Home / ಕವನ / ಕವಿತೆ / ಚಂದನಶಿಲ್ಪ

ಚಂದನಶಿಲ್ಪ

ವಿಂಧ್ಯಗಿರಿ ದೇವರು ಕಂದರ್ಪನ ಅವತಾರ
ಪಾದಕ್ಕೆ ಕಮಲ ನೆತ್ತಿಗೆ ಚಂದ್ರ,
ನಿಂತ ನಿಲುವು ರಾಗವೋ ವಿರಾಗವೋ
ರವಿಯೇ ತಾರ ಬುವಿಯೇ ಮಂದ್ರ,
ಕೆಳೆಗೆ ಬೆಳೆದ ಗಿಡಮರಗಳ ನಡುವೆ
ಊಳುವ ಗಾಳಿಯ ಕರುಣಾಕ್ರಂದ,
ಕೊಂಚ ಗದ್ಯ ಇನ್ನೆಲ್ಲ ಪದ್ಯ
ಮರ ಹಿಡಿದ ಫಲವಲ್ಲ ಅಲ್ಲಲ್ಲೇ ನೈವೇದ್ಯ,
ಹಗಲು ಬಿಸಿಲ ಸ್ನಾನ
ರಾತ್ರಿ ಚಿಕ್ಕೆ ಹೊತ್ತ ಕತ್ತಲ ಛತ್ರಿಯಡಿಗೆ
ತಣ್ಣಗೆ ಕಲ್ಲಿನೆದೆಯೊಳಗೆ
ಕೊತ ಕೊತ ಕುದಿಯುವ
ಪೂರ್ವ ಭವಗಳ ಪಾಪಧ್ಯಾನ,
ದೂರಕ್ಕೆ ದೇವರು ಕಲ್ಲು ಸೆಟೆದಂತೆ ಕಾಣುತ್ತಾರೆ;
ಪರೀಕ್ಷಿಸಿ ನೋಡಿ
ನಡುವೆ ಹಠಾತ್ತನೆ ಬೆಚ್ಚುತ್ತಾರೆ.

ವಿಂಧ್ಯಗಿರಿ ದೇವರಿಗೆ ಬಂಧನವಿಲ್ಲದ ಮನೆ
ಅದರ ಇಲ್ಲದ ಬಾಗಿಲನ್ನು
ಹಗಲು ಬಿಚ್ಚುತ್ತದೆ ರಾತ್ರಿ ಮುಚ್ಚುತ್ತದೆ,
ಬಹಳ ಹಿಂದೆ ಅವರ
ಬೆಲ್ಲದ ಗಲ್ಲವನ್ನ ಬೆಳಕಿನ ಇರುವೆ ಕಚ್ಚಿ
ಸುಖದ ನೋವ ಚುಚ್ಚಿ
ಮಣ್ಣು ನರಳಿತು, ಹಣ್ಣು ಮಾಯಿತು;
ಹೊಕ್ಕಳ ಕೆರಳು ಸತ್ತು ಮುಖದಲ್ಲಿ
ಮಕ್ಕಳ ನಗೆ ಹುಟ್ಟಿತು
ಆಗಿಂದ ಅದು

ಬೆಳೆದೇ ಬೆಳೆದು ಬೆಳೆದೇ ಬೆಳೆದು
ಬಂದವರ ಎದೆಯಲ್ಲಿ ಅಕ್ಕಿ ಚೆಲ್ಲುತ್ತದೆ,
ಸಿಕ್ಕಿ ಬಿದ್ದಿದ್ದರೆ ಅಲ್ಲಿ ತಿನ್ನುವ ಹಕ್ಕಿ
ಫಕ್ಕನೆ ಹಿಡಿದು ಮುಗಿಲಿಗೆ ಹಾರಿಸುತ್ತದೆ.

ವಿಂಧ್ಯಗಿರಿ ದೇವರಿಗೆ ರೆಪ್ಪೆಯಿದೆ ಬಡಿಯುವುದಿಲ್ಲ
ಇರಿಯುವಂತೆ ದಿಟ್ಟಿ,
ಧಗಧಗ ಪ್ರಾಯ, ಸುಡುವುದಿಲ್ಲ;
ಪಂಚಾಗ್ನಿ ಮೆಟ್ಟಿದ ಜಟ್ಟಿ,
ಅವರಿಗೆ
ವಸ್ತ್ರ ಕತ್ತಲೆ ಬೆಳಕು ಬೆತ್ತಲೆ
ಸುಡುವ ಸೂರ್‍ಯ ತಂಪು ಕಿತ್ತಲೆ.
ಅಡ್ಡ ನೋಡಿದರೆ
ಮಲಗಿದ ದೇವರ ಎದೆಯಲ್ಲಿ ಅಲಗು
ಉದ್ದ ನೋಡಿದರೆ
ಸೆಟೆದ ವಿಗ್ರಹದ ಕಣ್ಣಲ್ಲಿ ಮಿನುಗು.

ನಡುರಾತ್ರಿ ಭೂಮಿಗೆ ಮಂಪರು:
ಬಾನು ತುಟಿತೆರೆದು
ದೇವಕನ್ಯೆಯರು ಇಳಿದು
ದೇವರ ಮೈಗೆ ಗಂಧ ತೊಡೆಯುತ್ತಾರೆ;
ಹೊಕ್ಕಳಿಗೆ ಮುತ್ತು ಸುರಿದು;
ತೊಡೆಗೆ ಲಟಿಗೆ ತೆಗೆದು
ಪಾದಕ್ಕೆ ದಿಂಡುರುಳಿ ಮುಳು ಮುಳು ಅಳುತ್ತಾರೆ;
ದೇವರ ಕಣ್ಣಲ್ಲಿ ಥಟ್ಟನೆ ದೀಪ ಹತ್ತಿ
ಅಳುವಂತೆ ಉರಿಯುತ್ತದೆ;
ಹದ್ದೊಳಗಿನ ಪಾಪ ಉದ್ದುದ್ದ ಬೆಳೆದು
ತುಟಿಗಳು ಚಲಿಸುತ್ತವೆ.
ಆದರೆ
ತಾವರೆ ಮೆಟ್ಟಿದವರು
ತಿಂಗಳು ಮುಡಿದವರು
ರಾಗಕ್ಕೆ ಮಂಗಳ ಹಾಡಿದವರು
ದೇವರು.
ಮಾತು ಹೊರಡುವ ಮುಂಚೆ ಅಲ್ಲೆ ಹೂತಂತಾಗಿ
ಮೊಳೆತ ಪ್ರಾಣದ ಆಸೆ ಕಮರುತ್ತದೆ,
ಗಾಳಿ
ಸಟೆದ ಕಲ್ಲಿನ ಸುತ್ತ ಚೀರುತ್ತದೆ.

ವಿಶಾಪದ ನಿರೀಕ್ಷೆಯಲ್ಲಿ ದೇವರು ನಿಂತಿದ್ದಾರೆ.
ಒಂದು ದಿನ
ಅಭಯಹಸ್ತ ಮೂಡುತ್ತದೆ
ನಿಜದ ಕೆಚ್ಚ ನೀಡುತ್ತದೆ
ಬಿಲ್ಲು ಬಾಣ ಕೈಗೆ ಕಲಿಸಿ
ಮೈರುಚಿಯನ್ನೆಲ್ಲ ಉರಿಸಿ
ಭಕ್ತವೃಂದ ಸುತ್ತ ಕೊರೆದ ಲಕ್ಷಣಗೆರೆ ಅಳಿಸುತ್ತದೆ;
ಮಾದ ಹುಣ್ಣು ಮತ್ತೆ ಜ್ವಲಿಸಿ
ಸತ್ತ ಕೆರಳು ತಿರುಗಿ ಜನಿಸಿ
ಶಾಪದ ಕೊನೆ ತರುತ್ತದೆ
ಅಸ್ತಿಕಗಣದ ಚೀತ್ಕಾರದ ನಡುವೆ
ದೇವಕವಚ ಸಿಡಿಯುತ್ತದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...