Home / ಲೇಖನ / ಇತರೆ / ಮಿತಿ

ಮಿತಿ

ಪ್ರಿಯ ಸಖಿ,
ಇತ್ತೀಚೆಗೆ ಆತ್ಮೀಯರೊಬ್ಬರಿಗೆ ಅಪಘಾತವಾಗಿ ಸರ್ಕಾರಿ ಆಸ್ಪತ್ರೆಯಲ್ಲಿರುವ ವಿಷಯ ತಿಳಿದು ಅವರನ್ನು ನೋಡಲು ಹೋದೆ. ಆಸ್ಪತ್ರೆಯ ಎಲ್ಲ ವಾರ್ಡುಗಳಲ್ಲೂ ವಿವಿಧ ರೋಗಗಳಿಗಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಾಲು ಕಾಣಿಸಿತು. ನನ್ನ ಪರಿಚಿತರು ಎಲ್ಲೆಂದು ಬಿಳಿ ಯೂನಿಫಾರಂ ಧರಿಸಿದ್ದವರೊಬ್ಬರನ್ನು ಕೇಳಿದರೆ, ಅವರು ಸ್ಥಳದಲ್ಲೇ ಸತ್ತರು ಅನ್ಸುತ್ತೆ ಎಂದು ಬಿಟ್ಟರು! ಇದನ್ನು ಕೇಳಿ ಜೀವ ಬಾಯಿಗೆ ಬಂದಾಯ್ತು. ಆತನ ಪಕ್ಕದಲ್ಲಿದ್ದವರು ತುರ್ತು ಚಿಕಿತ್ಸಾ ವಿಭಾಗಕ್ಕೆ ಹೋಗಿ ವಿಚಾರಿಸಿ ಎಂದು ದಾರಿ ತೋರಿದರು. ಅಲ್ಲಿ ಬಂದು ನೋಡಿದರೆ……..  ಅದೊಂದು ಜೀವಂತ ನರಕ!

ಕೈ ಕತ್ತರಿಸಿದ್ದವರು, ಕಾಲು ಕತ್ತರಿಸಿದ್ದವರು, ತಲೆಗೆ ಏಟು ಬಿದ್ದವರು, ಮೂಳೆ ಮುರಿದವರು, …… ಇತ್ಯಾದಿ ಅಪಘಾತಕ್ಕೊಳಗಾದವರ ಸಾಲು ಮಂಚಗಳು. ಮೃತ್ಯುಲೋಕವನ್ನು ಹೊಕ್ಕು ಬಂದಂತಹಾ ಪ್ರೇತ ಕಳೆಯಾಡುವ ಮುಖಗಳು! ಮಂಚಗಳಲ್ಲೊಂದರಲ್ಲಿ ನನ್ನ ಆತ್ಮೀಯರು! ಆ ಎಲ್ಲ ನೋವಿನಿಂದ ಮುಲುಗುಟ್ಟುವ ಸದ್ದಿನಡಿಯಿಂದಲೇ ಮೂಡಿ ಬಂತೊಂದು ಕರುಳು-ಕಿವುಚುವ ಆರ್ತನಾದ! ಅಬ್ಬಾ! ಅದು ಎಷ್ಟು ಮಾರ್ಮಿಕವಾಗಿತ್ತೆಂದರೆ………. ಸಖಿ, ನಾನದನ್ನು ವರ್ಣಿಸಲಾರೆ. ನೋವನ್ನು ಬಣ್ಣಬಣ್ಣದ ಪದಗಳಿಂದ ವರ್ಣಿಸುತ್ತಾ ನೋವಿನನುಭವವನ್ನು ಸಣ್ಣಗಾಗಿಸಲಾರೆ! ಬಹುಶಃ ಅದನ್ನು ಯಾವ ಕವಿಯೂ ಕವಿತೆಯಾಗಿಸಲಾರ. ಯಾವ ಸಂಗೀತಗಾರನೂ ನೋವು ತುಂಬಿ ಹಾಡಲಾರ, ಯಾವ ಚಿತ್ರಗಾರನೂ ತನ್ನ ಚಿತ್ರ, ಶಿಲ್ಪದಲ್ಲಿ ಚಿತ್ರಿಸಲಾರ. ನಿಜಕ್ಕೂ ಆ ವೇದನೆಯನ್ನು ಯಾವ ಸಮರ್ಥ ನಟನೂ ಅಭಿನಯಿಸಿ ತೋರಿಸಲಾರ. ಆ ಕ್ಷಣದಲ್ಲಿ ಅವ್ಯಕ್ತ ಭಾವವೊಂದು ಮನವನ್ನು ಆವರಿಸಿ ಮಿಕ್ಕಿದ್ದೆಲ್ಲಾ ಮಿಥ್ಯ. ಆ ನೋವು ತುಂಬಿದ ಆರ್ತನಾದವೊಂದೇ ಸತ್ಯ ಎನಿಸಿಬಿಟ್ಟಿತು. ಅತ್ಯಂತ ಸಮರ್ಥ ಕಲಾವಿದ ಕೂಡ ಇದರ ಹತ್ತಿರಕ್ಕೆ ಹೋಗಬಲ್ಲ, ಆ ಭಾವನೆಯೇ ಆಗಲಾರ ಅದು ಕಲಾವಿದನ ಮಿತಿಯೂ ಹೌದು!

ಸಖಿ, ಹಾಗಿದ್ದರೆ ಇಂತಹ ಹೃದ್ಯಭಾವನೆಗಳನ್ನು ಹಿಡಿದಿಡಲು ಯಾವ ಸೃಜನಶೀಲ ಕಲೆಗೂ ಸಾಧ್ಯವಿಲ್ಲವೇ? ಗುರುಗಳೊಬ್ಬರು ಹೇಳುತ್ತಿದ್ದುದು ನೆನಪಾಗುತ್ತದೆ. ಇಲ್ಲಿ ಎಷ್ಟೊಂದು ಕಣ್ಣಿನಿಂದ ನೋಡಲಾಗುವುದಿಲ್ಲ. ಅದನ್ನು ಹೃದಯದಿಂದ ಮಾತ್ರ ಅನುಭವಿಸಲು ಸಾಧ್ಯ. ಪ್ರಿಯ ಸಖಿ, ಯಾವ ಮಾಧ್ಯಮದಲ್ಲೂ ಸಮರ್ಥವಾಗಿ ನಮ್ಮ ಎಲ್ಲ ಭಾವನೆಗಳನ್ನು ಅಭಿವ್ಯಕ್ತಿಸಲು ಸಾಧ್ಯವಾಗದೇ ಸೋಲುತ್ತೇವೆ. ಹಾಗೆ ಸೋತರೂ ಸರಿಯೇ, ಮಾನವನ ಎಲ್ಲ ಭಾವನೆಗಳನ್ನೂ ಹೃದಯದಿಂದ ಅನುಭವಿಸಲೂ ಆಗದಂತೆ ನಾವು ಸೋಲುವುದು ಬೇಡ. ನಾವು ಮಾನವರೆನ್ನುವುದನ್ನು ಎಂದಿಗೂ ಮರೆಯದಿರೋಣ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...