ಚೆಲುವು ‘ಬಾ’ ಎಂದು ನಿಂತಿದೆ ಹಾಕಿ ರಿಂಗಣವ
ಮುಗಿಲಂಗಣದಿ ಅಮರಜ್ಯೋತಿಗಳು ತೂಗಾಡಿ
ಕೇಳುವವು : ‘ಎಲ್ಲಿಹನು ನಮ್ಮೊಡತಿಯೊಡನಾಡಿ?’
ಮುಗಿಲಿನೊಳಮುಗಿಲಿಂದ ದನಿಯೊಂದು ಪ್ರತಿ ಕ್ಷಣವು
ಮೊಳಗುವದು : ‘ಮಾರ್‍ಮಲೆವ ಸಾಹಸಿಯು ತಾ ಪಣವ
ಕಟ್ಟಿ ಬಂದನೆ? ನರ್‍ತಕನು ಬೇಕು ಸರಿಜೋಡಿ’,
ಇಂತು ಚಿರಯೌವ್ವನವಿಲಾಸದಾಟವ ಹೂಡಿ
ಚೆಲುವು ನಿಂತಿದೆ ಕೆರಳುತಖಿಲ ಸೃಷ್ಟಿಯ ಮನವ.

ಅಣಿಯಾಗುವನು ನರನು ಕುಣಿತದಲಿ ಮನ- ಬುದ್ದಿ-
ದೇಹ-ಪ್ರಾಣಗಳೆಲ್ಲ ಲಯವಿರಲು. ಹೆಣ್ಣೊಂದೆ
ಅವನ ಬಣ್ಣವ ಕುಂದಿಸಿಹುದು ಸಿರಿಗುಣಿತದಲಿ.
ಚೆಲುವುಗಾತಿಯ ಒಂದು ಮಳೆಬಿಲ್ಲ ಮಣಿತದಲಿ
ದಣಿಯುವವು ಗೋಲಗಳು. ಬಯಕೆ ತೀರಿಸಲೊಂದೆ
ಅವಳ ಪರಮೋಪಾಯ : ಪ್ರಳಯನೃತ್ಯದ ಸಿದ್ದಿ !
*****