Home / ಕವನ / ಕವಿತೆ / ನಾನು ಮತ್ತು ಲಕ್ಷ್ಮಿ

ನಾನು ಮತ್ತು ಲಕ್ಷ್ಮಿ

ನಾನು ದರಿದ್ರನಾರಾಯಣನ ದತ್ತುಪುತ್ರ ಕಡ್ಡಿಗಾತ್ರ
ಕೋಳಿ ಕೂಗಿದ ಕೂಡಲೆ ಖೋಖೋ ಆಡುತ್ತ ಕೈಹಾಕಿ ನೂಕಿ
ಸಮಜಾಯಿಷಿ ಕೊಡದೆ ಗುರಿಗೂಟದ ಸುತ್ತ ಮಗ್ಗಿ ಗುಣಗುಣಿಸಿದರೂ
ಬಿದ್ದದ್ದು ನೆನಪುಂಟೇ ಹೊರತು ಗೆದ್ದದ್ದು ಗೊತ್ತಿಲ್ಲ.
ಮೊನ್ನೆ ಒಳಗೆಲ್ಲ ಒತ್ತಿಬಿಟ್ಟ ಸ್ಪ್ರಿಂಗಾಗಿ ನನ್ನ ಗದ್ದೆಯಲ್ಲಿ ಉದ್ದಾಗಿ ಬೆಳೆದ
ಕಬ್ಬನ್ನು ತಬ್ಬಿ ನಿಂತಾಗ ಗೆಣ್ಣುಗೆಣ್ಣಿನಲ್ಲೂ ಗೆಣೆಕಾರ ಎನ್ನುವ ಅವಳು! ಗರಿಯಲ್ಲಿ ದೂರದ ಗುರಿಯಲ್ಲಿ ಮರೀಚಿಕೆ ಮಿಂಚುವಳು; ಸಂಚು ಹೂಡುವಳು
ಜರ್ರನೆ ಬಂದು ಬೆನ್ನು ತಿಕ್ಕಿ ಮೈಮನಸ್ಸು ನೆಕ್ಕಿ
ನಕ್ಕಿನಗೆಯಲ್ಲಿ ನೇಗಿಲು ಹೂಡಲು ಹುರಿದುಂಬಿಸಿ
ಕನ್ನಡಿಗಣ್ಣಲಿ ಚಿಗರಿ ಚಿಗಿತ ಬಿಂಬಿಸಿ
ಭ್ರಮೆಬೆನ್ನು ತೋರಿಸಿ ಗುಂಡಿಬಿಚ್ಚೆಂದು ಹೇಳುವಳು
ಚಪಳೆ ಸೊಡರಕುಡಿಯಾಗಿ ಫಕ್ಕನೆ ಮಂಗಮಾಯವಾಗುವಳು

ಹಾಳಾದವಳು ದರಿದ್ರನಿಗೆ ದಕ್ಕದವಳು ಸೊಕ್ಕಿದವಳು
ಇವಳ ಸುದ್ದಿಯೇ ಬೇಡವೆಂದು ಸಿದ್ಧಿಯ ಗದ್ದುಗೆ ಹತ್ತಲು
ಕಿಟಕಿ ಬಾಗಿಲು ಬಂದು ಮಾಡಿದೆ; ಗೋಡೆ ಗೋಡೆಯ ಮುಟ್ಟಿ ಗ್ಯಾರಂಟಿ
ಮಾಡಿಕೊಂಡೆ.
ಇವಳ ಚಾಲೂಕಿಗಷ್ಟು ಬೆಂಕಿ ಬೀಳ ಎಂದು ಕುಳಿತೇ ಬಿಟ್ಟೆ ಸ್ಥಿತಪ್ರಜ್ಞ
ರಂಭೆ ಊರ್ವಶಿಯರ ತೆಕ್ಕೆಯಿಕ್ಕಳಕ್ಕೆ ಸಿಕ್ಕದೆ ಚಕ್ಕಳ ಶರೀರಿಯಾಗ ಹೊರಟ ಪ್ರಾಜ್ಞ
ಗೆದ್ದು ಬಿಡುತ್ತೇನೆ ಎಂದು ಮೌನ ಹೊದ್ದು ಚೂರೂ ಸದ್ದುಮಾಡದೆ ಇದ್ದೆ
ಇದ್ದಕ್ಕಿದ್ದಂತೆ ಏನಾಯಿತು ಗೊತ್ತ?
ಜಗ್ಗನೆ ನೆಲ ಒದ್ದಂತೆ ಎದ್ದೆ; ನೆಲ ಥಕಥಕ ಕುಣಿಯಿತು. ಗೋಡೆಕುದುರೆ
ಕೆನೆಯಿತು; ಕಿಟಕಿ ಬಾಗಿಲು ಬಿದ್ದುಬಿದ್ದು ನಗುತ್ತ ಚಪ್ಪಾಳೆ ತಟ್ಟಿತು.
ಹಟ್ಟಿಮುಂದೆ ಅಪ್ಪಾಳೆತಿಪ್ಪಾಳೆ ಆಡಿದಂತೆ ಎತ್ತೆಂದರತ್ತ ನನ್ನ ಚಿತ್ತ.
ಮಿಡಿನಾಗರಗಳ ದಂಡು ಬಂಡಾಯ ಹೂಡಿದಂತೆ
ನೆಲದ ಝಣ ಝಣ ಕೊಪ್ಪರಿಗೆ ಕುಣಿತಕ್ಕೆ ತಪ್ಪಿದ ಹಿಡಿತಕ್ಕೆ
ಕುಕ್ಕೆ ಕಟ್ಟಿದ ಕರುವಿನಂತೆ ಕಂಡಕಂಡ ಕಡೆ ಹರಿದ ಅಶ್ವತ್ಥಾಮ ಸ್ಥಿತಿ.
ರಸ್ತೆ ಪಾರ್ಕು ಹೋಟೆಲು ಸಿನಿಮಾ ನೋಡಿದ ನೋಡದ ಬಿಲಕ್ಕೆ ಹೊಲಕ್ಕೆ
ಕೊಳಕ್ಕೆ ಅದರ ತಳಕ್ಕೆ ನಡೆಸಿದ ಕುಂತಿ ಪ್ರಯತ್ನಕ್ಕೆ ಕುಂತಿ ಪ್ರಸವ ಆಗಲಿಲ್ಲ.
ಬಿದಿರುಮೆಳೆಯಲ್ಲಿ ಬರುವ ಮಳೆಯಲ್ಲೂ ಕಿಡಿಯೊಡೆದಳು
ಹತ್ತಿರ ಬರುತ್ತ ಕಿತ್ತಲೆ ಸುಲಿದಂತೆ ಕಳಚುತ್ತ ಕತ್ತಲೆಯಿಡಿಸಿದಳು ಕುಂತು ನಿಂತು ಮಾತನಾಡೋಣ ಎನ್ನುತ್ತ ತಲೆತುಂಬಿದಳು.
ಮತ್ತೆ ಮನೆಗೆ ದೌಡು ಬಂದೆ; ತಿಜೋರಿಯಲ್ಲಿ ಮನಸ್ಸು ಬಚ್ಚಿಡಲು
ಬೀಗದ ಕೈ ಹುಡುಕಿದೆ; ಮನಸ್ಸು ಇದ್ದಾಗಲೇ ಎಲ್ಲ ತಿರುಗಿದ ಎಲ್ಲೆ ಭೂ
ಗೋಳ ಜ್ಞಾಪಿಸಿಕೊಂಡು ನಕ್ಷೆ ಬಿಡಿಸುವ ದೀಕ್ಷೆಗೆ ಸಿಕ್ಕಿದೆ.
ಅಚ್ಚ ಬಿಳಿಹಾಳೆಯ ಮುಂದೆ ಅಚ್ಚುಕಟ್ಟಾಗಿ ಕೂತು
ಭೂಮಿ ಭೂಪಟಕ್ಕೆಂದು ಎರಡು ಸೊನ್ನೆ ಎಳೆದೆ.
ಎಳೆಯುತ್ತ ಹೋದಂತೆ ಬೆಳೆಯುತ್ತ ಬರುವ ಬಿರಿಯುತ್ತ ಕರೆವ
ಅವಳವೇ ಎರಡು ಮೊಲೆಯಾಗಿ, ಬೆಚ್ಚಿ ಬಾಯ್ಬಿಟ್ಟು ಒಳಗೆಲ್ಲ ಹೊರಗು
ಮಾಡಹೋದಂತೆಲ್ಲ ಹುತ್ತದೊಳಕ್ಕೆ ಹಾವು ಇಳಿದಂತೆ ಬಾಯಿಂದ
ಇಷ್ಟಿಷ್ಟೇ ಇಳಿದು ಒಳಗೆಲ್ಲ ಬೆಳೆದು ತುಂಬಿ ಬರುವ
ರೋಮಾಂಚನ ಸೆಲೆ;
ಗೆದ್ದಬಲೆ
ಗೆದ್ದ ಬಲೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...