರ ಬಳಿಯಲ್ಲಿ ತೆರಕಣಾಂಬಿಯಲ್ಲಿದ್ದರು. ಆ ಕಾಲದಲ್ಲಿ ರಾಮೇಶ್ವರದ ತೀರ್ಥಯಾತ್ರೆ ಮಾಡಿಕೊಂಡು ಬರುತ್ತಿದ್ದ ಒಬ್ಬ ಬ್ರಾಹ್ಮಣನು ಈ ಒಡೆಯರನ್ನು ಕಂಡು ಫಲ ಮಂತ್ರಾಕ್ಷತೆಯನ್ನು ಒಪ್ಪಿಸಿ “ತಿರುಚನಾಪಳ್ಳಿಯಲ್ಲಿ ಮಹಾ ಪರಾಕ್ರಮಶಾಲಿಯಾದ ಶೂರ ಜಟ್ಟಿಯೊಬ್ಬನಿರುವನು. ಆತನು ತನ್ನ ಸಮಾನ ಕಾಳಗವಾಡುವವರು ಯಾರೂ ಇಲ್ಲವೆಂದು ಹೆಮ್ಮೆ ಹೊಂದಿದ್ದಾನೆ. ತನ್ನ ದಟ್ಟಿ ಚಲ್ಲಣಗಳನ್ನು ಆ ಊರಿನ ಕೋಟೆ ಬಾಗಲಿಗೆ ಕಟ್ಟಿದರೆ ಸರ್ವಜನರೂ ತನ್ನ ಕಾಲಕೆಳಗೆ ಸಂಚಾರಮಾಡಿದಂತೆ ಆಗುವುದೆಂದು ಆ ಊರ ಅರಸನ ಅನುಮತಿಯನ್ನು ಪಡೆದು ದುರಹಂಕಾರಿಂದ ಅವುಗಳನ್ನು ಕಟ್ಟಿದ್ದಾನೆ. ಆ ಊರಿನ ಅರಸರು ಬ್ರಾಹ್ಮಣರು ಮಾತ್ರ ಮತ್ತೊಂದು ಬಾಗಲಿನಲ್ಲಿ ಸಂಚಾರಮಾಡುವ ಹಾಗೆಯೂ ಉಳಿದವರೆಲ್ಲರೂ ಆ ಬಾಗಲಿನಲ್ಲಿಯೇ ಸಂಚರಿಸುವಂತೆಯೂ ಕಟ್ಟುಮಾಡಿದ್ದಾರೆ” ಎಂದು ಹೇಳಿದನು. ಆ ಮಾತನ್ನು ಕೇಳಿ ಈ ಕಂಠೀರವಒಡೆಯರು ಜಟ್ಟಿಯ ವೇಷವನ್ನು ಧರಿಸಿ, ಯಾರೂ ಅರಿಯದಂತೆ ಆ ಬ್ರಾಹ್ಮಣನನ್ನು ಸಂಗಡ ಕರೆದುಕೊಂಡು ತಿರುಚನಾಪಳ್ಳಿಗೆ ಹೊರಟು, ಅಲ್ಲಿ ಕೋಟಿ ಬಾಗಲಿಗೆ ಕಟ್ಟಿದ್ದ ದಟ್ಟಿ ಚಲ್ಲಣಗಳನ್ನು ತಮ್ಮ ಆಳಿನ ಕೈಕೋಲಿನಿಂದ ತೆಗೆಸಿ, ಅನಂತರ ಕೋಟೆಯೊಳಕ್ಕೆ ಪ್ರವೇಶಮಾಡಿದರು.
ಈ ಸುದ್ದಿಯನ್ನು ಕೇಳಿದ ತಿರುಚನಾಪಳ್ಳಿಯ ನಾಯಕನು ಇವರನ್ನು ಕರೆಯಿಸಿ, ಸನ್ಮಾನಮಾಡಿ ಇರಿಸಿಕೊಂಡಿದ್ದು, ಒಂದು ದಿನ ಎಲ್ಲರನ್ನೂ ಕರೆಸಿ ಸಭೆಮಾಡಿ, ತಾನು ಉಪ್ಪರಿಗೆಯ ಮೇಲೆ ಕುಳಿತುಕೊಂಡು, ತನ್ನ ಜಟ್ಟಿಗೂ ವೇಷಧಾರಿಗಳಾಗಿ ಬಂದಿದ್ದ ಕಂಠೀರವ ಒಡೆಯರಿಗೂ ಕಾಳಗ ಬಿಡಿಸಿದನು. ಆಗ ವಜ್ರಮುಷ್ಠಿಗಳನ್ನು ಹಿಡಿದು ಇಬ್ಬರೂ ಕಾಳಗಮಾಡುವ ಸಮಯದಲ್ಲಿ ಈ ಒಡೆಯರು ಯಾರೂ ಅರಿಯದಂತೆ ಮೊದಲೇ ಸೊಂಟದಲ್ಲಿ ಕಟ್ಟಿದ್ದ ವಿಜಯನಾರಸಿಂಹವೆಂಬ ಕತ್ತಿಯಿಂದ ಆ ಜಟ್ಟಿಯ ಕೊರಳನ್ನು ಕ್ಷಣ ಮಾತ್ರದಲ್ಲಿ ಅತಿಚಮತ್ಕಾರದಿಂದ ಕತ್ತರಿಸಿಬಿಟ್ಟು, ನಿಂತಿದ್ದ ಆ ಹೆಣದ ಮುಂದೆ ಸುಮ್ಮನೆ ನಿಂತುಕೊಂಡರು. ಇದನ್ನು ತಿಳಿಯದೆ ಅಲ್ಲಿಯ ಅರಸು “ಏತಕ್ಕೆ ಸುಮ್ಮನೆ ನಿಂತಿದ್ದೀರಿ?” ಎಂದು ಕೇಳಲು ಒಡೆಯರು ತಮ್ಮ ಎಡಗೈಯಲ್ಲಿದ್ದ ಬೆತ್ತದಿಂದ ಎದುರಾಳಿನ ಮುಖವನ್ನು ತಿವಿದರು. ಜಟ್ಟಿಯ ತಲೆಯು ಕೆಳಕ್ಕೆ ಉರುಳಿ ಬಿತ್ತು. ಆಗ ಕಾಳೆಗವನ್ನು ನೋಡಲು ಬಂದಿದ್ದ ಜನರೆಲ್ಲರೂ ಇವರ ಸಾಧನೆಯನ್ನೂ ಹಸ್ತಲಾಘವ ಚಮತ್ಕಾರಗಳನ್ನೂ ಕಂಡು ಆಶ್ಚರ್ಯ ಪಟ್ಟು ಇವರನ್ನು ಕೊಂಡಾಡುತ್ತಿದ್ದರು. ಕಾಳೆಗ ಮುಗಿಯಿತು.
ಆಗ ತಿರುಚನಾಪಳ್ಳಿಯ ಅರಸನು ಇವರಿಗೆ ವಿಶೇಷವಾದ ಸನ್ಮಾನ ಬಹುಮಾನಗಳನ್ನು ಮಾಡಬೇಕೆಂದು ಯೋಚಿಸಿ ಉಪ್ಪರಿಗೆಯನ್ನು ಬಿಟ್ಟು ಇಳಿದನು. ಆತನ ಮುಖಭಾವದಿಂದಲೇ ಆತನ ಇಂಗಿತವನ್ನು ಕಂಠೀರವಒಡೆಯರು ಈ ಸಾಮಾನ್ಯ ಪಾಳೆಯ ಗಾರನಿಂದ ಜಟ್ಟಿಯಂತೆ ಸನ್ಮಾನಮಾಡಿಸಿಕೊಳ್ಳುವುದು ಯುಕ್ತವಲ್ಲವೆಂದೆಣಿಸಿ “ನಾಳೆ ಬರುತ್ತೇವೆ” ಎಂದು ಅರಸನಿಗೆ ಹೇಳಿ ಆ ರಾತ್ರಿಯೇ ಯಾರೂ ಅರಿಯದಂತೆ ಆ ಊರ ಕೋಟೆಬಾಗಲಿಗೆ “ಮಹೀಶರ ಸಂಸ್ಥಾನದಿಂದ ಯಾರೋ ಒ೦ದು ಇ೦ಥ ಪರಾ ಕ್ರಮವನ್ನು ತೋರಿಸಿದರು” ಎಂದು ಎಲ್ಲರಿಗೂ ತಿಳಿಯುವಂತಹ ಒಂದು ಚೀಟಿಯನ್ನು ಬರೆದು ಕಟ್ಟಿ, ಜತೆಯಲ್ಲಿ ಒಂದಿದ್ದ ಬ್ರಾಹ್ಮಣನೊಡನೆ ತೆರಕಣಾಂಬಿಯ ದಾರಿಯನ್ನು ಹಿಡಿದು ಮರುದಿವಸ ಆ ಸ್ಥಳವನ್ನು ಸೇರಿದರು.
*****
[ವಂಶರತ್ನಾಕರ ಪುಟ ೬೫-೬೬; ವಂಶಾವಳಿ ಸಂ. ೧, ಪುಟ ೬೬-೬೭ ವಿಲ್ಕ್ಸ್ ಸಂ. ೧, ಪುಟ೩೦]