Home / ಕವನ / ಕವಿತೆ / ಶ್ರೇಷ್ಠ ಕನಿಷ್ಠ ಪ್ರಶ್ನೆಯೇ… ಅಸಂಗತ

ಶ್ರೇಷ್ಠ ಕನಿಷ್ಠ ಪ್ರಶ್ನೆಯೇ… ಅಸಂಗತ

ಕ್ಯಾತೆ ತೆಗೆದಿತ್ತು
ಜೀವನ ಸಾವ ಜೊತೆಗೆ
ಶ್ರೇಷ್ಠರಾರು ? ಪ್ರಶ್ನೆಯೆತ್ತಿಕೊಂಡು
ತುಸು ಗಂಭೀರವಾಗಿಯೇ !

ಜೀವನ, ನಾನು ಮೊದಲು !
ಜೀವ-ಜೀವಕ್ಕೆ, ಜಡ-ಜಡಕ್ಕೆ, ಕಾಲ-ಕಾಲಕ್ಕೆ
ಭಿನ್ನ! ಭಿನ್ನ! ರಂಗು! ರಂಗು!
ಬೆಳಕು; ಸಂತಸ.

ಕರುಣಿಸುವೆನು
ಅಂಗಳದಿ ಸೋಲು, ಗೆಲುವು, ಸಮಾಧಾನ;
ತಮ್ಮ, ತಮ್ಮ ಗುಣಾವಗುಣ,
ಅಭಿರುಚಿ, ಅನುಕೂಲ, ಶಕ್ತಿ, ದೌರ್ಬಲ್ಯಗಳಿಗೆ ತಕ್ಕಂತೆ.

ತುಡಿಸುವೆನು
ನನ್ನ ಪಂದ್ಯದಲಿರಲು
ಎಲ್ಲವನು ಎಲ್ಲರನು ಸದಾ!
ಜೀವಂತಿಕೆಯೇ ನನ್ನ ಹೂರಣ.

ಮಾಡುವೆನು ಅದಲು, ಬದಲು
ನಿಧಾನವಾಗಿ, ವೇಗವಾಗಿ, ಬೇಕಾದ ಹಾಗೆ!
ನೆಚ್ಚದಂತೆ.
ನಿಲ್ಲಿಸೆನು ಯಾವುದನೂ ಒಂದೇ ಸ್ತರದಲಿ
ಕೆಲ, ಕೆಲವರನು ಬಿಟ್ಟು,

ನಾನು ವಿಕ್ಷಿಪ್ತನಲ್ಲ!
ಹುಟ್ಟಿ ಬರುವ ಎಲ್ಲಕ್ಕೂ ಎಲ್ಲರಿಗೂ ಸಲ್ಲುವೆನು
ನನ್ನಲ್ಲಿ ಅರಳಿ ಬೆಳೆದವರು ಸಾವ ಗೆಲುವರು
ಉಳಿಯುವರು; ಬೆಳಗುವರು
ಚರಿತ್ರೆಯಲಿ ಚಿರಕಾಲ.

ನಾನು ಸಾವು,
ಭಯ! ನೋವು! ಕತ್ತಲು! ಮೌನ!
ಸತ್ಯ! ಸಾರ್ವತ್ರಿಕ! ಬಿಡುಗಡೆ!!

ನನಗೆ ಸ್ವಾಗತವಿಲ್ಲ; ಆರಾಧನೆಯಿಲ್ಲ
ಯಾರೂ… ತಾವೇ ಬಂದು ಬೀಳರು
ನನ್ನ ಮಡಿಲಿಗೆ
ಬಹಳ ಬದುಕಲರಿಯದವರು; ಧೀರರು ವಿನಃ.

ಶರಣು!
ಸತ್ತು ಬದುಕುವ ಗೆದ್ದವರಿಗೆ
ನಾನು, ಈಗ… ಆಗ… ಯಾವಾಗ ಬೇಕಾದರೂ…
ಯಾವರೂಪದಲ್ಲಾದರೂ…
ಬಂದೆರಗಬಹುದು; ಮುಗಿಸಬಹುದು.
ಸತ್ಯವಿದನು ತಿಳಿದೂ… ತಿಳಿದೂ
ಏನು ನಿಲ್ಲಿಸದೆ ಎಲ್ಲವನು ಮಾಮೂಲಾಗಿ
ಮುಂದುವರಿಸುವ
ಜೀವ ವಿಶೇಷರಿಗೆ.

ಹುಟ್ಹುಟ್ಟಿ ಬರುವ
ಜೀವದಲೆ ಎಲೆಗಳು ಬಾಳಿ
ಹಣ್ಣಾಗಿ ಉದುರಬೇಕು
ಚಿಗುರಾಗಿ ಮೂಡಬೇಕು; ಬೆಳೆಯಬೇಕು
ಬಾಳೆಂಬ ತೇರು ತರು ಹೊಸ ಹೊಸದಾಗಿ
ಸಿಂಗಾರಗೊಳಬೇಕು
ಅರ್ಥಪೂರ್ಣವಾಗಬೇಕು.

ಇದು ನ್ಯಾಯ! ಸರ್ವ ಸಮ್ಮತ !
ಜಗದಲಿ ಶ್ರೇಷ್ಠ, ಕನಿಷ್ಠ ಪ್ರಶ್ನೆಯೇ ಅಸಂಗತ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...