Home / ಕವನ / ಕವಿತೆ / ಮಹಮದನ ಪ್ರೇಮಪತ್ರ

ಮಹಮದನ ಪ್ರೇಮಪತ್ರ

ಹತ್ತೂ ಜನರು ಓದಿಯಾದ ಮೇಲೆ
ನನ್ನ ಕೈಸೇರಿತು ಮಹಮದನ ಪತ್ರ

ತನ್ನೂರಿನ ಬಗ್ಗೆ
ತನ್ನ ಅಕ್ಕ ತಂಗಿಯರ ಬಗ್ಗೆ
ಮಲ್ಪೆಯ ಮೀನು, ಸಮುದ್ರದ ಹಿನ್ನೀರು
ಗೇರು ಹಣ್ಣು, ಗುಳ್ಳದ ಬಗ್ಗೆ
ಏನೆಲ್ಲ ಅಚ್ಚ ಕನ್ನಡದಲ್ಲಿ
ಬರೆದಿದ್ದ ಪತ್ರ
‘ಈದ್’ಗೆ ಮನೆಗೆ ಬರಲೇಬೇಕೆಂದು
ಕೇಳಿಕೊಂಡಿದ್ದ ಪತ್ರ

ಅದರಲ್ಲಿ ಪ್ರೇಮದ ವಿಷಯವೇನೂ
ಇರಲಿಲ್ಲವಾದರೂ
ಅದು ಪ್ರೇಮ ಪತ್ರವೆಂದು
ಮುದ್ರೆ ಒತ್ತಲ್ಪಟ್ಟಿತು
ಮಹಮದನಿಗೆ ಗುದ್ದು
ನನಗೆ ಎಚ್ಚರಿಕೆ
ಹತ್ತು ಹಲವು ಹದ್ದುಗಳು
ನನ್ನ-ಅವನ
ಚಲನವಲನದ ಬಗ್ಗೆ
ನಿಗಾ ಇಡುವಂತಾಯಿತು

ಒಮ್ಮೆ ಮಹಮದನನ್ನು
ಭೇಟಿಯಾಗಬೇಕು
‘ಪ್ರೇಮ ಭಾವ’
ಅರಳಿಸಿದ್ದಕ್ಕೇ
ಕ್ಷಮೆ ಬೇಡಬೇಕು ಎಂದೆಲ್ಲಾ
ಅಂದುಕೊಂಡೆನಾದರೂ…

ಪ್ರತಿಬಾರಿ…
ನಮ್ಮಿಬ್ಬರ ನಡುವೆ
ಮಸೀದಿಯ ಗುಡ್ಡ
ಅಡ್ಡ ಬರುತ್ತಿತ್ತು

ಅದೊಂದು ದಿನ-
ದೊಡ್ಡ ದೇವರ ಪಲ್ಲಕ್ಕಿ ಉತ್ಸವ
ಇಬ್ಬರನೂ ಸೀಳಿಕೊಂಡು
ಹೊರಟು ಹೋಯಿತು!

ಹೂವಿನಷ್ಟೇ ತಾಜ-ಕೋಮಲ
ಮಹಮದನ ಪ್ರೇಮ
ವಜ್ರದಷ್ಟೇ ಕಠಿಣ-ಕಠೋರ
ಸುತ್ತಣ ಜನರ ಆತ್ಮ…

ಗಾಳಿ-ಬೆಂಕಿ ಸೇರಿಕೊಂಡು
ತನಗೆ ತಾನೇ ಕೂಡಿಕೊಂಡು
ಎಷ್ಟು ಸುತ್ತು ಉರಿದರೇನು
ಎಷ್ಟು ಹೊತ್ತು ಉರಿದರೇನು
ಉರಿಯೊಳಗೆ ಬಿರಿಯುತ್ತಿತ್ತು
ಬಿರಿದು ತಾನೇ ಬೆಳಗುತ್ತಿತ್ತು
ಪ್ರೇಮ ಪುಷ್ಪ ಅರಳುತ್ತಿತ್ತು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...