Home / ಕವನ / ಕವಿತೆ / ಮಹಮದನ ಪ್ರೇಮಪತ್ರ

ಮಹಮದನ ಪ್ರೇಮಪತ್ರ

ಹತ್ತೂ ಜನರು ಓದಿಯಾದ ಮೇಲೆ
ನನ್ನ ಕೈಸೇರಿತು ಮಹಮದನ ಪತ್ರ

ತನ್ನೂರಿನ ಬಗ್ಗೆ
ತನ್ನ ಅಕ್ಕ ತಂಗಿಯರ ಬಗ್ಗೆ
ಮಲ್ಪೆಯ ಮೀನು, ಸಮುದ್ರದ ಹಿನ್ನೀರು
ಗೇರು ಹಣ್ಣು, ಗುಳ್ಳದ ಬಗ್ಗೆ
ಏನೆಲ್ಲ ಅಚ್ಚ ಕನ್ನಡದಲ್ಲಿ
ಬರೆದಿದ್ದ ಪತ್ರ
‘ಈದ್’ಗೆ ಮನೆಗೆ ಬರಲೇಬೇಕೆಂದು
ಕೇಳಿಕೊಂಡಿದ್ದ ಪತ್ರ

ಅದರಲ್ಲಿ ಪ್ರೇಮದ ವಿಷಯವೇನೂ
ಇರಲಿಲ್ಲವಾದರೂ
ಅದು ಪ್ರೇಮ ಪತ್ರವೆಂದು
ಮುದ್ರೆ ಒತ್ತಲ್ಪಟ್ಟಿತು
ಮಹಮದನಿಗೆ ಗುದ್ದು
ನನಗೆ ಎಚ್ಚರಿಕೆ
ಹತ್ತು ಹಲವು ಹದ್ದುಗಳು
ನನ್ನ-ಅವನ
ಚಲನವಲನದ ಬಗ್ಗೆ
ನಿಗಾ ಇಡುವಂತಾಯಿತು

ಒಮ್ಮೆ ಮಹಮದನನ್ನು
ಭೇಟಿಯಾಗಬೇಕು
‘ಪ್ರೇಮ ಭಾವ’
ಅರಳಿಸಿದ್ದಕ್ಕೇ
ಕ್ಷಮೆ ಬೇಡಬೇಕು ಎಂದೆಲ್ಲಾ
ಅಂದುಕೊಂಡೆನಾದರೂ…

ಪ್ರತಿಬಾರಿ…
ನಮ್ಮಿಬ್ಬರ ನಡುವೆ
ಮಸೀದಿಯ ಗುಡ್ಡ
ಅಡ್ಡ ಬರುತ್ತಿತ್ತು

ಅದೊಂದು ದಿನ-
ದೊಡ್ಡ ದೇವರ ಪಲ್ಲಕ್ಕಿ ಉತ್ಸವ
ಇಬ್ಬರನೂ ಸೀಳಿಕೊಂಡು
ಹೊರಟು ಹೋಯಿತು!

ಹೂವಿನಷ್ಟೇ ತಾಜ-ಕೋಮಲ
ಮಹಮದನ ಪ್ರೇಮ
ವಜ್ರದಷ್ಟೇ ಕಠಿಣ-ಕಠೋರ
ಸುತ್ತಣ ಜನರ ಆತ್ಮ…

ಗಾಳಿ-ಬೆಂಕಿ ಸೇರಿಕೊಂಡು
ತನಗೆ ತಾನೇ ಕೂಡಿಕೊಂಡು
ಎಷ್ಟು ಸುತ್ತು ಉರಿದರೇನು
ಎಷ್ಟು ಹೊತ್ತು ಉರಿದರೇನು
ಉರಿಯೊಳಗೆ ಬಿರಿಯುತ್ತಿತ್ತು
ಬಿರಿದು ತಾನೇ ಬೆಳಗುತ್ತಿತ್ತು
ಪ್ರೇಮ ಪುಷ್ಪ ಅರಳುತ್ತಿತ್ತು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...